ಕರೋನಾ ವಾರಿಯರ್ಸ್… ಹೆಸರೇ ಹೇಳುವಂತೆ ಕರೋನಾ ಕಂಟಕದಿಂದ ಹೋರಾಡುವ ಸಲುವಾಗಿ ರೂಪುಗೊಂಡ ಧೀರರ ತಂಡವದು. ಲಾಕ್ಡೌನ್ ಒಂದರಿಂದ ಹಿಡಿದು ಈಗಿನ ವರೆಗೆ ಎಲ್ಲ ಸಂದರ್ಭಗಳಲ್ಲೂ, ರಾತ್ರಿ ಹಗಲೆನ್ನದೇ, ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಕೆಲಸ ಮಾಡಿದಂತಹ ತಂಡ ಕರೋನಾ ವಾರಿಯರ್ಸ್.
ಕರೋನಾ ವಾರಿಯರ್ಸ್ ಜೀವಭಯವನ್ನು ಬಿಟ್ಟು ಕೆಲಸ ಮಾಡಲಿ ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ವಿಮಾ ಪಾಲಿಸಿ ಮಾಡಿಸಿದೆ. ಕರೋನಾ ವಾರಿಯರ್ಸ್ ಕೋವಿಡ್ – 19 ಸೋಂಕಿನಿಂದ ಮೃತಪಟ್ಟರೆ 30 ಲಕ್ಷ ರೂಪಾಯಿ ಪರಿಹಾರ ನೀಡುವುದಕ್ಕೆ ನಿರ್ಧಾರ ಮಾಡಿ ಆಗಿದೆ. ಇದನ್ನು ಸ್ವತಃ ಸಿಎಂ ಬಿ.ಎಸ್ ಯಡಿಯೂರಪ್ಪ ಅವರೇ ಘೋಷಣೆ ಮಾಡಿದ್ದಾರೆ. ಸ್ವತಃ ರಾಜ್ಯ ಸರ್ಕಾರ ಅನುಮೋದನೆ ನೀಡಿರುವ ಕೋವಿಡ್-19 ವಾರಿಯರ್ಸ್ ಎಂದು ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರು, ಪೌರ ಕಾರ್ಮಿಕರು ಹಾಗೂ ಪೊಲೀಸ್ ಸಿಬ್ಬಂದಿ ಇದ್ದಾರೆ. ಇತ್ತೀಚಿಗೆ ಪತ್ರಕರ್ತರನ್ನು ಸಿಎಂ ಸೂಚನೆ ಮೇರೆಗೆ ಸೇರಿಸಲಾಗಿದೆ. ಆದರೆ, ಕೋವಿಡ್ ಕೆಲಸದಲ್ಲೇ ನಿರತರಾಗಿದ್ದರೂ ಕೋವಿಡ್ ವಾರಿಯರ್ ಲಿಸ್ಟ್ನಲ್ಲಿ ಇಲ್ಲದೆ ಇರುವ ಅಧಿಕಾರಿಗೆ ಅನ್ಯಾಯವಾಗಿದೆ.
ನಡೆದ ಘಟನೆಯೇನು?
ಬೆಂಗಳೂರಿನ ಕೋವಿಡ್ 19 ಕೇರ್ ಸೆಂಟರ್ನಲ್ಲಿ ಕಾರ್ಯನ್ಮುಖನಾಗಿದ್ದ KAS ಶ್ರೇಣಿಯ ಉಪವಿಭಾಗಾಧಿಕಾರಿ ಗಂಗಾಧರಯ್ಯ ಎಂಬುವವರು ಕರ್ತವ್ಯ ನಿರ್ವಹಣೆ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಅಸುನೀಗಿದ್ದಾರೆ. ಕೂಡಲೇ ಅವರನ್ನು ಸಪ್ತಗಿರಿ ಆಸ್ಪತ್ರೆಗೆ ರವಾನೆ ಮಾಡುವ ಯತ್ನ ಮಾಡಲಾಯ್ತು. ಆದರೆ ಬದುಕುಳಿಯಲಿಲ್ಲ. ಸಪ್ತಗಿರಿ ಆಸ್ಪತ್ರೆಗೆ ಜೆಡಿಎಸ್ ಶಾಸಕ ಆರ್.ಮಂಜುನಾಥ್ ಭೇಟಿ ನೀಡಿ ಸಂತಾಪ ಸೂಚಿಸಿದರು.
I am deeply saddened & disturbed at the sudden demise of my younger colleague Gangadariah, KAS Probationary AC of 2015 batch, due to heart attack while on Covid duty at BIEC. May his soul rest in peace. I pray God to give strength to his family to bear this loss. pic.twitter.com/QpPxKBqsmq
— N. Manjunatha Prasad,IAS (@BBMPCOMM) August 8, 2020
ಇನ್ನು ಕರ್ತವ್ಯನಿರತ ಅಧಿಕಾರಿ ಸಾವಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೂಡ ಸಂತಾಪ ವ್ಯಕ್ತಪಡಿಸಿದ್ದರು. ತುಮಕೂರು ರಸ್ತೆಯ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನೋಡೆಲ್ ಅಧಿಕಾರಿಯಾಗಿ ಕೆಎಎಸ್ ಅಧಿಕಾರಿ ಹೆಚ್.ಗಂಗಾಧರಯ್ಯ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಇದಕ್ಕೆ ತನ್ನ ತೀವ್ರ ಸಂತಾಪ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಆ ಬಳಿಕ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರೂಪಾಯಿಗಳ ನ್ನು ನೀಡುವುದಾಗಿಯೂ ಘೋಷಣೆ ಮಾಡಿದರು. ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ಸೇರಿದಂತೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದಿದ್ದರು.
ದೆಹಲಿ ಸರ್ಕಾರ ಪ್ರಪ್ರಥಮವಾಗಿ ಕೋವಿಡ್ ವಾರಿಯರ್ಸ್ ಸೋಂಕಿನಿಂದ ಅಸುನೀಗಿದರೆ 1 ಕೋಟಿ ಪರಿಹಾರ ಘೋಷಣೆ ಮಾಡಿತ್ತು. ಈ ಬಗ್ಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮಾತನಾಡಿ, ದೇಶವನ್ನು ರಕ್ಷಣೆ ಮಾಡುವ ಯೋಧರು ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಕಾರ್ಯನಿರ್ವಹಣೆ ಮಾಡುತ್ತಾರೆ. ಹಾಗಾಗಿ ಯೋಧರು ಹುತಾತ್ಮರಾದರೆ 1 ಕೋಟಿ ಪರಿಹಾರವನ್ನು ಘೋ಼ಷಣೆ ಮಾಡಿದ್ದೆವು. ಇದೀಗ ಸೈನಿಕರಿಗೆ ಕಡಿಮೆಯಾಗಿಯೇನು ಕರೋನಾ ವಾರಿಯರ್ಸ್ ಕೆಲಸ ಮಾಡುತ್ತಿಲ್ಲ. ಹಾಗಾಗಿ ಕರೋನಾ ವಾರಿಯರ್ಸ್ಗೂ ಅಷ್ಟೇ ಗೌರವ ಕೊಟ್ಟು, ಕೋವಿಡ್ 19 ಸೋಂಕಿನಿಂದ ಅಸುನೀಗಿದರೆ 1 ಕೋಟಿ ಪರಿಹಾರ ಕೊಡುವುದಾಗಿ ಘೋಷಣೆ ಮಾಡಿದ್ದರು. ಅದರಲ್ಲೂ ಸರ್ಕಾರಿ ಖಾಸಗಿ ವಲಯ ಎಂದು ನೋಡುವುದಿಲ್ಲ ಎಂದಿದ್ದರು. ಇನ್ನೂ ತಮಿಳುನಾಡು ಕೂಡ ಕರೋನಾ ವಾರಿಯರ್ ಅಸುನೀಗಿದರೆ 50 ಲಕ್ಷ ಪರಿಹಾರ ಧನ ಘೋಷಣೆ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಭಾನುವಾರ (09/08/2020) ಆಂಧ್ರದಲ್ಲಿ ಕೋವಿಡ್ 19 ಸೋಂಕಿತರನ್ನು ಇರಿಸಲಾಗಿದ್ದ ವಿಜಯವಾಡದ ಹೋಟೆಲ್ಗೆ ಬೆಂಕಿ ಬಿದ್ದು 10 ಮಂದಿ ಸಾವನ್ನಪ್ಪಿದ್ದಾರೆ. ಕೂಡಲೇ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮೃತರ ಕುಟುಂಬಸ್ಥರಿಗೆ ಬರೋಬ್ಬರಿ 50 ಲಕ್ಷದಂತೆ ಪರಿಹಾರ ಘೋಷಣೆ ಮಾಡಿದ್ದಾರೆ. ಅತ್ತ ಗುಜರಾತ್ನ ಅಹಮದಾಬಾದ್ನಲ್ಲೂ ಹಾಸ್ಪಿಟಲ್ಗೆ ಬೆಂಕಿ ಬಿದ್ದು 8 ಜನರು ಕರೋನಾ ಸೋಂಕಿತರು ಸುಟ್ಟು ಭಸ್ಮವಾಗಿದ್ದರು. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ 2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ಘೋಷಣೆ ಮಾಡಲಾಯ್ತು.
ಕೋವಿಡ್ 19 ರೋಗಿಗಳ ಹಿತಕ್ಕಾಗಿ ಕೆಲಸ ಮಾಡುವ ವಾರ್ಡ್ ಬಾಯ್ನಿಂದ ಹಿಡಿದು, ವೈದ್ಯರ ತನಕವೂ ಒಂದೇ ರೀತಿಯ ಪರಿಹಾರ ನೀಡಬೇಕು. ಜೀವ ವೈದ್ಯರಿಗೇ ಬೇರೆ, ವಾರ್ಡ್ ಬಾಯ್ಗೇ ಬೇರೆ ಆಗಿರಲು ಸಾಧ್ಯವೇ..? ಅವರವರ ಮನೆಗೆ ಅವರೇ ಬೇಕು. ಕಳೆದುಕೊಂಡರೆ ಎಲ್ಲರ ಕುಟುಂಬದವರಿಗೂ ಒಂದೇ ರೀತಿಯ ನೋವು ಆಗುತ್ತದೆ. ಕೋವಿಡ್ 19 ಕೇರ್ನಲ್ಲಿ ಕಾರ್ಯನಿರ್ವಹಿಸುವ ಕೆಎಎಸ್ ಅಧಿಕಾರಿ ಕರೋನಾ ವಾರಿಯರ್ ಅಲ್ಲ ಎಂದು ತೀರ್ಮಾನ ಮಾಡಿ ಕೇವಲ 25 ಲಕ್ಷ ಪರಿಹಾರ ಕೊಡುವುದು ಯಾವ ರೀತಿಯ ಧರ್ಮ. ಅಕ್ಕಪಕ್ಕದ ರಾಜ್ಯಗಳು ಹಣದ ಹೊಳೆ ಹರಿಸುವಾಗ ಇಲ್ಲಿ ಕೈ ಹಿಂದಕ್ಕೆ ಹೋದರೆ ಚಿಕಿತ್ಸೆಯೂ ಸಿಗುವುದಿಲ್ಲ.
ಇದೇ ರೀತಿ ತಾರತಮ್ಯವಾದರೆ ಮುಂದೇನಾಗಬಹುದು..?
ಸರ್ಕಾರ ಕರೋನಾ ವಾರಿಯರ್ಸ್ಗಳಲ್ಲೇ ತಾರತಮ್ಯ ಮಾಡುವುದಾದರೆ ಮುಂದಿನ ದಿನಗಳಲ್ಲಿ ಕೋವಿಡ್ 19 ಸೆಂಟರ್ಗಳಲ್ಲಿ ಕೆಲಸ ಮಾಡಲು ಜನರೇ ಸಿಗುವುದಿಲ್ಲ. ಸರ್ಕಾರಿ ವೈದ್ಯರಿಗೆ ಮಾತ್ರ ವಿಮೆ ಎನ್ನುವುದಾದರೆ ಖಾಸಗಿ ಆಸ್ಪತ್ರೆಗಳ ವೈದ್ಯರು ಚಿಕಿತ್ಸೆ ನೀಡಲು ಹಿಂದೇಟು ಹಾಕಬಹುದು.
ಇನ್ನು ಆರೋಗ್ಯ ಸಿಬ್ಬಂದಿಗಳಾದ ನರ್ಸ್, ವಾರ್ಡ್ ಬಾಯ್ಸ್, ಆಯಾಗಳು ಬೇರೆ ರಾಜ್ಯಗಳತ್ತ ವಲಸೆ ಹೋಗಿ ಕೆಲಸ ಮಾಡಿದರೂ ಅಚ್ಚರಿಯೇನಿಲ್ಲ. ಕರೋನಾ ಸೋಂಕಿತರ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಜನರೆಲ್ಲಾ ಗಡಿಯಲ್ಲಿ ದೇಶ ರಕ್ಷಣೆ ಮಾಡುತ್ತಿರುವ ಸೈನಿಕರಿಗೆ ಸಮ. ಎಲ್ಲರಿಗೂ ಒಂದೇ ರೀತಿಯ ಪರಿಹಾರ ಹಾಗೂ ಗೌರವ ಸಿಗುವಂತಾಗಬೇಕು ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಆಗ್ರಹ.
