ಜಗತ್ತಿನಾದ್ಯಂತ ಕರೋನಾ ವ್ಯಾಪಕವಾಗಿ ಹರಡಿ ಜೀವಹಾನಿ ಮಾಡುತ್ತಾ ತಲ್ಲಣ ಮೂಡಿಸುತ್ತಿದೆ. ಭಾರತದಲ್ಲಿನ ತಲ್ಲಣಗಳ ಸ್ವರೂಪವೇ ಬೇರೆಯದ್ದು. ವಲಸಿಗರು ಬರಿಗಾಲಲ್ಲಿ, ಹಸಿದ ಹೊಟ್ಟೆಯಲ್ಲಿ ಸುಧೀರ್ಘ ಹಾದಿ ಸವೆಸುವ ಹೊತ್ತಿನಲ್ಲಿ ಅನುಭವಿಸುವ ನೋವುಗಳಿಗೆ ಕಾರಣವಾಗಿರುವ ಸರ್ಕಾರದ ಕ್ರೌರ್ಯವು ಕರೋನಾ ಸಾವನ್ನು ಮೀರಿಸಿದ್ದು. ದೇಶದಲ್ಲಿನ ಕರೋನಾ ಸಾವು- ನೋವುಗಳ ಲೆಕ್ಕವನ್ನು ಮುಂದಿಟ್ಟುಕೊಂಡು ತಾವೇನೋ ಸಾಧಿಸಿದ್ದಾಗಿ ವಿಜೃಂಭಿಸುವ ಸರ್ಕಾರಕ್ಕೆ ವಲಸಿಗರ ನೋವಿನ ಆಕ್ರಂದನಗಳು ಕೇಳಿಸುತ್ತಲೇ ಇಲ್ಲ. ದೆಹಲಿಯ ಯಮುನಾ ನದಿ ದಂಡೆಯ ಮೇಲಿನ ನರಕಸದೃಶ ಚಿತ್ರಗಳು ಇಡೀ ಆಡಳಿತ ವ್ಯವಸ್ಥೆಯ ವೈಫಲ್ಯದ ಜತೆಗೆ ಆಳುವ ವರ್ಗದ ನಿರ್ದಯತೆಯನ್ನು ಪ್ರತಿಬಿಂಬಿಸುತ್ತಿವೆ.
ಪಡಿತರ ಆಹಾರ ಪದಾರ್ಥಗಳನ್ನು ಪಡೆಯಲು ಅಲ್ಲಲ್ಲಿ ಆಗುತ್ತಿರುವ ನೂಕುನುಗ್ಗಲುಗಳು ಹಸಿದ ಜನತೆಯ ಅಸಹಾಯತೆ ಮತ್ತು ಆಳುವ ವರ್ಗದ ಬೇಜವಬ್ದಾರಿತನಕ್ಕೆ ಸಾಕ್ಷಿಯಾಗುತ್ತಿವೆ. ಆಹಾರ ನೀಡದೇ ‘ಲಾಕ್ ಡೌನ್’ ಹೆಸರಲ್ಲಿ ಮನೆಯಲ್ಲಿ ಕೂಡಿ ಹಾಕಿ, ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ‘ಪ್ರೈಮ್ ಟೈಮ್’ ನಲ್ಲಿ ಘೋಷಿಸಿಬಿಟ್ಟರೆ ಮತ್ತು ಅದನ್ನು ಆಡಳಿತ ಪಕ್ಷದ ಬೆಂಬಲಿಗರು ಮಿಲಿಯನ್ನು ಲೆಕ್ಕದಲ್ಲಿ ಲೈಕ್- ಷೇರ್ ಮಾಡಿಬಿಟ್ಟರೆ ಅಸಹಾಯಕರ ನೋವು ಶಮನವಾಗುತ್ತದೆಯೇ?
ಕರೋನಾ ವಿರುದ್ಧ ಹೋರಾಟ ನಡೆಸಲು ಭಾರತದಲ್ಲಿ ಎದ್ದು ಕಾಣುತ್ತಿರುವುದು ಮೂಲಭೂತ ಸೌಲಭ್ಯಗಳ ಕೊರತೆ. ವೈದ್ಯಕೀಯ ಸಿಬ್ಬಂದಿಗೆ ಇನ್ನೂ ಪೂರ್ಣಪ್ರಮಾಣದಲ್ಲಿ ಪಿಪಿಇ (ವೈಯಕ್ತಿಕ ಸುರಕ್ಷತಾ ಪರಿಕರಗಳು) ಸರಬರಾಜಾಗಿಲ್ಲ. ಎನ್-95 ಮಾಸ್ಕ್ ದೊರೆತಿಲ್ಲ. ಖಾಸಗಿ ಲಾಬರೆಟರಿಗಳಲ್ಲಿ ಪರೀಕ್ಷೆ ಮಾಡಿಸುವ ಮತ್ತು ಅದಕ್ಕೆ ದರ ನಿಗದಿ ಮಾಡುವ ಕುರಿತಂತೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಕರೋನಾ ಪರೀಕ್ಷೆಗೆ ಖಾಸಗಿ ಲಾಬರೆಟರಿಗಳು ಕನಿಷ್ಠ 4,000 ರುಪಾಯಿ ವಸೂಲು ಮಾಡುತ್ತಿವೆ. ಈ ಸಂಕಷ್ಟ ಕಾಲದಲ್ಲಿ ಮೇಲ್ವರ್ಗದವರ ಹೊರತಾಗಿ ಬೇರೆಯವರಿಗೆ ಈ ಮೊತ್ತವು ದುಬಾರಿಯೇ. ಸರ್ಕಾರವೇ ಪರೀಕ್ಷಾ ವೆಚ್ಚಭರಿಸಲಾರದಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆಯೇ? ‘ಮೋದಿ- ಕೇರ್ಸ್’ನಲ್ಲಿ ಸಂಗ್ರಹವಾಗುತ್ತಿರುವ ದೇಣಿಗೆಯು ಪರೀಕ್ಷೆ ಮಾಡಿಸುವುದಕ್ಕೆ ಮತ್ತು ಪಿಪಿಇ ಖರೀದಿಸುವುದಕ್ಕೆ ಬಳಕೆ ಮಾಡಿ ಸೋಂಕು ಹರಡುವುದನ್ನು ತಡೆಯುದಕ್ಕಿಂತಲೂ ಉತ್ತಮವಾಗಿ ಬಳಸುವ ಮಾರ್ಗವಾದರೂ ಯಾವುದಿದೆ?
ಈ ದೇಶದ ಸಮಸ್ಯೆ ನಿಜವಾಗಿ ಹಣಕಾಸಿನ ಕೊರತೆಯದ್ದಲ್ಲ, ಆದ್ಯತೆಗಳದ್ದು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತನ್ನ ಆದ್ಯತೆಗಳನ್ನು ಆಯ್ಕೆ ಮಾಡುವಲ್ಲೇ ಎಡವುತ್ತಿದೆ. ಮೋದಿ ಸರ್ಕಾರದ ಲೆಕ್ಕಾಚಾರಗಳು ಮುಂದಿನ ಚುನಾವಣೆಗಳೇ ಹೊರತು ಮುಂದಿನ ತಲೆಮಾರಿನ ಶ್ರೇಯೋಭಿವೃದ್ಧಿ ಅಲ್ಲ ಎಂಬುದು ಪದೇ ಪದೇ ಸಾಬೀತಾಗುತ್ಲಲೇ ಇದೆ. ಇತ್ತೀಚಿನ ಪ್ರಕರಣ ಎಂದರೆ, ಕರೋನಾ ಸಂಕಷ್ಟದ ನಡುವೆಯೂ ಮಧ್ಯಪ್ರದೇಶದಲ್ಲಿ ಸರ್ಕಾರವನ್ನು ಕಬಳಿಸಿದ್ದು!
ನರೇಂದ್ರ ಮೋದಿ ಅಧಿಕಾರಕ್ಕೆ ಬಂದಂದಿನಿಂದಲೂ ಆದ್ಯತಾ ಸಮಸ್ಯೆ ಇದೆ. ಇದನ್ನು ಆರ್ಥಿಕ ನಿರಕ್ಷರತೆ ಎಂದರೂ ಸರಿಯೇ. 500 ಮತ್ತು 1000 ರುಪಾಯಿ ನೋಟುಗಳನ್ನು ಬ್ಯಾನ್ ಮಾಡುವ ‘ಅಪನಗದೀಕರಣ’ ನಿರ್ಧಾರ ಕೈಗೊಂಡಿದ್ದು ಇಂತಹದ್ದೊಂದು ಆದ್ಯತೆಯೇ ಗೊತ್ತಿಲ್ಲದ ಮೂರ್ಖ ನಿರ್ಧಾರಕ್ಕೆ ಉದಾಹರಣೆ.
![](https://pratidhvani.in/wp-content/uploads/2021/02/pratidhvani_student_corner-52.jpeg)
ಈಗ ಮೋದಿ ಸರ್ಕಾರವು ‘ಪಿಎಂ- ಕೇರ್ಸ್’ಗೆ ದೇಣಿಗೆ ನೀಡಿ ಎಂದು ವಿವಿಧ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿರುವ ಹೊತ್ತಿನಲ್ಲಿ ಮೋದಿ ಸರ್ಕಾರದ ಆದ್ಯತೆಗಳು ಹೇಗೆ ದೇಶಕ್ಕೆ ಅನುಪಯುಕ್ತ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿ ನರ್ಮದಾ ನದಿ ದಂಡೆ ಮೇಲೆ ನಿರ್ಮಿಸಿದ 3,000 ಕೋಟಿ ರುಪಾಯಿ ವೆಚ್ಚದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಗಗನಚುಂಬಿ ಪ್ರತಿಮೆ ನಮ್ಮೆದುರು ಬರುತ್ತದೆ. ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು ಎಂಬುದಕ್ಕೆ ಉದಾಹರಣೆ ಈ ಗಗನಚುಂಬಿ ಪ್ರತಿಮೆ!
ಕರೋನಾ ಹಿನ್ನೆಲೆಯಲ್ಲಿ ಸುಮ್ಮನೆ ಲೆಕ್ಕಹಾಕಿ ನೋಡಿ. ನರೇಂದ್ರ ಮೋದಿ ಸರ್ಕಾರಕ್ಕೆ ದೇಶದ ಜನರ ಆರೋಗ್ಯದ ಮತ್ತು ಭವಿಷ್ಯದ ಚಿಂತೆ ಇದ್ದಿದ್ದರೆ, ಈ 3,000 ಕೋಟಿ ರುಪಾಯಿಗಳಲ್ಲಿ ಏನೆಲ್ಲ ಮಾಡಬಹುದಿತ್ತು? ತಲಾ 100 ಕೋಟಿ ರುಪಾಯಿಗಳಂತೆ ವೆಚ್ಚಮಾಡಿ 30 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನೋ ಅಥವಾ 30 ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಗಳಂತಹ ಪ್ರತಿಷ್ಠಿತ ವೈದ್ಯ ವಿಜ್ಞಾನ ಸಂಸ್ಥೆಗಳನ್ನು ನಿರ್ಮಿಸಬಹುದಿತ್ತು.
ತಲಾ ಹತ್ತು ಕೋಟಿ ರುಪಾಯಿಗಳಂತೆ 300 ಪ್ರಯೋಗಾಲಯಗಳನ್ನು (ಪೆಥಾಲಜಿ) ನಿರ್ಮಿಸಬಹುದಿತ್ತು. ಆಗ, ಪ್ರತಿ ಪ್ರಯೋಗಾಲಯವು ದಿನಕ್ಕೆ 500 ಮಂದಿಯ ಪರೀಕ್ಷೆ ನಡೆಸಿದ್ದರೂ, ಮಾರ್ಚ್ 1ರಿಂದ ಈ 48 ದಿನಗಳಲ್ಲಿ 72,00,000 ಜನರ ಪರೀಕ್ಷೆ ಮಾಡಬಹುದಿತ್ತು. ಅಂದರೆ, ಜಗತ್ತಿನಲ್ಲೇ ಅತ್ಯಂತ ಕಡಮೆ ಪ್ರಮಾಣದಲ್ಲಿ ಕರೋನಾ ಟೆಸ್ಟ್ ನಡೆಸಿರುವ ದೇಶವೆಂಬ ಕಳಂಕವನ್ನು ಕಳೆದುಕೊಳ್ಳಬಹುದಿತ್ತು.
ಜಗತ್ತಿನ ಯಾವ ಸರ್ಕಾರವೂ ತನಗೆ ಮಾಸ್ಕ್ ಒದಗಿಸಲು ಸಾಧ್ಯವಿಲ್ಲ ನೀವೆ ಮಾಡಿಕೊಳ್ಳಿ ಎಂದು ಹೇಳಿಲ್ಲ. ಆದರೆ, ನಮ್ಮ ಪ್ರಧಾನಿಗಳು ಹೇಳಿದ್ದಾರೆ. ಒಂದು ವೇಳೆ ಗಗನಚುಂಬಿ ಪ್ರತಿಮೆಗೆ ಬಳಸಿದ 3000 ಕೋಟಿ ರುಪಾಯಿಗಳನ್ನು ಬಳಸಿದ್ದರೆ, ಎನ್-95 ಮಾಸ್ಕ್ ಗಳಿಗೆ ಸರಾಸರಿ 150 ರುಪಾಯಿ ಎಂದರೂ 20 ಕೋಟಿ ಎನ್-95 ಮಾಸ್ಕ್ ಗಳನ್ನು ಖರೀದಿಸಬಹುದಿತ್ತು.
ಮೋದಿ ಸರ್ಕಾರ ಆದ್ಯತೆ ನೀಡುವಲ್ಲಿ ಎಡವುತ್ತಿರುವುದಕ್ಕೆ ಉದಾಹರಣೆಯಾಗಿ ಇಲ್ಲಿ ಗಗನಚುಂಬಿ ಪ್ರತಿಮೆಯನ್ನು ಸಾಂಕೇತಿಕವಾಗಿ ಉದಾಹರಿಸಲಾಗಿದೆ. ಮೋದಿ ಸರ್ಕಾರ ಅಪನಗದೀಕರಣ ಮಾಡಿದ್ದರಿಂದಾಗಿ ಸುಮಾರು ಶೇ.2.5ರಷ್ಟು ಜಿಡಿಪಿ ಕುಸಿತ ಆಗಿದೆ. ಅಂದರೆ ಮೋದಿ ಸರ್ಕಾರದ ಅಪನಗದೀಕರಣದಿಂದ ದೇಶಕ್ಕೆ ಆಗಿರುವ ನಷ್ಟದ ಮೊತ್ತವು ಸುಮಾರು 5 ಲಕ್ಷ ಕೋಟಿ ರುಪಾಯಿಗಳಾಗಿದೆ. ಅಷ್ಟೇ ಏಕೆ ಇತ್ತೀಚೆಗೆ ತಾನೆ ದೇಶದ ಆರ್ಥಿಕತೆ ಕುಸಿದು, ಜನರ ಖರೀದಿ ಶಕ್ತಿ ನಶಿಸಿಹೋಗಿದ್ದ ಹೊತ್ತಿನಲ್ಲಿ ಜನಸಾಮಾನ್ಯರಿಗೆ ನೆರವು ನೀಡಬೇಕಿದ್ದ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಪೊರೆಟ್ ವಲಯಕ್ಕೆ 1.40 ಲಕ್ಷ ಕೋಟಿ ರುಪಾಯಿಗಳ ವಾರ್ಷಿಕ ತೆರಿಗೆ ಕಡಿತ ಮಾಡಿದೆ. ಇದರಿಂದ ದೇಶದ ಬೊಕ್ಕಸಕ್ಕೆ ಆಗುವ ತೆರಿಗೆ ಮೂಲದ ನಷ್ಟವು ವಾರ್ಷಿಕ 1.40 ಲಕ್ಷ ರುಪಾಯಿ. ಅಂದರೆ ಹತ್ತು ವರ್ಷದಲ್ಲಿ 14 ಲಕ್ಷ ಕೋಟಿ ರುಪಾಯಿಗೆ ಏರುತ್ತದೆ. 1.40 ಲಕ್ಷ ಕೋಟಿ ರುಪಾಯಿ ತೆರಿಗೆ ವಿನಾಯ್ತಿ ನೀಡಿದ್ದರಿಂದ ದೇಶದ ಆರ್ಥಿಕತೆಯಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಕೇವಲ ಕಾರ್ಪೊರೆಟ್ ಕುಳಗಳ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಸಂಪತ್ತು ಹಿಗ್ಗಿದೆಯಷ್ಟೇ!
ಒಂದು ಕ್ಷಣ ಯೋಚಿಸಿ, ಇದೇ 1.40 ಲಕ್ಷ ಕೋಟಿ ರುಪಾಯಿಗಳನ್ನು ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರಿಗೆ ತಲುಪಿಸಿದ್ದರೆ, ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿತ್ತು. ಅಷ್ಟೇ ಅಲ್ಲ ಕರೋನಾ ಸೋಂಕಿನಿಂದ ಈಗ ಉದ್ಭವಿಸಿರುವ ವಲಸೆ ಕಾರ್ಮಿಕರ ಸಮಸ್ಯೆ ಬಹುತೇಕ ಉದ್ಭವಿಸುತ್ತಿರಲೇ ಇಲ್ಲ!