ಬಹಳಷ್ಟು ಕಠಿಣ ಕ್ರಮಗಳ ಹೊರತಾಗಿಯೂ ನಿಯಂತ್ರಣಕ್ಕೆ ಬಾರದ ಕರೋನಾ ಸೋಂಕು ಹರಡುವಿಕೆಗೆ ಕೋಮು ಬಣ್ಣವನ್ನು ಬಳಿಯಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಮೌಲಿಕ ಸಲಹೆ ನೀಡಿದ್ದಾರೆ. ಜೊತೆಗೆ ಕರೋನಾ ಕಷ್ಟವನ್ನು ಕೋಮುವಾದಕ್ಕೆ ತಳುಕು ಹಾಕುವುದರಿಂದ ಸಮಸ್ಯೆ ಇನ್ನಷ್ಟು ಸಂಕೀರ್ಣವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಚಿಕಾಗೊ ವಿಶ್ವವಿದ್ಯಾಲಯದ ವರ್ಚುವಲ್ ಹಾರ್ಪರ್ ಉಪನ್ಯಾಸ ಸರಣಿಯಲ್ಲಿ ಮಾತನಾಡಿರುವ ರಘುರಾಮ್ ರಾಜನ್, ಕರೋನಾ ಸೃಷ್ಟಿಸಿರುವ ಸಂದಿಗ್ಧತೆಯನ್ನು ಕೊಮುವಾದಕ್ಕೆ ಸಂಬಂಧ ಕಲ್ಪಿಸಿದರೆ ಈಗ ಸಣ್ಣ ಪುಟ್ಟ ಪ್ರಮಾಣದಲ್ಲಿ ಆಗುತ್ತಿರುವ ನಡವಳಿಕೆಗಳು ಮುಂದೆ ಸ್ಫೋಟಗೊಳ್ಳಬಹುದು. ಜೊತೆಗೆ ಮುಂದೆ ಭಿನ್ನ ಸಮುದಾಯಗಳು ಒಂದಾಗುವುದೇ ದುಸ್ತರವಾಗಬಹುದು ಎಂದಿದ್ದಾರೆ.
‘ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ತಬ್ಲೀಗ್-ಎ-ಜಮಾತ್ ಸದಸ್ಯರು ಸಭೆ ನಡೆಸಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಕೇಂದ್ರ ಸರ್ಕಾರದ ಮಾರ್ಗಸೂಚಿ ನಿಯಮವನ್ನು ಉಲ್ಲಂಘಿಸಿದ್ದರು. ಸಭೆಯಲ್ಲಿ ವಿದೇಶಿ ಗಣ್ಯರು ಭಾಗವಹಿಸಿದ್ದರು. ಅವರಿಂದ ದೇಶದ ವಿವಿಧ ಭಾಗಗಳಿಂದ ಸಭೆಯಲ್ಲಿ ಭಾಗವಹಿಸಿದ್ದ ಜನರಿಗೂ ಸೋಂಕು ಹರಡಿದೆ. ನಂತರ ದೇಶಿಯರು ಅವರವರ ಊರುಗಳಿಗೆ ಹೋಗಿದ್ದರಿಂದ ದೇಶದ ತುಂಬೆಲ್ಲಾ ನಿರ್ದಿಷ್ಟ ಸಮುದಾಯದವರೇ ಸೋಂಕು ಸಿಂಪಡಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು’ ಎಂಬ ಅಭಿಪ್ರಾಯವನ್ನು ವ್ಯವಸ್ಥಿತವಾಗಿ ರೂಪಿಸಲಾಗಿದೆ. ‘ಸಭೆ ಸೇರಿ ಆಗಿರುವ ತಪ್ಪಿಗೆ ಧರ್ಮದ ಲೇಪನ ಮಾಡಲಾಗಿದೆ. ಕೆಲವರು ಮಾಡಿದ ದ್ರೋಹದ ಕೆಲಸಕ್ಕೆ ಅವರ ಕೋಮನ್ನು ಗುರಿಯಾಗಿಸಲಾಗುತ್ತಿದೆ’ ಎಂಬ ಮಾತುಗಳೂ ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ಮಾತನಾಡಿರುವ ರಘುರಾಮ್ ರಾಜನ್, ಇಂಥ ಆರೋಪಗಳನ್ನು ತೀಕ್ಷ್ಣಗೊಳಿಸಿದಷ್ಟು ಸಮಸ್ಯೆ ಸಂಕೀರ್ಣವಾಗಲಿದೆ. ಜೊತೆಗೆ ಇನ್ನಷ್ಟು ಸ್ಫೋಟಗೊಳ್ಳುವ ಸಾಧ್ಯತೆಯನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ. ತೀವ್ರವಾಗಿ ಹರಡುತ್ತಿರುವ ಮತ್ತು ಜಾಗತಿಕ ಪಿಡುಗಾಗಿ ಪರಣಮಿಸಿರುವ ಕೊರೋನಾ ಸೋಂಕು ಜಗತ್ತಿಕವಾಗಿ ಸೃಷ್ಟಿಸಿರುವ ಹಲವು ಅಸಾಧಾರಣ ಸವಾಲುಗಳನ್ನು ಹೇಗೆ ನಿಭಾಯಿಸಬೇಕೆಂಬ ದೃಷ್ಟಿಕೋನಗಳನ್ನು ಒದಗಿಸಲು ರಘುರಾಮ್ ರಾಜನ್ ಅವರೂ ಸೇರಿದಂತೆ 12 ಮಂದಿ ತಜ್ಞರ ಸಲಹಾ ಮಂಡಳಿ ರೂಪಿಸಲಾಗಿದೆ. ವಿಶ್ವ ಹಣಕಾಸು ನಿಧಿ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಲಿನಾ ಜಾರ್ಜೀವಾ ಸಲಹಾ ಮಂಡಳಿಯನ್ನು ಮುನ್ನಡೆಸುತ್ತಿದ್ದಾರೆ. ಇದರಿಂದಾಗಿ ಜಾಗತಿಕವಾಗಿ ಕರೋನಾ ಬೀರುತ್ತಿರುವ ಪರಿಣಾಮಗಳ ಬಗ್ಗೆ ಮಾತನಾಡುತ್ತಿದ್ದ ರಘುರಾಮ್ ರಾಜನ್, ಕರೋನಾವನ್ನು ಕೋಮುವಾದಗೊಳಿಸುತ್ತಿರುವ ಬಗ್ಗೆ ಗಮನ ಸೆಳೆದಿದ್ದಾರೆ.
ಇದಲ್ಲದೆ ಕರೋನಾ ಜಾಗತಿಕವಾಗಿ ಎಂತಹ ಬಿಕ್ಕಟ್ಟು ಸೃಷ್ಟಿಸಿದೆ ಎಂಬುದನ್ನು ‘ಕರೋನಾ ಸಂಕಟ ಸೃಷ್ಟಿಯಾಗಲು ಅಮೇರಿಕಾವೇ ಕಾರಣ ಎಂದು ಚೀನಾ ಯುಎಸ್ ಕಡೆಗೆ ಬೆರಳು ತೋರಿಸುತ್ತಿದೆ. ಚೀನಾ ಕರೋನಾ ಸೋಂಕು ಸೃಷ್ಟಿಸಿದ್ದು ಮತ್ತು ಜಗತ್ತಿಗೇ ಸಿಂಪಡಿಸಿದ್ದು ಎಂದು ಅಮೇರಿಕಾ ಆರೋಪಿಸುತ್ತಿದೆ’ ಎಂಬ ಹಗ್ಗಜಗ್ಗಾಟದ ಉಲ್ಲೇಖ ನೀಡಿ ವಿವರಿಸಿದ್ದಾರೆ. ಇದರಿಂದಾಗಿ ಪ್ರಪಂಚದ ಎಲ್ಲೆಡೆ ಸಂಚಲನವಾಗುತ್ತಿದೆ. ಜಾಗತಿಕ ಪೂರೈಕೆ ಸರಪಳಿಯು ಕಳಚಿಕೊಳ್ಳುತ್ತಿದೆ. 2020ರ ಎರಡನೇ ತ್ರೈಮಾಸಿಕದಲ್ಲಿ ಜಾಗತಿಕ ಜಿಡಿಪಿ ಶೇಕಡಾ 30-40ರಷ್ಟು ಕುಸಿತವಾಗಲಿದೆ ಎಂದು ಅವರು ಹೇಳಿದ್ದಾರೆ. 2020ರ ದ್ವಿತೀಯಾರ್ಧದಲ್ಲಿ ಆರ್ಥಿಕ ಚಟುವಟಿಕೆಗಳು ಮರುಕಳಿಸಿದರೂ ಜಾಗತಿಕ ಆರ್ಥಿಕ ಬೆಳವಣಿಗೆ ಇನ್ನೂ ವರ್ಷದವರೆಗೆ ನಕಾರಾತ್ಮಕವಾಗಿಯೇ ಇರುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
2008ರಲ್ಲಿ ಜಾಗತಿಕವಾಗಿ ಕಂಡುಬಂದಿದ್ದ ಆರ್ಥಿಕ ಹಿಂಜರಿತವನ್ನು ಮೊದಲೇ ಊಹಿಸಿದ್ದವರು ರಘುರಾಮ್ ರಾಜನ್. ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆದ ಬಳಿಕ ಭಾರತದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಕ್ಕೂ ದುಡಿದವರು. 2014ರಲ್ಲಿ ಎನ್ ಡಿ ಎ ಅಧಿಕಾರಕ್ಕೆ ಬಂದ ಮೇಲೆ ಇವರ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ವಿಫಲವಾಯಿತು ಎಂಬ ಆರೋಪಗಳು ಕೇಳಿಬಂದಿದ್ದವು.2016ರ ಸೆಪ್ಟೆಂಬರ್ ನಲ್ಲಿ ನಿವೃತ್ತರಾದ ರಘುರಾಮ್ ರಾಜನ್ ಅವರನ್ನೇ ಮುಂದುವರೆಸಬೇಕು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಸರ್ಕಾರ ಮನಸ್ಸು ಮಾಡಿರಲಿಲ್ಲ. ನಂತರ ರಘುರಾಮ್ ರಾಜನ್ ತಮ್ಮ ನೆಚ್ಚಿನ ಉಪನ್ಯಾಸ ವೃತ್ತಿಗೆ ಮರಳಿದ್ದರು. ಜೊತೆಗೆ ಮೌನಕ್ಕೆ ಶರಣಾಗಿದ್ದರು.
ಇತ್ತೀಚೆಗೆ ಕರೋನಾ ಕಷ್ಟ ಬಂದ ಬಳಿಕ ಮೊದಲ ಬಾರಿಗೆ ಎನ್ ಡಿ ಟಿ ವಿಗೆ ಸಂದರ್ಶನ ನೀಡಿದ ರಘುರಾಮ್ ರಾಜನ್, ದೇಶಕ್ಕೆ ಬಂದೊದಗಿರುವ ಕಷ್ಟದ ಸಂದರ್ಭದಲ್ಲಿ ಕೆಲಸ ಮಾಡಲು ಸಿದ್ದ ಎಂದಿದ್ದರು. ಅವರಾಗಿಯೇ ಈ ಮಾತು ಹೇಳಿದ ಮೇಲೂ ಮತ್ತು ಎರಡೆರಡು ಲಾಕ್ಡೌನ್ ಗಳಿಂದ ದೇಶದ ಆರ್ಥಿಕತೆ ನೆಲ ಕಚ್ಚಿದ ಮೇಲೂ ಕೇಂದ್ರ ಸರ್ಕಾರ ಅವರ ಜ್ಞಾನವನ್ನು ಬಳಸಿಕೊಳ್ಳಲು ಮುಂದಾಗಲಿಲ್ಲ. ಇದಾದ ಮೇಲೆ ಅವರು ‘ದೇಶದಲ್ಲಿ ಸಂಪನ್ಮೂಲಕ್ಕೆ ಮತ್ತು ಆಹಾರಕ್ಕೆ ಕೊರತೆ ಇಲ್ಲ. ಸದ್ಯ ಅದನ್ನು ಬಡವರಿಗೆ ವಿತರಿಸಿ ತಕ್ಷಣದ ಈ ಕಷ್ಟದಿಂದ ಅವರನ್ನು ಪಾರು ಮಾಡುವ ಕೆಲ ಸಲಹೆ ಇತ್ತರೂ ಕೇಂದ್ರ ಸರ್ಕಾರ ಕಿವಿಗೆ ಹಾಕಿಕೊಳ್ಳಲಿಲ್ಲ. ಈಗ ಕಡುಕಷ್ಟಕ್ಕೆ ಕೋಮು ಬಣ್ಣ ಬಳಿಯಬೇಡಿ ಎಂಬ ಭಿನ್ನಹವಿಟ್ಟಿದ್ದಾರೆ. ಈಗಾಗಲೇ 2008ರ ಜಾಗತಿಕ ಆರ್ಥಿಕ ಹಿಂಜರಿತದ ವಿಷಯದಲ್ಲಿ ಅವರ ದೂರದೃಷ್ಟಿ ಸಾಬೀತಾಗಿದೆ. ಈಗ ಕರೋನಾಗೆ ಕೋಮು ಬಣ್ಣ ಬಳಿಯುತ್ತಿರುವವರು ತಾವು ನಿಜವಾದ ರಾಷ್ಟ್ರೀಯ ವಾದಿಗಳೆಂದು ಸಾಬೀತುಪಡಿಸಬೇಕಾಗಿದೆ.