ಎಲ್ಲಾ ರಾಜ್ಯಗಳಲ್ಲಿ ಕೋವಿಡ್ ವಿರುದ್ದ ಹೋರಾಟಕ್ಕೆ ಹಣದ ತೈಲಿಯನ್ನೇ ತೆರೆದಿಟ್ಟುಕೊಂಡು ಖರ್ಚು ಮಾಡುವ ಕಾರ್ಯ ಸಮರೋಪಾದಿಯಲ್ಲಿ ಸಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಬಂಡಾರದ ಕೀಲಿ ಕೈ ಅನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರದ ಸಚಿವರುಗಳು ಪೈಪೋಟಿ ನಡೆಸುತ್ತಲೇ ಬಂದರು. ಬಹಿರಂಗವಾಗಿಯೂ ಮಾತಿನ ಚಕಮಕಿ ನಡೆಸಿದ್ದರು. ಆ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಹಾಗೂ ಸಚಿವ ಶ್ರೀರಾಮುಲು ಅವರನ್ನು ಬೆಂಗಳೂರು ಹಾಗೂ ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೂ ಅವರಿಬ್ಬರ ನಡುವಿನ ಮುಸುಕಿನ ಗುದ್ದಾಟ ಇನ್ನೂ ಕೂಡ ಮುಂದುವರಿದಿದೆ. ಇದು ಸಾಕಷ್ಟು ಕಡೆ ಸಾಬೀತಾಗಿದೆ.
ಇದೀಗ ಕಾಂಗ್ರೆಸ್ ನಾಯಕರು ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸುಮಾರು 2 ಸಾವಿರ ಕೋಟಿ ರೂಪಾಯಿ ಹಣವನ್ನು ಸಚಿವರು ಹಾಗೂ ಅಧಿಕಾರಿಗಳು ಜೇಬಿಗೆ ಇಳಿಸಿಕೊಂಡಿದ್ದಾರೆ. ಎಲ್ಲಾ ಇಲಾಖೆಯಿಂದಲೂ ಕೋಟಿ ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರೆ ಎಂದು ಸ್ವತಃ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದಾಖಲೆ ಸಮೇತ ಆರೋಪ ಮಾಡಿದ್ದರು. ಕಳೆದೊಂದು ವಾರದ ಹಿಂದೆ ಆರೋಪ ಮಾಡಿದಾಗ ಆರೋಗ್ಯ ಸಚಿವ ಶ್ರೀರಾಮುಲು ಸುದ್ದಿಗೋಷ್ಠಿ ನಡೆಸಿದ್ದರು. ಆ ವೇಳೆ ಆರೋಗ್ಯ ಇಲಾಖೆ ಪ್ರದಾನ ಕಾರ್ಯದರ್ಶಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಕಾಂಗ್ರೆಸ್ ಮಾಡಿದ್ದ ಆರೋಪಕ್ಕೆ ಆರೋಗ್ಯ ಸಚಿವರು ಉತ್ತರವನ್ನೂ ಕೊಟ್ಟಿದ್ದರು. ಆದರೆ ಅದಕ್ಕೂ ಮೊದಲು ಡಿಸಿಎಂ ಅಶ್ವತ್ಥ ನಾರಾಯಣ ಪ್ರಮುಖ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದು ಅಚ್ಚರಿಗೆ ಕಾರಣವಾಗಿತ್ತು.
ಮೊದಲ ಬಾರಿಗೆ ಭ್ರಷ್ಟಾಚಾರ ಆರೋಪಕ್ಕೆ ಉತ್ತರ ಕೊಡುತ್ತಿದ್ದಾರೆ. ಯಾವುದೇ ಇಕ್ಕಟ್ಟಿಗೆ ಸಿಲುಕಬಾರದು ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೇ ಡಿಸಿಎಂ ಅಶ್ವತ್ಥ ನಾರಾಯಣ ಅವರಿಗೆ ಜೊತೆಯಾಗಿರಲು ಸೂಚಿಸಿದ್ದಾರೆ ಎನ್ನಲಾಗಿತ್ತು. ಆದರೆ ಗುರುವಾರ ಬೆಳಗ್ಗೆ 11.30ಕ್ಕೆ ಮತ್ತೆ ಕಾಂಗ್ರೆಸ್ ನಾಯಕರು ಕೋವಿಡ್ ಹಗರಣದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಇಲಾಖವಾರು ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪವನ್ನು ಅಂಕಿ ಸಂಖ್ಯೆ ಸಮೇತ ಮಾಧ್ಯಮಗಳ ಮುಂದೆ ಬಿಚ್ಚಿಟ್ಟರು. ಮಧ್ಯಾಹ್ನ 1.30 ವೇಳೆ ಸಚಿವ ಸಂಪುಟ ಸಭೆ ಮುಗಿಸಿ ಹೊರಬರುತ್ತಿದ್ದ ಸಂಪುಟ ಸದಸ್ಯರಿಗೆ ಕಾಂಗ್ರೆಸ್ ಆರೋಪಗಳ ಸುರಿಮಳೆ ಸ್ವಾಗತ ಬಯಸಿದಂತಿತ್ತು. ಇದರಿಂದ ಮುಜುಗರಕ್ಕೆ ಒಳಗಾದ ಬಿಜೆಪಿ ನಾಯಕರು ಕೂಡಲೇ ತುರ್ತುಸುದ್ಧಿಗೋಷ್ಠಿ ಘೋಷಣೆ ಮಾಡಿದ್ದರು. ಸ್ವತಃ ಸಿಎಂ ಬಿ.ಎಸ್ ಯಡಿಯೂರಪ್ಪ ಅವರೇ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಆರೋಪಗಳಿಗೆ ಉತ್ತರ ಕೊಡಲಿದ್ದಾರೆ ಎನ್ನಲಾಗಿತ್ತು. ಆದರೆ ಅಂತಿಮವಾಗಿ ನಡೆದಿದ್ದೇ ಬೇರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಿಎಂ ಬಿ ಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸುವ ನಿರ್ಧಾರದಿಂದ ಹಿಂದೆ ಸರಿದ ಬಳಿಕ ಪಂಚ ಪಾಂಡವರಂತೆ ನಿಂತವರು ಆರ್. ಅಶೋಕ್, ಡಿಸಿಎಂ ಅಶ್ವತ್ಥ ನಾರಾಯಣ, ಬಸವರಾಜ ಬೊಮ್ಮಾಯಿ, ಡಾ. ಕೆ ಸುಧಾಕರ್ ಹಾಗೂ ಶ್ರೀರಾಮುಲು. ಮೊದಲಿಗೆ ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ಮಾತನಾಡಿ ಎಸ್ಡಿಆರ್ಎಫ್ ಹಣದ ಬಗ್ಗೆ ಮಾತನಾಡಿ ವಿವರ ಕೊಟ್ಟರು, ಆ ಬಳಿಕ ಡಿಸಿಎಂ ಅಶ್ವತ್ಥ ನಾರಾಯಣ ಮಾತನಾಡಿ ಆರೋಗ್ಯ ಇಲಾಖೆ ಬಗ್ಗೆ ಕಾಂಗ್ರೆಸ್ ಮಾಡಿದ್ದ ಆರೋಪಕ್ಕೆ ಉತ್ತರ ಕೊಟ್ಟರು. ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ. ಸುಧಾಕರ್, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಎಲ್ಲರೂ ಕಾಂಗ್ರೆಸ್ ಆರೋಪಕ್ಕೆ ಉತ್ತರ ನೀಡಿದರು. ಆದರೆ ಉಪಸ್ಥಿತಿಯಲ್ಲಿ ಇದ್ದರೂ ಆರೋಗ್ಯ ಸಚಿವ ಶ್ರೀರಾಮುಲು ಮಾತ್ರ ತುಟಿಬಿಚ್ಚಲಿಲ್ಲ. ಇದು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ.
ಅಸಮರ್ಥರೋ..? ಅಮಾಯಕರೋ..? ಲೂಟಿಕೋರರೋ..?
ಶ್ರೀರಾಮುಲು ಇಂದಿನ ಸುದ್ದಿಗೋಷ್ಠಿಯಲ್ಲಿ ಮೌನಕ್ಕೆ ಶರಣಾಗಿದ್ದು ನೋಡಿದಾಗ ಮೇಲಿನ ಅನುಮಾನಗಳು ಸೃಷ್ಟಿಯಾಗುವುದು ಸಹಜ. ಓರ್ವ ಸಾಮಾನ್ಯ ಪ್ರಜೆಯಾದರು ಕಳ್ಳ ಎಂದು ಆರೋಪ ಹೊತ್ತ ಮೇಲೆ ನಾನು ಕಳ್ಳನಲ್ಲ ಎಂದು ಸಾಬೀತು ಮಾಡಬೇಕು. ಆದರೆ ನಾನು ಕಳ್ಳನಲ್ಲ ಎಂದು ಸಾಬೀತು ಮಾಡುವುದಕ್ಕೆ ಬೇರೆಯವರನ್ನು ಕರತಂದರೆ ನ್ಯಾಯೋಚಿತವೇ..? ಇಲ್ಲ ಎನ್ನುವುದಾದರೆ ಶ್ರೀರಾಮುಲು ಸ್ವತಃ ಮಾತನಾಡಬೇಕಿತ್ತು. ಕನ್ನಡ ಭಾಷೆ ಮೇಲೆ ಅಷ್ಟೊಂದು ಹಿಡಿತವಿಲ್ಲದ ಕಾರಣ ಡಿಸಿಎಂ ಅಶ್ವತ್ಥ ನಾರಾಯಣ ಅವರನ್ನು ಕರೆತಂದಿದ್ದಾರೆ ಎಂದೂ ಹೇಳಬಹುದು. ಆದರೆ ಕಾಂಗ್ರೆಸ್ ಆರೋಪಕ್ಕೆ ದಾಖಲೆಗಳ ಸಮೇತ ಉತ್ತರ ಕೊಡುವ ಕೆಲಸ ಮಾಡಿದರೆ ಮಾತನಾಡುವ ಅಗತ್ಯವೇನು ಇರುವುದಿಲ್ಲ ಅಲ್ಲವೇ..?
ಬಿಜೆಪಿಯಲ್ಲಿ ಶ್ರೀರಾಮುಲು ಆಗ್ತಿದ್ದಾರೆ ಸೈಡ್ಲೈನ್..?
ಬಿಜೆಪಿ ಎರಡು ಬಣಗಳಾಗಿರುವುದ ಸ್ವಷ್ಟ. ಬಿಜೆಪಿ ಅಂದರೆ ಸಂಘಪರಿವಾರವನ್ನು ಬೆಂಬಲಿಸುತ್ತಾ ಆರ್ಎಸ್ಎಸ್ ಹೇಳಿದ್ದನ್ನೇ ವೇದವಾಕ್ಯವೆಂದು ಕೆಲಸ ಮಾಡುವ ಒಂದು ವರ್ಗ. ಮತ್ತೊಂದು ವರ್ಗಕ್ಕೆ ಸ್ವತಃ ಬಿ.ಎಸ್ ಯಡಿಯೂರಪ್ಪ ಅವರೇ ದೇವರಿದ್ದಂತೆ. ಯಡಿಯೂರಪ್ಪ ಏನ್ ಹೇಳ್ತಾರೋ ಅದನ್ನು ಮಾಡುವುದು ಅಷ್ಟೇ ನನ್ನ ಕೆಲಸ ಎನ್ನುವಂತೆ ಕೆಲಸ ಮಾಡುವ ಮತ್ತೊಂದು ಬಣ.
ಇದೀಗ ಬಿಜೆಪಿಯಲ್ಲಿ ಬಿ.ಎಸ್ ಯಡಿಯೂರಪ್ಪ ಬಲ ಕುಗ್ಗುತ್ತಿದೆ. ಬಿ.ಎಸ್ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ಶ್ರೀರಾಮುಲು ಅವರನ್ನೂ ಕೂಡ ಪಕ್ಷದಲ್ಲಿ ಪಕ್ಕಕ್ಕೆ ಸರಿಲಾಗ್ತಿದೆಯಾ..? ಎನ್ನುವ ಅನುಮಾನ ಕಾಡುತ್ತಿದೆ. ಅಥವಾ ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಅದನ್ನು ಮುಚ್ಚಿ ಹಾಕುವ ಚಾಕಚಕ್ಯತೆ ಇರಲಿಲ್ಲ ಎನ್ನುವ ಕಾರಣಕ್ಕೆ ಶ್ರೀರಾಮುಲು ಅವರನ್ನು ಬಿಟ್ಟು ಅಶ್ವತ್ಥ ನಾರಾಯಣ ಅವರಿಗೆ ಜವಾಬ್ದಾರಿ ವಹಿಸಲಾಗಿದೆಯಾ ಎನ್ನುವ ಸಾಕಷ್ಟು ಗೊಂದಲಗಳಿಗೆ ಮುಂದಿನ ದಿನಗಳೇ ಉತ್ತರ ಕೊಡಲಿವೆ.