ಜಗತ್ತು ಕರೋನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದರೆ, ಪಾಕಿಸ್ತಾನ ತನ್ನ ಒಡಲಲ್ಲಿ ಆಶ್ರಯ ನೀಡಿರುವ ಭಯೋತ್ಪಾದಕರಿಗೆ ಕ್ಲೀನ್ ಚಿಟ್ ನೀಡಿದೆ. ತನ್ನ ಕಣ್ಗಾವಲಿನಲ್ಲಿದ್ದ 4000 ದಷ್ಟು ಉಗ್ರರನ್ನು ಪಟ್ಟಿಯಿಂದ ಕೈ ಬಿಟ್ಟಿದೆ. ಮಾತ್ರವಲ್ಲದೇ ಕರೋನಾ ಸೋಂಕು ಅಟ್ಟಹಾಸ ಮಾರ್ಚ್ ತಿಂಗಳಿನಲ್ಲಿ ಆರಂಭವಾದ ಬಳಿಕ ಪಾಕಿಸ್ತಾನ ಇದುವರೆಗೆ 1,900 ಮಂದಿ ಉಗ್ರರನ್ನು ಕೈ ಬಿಟ್ಟಿರುವುದಾಗಿ ಅಮೆರಿಕಾ ಮೂಲದ ತಾಂತ್ರಿಕ ಸಂಸ್ಥೆಯೊಂದು ತಿಳಿಸಿದೆ.
ಇದರಿಂದಾಗಿ ಪಾಕಿಸ್ತಾನದ ಮೂಲ ಅಜೆಂಡಾ ಜಗತ್ತಿಗೆ ಗೊತ್ತಾಗುವಂತೆ ಆಗಿದ್ದು, ಕರೋನಾ ಸೋಂಕಿನ ಮಧ್ಯೆ ಸಮಯಸಾಧಕತನವನ್ನು ಪಾಕಿಸ್ತಾನ ಪ್ರದರ್ಶಿಸಿದೆ. ಪಾಕಿಸ್ತಾನದ ʼನ್ಯಾಶನಲ್ ಕೌಂಟರ್ ಟೆರರಿಸಂ ಅಥಾರಿಟಿʼ (NACTA) ಭಯೋತ್ಪಾದನಾ ಗುಂಪುಗಳನ್ನು ನಾಲ್ಕು ಪ್ರಾಂತ್ಯಗಳಂತೆ ರಚಿಸಿ ಪಟ್ಟಿ ತಯಾರಿಸಿ ಅಂತಹ ಉಗ್ರರ ವಿರುದ್ಧ ಕಣಾಗವಲು ಇಟ್ಟಿತ್ತು. ಆದರೆ ಇದೀಗ ಅಂತಹ ಉಗ್ರರನ್ನು ತನ್ನ ಕಣ್ಗಾವಲು ಪಟ್ಟಿಯಿಂದ ಕೈ ಬಿಟ್ಟಿದ್ದು ನೆರೆಯ ದೇಶಗಳಲ್ಲಿ ದುಷ್ಕೃತ್ಯ ನಡೆಸಲು ಇದು ಪ್ರೇರಣೆ ನೀಡಿದಂತಾಗಿದೆ.
ಈ ರೀತಿ ಪಟ್ಟಿಯಿಂದ ಹೊರಗುಳಿದವರಲ್ಲಿ 2008ರ ಮುಂಬೈ ದಾಳಿಯ ಪ್ರಮುಖ ರೂವಾರಿ, ಲಷ್ಕರ್-ಇ-ತೊಯ್ಬಾ ಕಮಾಂಡರ್ ಝಾಕಿವುರ್ ರೆಹಮಾನ್ ಲಖ್ವಿ ಕೂಡಾ ಒಬ್ಬನಾಗಿದ್ದಾನೆ. ಈತನ ಕಾರ್ಯಯೋಜನೆಯಡಿ ಮುಂಬೈ ದಾಳಿ ನಡೆದಿತ್ತು ಅನ್ನೋದಕ್ಕೆ ಭಾರತದ ತನಿಖಾ ಸಂಸ್ಥೆ ಸಾಕಷ್ಟು ಮಾಹಿತಿ ಕಲೆ ಹಾಕಿತ್ತು. ಆದರೆ ಅಂತಹ ಉಗ್ರನ ಹೆಸರನ್ನೇ ಉಗ್ರ ಪಟ್ಟಿಯಿಂದ ಡಿಲಿಟ್ ಮಾಡಿ ಹಾಕಲಾಗಿದೆ. ಈ ಮೂಲಕ ಉಗ್ರರನ್ನ ಸ್ವತಂತ್ರ ಹಕ್ಕಿಗಳಂತೆ ಬಿಟ್ಟು ಬಿಡಲಾಗಿದೆ.
ಪಾಕಿಸ್ತಾನದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಪ್ರಾಧಿಕಾರವು ನಿರ್ವಹಿಸುವ ಈ ಪಟ್ಟಿಯಲ್ಲಿ 2018ರಲ್ಲಿ 7600 ಹೆಸರುಗಳು ಒಳಗೊಂಡಿತ್ತು. ಆದರೆ ನ್ಯೂಯಾರ್ಕ್ ಮೂಲದ ತಂತ್ರಜ್ಞಾನ ಕಂಪೆನಿ ಕಾಸ್ಟೆಲಮ್ ವರದಿ ಪ್ರಕಾರ ಸದ್ಯ ಆ ಪಟ್ಟಿಯಲ್ಲಿರುವವರು ಕೇವಲ 3800 ಮಂದಿಯಷ್ಟೇ. ಈ ಎಲ್ಲರ ಮೇಲೆ ಪ್ರಮುಖವಾಗಿ ಉಗ್ರ ಚಟುವಟಿಕೆಗೆ ಹಣಕಾಸು ಪೂರೈಕೆ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿತ್ತು. ಅಂತರಾಷ್ಟ್ರೀಯ ಹಣಕಾಸು ಕಾರ್ಯಪಡೆ (SITF) ಆದೇಶದನ್ವಯ ಪಾಕಿಸ್ತಾನದ NACTA ಉಗ್ರರ ಹಣಕಾಸು ಚಟುವಟಿಕೆ ಮೇಲೆ ಕಣ್ಗಾವಲು ಇರಿಸಿತ್ತು.
ಆದರೆ SITF ವಿಧಿಸಿದ್ದ 27 ಕ್ರಮಗಳಲ್ಲಿ ಪಾಕಿಸ್ತಾನ ಕೇವಲ ಅರ್ಧದಷ್ಟು ಮಾತ್ರ ಕ್ರಮಗಳನ್ನ ಅನುಸರಿಸಿದೆ. ಆದ್ದರಿಂದ SITF ವಿಧಿಸಿದ್ದ ಕ್ರಮಗಳನ್ನ ಜಾರಿಗೆ ತರುವಲ್ಲಿ ಪಾಕಿಸ್ತಾನ ಅದಕ್ಷತೆ ತೋರಿದೆ ಅನ್ನೋ ಆರೋಪ ಈ ಹಿಂದೆಯೇ ಇತ್ತು.
ಅದರಲ್ಲೂ ಈ ರೀತಿಯ ಉಗ್ರರ ಮೇಲೆ ನಿಗಾ ಇಟ್ಟ ಪರಿಣಾಮ ಪಾಕಿಸ್ತಾನದಲ್ಲಾಗಲೀ, ಇಲ್ಲವೇ ನೆರೆ ದೇಶಗಳಲ್ಲಾಗಲೀ ದೊಡ್ಡ ಮಟ್ಟಿನ ಸಂಚು ಹೂಡಲು ಉಗ್ರರಿಗೆ ಸಾಧ್ಯವಾಗಿರಲಿಲ್ಲ. ಮಾತ್ರವಲ್ಲದೇ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪ್ರಬಲವಾಗಿರುವ ಲಷ್ಕರ್-ಇ-ತೊಯ್ಬಾ ಹಾಗೂ ಜೈಶ್-ಇ-ಮೊಹಮ್ಮದ್ ತನ್ನ ಪ್ರಾಬಲ್ಯ ಕಳೆದುಕೊಂಡಿತ್ತು ಎನ್ನಲಾಗುತ್ತಿದೆ. ಆದರೆ ಇದೀಗ ಮತ್ತೆ ಕಾರ್ಯಚಟುವಟಿಕೆಗೆ ಪಾಕಿಸ್ತಾನ ಸರಕಾರವೇ ಕುಮ್ಮಕ್ಕು ನೀಡಿದಂತಾಗಿದೆ. ಅದಲ್ಲದೇ ಕರೋನಾ ಸಂಕಷ್ಟ ಸಮಯದಲ್ಲಿಯೇ ಈ ರೀತಿಯ ತರಾತುರಿಯ ನಿರ್ಧಾರಕ್ಕೆ ಪಾಕಿಸ್ತಾನ ಮುಂದಾಗಿದ್ದು, ಜಗತ್ತಿನ ಕಣ್ಣಿಗೆ ಮಣ್ಣೆರಚುವ ಕೆಲಸಕ್ಕೆ ಮುಂದಾದಂತಿದೆ. ಆದರೆ ಜಗತ್ತಿನ ಪ್ರಮುಖ ತನಿಖಾ ಸಂಸ್ಥೆಗಳು ಪಾಕಿಸ್ತಾನದ ಈ ಕಣ್ಣಾಮುಚ್ಚಾಲೆ ಆಟವನ್ನ ಗಮನಿಸುತ್ತಿದೆ.
ಇದೀಗ ಪಟ್ಟಿಯಿಂದ ಹೆಸರು ತೆರವುಗೊಂಡ ನಾಯಕರೇ ಈ ಹಿಂದೆ ನಡೆದಿದ್ದ ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸಿನ ಪೂರೈಕೆ ಮಾಡಿದ್ದರು. 2008ರಲ್ಲಿ ಮುಂಬೈ ದಾಳಿಯೂ ಅಷ್ಟೇ, ಮುಗ್ಧ ಯುವಕರ ತಲೆಯಲ್ಲಿ ಧರ್ಮಾಂಧತೆ ಬಿತ್ತಿ ಅವರಿಗೆ ಹಣ ನೀಡುವ ಆಸೆ ಹುಟ್ಟಿಸಿ ಮುಂಬೈ ನಗರಿಗೆ ಕಳಿಸಿದ್ದರು. ಸ್ವತಃ ಅಜ್ಮಲ್ ಕಸಬ್ ನೇ ತಾನು ಹಣಕ್ಕಾಗಿ ಈ ಕೃತ ಎಸಗಿದ್ದಾಗಿ ಬಾಯ್ಬಿಟ್ಟಿದ್ದ.
ಆದ್ದರಿಂದ ಇದೀಗ ಮತ್ತೆ ಉಗ್ರರನ್ನು ತನ್ನ ಕಣ್ಗಾವಲಿನಿಂದ ಸರಕಾರ ದೂರವಿಟ್ಟಿದ್ದು ನೆರೆಯ ರಾಷ್ಟ್ರಗಳು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಆಗಿದೆ.