ಕೋವಿಡಾತಂಕ ಈಗ ಕಡಿಮೆಯಾಗುತ್ತಿದೆ ನಿಜ. ದೀಪಾವಳಿ ಸಮಯ ಹಾಗೂ ನಂತರದಲ್ಲಿ ಕಂಬಳಿ ಮಾರಾಟ ಹೆಚ್ಚಾಗಬೇಕಿತ್ತು. ಆದರೆ ಈ ಬಾರಿ ಜನರು ಕಂಬಳಿ ಖರೀದಿಸುವತ್ತ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಕಂಬಳಿ ಉದ್ಯಮ ಇನ್ನೂ ಸಂಕಷ್ಟದಿಂದ ಹೊರಬರುತ್ತಿಲ್ಲ.
ಕರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ವಾಹನ ಸಂಚಾರ ಸ್ಥಗಿತಗೊಂಡಿರುವ ಕಾರಣ ಕಚ್ಚಾ ಉಣ್ಣೆ, ದಾರ, ಗಂಜಿಪುಡಿ, ಬಣ್ಣ, ಕತ್ತರಿ ಮುಂತಾದ ಸಲಕರಣೆಗಳ ಕೊರತೆಯಾಗಿದ್ದು ಕಂಬಳಿ ತಯಾರಿಕೆ ಕುಂಠಿತಗೊಂಡಿದೆ. ಇದರಿಂದಾಗಿ ಇಲ್ಲಿನ ಕಂಬಳಿ ಮಾರುಕಟ್ಟೆಯ ವ್ಯಾಪಾರ ವಹಿವಾಟು ನಲುಗಿ ಹೋಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಾರುಕಟ್ಟೆಯಲ್ಲಿ ಪ್ರತಿ ತಿಂಗಳು ರೂ ೫ ಲಕ್ಷದಿಂದ ೧೦ ಲಕ್ಷ ವ್ಯಾಪಾರ ವಹಿವಾಟು ನಡೆಯತ್ತಿತ್ತು. ಲಾಕ್ಡೌನ್ ನಂತರ ರೂ. ೫೦ ಸಾವಿರದಿಂದ ಒಂದು ಲಕ್ಷಕ್ಕೆ ಕುಸಿದಿದೆ. ಪರಿಣಾಮವಾಗಿ ಕೈಮಗ್ಗದಿಂದ ಕಂಬಳಿ ನೇಯ್ದು ಮಾರಾಟದಿಂದ ಜೀವನ ಸಾಗಿಸುತ್ತಿದ್ದ ಗದಗ ಜಿಲ್ಲೆಯ ಲಕ್ಕುಂಡಿ, ಕೊಣ್ಣೂರ, ಕಳಕಾಪೂರ ಗ್ರಾಮದ ನೂರಾರು ನೇಕಾರರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಹೊಟ್ಟೆ ಪಾಡಿಗಾಗಿ ಕಂಬಳಿ ಜನರು ಬೇರೆಡಿ ಕೆಲಸ ಅರಸಿಕೊಂಡು ಹೋಗುತ್ತಿದ್ದಾರೆ. ಹೀಗಾದರೆ ಹೇಗೆ ಉಳಿಯಬೇಕು ಈ ಉದ್ಯಮ!
ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಮಾತ್ರ ಸಾಂಪ್ರದಾಯಿಕ ಕಂಬಳಿ ತಯಾರಿಕೆಯಲ್ಲಿ ತೊಡಗಿದವರು ಇದ್ದಾರೆ. ಅವರಲ್ಲಿ ಬಹುತೇಕರು ಹಿರಿಯರು. ಯುವಕರು ಈ ಉದ್ಯಮದಲ್ಲಿ ತೊಡಗಬೇಕು ಆದರೆ ಮಳೆ ಬೆಳೆ ಚೆನ್ನಾಗಿದ್ದರೆ ಮಾತ್ರ ಎಲ್ಲ ಉದ್ಯಮಗಳು ಸುಸೂತ್ರವಾಗಿ ನಡೆಯುತ್ತವೆ. ಇತ್ತಿಚಿನ ದಿನಗಳಲ್ಲಿ ಯುವಕರು ಸಾಂಪ್ರದಾಯಿಕ ಕಲೆ ಕುಲ ಕಸುಬನ್ನು ಬಿಟ್ಟು ಬೇರೆಡೆ ಹೋಗುತ್ತಿದ್ದು ಕಳವಳಕಾರಿ ಸಂಗತಿಯಾಗಿದೆ.
ಕಂಬಳಿ ಖರೀದಿಸಲು ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರಗಳಿಂದ ಖರೀದಿದಾರರು ಬರುತ್ತಿದ್ದರು. ಈಗ ಸೋಂಕು ಇರುವ ಕಾರಣ ಬರುತ್ತಿಲ್ಲ. ಮನೆ ಮನೆಗೆ ತೆರಳಿ ಕುಟುಂಬದ ಸದಸ್ಯರು ವ್ಯಾಪಾರ ನಡೆಸುತ್ತಾರೆ. ಸ್ಥಳೀಯರೇ ಮನೆಗೆ ಬಂದು ವ್ಯವಹಾರ ನಡೆಸುತ್ತಾರೆ. ಮೊದಲನ ಅರ್ಧ ದಷ್ಟು ಸಹ ವ್ಯಾಪಾರ ಇಲ್ಲ. ಕರೋನಾ ನಮ್ಮ ಜೀವನವನ್ನೇ ಜರ್ಜರಿತವನ್ನಾಗಿಸಿದೆ ಎಂದು ಖೇದ ವ್ಯಕ್ತಪಡಿಸುತ್ತಾರೆ ಕಂಬಳಿ ವ್ಯಾಪಾರಸ್ಥರ ಮಹಾಂತೇಶ ಹಾಗೂ ಶರಣಪ್ಪ ಗರ್ಜಪ್ಪನವರ.

ನೇಕಾರರಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ವರ್ಷಕ್ಕೆ ಪ್ರತಿ ನೇಕಾರರಿಗೆ 2 ಸಾವಿರ ರೂ. ಸಹಾಯಧನ ನೀಡಲು ಸರ್ಕಾರ ಜಾರಿಗೆ ತಂದಿರುವ ನೇಕಾರ ಸನ್ಮಾನ್ ಯೋಜನೆ ಚಾಲ್ತಿಯಲ್ಲಿದೆ. ಈ ಯೋಜನೆಯಿಂದ ನೇಕಾರರಿಗೆ ಹೆಚ್ಚಿನ ಅನುಕೂಲ ದೊರೆಯುವುದಿಲ್ಲ. ಆದ್ದರಿಂದ ಪ್ರತಿ ವರ್ಷ ರೈತರ ಖಾತೆಗೆ 10 ಸಾವಿರ ಪರಿಹಾರ ಧನ ನೀಡುವ ಮಾದರಿಯಲ್ಲಿ ಪ್ರತಿಯೊಬ್ಬ ನೇಕಾರರ ಖಾತೆಗೂ 10 ಸಾವಿರ ಪರಿಹಾರ ಧನ ನೀಡಬೇಕು ಎಂದು ಹಾಲುಮತ ಸಮಾಜದ ಮುಖಂಡ ಮುದಿಯಪ್ಪ ಕರಡಿ ಆಗ್ರಹಿಸಿದ್ದಾರೆ.