ಸಂಸತ್ತು ಅಥವಾ ಇನ್ನಿತರ ಶಾಸನ ಸಭೆಗಳಿಗೆ ತನ್ನದೇಯಾದ ಮಹತ್ವ, ಪಾವಿತ್ರ್ಯತೆಗಳು ಇರುತ್ತವೆ. ಅಧಿವೇಶನ ಹೀಗೆ ನಡೆಬೇಕು, ಇಲ್ಲೇ ನಡೆಯಬೇಕು ಎಂಬ ನಿಯಮಾವಳಿಗಳಿವೆ. ಅಧಿವೇಶನ ಆರಂಭವಾಗಲು ಕೋರಂ ಇರಬೇಕೆಂಬ ಕಾಯಿದೆ ಇದೆ. ಆದರೆ ಕಾಲ ಬದಲಾಗಿದೆ. ಕರೋನಾ ಬಂದು ಎಲ್ಲವನ್ನೂ ಬದಲಿಸಿದೆ. ಈ ಬದಲಾವಣೆ ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನವನ್ನೂ ಬಿಟ್ಟಿಲ್ಲ.
ಆಡಳಿತರೂಢ ಸರ್ಕಾರಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಹೊರಟಿರುವುದರಿಂದ ‘ಮೊದಲು ನೀವು ಸಂಸತ್ ಅಧಿವೇಶನ ನಡೆಸಿ, ಸಮಸ್ಯೆ ಬಗ್ಗೆ ಚರ್ಚಿಸಿ, ಪರಿಹಾರ ಹುಡುಕಿ’ ಎಂಬ ಕೂಗು ಕೇಳಿಬರುತ್ತಿದೆ. ವಾಣಿಜ್ಯೋದ್ಯಮಿಗಳ ಒತ್ತಡಕ್ಕೆ ಈಡಾಗಿ ಮಾಲ್ ಮತ್ತಿತರ ವಾಣಿಜ್ಯ ಸಂಕಿರಣಗಳನ್ನು ತೆರೆಯಲಾಗಿದೆ. ಇದು ಜನಾಪೇಕ್ಷಿತವಾಗಿರಲಿಲ್ಲ ಎಂಬುದಕ್ಕೆ ಮಾಲ್ ಗಳಿಗೆ ಜನ ಬಾರದಿರುವುದೇ ಸಾಕ್ಷಿ. ಆ ಜನ ಕೂಡ ಜನಪ್ರತಿನಿಧಿಗಳು ಮನೆಬಿಟ್ಟು ಹೊರಬರಲಿ, ಅಧಿವೇಶನ ನಡೆಸಲಿ ಎಂದು ಒತ್ತಾಯಿಸುತ್ತಿದ್ದಾರೆ.
ಮೇಲಾಗಿ ಕಳೆದ ಬಾರಿ ಕೆಲವು ಮಸೂದೆಗಳನ್ನು ಪಾಸ್ ಮಾಡಿಕೊಳ್ಳುವ ಕಾರಣಕ್ಕೆ ಸಂಸದರಿಗೇ (ರಾಜಸ್ತಾನದ ದುಷ್ಯಂತ್ ಸಿಂಗ್) ಕರೋನಾ ಬಂದಿದ್ದರೂ ಸಂಸತ್ ಅಧಿವೇಶನ ನಡೆಸಲಾಗಿತ್ತು. ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಮಾಡಬೇಕಿದ್ದುದರಿಂದ ಕರೋನಾ ಸೋಂಕು ಕಾಣಿಸಿಕೊಂಡ ಮೇಲೂ ಸಂಸತ್ ಅಧಿವೇಶನ ನಡೆಸುವುದು ಆಗ ಕೇಂದ್ರ ಸರ್ಕಾರಕ್ಕೆ ಬೇಕಾಗಿತ್ತು. ಆದುದರಿಂದ ಈ ಎಲ್ಲಾ ಕಾರಣಗಳಿಂದ ಪ್ರತಿ ವರ್ಷದಂತೆ ಜುಲೈ ತಿಂಗಳಲ್ಲಿ ಅಧಿವೇಶನ ನಡೆಸದೆ ವಿಧಿಯಿಲ್ಲ ಎನ್ನುವಂತಾಗಿದೆ ಕೇಂದ್ರ ಸರ್ಕಾರದ್ದು.
![](https://pratidhvani.in/wp-content/uploads/2021/02/Stay_Home_2-60.jpg)
ಆದರೆ ದೇಶದಲ್ಲಿ ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಂಸತ್ ಅಧಿವೇಶನವನ್ನು ಈ ಬಾರಿ ಯಾವ ರೀತಿ ನಡೆಸಬೇಕೆಂಬುದು ಸಂಸತ್ ಸಚಿವಾಲಯದ ಅಧಿಕಾರಿಗಳ ತಲೆನೋವಾಗಿದೆ. ಅಧಿಕಾರಿಗಳು ಉಪರಾಷ್ಟ್ರಪತಿಗಳೂ ರಾಜ್ಯಸಭಾ ಸಭಾಪತಿಯೂ ಆದ ಎಂ. ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಬಳಿ ಈಗಾಗಲೇ ಸರಣಿ ಸಭೆ ನಡೆಸಿದ್ದಾರೆ. ಪರಿಹಾರ ಮಾತ್ರ ಸಿಕ್ಕಿಲ್ಲ ಎನ್ನುತ್ತವೆ ಕೇಂದ್ರ ಸರ್ಕಾರದ ಮೂಲಗಳು.
ಸುದೀರ್ಘ ಸಮಾಲೋಚನೆಯ ಬಳಿಕ ಅಳೆದು ತೂಗಿ ಅಧಿಕಾರಿಗಳು ‘ವರ್ಚ್ಯುಯಲ್ ಆಗಿ ಅಧಿವೇಶನ ನಡೆಸುವ ಮತ್ತು ಸೆಮಿ ವರ್ಚ್ಯುಯಲ್ ಆಗಿ ಅಧಿವೇಶನ ನಡೆಸುವ’ ಎರಡು ರೀತಿಯ ಪ್ರಸ್ತಾವನೆ ನೀಡಿದ್ದಾರೆಂದು ತಿಳಿದುಬಂದಿದೆ. ‘ಸಂಪೂರ್ಣವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸುವುದಕ್ಕೆ ವರ್ಚ್ಯುಯಲ್ ಅಧಿವೇಶನ’ ಎಂತಲೂ ‘ಕೆಲವು ಸದಸ್ಯರು ನೇರವಾಗಿ ಮತ್ತೆ ಕೆಲವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸುವುದಕ್ಕೆ ಸೆಮಿ ವರ್ಚ್ಯುಯಲ್ ಅಧಿವೇಶನ’ ಎಂತಲೂ ವ್ಯಾಖ್ಯಾನಿಸಿದ್ದಾರೆ.
ನಮ್ಮ ಲೋಕಸಭೆ ಮತ್ತು ರಾಜ್ಯಸಭೆಗಳ ಆಸನ ವ್ಯವಸ್ಥೆ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಈಗ ಸುತ್ತಾ ಮುತ್ತಾ ಸಾಮಾಜಿಕ ಅಂತರ ಕಾಪಾಡಿಕೊಂಡು (6 ಅಡಿ ಅಂತರ) ಕೂರಬೇಕೆಂದರೆ ಮೊದಲು 543 ಜನ ಲೋಕಸಭಾ ಸದಸ್ಯರು ಕೂರುತ್ತಿದ್ದ ಜಾಗದಲ್ಲಿ 60 ಮಂದಿ ಕೂರಬಹುದು. ಅದೇ ರೀತಿ 243 ಜನ ಕೂರುತ್ತಿದ್ದ ರಾಜ್ಯಸಭೆಯಲ್ಲಿ 30 ಸಂಸದರಿಗೆ ಆಸನ ವ್ಯವಸ್ಥೆ ಮಾಡಬಹುದು. ಇದಲ್ಲದೆ ರಾಷ್ಟ್ರಪತಿಗಳು ವಿಶೇಷ ಸಂದರ್ಭಗಳಲ್ಲಿ ಜಂಟಿ ಸದನ ಉದ್ದೇಶಿಸಿ ಮಾತನಾಡುವ ಸೆಂಟ್ರಲ್ ಹಾಲಿನಲ್ಲಿ 100 ಸಂಸದರನ್ನು ಕೂರಿಸಬಹುದು. ಕೇಂದ್ರ ಸರ್ಕಾರದ ಮತ್ತೊಂದು ಪ್ರತಿಷ್ಠಿತ ಕಟ್ಟಡ ವಿಜ್ಞಾನ ಭವನದಲ್ಲಿ 100 ಸಂಸದರಿಗೆ ಆಸನ ವ್ಯವಸ್ಥೆ ಮಾಡಬಹುದು. ಆದರೂ ಎಲ್ಲಾ ಸಂಸದರು ಏಕಕಾಲದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನುವುದು ಅಧಿಕಾರಿಗಳ ಅಳಲು ಎಂದು ತಿಳಿದುಬಂದಿದೆ.
ಈ ಬಗ್ಗೆಯೂ ಕೂಡ ಅಧಿಕಾರಿಗಳು ಎಂ. ವೆಂಕಯ್ಯ ನಾಯ್ಡು ಮತ್ತು ಓಂ ಬಿರ್ಲಾ ಬಳಿ ಚರ್ಚೆ ನಡೆಸಿದ್ದಾರೆ. ಕೋರಂ ಇಲ್ಲದೆ ಸದನ ನಡೆಸಲು ನಿಯಮಾವಳಿಗಳಲ್ಲಿ ಅವಕಾಶ ಇಲ್ಲದಿರುವುದರಿಂದ ಅಷ್ಟು ಮಂದಿಗಾದರೂ ಆಸನ ವ್ಯವಸ್ಥೆ ಮಾಡಲೇಬೇಕಿದೆ. ಸಂಸತ್ ಭವನದ ಅನೆಕ್ಸ್ ಕಟ್ಟಡ, ಲೈಬ್ರರಿ ಬಿಲ್ಡಿಂಗ್ ಗಳನ್ನು ಬಳಸಿಕೊಳ್ಳಬಹುದಾ ಎಂಬ ಚರ್ಚೆಗಳೂ ನಡೆಯುತ್ತಿವೆ. ಪರಿಹಾರ ಮಾರ್ಗಗಳನ್ನು ಹುಡುಕಿಕೊಂಡು ಬರುವಂತೆ ವೆಂಕಯ್ಯ ನಾಯ್ಡು ಮತ್ತು ಓಂ ಬಿರ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಸಂಸತ್ ಭವನವನ್ನು ಪ್ರಜಾಪ್ರಭುತ್ವದ ದೊಡ್ಡ ದೇವಸ್ಥಾನ ಎಂದು ಕರೆಯಲಾಗುತ್ತದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಸಂಸತ್ ಭವನ ಪ್ರವೇಶಿಸುವಾಗ ಸಾಷ್ಟಾಂಗ ನಮಸ್ಕಾರ ಮಾಡಿ ಒಳ ಪ್ರವೇಶಿಸಿದ್ದರು. ಅವರು ಹಾಗೆ ಮಾಡಿದ್ದು ಪ್ರಚಾರವಾಯಿತು. ಇನ್ನೂ ಅನೇಕ ಸಂಸದರ ಭಾವನೆ, ನಡವಳಿಕೆ ಅದೇ ರೀತಿ ಇತ್ತು, ಇದೆ. ಆದರೀಗ ಆ ಸಂಸತ್ ಭವನದಲ್ಲಿ ಅಲ್ಲದೆ ಬೇರೆಲ್ಲೋ ಕುಳಿತು, ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಪರಿಣಾಮಕಾರಿಯಾಗಿ ಚರ್ಚೆ ನಡೆಸುವುದು ಸಂಸದರಾದವರಿಗೆ ಹೇಗೆ ಭಾಸವಾಗುತ್ತದೆ ಎಂಬುದನ್ನು ಕಾದು ನೋಡಬೇಕು.
ಅಂದಹಾಗೆ ಇಷ್ಟು ದಿನ ಇನ್ನೊಂದು ಮಾತನ್ನು ಪದೇ ಪದೇ ಕೇಳಿದ್ದೆವು. ‘ಅದು ಸಂಸತ್ ಇರಲಿ, ರಾಜ್ಯಗಳ ವಿಧಾನಸಭೆಗಳಿರಲಿ, ಸದನದ ಒಳಗೆ ನಡೆಸಿದ ಚರ್ಚೆಯನ್ನು, ತೀರ್ಮಾನಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವಂತಿಲ್ಲ’ ಎಂದು. ಅದು ‘ಭೌತಿಕವಾಗಿ ಆ ಕಟ್ಟಡಕ್ಕೆ ಸೀಮಿತ’ ಎನ್ನುವಂತಿತ್ತು. ಈಗ ಆ ಕಟ್ಟಡದ ವ್ಯಾಪ್ತಿ ಮತ್ತು ವ್ಯಾಖ್ಯಾನ ಕೂಡ ಬದಲಾಗಬಹುದು. ಇಂಥ ಇನ್ನೂ ಹತ್ತು ಹಲವು ವಿಶೇಷ ಸಂಗತಿಗಳು ಗೋಚರಿಸುತ್ತಾ ಹೋಗಬಹುದು. ಕಾಲಾಯ, ಅಲ್ಲ, ಕರೋನಾಯ ತಸ್ಮೈ ನಮಃ!