ಕಳೆದ ಜನವರಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಇಬ್ಬರು ಉಗ್ರರ ಜೊತೆ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಬಂಧನಕ್ಕೊಳಗಾಗಿ ಅಮಾನತುಗೊಂಡಿರುವ ಜಮ್ಮು ಮತ್ತು ಕಾಶ್ಮೀರದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ದಾವೀಂದರ್ ಸಿಂಗ್ ಅವರಿಗೆ ಪ್ರತ್ಯೇಕ ಉಗ್ರ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಪ್ರಕರಣವೊಂದರಲ್ಲಿ ದೆಹಲಿ ನ್ಯಾಯಾಲಯವು ಜಾಮೀನು ನೀಡಿರುವ ಮಹತ್ವದ ಘಟನೆ ನಡೆದಿದೆ.
ದೆಹಲಿಯ ವಿಶೇಷ ಪೊಲೀಸ್ ವಿಭಾಗವು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಗದಿತ ಅವಧಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ದಾವೀಂದರ್ ಸಿಂಗ್ ಹಾಗೂ ಇನ್ನೊಬ್ಬ ಆರೋಪಿ ಇರ್ಫಾನ್ ಶಫಿ ಮಿರ್ ಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. “ಸೂಚಿತ ಕಾನೂನಿನಂತೆ 90 ದಿನಗಳ ಒಳಗೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ದಾವೀಂದರ್ ಸಿಂಗ್ ಅವರಿಗೆ ಜಾಮೀನು ದೊರೆತಿದೆ” ಎಂದು ಸಿಂಗ್ ಪರ ವಕೀಲ ಎಂ ಎಸ್ ಖಾನ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಲ್ಲಿ ನಂಬರ್ 2 ಸ್ಥಾನದಲ್ಲಿರುವ ಅಮಿತ್ ಶಾ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ ಗೃಹ ಸಚಿವಾಲಯದ ಅಡಿಯಲ್ಲಿ ದೆಹಲಿ ಪೊಲೀಸರು ಕರ್ತವ್ಯನಿರ್ವಹಿಸುತ್ತಾರೆ. ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ, ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳನ್ನು ಹತ್ತಿಕ್ಕಲು ನಕಲಿ ಪ್ರಕರಣಗಳನ್ನು ದಾಖಲಿಸಿ, ಆರೋಪ ಪಟ್ಟಿ ಸಲ್ಲಿಸಲು ಹಾತೊರೆಯುವ ದೆಹಲಿ ಪೊಲೀಸರು, ದೇಶದ ಭದ್ರತೆಗೆ ಅಪಾಯ ತಂದೊಡ್ಡಿದ ಅಧಿಕಾರಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ವಿಫಲವಾಗಿರುವ ಬಗ್ಗೆ ಭಾರಿ ಅನುಮಾನ ಎದ್ದಿದೆ.
ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಬಳಿಕ ಭಾರತ ಕಂಡ ಅಪರೂಪದ ಗೃಹ ಸಚಿವ ಎಂದು ಕರೆಯಿಸಿಕೊಳ್ಳಲು ಹವಣಿಸುತ್ತಿರುವ, ದೇಶದ ಭದ್ರತೆ ಹಾಗೂ ಅಖಂಡತೆಯ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವ ಅಮಿತ್ ಶಾ ಅವರ ಸಚಿವಾಲಯದಡಿ ಕರ್ತವ್ಯ ನಿರ್ವಹಿಸುವ ದೆಹಲಿ ಪೊಲೀಸರ ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಆರಂಭದಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆಯ (ಸಿಆರ್ ಪಿಎಫ್) 44 ಪೊಲೀಸರನ್ನು ಉಗ್ರರು ಬಲಿ ಪಡೆದ ಪ್ರಕರಣದಲ್ಲಿ ದಾವೀಂದರ್ ಸಿಂಗ್ ಪಾತ್ರ ಇರುವ ಶಂಕೆ ಇದೆ.
ಕಳೆದ ಮಾರ್ಚ್ 14 ಮತ್ತು 19ರಂದು ಬಂಧಿತರಾಗಿದ್ದ ಸಿಂಗ್ ಹಾಗೂ ಮಿರ್ ಅವರ ವಿರುದ್ಧ ನ್ಯಾಯಾಲಯಕ್ಕೆ ದೆಹಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಲು ವಿಫಲರಾಗಿದ್ದರು. ಉಗ್ರರ ಜೊತೆ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಬಂಧನಕ್ಕೊಳಗಾದ ಪ್ರಕರಣದಲ್ಲಿ ಸಿಂಗ್ ಅವರು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶದಲ್ಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ 24 ಗಂಟೆಯೊಳಗೆ ಎನ್ಐಎ ದಾವೀಂದರ್ ಸಿಂಗ್ ಅವರನ್ನು ತನ್ನ ವಶಕ್ಕೆ ಪಡೆದಿತ್ತು. ಕಳೆದ ವರ್ಷ ದಾವಿಂದರ್ ಸಿಂಗ್ ಸೇವೆಯನ್ನು ಪರಿಗಣಿಸಿ ಪೊಲೀಸ್ ಪದಕ ತೊಡಿಸಿ ಸನ್ಮಾನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವಿಧ್ವಂಸಕ ಚಟುವಟಿಕೆ ನಡೆಸುವುದಕ್ಕೆ ಸಂಬಂಧಿಸಿದಂತೆ ಬಂಧಿತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರ ಜೊತೆ ಇಂಟರ್ ನೆಟ್ ಹಾಗೂ ವಿವಿಧ ಸಂವಹನ ಮಾಧ್ಯಮಗಳ ಮೂಲಕ ದಾವೀಂದರ್ ಸಿಂಗ್ ಸಂಭಾಷಣೆ ನಡೆಸಿದ್ದ ಮಾಹಿತಿ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿತ್ತು. ಇದಕ್ಕೂ ಮುನ್ನ ಪೊಲೀಸರು, ಜಮ್ಮು ಮತ್ತು ಕಾಶ್ಮೀರದ ಸೋಫಿಯಾನ್ ಜಿಲ್ಲೆಯ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖಂಡ ನವೀದ್ ಮುಷ್ತಾಕ್ ಹಾಗೂ ಇತರರು ದೆಹಲಿ ಹಾಗೂ ದೇಶದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸುವುದು ಹಾಗೂ ಭದ್ರತೆ ಪಡೆದಿರುವ ಪ್ರತಿಷ್ಠಿತ ವ್ಯಕ್ತಿಗಳನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಆರೋಪಿಸಿದ್ದರು. ಈ ಎರಡೂ ಪ್ರಕರಣಗಳಲ್ಲಿ ಸಾಮ್ಯತೆ ಪತ್ತೆ ಹಚ್ಚಿದ್ದ ಪೊಲೀಸರು ದಾವೀಂದರ್ ಸಿಂಗ್ ಅವರನ್ನು ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ ಬಂಧಿಸಿದ್ದರು.

ಸಂಸತ್ ದಾಳಿಯಲ್ಲಿ ಭಾಗಿ?
ಕಳೆದ ಜನವರಿಯಲ್ಲಿ ದಾವೀಂದರ್ ಸಿಂಗ್ ಬಂಧನವಾಗುತ್ತಿದ್ದಂತೆ ದೇಶಾದ್ಯಂತ ಸಂಚಲನ ಸೃಷ್ಟಿಯಾಗಿತ್ತಲ್ಲದೇ, 2001ರಲ್ಲಿ ಭಾರತದ ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದ ಪ್ರಕರಣದಲ್ಲಿ ಸಿಂಗ್ ಪಾತ್ರವಿರುವ ವಿಚಾರ ಮುನ್ನಲೆಗೆ ಬಂದಿತ್ತು. ಸಂಸತ್ ದಾಳಿ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲ್ಪಟ್ಟ ಅಫ್ಜಲ್ ಗುರುವಿಗೆ 2013ರಲ್ಲಿ ಗಲ್ಲು ವಿಧಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸಂಸತ್ ದಾಳಿಯಲ್ಲಿ ದಾವೀಂದರ್ ಪಾತ್ರ ಇರುವುದನ್ನು ಅಫ್ಜಲ್ ಗುರು ಬಾಯ್ಬಿಟ್ಟಿದ್ದ. ಆದರೆ, ಇದನ್ನು ಕೂಲಂಕಷವಾಗಿ ಪರಿಶೀಲಿಸುವ ಕೆಲಸವನ್ನು ತನಿಖಾ ಸಂಸ್ಥೆಗಳು ಮಾಡಿರಲಿಲ್ಲ. ತಿಹಾರ್ ಜೈಲಿನಲ್ಲಿದ್ದ ಅಫ್ಜಲ್ ಗುರು ತನ್ನ ವಕೀಲರಿಗೆ ಬರೆದ ಪತ್ರದಲ್ಲಿ ಸಂಸತ್ ಭವನದಲ್ಲಿ ದಾವೀಂದರ್ ಸಿಂಗ್ ಹಾಗೂ ಮತ್ತೊಬ್ಬ ಡಿಎಸ್ಪಿ ವಿನಯ್ ಗುಪ್ತಾ ಅವರ ಪಾತ್ರವನ್ನು ವಿವರವಾಗಿ ದಾಖಲಿಸಿದ್ದ.
“ದಾವೀಂದರ್ ಸಿಂಗ್ ಸೂಚನೆಯಂತೆ ಮೊಹಮ್ಮದ್ ಎಂಬ ವ್ಯಕ್ತಿಯೊಬ್ಬನನ್ನು ದೆಹಲಿಗೆ ಕರೆದೊಯ್ದು ಅವರಿಗೆ ಮನೆ ಹುಡುಕಿ ಕೊಟ್ಟಿದ್ದೆ. ಮೊಹಮ್ಮದ್ ಗೆ ಕಾಶ್ಮೀರಿ ಭಾಷೆ ಮಾತನಾಡಲು ಬಾರದ ಹಿನ್ನೆಲೆಯಲ್ಲಿ ಆತ ಕಾಶ್ಮೀರದವನಲ್ಲ ಎಂಬುದು ತಿಳಿದಿತ್ತು. ಕರೋಲ್ ಬಾಗ್ ಪ್ರದೇಶಕ್ಕೆ ತೆರಳಿ ಕಾರನ್ನೂ ಖರೀದಿಸಲು ನೆರವಾಗಿದ್ದೆ. ಮೊಹಮ್ಮದ್ ಮತ್ತು ನನಗೆ ದಾವೀಂದರ್ ಅವರು ಪ್ರತ್ಯೇಕವಾಗಿ ಕರೆ ಮಾಡಿ ಮಾತನಾಡುತ್ತಿದ್ದರು” ಎಂದು ತನ್ನ ವಕೀಲರಿಗೆ ಬರೆದ ಪತ್ರದಲ್ಲಿ ಅಫ್ಜಲ್ ಗುರು ವಿವರಿಸಿದ್ದ. ದಾವೀಂದರ್ ಸಿಂಗ್ ಪರಿಚಿಯಿಸಿದ್ದ ಮೊಹಮ್ಮದ್ ಎಂಬಾತ 2001ರ ಡಿಸೆಂಬರ್ 13ರಂದು ನಡೆದಿದ್ದ ಸಂಸತ್ ಭವನದ ಮೇಲಿನ ದಾಳಿಯಲ್ಲಿ ಒಂಭತ್ತು ಜನರ ಹತ್ಯೆಗೈದು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದ.
ಎನ್ಐಎ ಗೆ ಹಸ್ತಾಂತರಿಸಿದ್ದು ಏಕೆ?
ಕಳೆದ ಜನವರು 11ರಂದು ಶ್ರೀನಗರದ ಹೆದ್ದಾರಿಯ ಮೂಲಕ ದೆಹಲಿಗೆ ಪ್ರಯಾಣಿಸುತ್ತಿದ್ದ ನವೀದ್ ಮುಷ್ತಾಕ್ ಬಾಬು ಹಾಗೂ ಹಿಜ್ಬುಲ್ ಮುಜಹಿದ್ದೀನ್ ಸಂಘಟನೆಯ ಅಲ್ತಾಫ್ ಎಂಬ ಇಬ್ಬರು ಉಗ್ರರ ಜೊತೆ ದಾವೀಂದರ್ ಸಿಂಗ್ ಪತ್ತೆಯಾಗಿದ್ದ. ಉಗ್ರರಿದ್ದ ಕಾರನ್ನು ದಾವೀಂದರ್ ಸಿಂಗ್ ಮುನ್ನಡೆಸುತ್ತಿದ್ದ. ಬಂಧಿತರಿಂದ ಎಕೆ-47 ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಭೂಗತ ಕಾರ್ಯಕರ್ತನೂ ಇವರ ಜೊತೆ ಇದ್ದ ಎನ್ನಲಾಗಿತ್ತು.
ಬಂಧನದ ವೇಳೆ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರ ಜೊತೆ ಮಾತನಾಡಿದ್ದ ದಾವೀಂದರ್ ಸಿಂಗ್ “ಸಂಚನ್ನು ವಿಫಲಗೊಳಿಸಬೇಡಿ” ಎಂದು ಮನವಿ ಮಾಡಿದ್ದ ಎಂದು “ಬಿಬಿಸಿ ಹಿಂದಿ” ವಾಹಿನಿ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಜಮ್ಮು ಮತ್ತು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ “ದಾವೀಂದರ್ ಹಲವು ಉಗ್ರ ಸಂಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರೂ ಜನವರಿ 11ರಂದು ಉಗ್ರರ ಜೊತೆ ಪತ್ತೆಯಾಗಿರುವುದು ಅತ್ಯಂತ ಘೋರ ಅಪರಾಧ. ಈ ಕಾರಣಕ್ಕಾಗಿ ದಾವೀಂದರ್ ನನ್ನು ಉಗ್ರರಿಗೆ ಸಮಾನವಾಗಿ ಕಾಣಲಾಗುವುದು” ಎಂದು ಹೇಳಿದ್ದರು.
ಇದರ ಬೆನ್ನಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ನೆಚ್ಚಿನ ಎನ್ಐಎ ಮುಖ್ಯಸ್ಥ ಅಜಿತ್ ದೋವಲ್ ಅವರ ಸೂಚನೆಯ ಮೇರೆಗೆ ಕೇವಲ 24 ತಾಸುಗಳಲ್ಲಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವರ್ಗಾಯಿಸಲಾಗಿತ್ತು.
ಇದಕ್ಕೂ ಮುನ್ನ ಹಲವು ಇಕ್ಕಟ್ಟಿನ ಸಂದರ್ಭಗಳಲ್ಲಿ ದಾವೀಂದರ್ ಸಿಂಗ್ ಅವರನ್ನು ಅಧಿಕಾರಸ್ತರು ಪಾರು ಮಾಡಿದ್ದಾರೆ. 2001ರಲ್ಲಿ ದಾವೀಂದರ್ ಸಿಂಗ್ ಮುಖ್ಯಸ್ಥರಾಗಿದ್ದ ಠಾಣೆಯಲ್ಲಿ ಕಸ್ಟಡಿಯಲ್ ಸಾವು ಸಂಭವಿಸಿತ್ತು. ಸಾರ್ವಜನಿಕರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಬಡಗಂ ಜಿಲ್ಲೆಯಿಂದ ಅವರನ್ನು ವರ್ಗಾಯಿಸಲಾಗಿತ್ತು.
2015ರಲ್ಲಿ ವಿಶೇಷ ತನಿಖಾ ತಂಡದಲ್ಲಿದ್ದ ದಾವೀಂದರ್, ಸಾಮಾನ್ಯರ ವಿರುದ್ಧ ನಕಲಿ ಪ್ರಕರಣ ದಾಖಲಿಸಿ ಹಣ ಕೀಳುವ ಯತ್ನ ನಡೆಸಿದ್ದ ಆರೋಪಕ್ಕೆ ತುತ್ತಾಗಿದ್ದರು. ಆಗಲೂ ಅವರನ್ನು ಬಚಾವು ಮಾಡಲಾಗಿತ್ತು. ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ದ ಟೀಕಾಸ್ತ್ರ ಎಸೆಯುವ, ಅಮಾನತುಗೊಂಡಿರುವ ಐಪಿಎಸ್ ಅಧಿಕಾರಿ ಗುಜರಾತಿನ ಸಂಜೀವ್ ಭಟ್ ಅವರನ್ನು ಕಸ್ಟಡೀಯಲ್ ಸಾವು ಪ್ರಕರಣದಲ್ಲಿ ಅಲ್ಲಿನ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿ ಜೈಲಿಗಟ್ಟಿದೆ ಎಂಬುದನ್ನು ಇಲ್ಲಿ ನೆನೆಯಬಹುದು.
We all want to ask “How did the government allow this to happen?”
But the real question is “How do we as Indians allow the government to get away with this shameful non-performance?” https://t.co/ep7gU1mGct— Shashi Tharoor (@ShashiTharoor) June 19, 2020
No doubt bail to Davinder Singh the decorated blue eyed boy of Govt who was caught carrying dreaded Hizbul terrorists to Delhi ahead of Jan 26 is deliberately allowed by Delhi Police. Raises serious Q whether he was acting on behalf of the deep State. Was this a foiled diversion? https://t.co/lqamcpbNxa
— Prashant Bhushan (@pbhushan1) June 19, 2020