ಇಂದು ಮಾನವ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿ ನೀಡಿರುವ ಉಚಿತ ಕೊಡುಗೆಗಳನ್ನೆಲ್ಲ ನಾಶ ಮಾಡಿದ್ದಾನೆ. ಅರಣ್ಯ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆ ಅಗುತ್ತಿರುವ ಹಿನ್ನೆಲೆಯಲ್ಲಿ ಅಳಿವಿನಂಚಿನಲ್ಲಿರುವ ಅನೇಕ ವನ್ಯ ಪ್ರಾಣಿಗಳು ಕಣ್ಮರೆ ಅಗಿವೆ. ದಿನೇ ದಿನೇ ಹೆಚ್ಚುತ್ತಿರುವ ಜಲ ಮಾಲಿನ್ಯದಿಂದಾಗಿ ಕೆಲವು ಅಪರೂಪದ ಮೀನು ಸಂತತಿಗಳೂ ಇಂದು ಕಾಣ ಸಿಗುತ್ತಿಲ್ಲ. ಇವೆಲ್ಲ ಸಂಪರ್ಣ ವಿನಾಶವಾಗಿವೆ. ಈ ಅಳಿವಿಂಚಿನಲ್ಲಿರುವ ಅಪರೂಪದ ‘ಮಹಶೀರ್’ ಎಂಬ ಮೀನು ಸಂತತಿಯನ್ನು ರಕ್ಷಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಾರ್ಷಿಕ ಕೋಟ್ಯಾಂತರ ರೂಪಾಯಿ ವ್ಯಯ ಮಾಡುತ್ತಿವೆ. ಆದರೆ ಮತ್ತೊಂದೆಡೆ ಜನರು ಈ ಅಪರೂಪದ ಮೀನು ತಳಿಯನ್ನೇ ಹಿಡಿದು ತಿನ್ನುತ್ತಿದ್ದಾರೆ.
ಅಪರೂಪದ ‘ಮಹಶೀರ್’ ಮೀನನ್ನು ಕೊಡಗು ಜಿಲ್ಲೆಯ ಕಾವೇರಿ ನದಿಯಲ್ಲಿ ಬಿಟ್ಟು ವಂಶಾಭಿವೃದ್ದಿ ಮಾಡಲಾಗುತ್ತಿದೆ. ಹಾರಂಗಿ ಜಲಾಶಯದ ಹಿನ್ನೀರಿನಲ್ಲೂ ಇದನ್ನು ಬೆಳೆಸಲಾಗುತ್ತಿದೆ. ಅದರೆ ಸ್ಥಳಿಯರು ಇವನ್ನು ಹಿಡಿದು ತಿನ್ನುತಿದ್ದಾರೆ ಎಂದು ಅರೋಪಿಸಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಮೊನ್ನೆ ಜಿಲ್ಲೆಯ ಲಾಕ್ಡೌನ್ ಹಿನ್ನೆಲೆ ಸಮಯ ಕಳೆಯಲು ಹಾರಂಗಿ ಹಿನ್ನೀರಿನಲ್ಲಿ ಗಾಳದ ಮೂಲಕ ಮೀನು ಹಿಡಿದ ಯುವಕನೊಬ್ಬ ಬರೋಬ್ಬರಿ 38 ಕೆಜಿ ತೂಕದ ಈ ಮೀನನ್ನು ಹಿಡಿದು ಫೋಟೋ ತೆಗೆಸಿಕೊಂಡು ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡಿದ್ದಾನೆ.
ಈ ವಿಷಯ ಬಹಿರಂಗಗೊಳ್ಳುತಿದ್ದಂತೆ ಬೆಚ್ಚಿ ಬಿದ್ದ ಜಿಲ್ಲೆಯ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಹಾರಂಗಿಗೆ ಭೇಟಿ ನೀಡಿ ಮೀನು ಹಿಡಿದ ಯುವಕರ ತಂಡದಿಂದ ಮೀನು ಹಿಡಿಯಲು ಬಳಸಿದ ಗಾಳ ಇನ್ನಿತರ ಪರಿಕರವನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಅಧಿಕಾರಿಗಳ ಭೇಟಿ ವೇಳೆ ಯುವಕನು ನಾಪತ್ತೆ ಆಗಿದ್ದು ಇನ್ನೂ ತಲೆಮರೆಸಿಕೊಂಡಿದ್ದಾನೆ. ಅಪರೂಪದ ಈ ಮೀನು ತಳಿಯನ್ನು ಹಿಡಿಯುವುದು ಅಪರಾಧವಾಗಿದೆ ಎಂದು ಜಿಲ್ಲೆಯ ಮೀನುಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಕೆಟಿ ದರ್ಶನ್ ʼಪ್ರತಿಧ್ವನಿʼಗೆ ತಿಳಿಸಿದರು.
ರಾಜ್ಯದಲ್ಲಿ ಮೀನುಗಾರಿಕಾ ಇಲಾಖೆಯ ಏಕೈಕ ‘ಮಹಶೀರ್’ ಮೀನು ತಳಿ ಸಂಶೋಧನಾ ಕೇಂದ್ರ ಹಾರಂಗಿ ಜಲಾಶಯದ ಪಕ್ಕದಲ್ಲೇ ಇದ್ದು ಇಲ್ಲಿ ವಾರ್ಷಿಕ ಅಂದಾಜು 30 ರಿಂದ 35 ಸಾವಿರ ‘ಮಹಶೀರ್’ ಮೀನು ಮರಿಗಳನ್ನು ಬೆಳೆಸಲಾಗುತ್ತದೆ. ಇಲ್ಲಿ ಇತರ ಮೀನು ಮರಿಗಳನ್ನೂ ಬೆಳೆಸಲಾಗುತಿದ್ದು ಅದನ್ನು ಆಸಕ್ತ ಕೃಷಿಕರಿಗೆ ಹಂಚಲಾಗುತ್ತಿದೆ. ಅದರೆ ʼಮಹಶೀರ್ʼ ಮೀನು ಮರಿಗಳನ್ನು ಮಾತ್ರ ಕಾವೇರಿ, ಕಬಿನಿ ಇನ್ನಿತರ ನದಿಗಳಿಗೆ ಬಿಡಲಾಗುತ್ತಿದೆ ಎಂದು ದರ್ಶನ್ ಹೇಳಿದರು.
ವಾಸ್ತವವಾಗಿ ಹಾರಂಗಿ ನದಿಯಲ್ಲಿ ಮೀನು ಹಿಡಿಯುವ ಹಕ್ಕನ್ನು ಸ್ಥಳಿಯ ಕಾವೇರಿ ಮೀನು ಸಹಕಾರ ಸಂಘಕ್ಕೆ ಒಟ್ಟು ಐದು ವರ್ಷಗಳ ವರೆಗೆ ಗುತ್ತಿಗೆ ನೀಡಲಾಗಿದೆ. ಈ ಗುತ್ತಿಗೆಯ ಅವಧಿ 2021 ರ ಮಾರ್ಚ್ ನಲ್ಲಿ ಮುಕ್ತಾಯಗೊಳ್ಳಲಿದೆ. ಈ ಸಹಕಾರ ಸಂಘವು ಪ್ರತೀ ವರ್ಷ ಈ ಹಕ್ಕಿಗಾಗಿ 2.25 ಲಕ್ಷ ರೂಪಾಯಿಗಳನ್ನು ಸರ್ಕಾರಕ್ಕೆ ನೀಡುತ್ತಿದೆ. ಗುತ್ತಿಗೆ ನೀಡುವಾಗಲೂ ಸಾಕಷ್ಟು ನಿಯಮ ನಿಬಂಧನೆ ವಿಧಿಸಲಾಗಿದೆ. ಅದರಲ್ಲಿ ಮುಖ್ಯವಾದುದೆಂದರೆ ಬಲೆ ಹಾಕಿ ಮೀನು ಹಿಡಿಯುವಾಗ ಒಂದು ವೇಳೇ ʼಮಹಶೀರ್ʼ ಮೀನು ಬಲೆಗೆ ಸಿಲುಕಿದಲ್ಲಿ ಕೂಡಲೇ ಅದನ್ನು ತೆಗೆದು ನದಿಯೊಳಗೆ ಬಿಡಬೇಕಿದೆ. ಆದರೆ ಈ ಸಹಕಾರ ಸಂಘದ ಅರಿವಿಗೂ ಬಾರದಂತೆ ಸ್ಥಳೀಯರು ಮೀನು ಹಿಡಿಯುತಿದ್ದಾರೆ ಎನ್ನಲಾಗಿದೆ. ಹೆಚ್ಚುತ್ತಿರುವ ʼಮಹಶೀರ್ʼ ಮೀನಿನ ಕಳ್ಳ ಬೇಟೆಯಿಂದಾಗಿ ಅವು ಕೂಡ ಕಾಣೆಯಾಗುತ್ತಿವೆ.
ಈ ಕುರಿತು ʼಪ್ರತಿಧ್ವನಿʼ ಹಾರಂಗಿಯ ಗ್ರಾಮಸ್ಥರಾದ ನಾಗರಾಜ್ ಅವರನ್ನು ಮಾತಾಡಿಸಿದಾಗ ಕೆಲವು ಯುವಕರು ಗಾಳ ಹಾಕಿ ಮೀನು ಹಿಡಿಯುತ್ತಿರುತ್ತಾರೆ. ಈ ಪ್ರದೇಶವು ವಿಸ್ತಾರವಾಗಿರುವುದರಿಂದ ಎಲ್ಲ ಭಾಗದಲ್ಲೂ ಕಣ್ಣಿಡುವುದಕ್ಕೆ ಆಗುವುದಿಲ್ಲ. ಮೊನ್ನೆ ನಡೆದ ಘಟನೆಯಲ್ಲಿ ಯುವಕನೊಬ್ಬ ಸಾಮಾಜಿಕ ತಾಣದಲ್ಲಿ ಮೀನಿನ ಫೋಟೋ ಹಾಕಿದ್ದಕ್ಕೆ ಮಾತ್ರ ಬೆಳಕಿಗೆ ಬಂದಿದೆ. ಆದರೆ ಇಂತ ಘಟನೆಗಳು ನಡೆದರೂ ಯಾರ ಗಮನಕ್ಕೂ ಬರುವುದಿಲ್ಲ ಎಂದರು.
ಅಳಿವಿನಂಚಿನಲ್ಲಿರುವ ಈ ಮೀನುಗಳ ಸಂರಕ್ಷಣೆಗೆ ‘ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ’ ಕೂಡ ಕೈ ಜೋಡಿಸಿದೆ. ರಾಜ್ಯ ಸರ್ಕಾರ ಸಿದ್ದಾಪುರದಿಂದ ಕುಶಾಲನಗರದವರೆಗಿನ 20 ಕಿಲೋಮೀಟರ್ ದೂರದವರೆಗಿನ ಕಾವೇರಿ ನದಿಯಲ್ಲಿ ಈ ‘ಮಹಶೀರ್’ ಮೀನನ್ನು ಸಂರಕ್ಷಿಸಲು ಅನುಮತಿ ನೀಡಿದೆ. ಈ ಸೊಸೈಟಿಯು ಮೀನುಗಾರಿಕೆಯಲ್ಲಿ ಆಸಕ್ತಿ ವಹಿಸಿ ಬರುವ ಪ್ರವಾಸಿಗರಿಗೆ ಇಲ್ಲಿ ಮೀನು ಹಿಡಿಯಲು ಅನುವು ಮಾಡಿ ಕೊಡುತ್ತಿದೆ. ಇದಕ್ಕೆ ‘ಗೇಮ್ ಫಿಶಿಂಗ್’ ಎಂದೂ ಕರೆಯಲಾಗುತ್ತದೆ. ಆದರೆ ಇಲ್ಲಿ ಹಿಡಿದ ಮಹಶೀರ್ ಮೀನನ್ನು ಹಿಡಿದ 30 ಸೆಕೆಂಡ್ ಗಳಲ್ಲಿ ಫೋಟೋ ತೆಗೆಸಿಕೊಂಡು ಕೂಡಲೇ ನದಿಗೆ ಪುನಃ ಬಿಡಬೇಕಿದೆ.
ಈ ‘ಮಹಶೀರ್’ ಮೀನು ತುಂಬಾ ನಿಧಾನಗತಿಯಲ್ಲಿ ಬೆಳೆಯುವ ಮೀನಾಗಿದ್ದು ಇದು ಗರಿಷ್ಟ 60 ಕೆಜಿಗಳ ವರೆಗೆ ಬೆಳೆದಿರುವ ನಿದರ್ಶನಗಳೂ ಇವೆ. ಕೆರೆಗಳಲ್ಲಿ ಸಾಕುವ ‘ಕಾಟ್ಲಾ’ ಜಾತಿಯ ಮೀನು ಒಂದು ವರ್ಷಕ್ಕೆ ಒಂದು ಕೆಜಿಯಷ್ಟು ಬೆಳೆದರೆ ‘ಮಹಶೀರ್’ ಮೀನು ಕೇವಲ ಅರ್ಧ ಕೆಜಿಯಷ್ಟು ಬೆಳೆಯುತ್ತದೆ. 2010 ರಲ್ಲಿ ‘ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ’ ಗೇಮ್ ಫಿಶಿಂಗ್ ನಲ್ಲಿ ಈ ಮೀನು ಫೋಟೋ ತೆಗೆದು ನಂತರ ಪುನಃ ನದಿಗೆ ಬಿಡಲಾಗಿತ್ತು. ಈ ಮೀನು ಹೆಚ್ಚಿನ ಪ್ರೋಟೀನ್ ಗಳನ್ನು ಹೊಂದಿದ್ದು ಮಾನವ ಸೇವನೆಗೆ ಉಪಯುಕ್ತವಾಗಿದ್ದು ಎಣ್ಣೆಯ ಅಂಶ ಜಾಸ್ತಿ ಇರುತ್ತದೆ ಎನ್ನಲಾಗಿದೆ. ಈ ಮೀನು ಪ್ರವಾಹದ ನೀರಿನಲ್ಲೂ ಕೊಚ್ಚಿಕೊಂಡು ಹೋಗದೆ ವಿರುದ್ದ ದಿಕ್ಕಿನಲ್ಲೂ ಈಜುವ ಸಾಮರ್ಥ್ಯ ಹೊಂದಿದೆ ಎಂದು ಮೀನುಗಾರರು ಹೇಳುತ್ತಾರೆ.
ದೇಶದ ಈಶಾನ್ಯ ರಾಜ್ಯಗಳಲ್ಲಿ ಮೀನು ಇದ್ದು ದಕ್ಷಿಣ ಭಾರತದಲ್ಲಿ ತೀರಾ ವಿರಳವಾಗಿದೆ. ಕಳೆದ 2015 ರಿಂದ ಮೀನುಗಾರಿಕಾ ಇಲಾಖೆಯು ವಾರ್ಷಿಕ 30 ರಿಂದ 35 ಸಾವಿರದಷ್ಟು ಮೀನುಗಳನ್ನು ಪ್ರತೀ ವರ್ಷವೂ ವಿವಿಧ ನದಿಗಳಿಗೆ ಬಿಡುತಿದ್ದು ಇವುಗಳ ಸಂತಾನ ವೃದ್ದಿಯೇ ಇದರ ಉದ್ದೇಶವಾಗಿದೆ. ಅದು ಯಶಸ್ವಿಯಾಗಲಿ.