ಅಲಹಾಬಾದ್ ಹೈಕೋರ್ಟ್ನ ಆದೇಶದ ನಂತರವೂ ಉತ್ತರ ಪ್ರದೇಶ ಸರ್ಕಾರ ಸಿಎಎ ವಿರೋಧಿ ಪ್ರತಿಭಟನಾಕಾರರ ಹೆಸರು ಮತ್ತು ಫೋಟೊ ಹೊಂದಿರುವ ಫಲಕಗಳನ್ನು ಸಾರ್ವಜನಿಕವಾಗಿ ಅಳವಡಿಸಲಾಗಿದೆ. ಈ ವಿಚಾರವನ್ನು ಉತ್ತರ ಪ್ರದೇಶ ಪೊಲೀಸರು ಕೂಡಾ ದೃಢಪಡಿಸಿದ್ದಾರೆ.
ಸಿಎಎ ತಿದ್ದುಪಡಿಯನ್ನು ವಿರೋಧಿಸಿ ನಡೆದ ಪ್ರತಿಭಟನೆಗಳು ಉತ್ತರಪ್ರದೇಶದಲ್ಲಿ ಗಲಭೆಯ ರೂಪ ಪಡೆದಿದ್ದವು. ಈ ಸಂದರ್ಭದಲ್ಲಿ ಅಲ್ಲಿನ ಸರ್ಕಾರವು ಗಲಭೆಯಲ್ಲಿ ಪಾಲ್ಗೊಂಡಿದ್ದವರೆಂದು ಹೇಳಿ, ಹಲವರ ಹೆಸರು ಮತ್ತು ಭಾವಚಿತ್ರವನ್ನು ಬಹಿರಂಗವಾಗಿ ಪ್ರದರ್ಶಿಸಿತ್ತು. ಇದರೊಂದಿಗೆ, ಪ್ರತಿಭಟನಾಕಾರರ ಆಸ್ತಿಯನ್ನು ಕೂಡಾ ಮುಟ್ಟುಗೋಲು ಹಾಕಲು ಆದೇಶ ನೀಡಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಸಂದರ್ಭದಲ್ಲಿ, ಅಲಹಾಬಾದ್ ಹೈಕೋರ್ಟ್ ಹೆಸರು ಮತ್ತು ಭಾವಚಿತ್ರವಿರುವ ಫ್ಲಿಕ್ಸ್ಗಳನ್ನು ತೆರವುಗೊಳಿಸಲು ಆದೇಶ ನೀಡಿತ್ತು. ಇದರೊಂದಿಗೆ, ಈ ರೀತಿಯ ಫ್ಲೆಕ್ಸ್ಗಳನ್ನು ಅಳವಡಿಸುವುದು ಸರಿಯಲ್ಲ ಎಂದೂ ಹೇಳಿತ್ತು. ಈ ವಿಚಾರವಾಗಿ ಉತ್ತರ ಪ್ರದೇಶ ಸರ್ಕಾರ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದೆಯಾದರೂ, ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿಯೇ ಇದೆ. ಸುಪ್ರಿಂ ಕೋರ್ಟಿ ಈ ಕುರಿತಾಗಿ ಯಾವುದೇ ಆದೇಶವನ್ನು ನೀಡಲಿಲ್ಲ.
ಹೀಗಾಗಿ, ಉತ್ತ ಪ್ರದೇಶ ಸರ್ಕಾರವು ಈಗ ಮತ್ತೆ 12 ಜನರ ಹೆಸರು ಮತ್ತು ಭಾವಚಿತ್ರದೊಂದಿಗೆ ಫ್ಲೆಕ್ಸ್ ಅಳವಡಿಸಿದ್ದು, ಹೈಕೋರ್ಟ್ ಆದೇಶದ ನೇರ ಉಲ್ಲಂಘನೆಯಾಗಿದೆ. ಈ ರೀತಿ ಫ್ಲೆಕ್ಸ್ ಅಳವಡಿಸುವುದು ಸಂವಿಧಾನದ 14ನೇ ವಿಧಿಯ ಪ್ರಕಾರ ಖಾಸಗೀತನಕ್ಕೆ ತರುವ ಧಕ್ಕೆಯಾಗಿದೆ ಎಂದು ಹೈಕೋರ್ಟ್ ಹೇಳಿತ್ತು.
ಸ್ಥಳಿಯ ಕೆಲವು ವ್ಯಕ್ತಿಗಳು ಹೇಳುವ ಪ್ರಕಾರ, ಈ ರೀತಿ ಭಾವ ಚಿತ್ರ ಮತ್ತು ಹೆಸರುಗಲನ್ನು ಬಹಿರಂಗಪಡಿಸುವ ಮೂಲಕ ವ್ಯಕ್ತಿಗಳ ಜೀವಕ್ಕೂ ಅಪಾಯ ಉಂಟಾಗುವ ಸಾಧ್ಯತೆಯಿದೆ. ಒಂದು ಫ್ಲೆಕ್ಸ್ನಲ್ಲಿ ಎಂಟು ಜನ ಪ್ರತಿಭಟನಾಕಾರರ ಹೆಸರು ಭಾವಚಿತ್ರದೊಂದಿಗೆ ಅವರ ವಿಳಾಸವನ್ನು ಕೂಡಾ ನಮೂದಿಸಲಾಗಿದ್ದು, ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಪೊಲೀಸರ ಪ್ರಕಾರ ಎಲ್ಲಾ 12 ಜನರು ಡಿಸೆಂಬರ್ 19ರ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಲಕ್ನೋದಲ್ಲಿ ನಡೆದ ಪ್ರತಿಭಟನೆಯು ಹಿಂಸಾ ರೂಪಕ್ಕೆ ತಿರುಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದರು ಮತ್ತು ಅಪಾರ ಆಸ್ತಿ ಪಾಸ್ತಿ ಹಾನಿಯಾಗಿತ್ತು.