ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕರೋನಾ ಸೋಂಕು ಅಭಿವೃದ್ದಿ ಶೀಲ ರಾಷ್ಟ್ರಗಳನ್ನು ವರ್ಷಗಳ ಹಿಂದಕ್ಕೆ ತಳ್ಳಿಬಿಟ್ಟಿದೆ. ಇಡೀ ಜಗತ್ತು ಕಂಡು ಕೇಳರಿಯದ ಈ ಕರೋನಾ ಸೋಂಕಿನಿಂದಾಗಿ ದೇಶದ ಕಡು ಬಡವರು, ಬಡವರು ಮತ್ತು ಮಧ್ಯಮ ವರ್ಗದವರ ಸಂಕಷ್ಟ ಮುಗಿಲು ಮುಟ್ಟಿದೆ. ಏಕೆಂದರೆ ಕರೋನಾ ಮಹಾಮಾರಿ ಈ ದುಡಿಯುವ ವರ್ಗದ ಊಟದ ಬಟ್ಟಲಿಗೇ ಕಲ್ಲು ಹಾಕಿದೆ. ಲಾಕ್ಡೌನ್ ಘೋಷಣೆಯಾದ ನಂತರ ಬಹುತೇಕ ಉದ್ಯಮಗಳು, ಕೈಗಾರಿಕಾ ಚಟುವಟಿಕೆಗಳು ಬಂದ್ ಆಗಿವೆ. ಇದರಿಂದಾಗಿ ದೇಶದಲ್ಲಿ ಕೋಟ್ಯಾಂತರ ಉದ್ಯೋಗ ನಷ್ಟ ಆಗಿವೆ ಇನ್ನು ಮುಂದಕ್ಕೂ ನಷ್ಟ ಆಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಈ ದುಡಿಯುವ ಕೈಗಳು ಇಂದು ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿವೆ. ಈ ರೀತಿ ಬಹುತೇಕ ಉದ್ಯೋಗ ನಷ್ಟದಲ್ಲಿ ಕೆಳ ವರ್ಗದ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಮರ ಕೆತ್ತನೆ, ಗಾರೆ ಕೆಲಸ, ಗಾರ್ಮೆಂಟ್ ಉದ್ಯೋಗ, ಎಲೆಕ್ಟ್ರೀಷಿಯನ್ , ಮೆಕ್ಯಾನಿಕ್, ಕುಶಲಕರ್ಮಿಗಳೇ ಶೇಕಡಾ 90 ರಷ್ಟು ಇದ್ದಾರೆ. ಇನ್ನು ಮೇಲ್ವರ್ಗದ ಸಂಬಳ ಪಡೆಯುವ ಅಂದರೆ ತಿಂಗಳಿಗೆ 50 ಸಾವಿರಕ್ಕಿಂತ ಅಧಿಕ ಸಂಬಳದ ನೌಕರಿದಾರರ ಶೇಕಡಾವಾರು ಕಡಿಮೆಯೇ ಇದೆ. ನೌಕರಿ ಡಾಟ್ ಕಾಂ ನಡೆಸಿದ ಸಮೀಕ್ಷೆಯಲ್ಲಿ ಪ್ರತೀ 10 ನೌಕರಿದಾರರಲ್ಲಿ ಒಬ್ಬರು ಉದ್ಯೋಗ ಕಳೆದುಕೊಂಡಿದ್ದಾರೆ ಮತ್ತು ಇನ್ನು ಮುಂದಕ್ಕೂ ಕಳೆದುಕೊಳ್ಳಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದಿಢೀರ್ ಲಾಕ್ ಡೌನ್ ಘೋಷಿಸಿದಾಗ ಅತ್ಯಂತ ಹೆಚ್ಚು ಕಷ್ಟ ನಷ್ಟಗಳಿಗೆ ಈಡಾದವರೇ ವಲಸೆ ಕಾರ್ಮಿಕರು. ಉತ್ತರ ಭಾರತದ ಬಿಹಾರ, ಉತ್ತರಖಾಂಡ್ , ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಈಗಲೂ ದಿನಗೂಲಿ ದರ ಕಡಿಮೆ ಇರುವುದರಿಂದ ಹೆಚ್ಚು ಕಾರ್ಮಿಕರು ಮಹಾನಗರಗಳಿಗೆ ವಲಸೆ ಹೋಗುತ್ತಾರೆ. ಈ ರೀತಿ ಕುಟುಂಬ ಸಹಿತ ವಲಸೆ ಹೋಗುವ ಕಾರ್ಮಿಕರು ಹಬ್ಬ ಮತ್ತು ತಮ್ಮ ಅಲ್ಪ ಸ್ವಲ್ಪ ಜಮೀನಿನ ಕೆಲಸದ ಸಮಯಕ್ಕೆ ಆಗಮಿಸಿ ಪುನಃ ಹೊರಟು ಹೋಗುತ್ತಾರೆ. ಆದರೆ ದಿಢೀರ್ ಲಾಕ್ಡೌನ್ನಿಂದಾಗಿ ಇವರು ಅತ್ತ ಉದ್ಯೋಗವೂ ಇಲ್ಲದೆ ಸೂಕ್ತ ಕೆಲಸವೂ ಇಲ್ಲದೆ ಹೈರಾಣಾಗಿ ಹೋದರು. ಅಂದಾಜಿನ ಪ್ರಕಾರ ದೇಶದಲ್ಲಿ ಸುಮಾರು 4 ಕೋಟಿ ವಲಸೆ ಕಾರ್ಮಿಕರು ಇದ್ದಾರೆ. ಈ ಕಾರ್ಮಿಕರು ಹೇಗಾದರೂ ಮಾಡಿ ಊರಿಗೆ ತಲುಪಲು ಹೊರಟು ನೂರಾರು ಕಾರ್ಮಿಕರು ದಾರಿಯ ಬದಿಯಲ್ಲೇ ಹೆಣವಾಗಿದ್ದಾರೆ. ಗರ್ಬಿಣಿ ಸ್ತ್ರೀಯರು ಮಕ್ಕಳನ್ನೇ ಕಳೆದುಕೊಂಡಿದ್ದಾರೆ. ಇವರಿಗೆ ಸೂಕ್ತ ಆಹಾರವಾಗಲೀ , ವೈದ್ಯಕೀಯ ಸೌಲಭ್ಯಗಳನ್ನಾಗಲೀ ಸರ್ಕಾರ ಒದಗಿಸಿಕೊಡಲಿಲ್ಲ ಇವರು ಅತ್ಯಂತ ನತದೃಷ್ಟರೆಂದೇ ಹೇಳಬಹುದು. ಏಕೆಂದರೆ ಸರ್ಕಾರ ಇವರು ಊರು ತಲುಪಿಕೊಳ್ಳಲು ರೈಲಿನ ವ್ಯವಸ್ಥೆ ಮಾಡಿಕೊಟ್ಟರೂ ಬಿಹಾರಕ್ಕೆ ತೆರಳಬೇಕಾದ ರೈಲು ಬೆಂಗಳೂರಿಗೆ ಬಂದಿದೆ ಎಂದರೆ ಇಂತಹ ಬೇಜಾವ್ದಾರಿ ಅಧಿಕಾರಿಗಳಿಗೆ ಯಾವ ರೀತಿ ಚಾಟಿ ಬೀಸಬೇಕು ಅನ್ನೋದು ಆಳುವ ವರ್ಗಕ್ಕೆ ಗೊತ್ತಿಲ್ಲ.
ಈ ವಲಸೆ ಕಾರ್ಮಿಕರ ಸಾವಿನ ನಂತರ ಉತ್ತರ ಪ್ರದೇಶ ಸರ್ಕಾರ ಈಗ ಹೊಸತೊಂದು ನಿಯಮವನ್ನು ಜಾರಿಗೆ ತಂದಿದೆ. ಆ ಪ್ರಕಾರ ಇನ್ನು ಮುಂದೆ ಉತ್ತರ ಪ್ರದೇಶದ ಕಾರ್ಮಿಕರನ್ನು ಇತರ ರಾಜ್ಯಕ್ಕೆ ಕೆಲಸಕ್ಕೆ ಕರೆದೊಯ್ಯಬೇಕಾದರೆ ರಾಜ್ಯ ಸರ್ಕಾರದ ವಲಸೆ ಆಯೋಗದಿಂದ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ವಲಸೆ ಆಯೋಗವು ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಲಿದೆ ಎಂದು ಅವರು ಭಾನುವಾರ ಪ್ರಕಟಿಸಿದರು. ಈ ವಲಸೆ ಕಾರ್ಮಿಕರ ಕೌಶಲ್ಯ ಮ್ಯಾಪಿಂಗ್ ನ್ನು ಈಗಾಗಲೇ ಮಾಡಲಾಗುತ್ತಿದೆ ಎಂದೂ ಅವರು ಹೇಳಿದರು. ಈ ಕಾರ್ಮಿಕರು ನಮ್ಮ ಅತೀ ದೊಡ್ಡ ಸಂಪನ್ಮೂಲವಾಗಿದ್ದು ಇವರಿಗೆ ಇಲ್ಲಿಯೇ ಉದ್ಯೋಗ ಸೃಷ್ಟಿಸಲೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರಲ್ಲದೆ ಅವರ ಉದ್ಯೋಗದ ಕಾರಣಕ್ಕಾಗಿಯೇ ಆಯೋಗ ಸ್ಥಾಪಿಸಲಾಗುತ್ತಿದೆ ಎಂದರು. ವಲಸೆ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಗಮನ ಮತ್ತು ಪ್ರಾಮುಖ್ಯತೆ ನೀಡಬೇಕಿದೆ ಎಂದ ಅವರು ಎಲ್ಲ ವಲಸೆ ಕಾರ್ಮಿಕರನ್ನೂ ನೋಂದಾಯಿಸಲಾಗುತ್ತಿದೆ. ಅವರ ಕೌಶಲ್ಯಗಳನ್ನು ಮ್ಯಾಪಿಂಗ್ ಮಾಡಿಕೊಂಡಿದ್ದು ವಲಸೆ ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಳ್ಳುವ ಇತರ ಯಾವುದೇ ರಾಜ್ಯವು ಅವರ ಸಾಮಾಜಿಕ, ವಿತ್ತೀಯ ಹಕ್ಕುಗಳನ್ನು ಒದಗಿಸಬೇಕಿದೆ ಮತ್ತು ಖಾತರಿ ಪಡಿಸಬೇಕಿದೆ ಎಂದೂ ಅವರು ಹೇಳಿದರು. ವಲಸೆ ಕುರಿತ ವಿವಿಧ ಅಂಶಗಳನ್ನು ಪರಿಶೀಲಿಸಲು ಮತ್ತು ಸಾಮಾಜಿಕ , ಆರ್ಥಿಕ ಕಾನೂನು ಬೆಂಬಲವನ್ನೂ ಒದಗಿಸಬೇಕು ಎಂದೂ ಅವರು ಹೇಳಿದರು.
ಕಾರ್ಮಿಕರಿಗೆ ವಿಮೆ, ಮರು ಉದ್ಯೋಗ, ನಿರುದ್ಯೋಗ ಭತ್ಯೆ ಮತ್ತು ಸಾಮಾಜಿಕ ಭದ್ರತೆ ಒದಗಿಸುವ ಕುರಿತು ಆಯೋಗವು ಪರಿಶೀಲಿಸಲಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು. ಈಗಾಗಲೇ ಉತ್ತರ ಪ್ರದೇಶಕ್ಕೆ ಹಿಂತಿರುಗಿರುವ ವಲಸೆ ಕಾರ್ಮಿಕರ ಸಂಖ್ಯೆ 23 ಲಕ್ಷ ಎಂದ ಅವರು ಈ ಎಲ್ಲರಿಗೂ ಕ್ವಾರಂಟೈನ್ ಮಾಡಲಾಗಿದೆ ಎಂದರು. ಈ ಕಾರ್ಮಿಕರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಿಕೊಡಲಾಗುವುದು ಎಂದ ಅವರು ಇನ್ನೂ ಹೊರ ರಾಜ್ಯಗಳಲ್ಲಿ ಉಳಿದು ಊರಿಗೆ ಮರಳುವ ಕಾರ್ಮಿಕರನ್ನು ಸ್ಕ್ರೀನಿಂಗ್ ಮಾಡಿಸಿ ಸಂಪರ್ಕ ತಡೆ ಕಲ್ಪಿಸಿಕೊಡಲಾಗುವುದು ಎಂದರು. ಈಗ ಕರೋನಾ ಭೀತಿಯಿಂದ ಚೀನಾದಿಂದ ಕಾಲ್ತೆಗೆಯುತ್ತಿರುವ ಕಂಪೆನಿಗಳು ಭಾರತಕ್ಕೆ ಬರಲಿದ್ದು ಜರ್ಮನ್ ಕಂಪೆನಿಯೊಂದು ಆಗ್ರಾದಲ್ಲಿ ದಿನಕ್ಕೆ 30 ಲಕ್ಷ ಬೂಟುಗಳನ್ನು ತಯಾರಿಸುವ ಬೃಹತ್ ಉತ್ಪಾದನಾ ಘಟಕ ಆರಂಬಿಸಲು ರಾಜ್ಯ ಸರ್ಕಾರದೊಂದಿಗೆ ಮಾತುಕತೆಗೆ ಮುಂದಾಗಿದೆ ಎಂದರು. ಈ ರೀತಿ ವಿದೇಶೀ ಕಂಪೆನಿಗಳು ಮುಂದೆ ಬಂದರೆ ಇಲ್ಲಿಂದಲೇ ಸಿದ್ದಪಡಿಸಿದ ಉತ್ಪನ್ನಗಳು ವಿವಿಧ ದೇಶಗಳಿಗೆ ರಫ್ತಾಗಲಿವೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಆದಿತ್ಯ ನಾಥ್ ಅವರ ಈ ಯೋಜನೆ ಮೇಲ್ನೋಟಕ್ಕೆ ಉತ್ತಮವಾಗಿಯೇ ಕಾಣಬರುತ್ತಿದೆ. ಆದರೆ ವಲಸೆ ಕಾರ್ಮಿಕರಿಗೆ ಇದು ಎಷ್ಟರ ಮಟ್ಟಿಗೆ ಅನುಕೂಲ ಆಗುತ್ತದೆ ಎಂಬುದನ್ನು ನಮ್ಮ ಅಧಿಕಾರ ಶಾಹಿ ವ್ಯವಸ್ಥೆಯೇ ನಿರ್ದರಿಸಲಿದೆ ಎಂಬುದು ವಿಷಾದನೀಯ. ಈಗಾಗಲೇ ಲಾಕ್ಡೌನ್ ಸಮಯದಲ್ಲಿ ಕಾರ್ಮಿಕರಿಗೆ ಅವಶ್ಯವುಳ್ಳ ಎಲ್ಲ ಸವಲತ್ತು , ಪಡಿತರ, ವೈದ್ಯಕೀಯ ಸೌಲಭ್ಯ, ಪ್ರಯಾಣ ವ್ಯವಸ್ಥೆ ಎಲ್ಲವನ್ನೂ ಕಲ್ಪಿಸಿರುವುದಾಗಿ ಸರ್ಕಾರ ಹೇಳಿಕೊಂಡಿದ್ದರೂ ವಾಸ್ತವದಲ್ಲಿ ಕಾರ್ಮಿಕರಿಗೆ ತಲುಪಿದ್ದೇ ಕಡಿಮೆ ಎಂಬುದು ಸಾಬೀತಾಗಿದೆ. ಏಕೆಂದರೆ ಸರ್ಕಾರ ಸೌಲಭ್ಯ ಕಲ್ಪಿಸಿಕೊಟ್ಟಿದ್ದರೆ ವಲಸೆ ಕಾರ್ಮಿಕರ ಪರಿಸ್ಥಿತಿ ಇಷ್ಟೊಂದು ಹೀನಾಯ ಆಗುತ್ತಿರಲಿಲ್ಲ ಅಷ್ಟೇ ಅಲ್ಲ ನೂರಾರು ಸಾವುಗಳೂ ಸಂಭವಿಸುತ್ತಿರಲಿಲ್ಲ ಎಂಬುದು ಕಟು ಸತ್ಯ. ಆದಿತ್ಯ ನಾಥ್ ಅವರು ಪ್ರಕಟಿಸಿರುವ ಕ್ರಮ ಕಾರ್ಮಿಕರ ಬದುಕನ್ನು ಅಥವಾ ವಲಸೆ ಹೋಗುವ ಹಕ್ಕನ್ನೂ ಮೊಟಕುಗೊಳಿಸದಿರಲಿ ಎಂದು ಆಶಿಸೋಣ.