ಕರೋನಾ ವಿಚಾರವಾಗಿ ಜಗತ್ತಿನ ಕಣ್ಣಿಗೆ ಖಳನಾಯಕನಾಗಿ ಕಾಣಿಸಿಕೊಂಡ ಚೀನಾ ಇದೀಗ ಗಡಿ ವಿಚಾರದಲ್ಲಿ ಭಾರತದ ಪಾಲಿಗೆ ಖಳನಾಯಕನಂತೆಯೇ ವರ್ತಿಸುತ್ತಿದೆ. ಸದಾ ಗಡಿ ವಿಚಾರದಲ್ಲಿ ಕಾಲು ಕೆರೆದು ಜಗಳಕ್ಕೆ ಬರೋ ಚೀನಾವನ್ನ, ಭಾರತ ಕರೋನಾ ವಿಚಾರವಾಗಿ ಯಾವತ್ತೂ ʼಚೀನೀ ವೈರಸ್ʼ ಎಂದಾಗಲೀ, ʼಚೀನಾದಿಂದ ಆದ ಅನಾಹುತʼವೆಂದಾಗಲೀ ಹೇಳಲಿಲ್ಲ. ಅಮೆರಿಕಾದಂತಹ ಮುಂದುವರಿದ ರಾಷ್ಟ್ರಗಳೇ ಇಂತಹ ಹೇಳಿಕೆಗಳನ್ನ ಕೊಡುತ್ತಿದ್ದರೂ, ಭಾರತ ರಾಜತಾಂತ್ರಿಕ ಸಂಬಂಧಕ್ಕೆ ಮಹತ್ವ ನೀಡಿತ್ತು. ಆದ್ದರಿಂದ ಕರೋನಾ ವಿರುದ್ಧ ಪ್ರಯಾಸದ ಹೋರಾಟದಲ್ಲಿ ಭಾರತ ನಿರತವಾಗಿದೇ ಹೊರತು, ಎಲ್ಲೂ ಕೂಡಾ ಚೀನಾದ ವಿರುದ್ಧ ಈ ಮೂಲಕ ದ್ವೇಷ ಸಾಧಿಸುವ ಕೆಲಸಕ್ಕೆ ಕೈ ಹಾಕಿರಲಿಲ್ಲ. ಆದರೆ ಚೀನಾ ಮಾತ್ರ ತನ್ನ ನರಿಬುದ್ಧಿ ಪ್ರದರ್ಶಿಸುತ್ತಿದೆ. ಮತ್ತೆ ಗಡಿ ಕ್ಯಾತೆ ತೆಗೆದು ಜಗಳಕ್ಕೆ ಮುಂದಾಗಿದೆ. ಈಗಾಗಲೇ ನಡೆದ ಭಾರತ ಹಾಗೂ ಚೀನಾ ಸೈನಿಕರ ಮುಖಾಮುಖಿಯಲ್ಲಿ ಕೆಲವು ಸೈನಿಕರು ಗಾಯಗೊಂಡಿದ್ದೂ ಆಗಿದೆ. ಅಷ್ಟಕ್ಕೂ ನೆನಪಾದಾಗಲೆಲ್ಲ ಭಾರತದ ಗಡಿ ಬಳಿ ಬಂದು ಜಗಳಕ್ಕೆ ಇಳಿಯುವ ಈ ಚೀನಾ ದೇಶದ ಉದ್ದೇಶವಾದರೂ ಏನು ಗೊತ್ತಾ?
2017 ರಲ್ಲಿ ಸಿಕ್ಕಿಂ ರಾಜ್ಯ ಗಡಿ ಭಾಗದ ಡೋಕ್ಲಾಂ ಪ್ರದೇಶದಲ್ಲಿ ಹೀಗೆಯೇ ಕಾಲ್ಕೆರೆದು ಜಗಳಕ್ಕೆ ಇಳಿದಿದ್ದ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಗೆ ಭಾರತೀಯ ಸೈನಿಕರು ತಕ್ಕ ಉತ್ತರ ನೀಡಿದ್ದರು. 73 ದಿನಗಳ ಡೋಕ್ಲಾಂ ನಲ್ಲಿ ನಡೆದಿದ್ದ ಉದ್ವಿಗ್ನತೆ ಚೀನಾ ಸೈನಿಕರ ಹಿಂದಡಿಯಿಂದ ಸ್ವಲ್ಪ ಮಟ್ಟಿಗೆ ತಣ್ಣಗಾಗಿತ್ತು. ಮಾತ್ರವಲ್ಲದೇ ಅಂದು ಚೀನಾದ ಸೈನಿಕರು ವಾಪಾಸ್ ಹೋಗುತ್ತಿದ್ದಂತೆ ಭಾರತ ಡೋಕ್ಲಾಮ್ ನಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿತ್ತು. 2018 ರಲ್ಲಿ ಚೀನಾದ ವುಹಾನ್ ನಲ್ಲಿ ಭೇಟಿಯಾಗಿದ್ದ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ-ಜಿನ್ಪಿಂಗ್ ಗಡಿ ವಿಚಾರವಾಗಿ ಮಾತುಕತೆ ನಡೆಸಿದ್ದರು. ಆನಂತರ ಚೀನಾ ಅಧ್ಯಕ್ಷರೂ ಭಾರತಕ್ಕೆ ಭೇಟಿ ನೀಡಿದ್ದರು. ಈ ಎರಡೂ ಭೇಟಿಗಳಲ್ಲೂ ಶಾಂತಿ ಕಾಪಾಡುವ ವಿಚಾರವಾಗಿ ಮಾತುಕತೆಗಳು ನಡೆದಿದ್ದವು. ಆದರೆ ಇದೀಗ ಕರೋನಾ ಸಂದಿಗ್ಧತೆ ನಡುವೆಯೇ ಚೀನಾ, ಭಾರತ ಹಾಗೂ ಚೀನಾ ಗಡಿ ಭಾಗದಲ್ಲಿ ಯುದ್ಧದ ಸನ್ನಿವೇಶ ನಿರ್ಮಿಸಿದೆ.
ಜಗತ್ತಿನ ದೃಷ್ಟಿಕೋನವೆಲ್ಲ ಚೀನಾದ ಕರೋನಾ ವೈರಸ್ ಮೇಲೆ ನೆಟ್ಟಿದ್ದರೆ, ಚೀನಾ ಅದರಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದೆ. ಅದಕ್ಕಾಗಿಯೇ ಜಾಗತಿಕ ಮಟ್ಟದಲ್ಲೊಂದು ಕಾರಣ ಹುಡುಕುತ್ತಿದೆ. ಅದೆಲ್ಲಕ್ಕೂ ವೇದಿಕೆಯೊದಗಿಸಲೆಂದೇ ಯುದ್ಧ ಭೀತಿಯ ವಾತಾವರಣವನ್ನ ಚೀನಾ ಅನಗತ್ಯವಾಗಿ ಸೃಷ್ಟಿ ಮಾಡುತ್ತಿದೆ. ಈ ಬಾರಿ ಮತ್ತೆ ಗಡಿ ಕ್ಯಾತೆ ತೆಗೆದಿರುವ ಚೀನಾ ಲಡಾಖ್ನ ಪ್ಯಾಂಗ್ವಾಂಗ್ ಸರೋವರ ಹಾಗೂ ಗಾಲ್ವಾನ್ ಕಣಿವೆಯಲ್ಲಿ ತನ್ನ ಸೈನಿಕರನ್ನ ನಿಯೋಜಿಸಿದೆ. ಮಾತ್ರವಲ್ಲದೇ ತಾತ್ಕಾಲಿಕ ಮೂಲಭೂತ ಸೌಕರ್ಯಗಳನ್ನೂ ಒದಗಿಸಿವೆ. ಇದರಿಂದಾಗಿ ಲಡಾಖ್ ಕಣಿವೆಯಲ್ಲಿ ಯುದ್ಧದ ಭೀತಿ ನಿರ್ಮಾಣವಾಗಿವೆ ಅನ್ನೋದಾಗಿ ಅಂತರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡತೊಡಗಿದ್ದಾವೆ. ಆ ಮೂಲಕ ಚೀನಾ ತನಗೆ ಬಾಧಿಸಿದ್ದ ʼಕರೋನಾ ಕಳಂಕʼದ ದೃಷ್ಟಿಕೋನವನ್ನ ʼಯುದ್ಧ ಭೀತಿʼಯತ್ತ ಹಾಯಿಸುವಂತಾಗಲು ಸಣ್ಣಗಿನ ಸಫಲತೆ ಕಾಣುತ್ತಿದೆ.
“ಭಾರತವು ತನ್ನ ಗಡಿ ರೇಖೆಯಲ್ಲಿಯೇ ಗಸ್ತು ನಡೆಸುತ್ತಿದೆ. ಆದರೆ ಚೀನಾ ಇತ್ತೀಚೆಗೆ ಗಡಿ ದಾಟುತ್ತಿದ್ದು ಭಾರತದ ಪಡೆ ಗಸ್ತು ನಡೆಸುವಲ್ಲಿ ಹಸ್ತಕ್ಷೇಪ ನಡೆಸುತ್ತಿದೆ” ಎಂದು ಭಾರತೀಯ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.
ಗಡಿಯಲ್ಲಿ ಚೀನಾ 80 ರಿಂದ 100 ರಷ್ಟು ಟೆಂಟ್ಗಳನ್ನ ನಿರ್ಮಿಸಿದರೆ, ಭಾರತ ಪ್ರತಿಯಾಗಿ ಸುಮಾರು 60 ರಷ್ಟು ಟೆಂಟ್ಗಳನ್ನು ನಿರ್ಮಿಸಿಕೊಂಡಿದೆ. ಅಲ್ಲದೇ ಚೀನಾವು ಸುಮಾರು 10 ಸಾವಿರದಷ್ಟು ಸೈನಿಕರನ್ನ ಪ್ಯಾಂಗಾಂಗ್ ಹಾಗೂ ಗಾಲ್ವಾನ್ ಕಣಿವೆಯಲ್ಲಿ ಗಸ್ತಿನಲ್ಲಿ ಇರಿಸಿವೆ. ಪ್ರತಿ ವರುಷ ಚೀನಾ ಗಡಿಯಲ್ಲಿ ಇದೇ ರೀತಿ ಕ್ಯಾತೆ ತೆಗೆಯುತ್ತಲೇ ಬರುತ್ತಿದೆಯಾದರೂ ಈ ಬಾರಿ ಅದು ತುಸು ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಿದೆ ಅನ್ನೋದು ಗಮನಾರ್ಹ. 1962 ರಲ್ಲಿ ಚೀನಾ ತನ್ನ ನರಿಬುದ್ಧಿಯಿಂದಲೇ ಯುದ್ಧ ಆರಂಭಿಸಿತ್ತು. ಅಲಿಪ್ತ ನೀತಿ ಹೊಂದಿದ್ದ ಭಾರತದ ಮೇಲೆ ಏಕಾಏಕಿ ಆಕ್ರಮಣ ನಡೆಸಿತ್ತು. ಆದರೆ ಗಡಿ ವಿವಾದ ಕೊನೆಗೊಳಿಸುವಲ್ಲಿ ಸಾಧ್ಯವಾಗಿರಲಿಲ್ಲ. ಅಲ್ಲದೇ ಚೀನಾ ಪದೇ ಪದೇ ಸಿಕ್ಕಿಂ ಒಪ್ಪಂದ ಮುರಿಯುತ್ತಲೇ ಬಂದಿದೆ. ಗಡಿಯಲ್ಲಿ ಚೀನಾ-ಭಾರತ ಯೋಧರು ಈ ಹಿಂದೆಯೂ ಮುಖಾಮುಖಿಯಾಗಿ ನೂಕಾಟ-ತಳ್ಳಾಟ ನಡೆಸಿದ್ದೂ ಇದೆ.
ಸಾಮ್ರಾಜ್ಯಶಾಹಿ ಧೋರಣೆ ಹೊಂದಿರುವ ಚೀನಾ ಇವತ್ತಿಗೂ ಟಿಬೆಟ್ ದೇಶದಲ್ಲಿ ತನ್ನ ಅಧಿಪತ್ಯ ಹೊಂದಿದೆ. ಚೀನಾಕ್ಕೆ ನೆರೆ ರಾಷ್ಟ್ರಗಳೊಂದಿಗೆ ಜಗಳ ಆಡೋದು ಒಂದು ರೀತಿಯ ಕೆಟ್ಟ ಚಾಳಿ. 14 ರಾಷ್ಟ್ರಗಳೊಂದಿಗೆ ಗಡಿಯನ್ನ ಹೊಂದಿರುವ ಚೀನಾ, ಪಾಕಿಸ್ತಾನ ಹಾಗೂ ನೇಪಾಳ ಹೊರತುಪಡಿಸಿ ಮಿಕ್ಕೆಲ್ಲ ರಾಷ್ಟ್ರಗಳ ಜೊತೆ ಗಡಿ ವಿಚಾರದಲ್ಲಿ ಅನಗತ್ಯ ವಿವಾದವನ್ನ ಎಬ್ಬಿಸುತ್ತಲೇ ಇದೆ. ಅದರ ಪರಿಣಾಮವೇ ಇತ್ತೀಚೆಗೆ ನೇಪಾಳ ಕೂಡಾ ತನ್ನ ಸೊಕ್ಕು ಪ್ರದರ್ಶಿಸಿದ್ದು, ಭಾರತದ ಪ್ರದೇಶಗಳನ್ನ ತನ್ನದು ಎಂದು ಹೇಳಿಕೊಂಡಿತ್ತು.
ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19 ಪಿಡುಗು ನಿರ್ವಹಣೆಯಲ್ಲಿ ಲೋಪ ಎಸಗಿದೆ ಅಂತಾ ಜಗತ್ತಿನ 62 ರಾಷ್ಟ್ರಗಳು ಸ್ವತಂತ್ರ ತನಿಖೆ ನಡೆಯಬೇಕೆನ್ನುವ ಒತ್ತಾಯಕ್ಕೆ ಭಾರತವೂ ದನಿಗೂಡಿಸಿತ್ತು. ಇದು ತನಿಖೆಗೆ ವಿರೋಧಿಸಿದ್ದ ಚೀನಾವನ್ನ ಇನ್ನಷ್ಟು ಗರಂ ಆಗುವಂತೆ ಮಾಡಿತ್ತು. ಈ ಮಧ್ಯೆ ಡೊನಾಲ್ಡ್ ಟ್ರಂಪ್ ಚೀನಾ-ಭಾರತ ನಡುವಿನ ಶೀತಲ ಸಮರಕ್ಕೆ ʼಮಧ್ಯಸ್ಥಿಕೆʼ ವಹಿಸುವ ಆಸಕ್ತಿ ವಹಿಸಿದ್ದು ಅಚ್ಚರಿ ಮೂಡಿಸಿದೆ.
Also Read: ಭಾರತ-ಚೀನಾ ಗಡಿ ವಿವಾದ: ಟ್ರಂಪ್ ಹೇಳಿಕೆ ಅಲ್ಲಗೆಳೆದ ಭಾರತ
ಒಟ್ಟಿನಲ್ಲಿ ಲಡಾಖ್ ಹಾಗೂ ಸಿಕ್ಕಿಂ ಗಡಿಗಳಲ್ಲಿ ಚೀನಾ ತನ್ನ ಅಧಿಪತ್ಯ ಮೆರೆಯಲು ಮುಂದಾದರೆ, ಭಾರತ ಅದಕ್ಕೆ ತಕ್ಕ ಉತ್ತರ ನೀಡಲು ಸಜ್ಜಾಗಿದೆ. ಆದರೆ ಬಲಿಷ್ಟ ರಾಷ್ಟ್ರಗಳ ನಡುವೆ ಯುದ್ಧ ಸಂಭವಿಸಿದರೆ ಅಪಾರ ಪ್ರಮಾಣದ ನಷ್ಟ ಅನುಭವಿಸಬೇಕಾಗಿ ಬರುವುದರಲ್ಲಿ ಸಂಶಯವಿಲ್ಲ. ಕರೋನಾ ಸೋಂಕಿನ ನಡುವೆಯೂ ಚೀನಾ ಇಂತಹದ್ದೊಂದು ದುಸ್ಸಾಹಸಕ್ಕೆ ಕೈ ಹಾಕುತ್ತಿದೆ ಅಂದರೆ ಚೀನಾಕ್ಕೆ ʼವಿನಾಶ ಕಾಲೇ ವಿಪರೀತ ಬುದ್ಧಿʼ ಅನ್ನಲೇಬೇಕು.