ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಗೋವಾ ಸೇರಿದಂತೆ ಸಾಕಷ್ಟು ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಬಿಜೆಪಿಗೆ ಕೆಲವೇ ಸ್ಥಾನಗಳು ಕಡಿಮೆ ಆಗಿದ್ದವು. ಕಾಂಗ್ರೆಸ್, ಬಿಜೆಪಿ ಸಮಬಲದ ಸ್ಥಾನಗಳನ್ನು ಪಡೆಯುವ ಮೂಲಕ ರಾಜಕೀಯ ಜಿದ್ದಾಜಿದ್ದಿಗೆ ನಿಂತರೆ, ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳು ಹಾಗೂ ಪಕ್ಷೇತರ ಶಾಸಕರನ್ನು ಸೆಳೆದುಕೊಂಡು ಅಧಿಕಾರ ಹಿಡಿಯುವಲ್ಲಿ ಯಶ ಕಂಡಿತ್ತು. ಅಧಿಕಾರದ ಸಮೀಪಕ್ಕೆ ಬಂದು ಅಧಿಕಾರಕ್ಕೆ ಏರಲು ಸಾಧ್ಯವಾಗದೆ ಹಲ್ಲು ಕಡಿಯುತ್ತಿದ್ದ ಕಮಲಪಡೆ ಒಂದೋಂದೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೂಲಕ ಜಾಲ ವಿಸ್ತರಣೆ ಮಾಡುತ್ತಿದೆ. ಬಿಜೆಪಿ ಪಕ್ಷದ ಅಧಿಕಾರ ವಿಸ್ತರಣೆ ಯೋಜನೆ ಅರ್ಧ ವರ್ಷಕ್ಕೊಂದು ಆಪರೇಷನ್ ಎನ್ನುವಂತಿದೆ.
ಕರ್ನಾಟಕದಿಂದಲೇ ಆಪರೇಷನ್ಗೆ ಚಾಲನೆ!
ಕಳೆದ ವರ್ಷ ಜುಲೈ ಅಂತ್ಯಕ್ಕೆ ಕರ್ನಾಟಕದಲ್ಲಿ ಆಪರೇಷನ್ ಕಮಲ ಸಕ್ಸಸ್ ಆಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿತ್ತು. ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರು. ಕಾಂಗ್ರೆಸ್, ಜೆಡಿಎಸ್ ನಿಂದ ಸಿಡಿದು ಹೊರ ಹೋಗಿದ್ದ ಬಹುತೇಕ ಶಾಸಕರು ಇದೀಗ ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ. ಅನರ್ಹರಾಗಿ ಮತ್ತೆ ಚುನಾಯಿತರಾಗಲು ವಿಫಲವಾದರು ಹಾಗೂ ಮೊದಲೇ ಹೈಕೋರ್ಟ್ನಲ್ಲಿ ಪ್ರಕರಣ ಎದುರಿಸುತ್ತಿದ್ದವರು ಇನ್ನೂ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರ್ನಾಟಕದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹೊಸ ವರ್ಷ ಆರಂಭದಲ್ಲಿ ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಆರಂಭವಾಗಿತ್ತು.
ಕಮಲನಾಥ್ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದ ಯುವ ನಾಯಕ ಜೋತಿರಾಧಿತ್ಯ ಸಿಂಧಿಯಾ ಸರ್ಕಾರದಿಂದ ಅಂತರ ಕಾಯ್ದುಕೊಂಡಿದ್ದರು. ಮೊದಲೇ ಮುಖ್ಯಮಂತ್ರಿ ಸ್ಥಾನ ಸಿಗದೆ ಕೋಪಿಸಿಕೊಂಡಿದ್ದ ಜೋತಿರಾಧಿತ್ಯ ಸಿಂಧಿಯಾ ಅವರನ್ನು ಸೆಳೆಯಲು ಮುಂದಾದ ಬಿಜೆಪಿ ಹೈಕಮಾಂಡ್ ಸ್ವತಃ ಅಖಾಡಕ್ಕೆ ಇಳಿದು ಜೋತಿರಾಧಿತ್ಯ ಸಿಂಧಿಯಾ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆ ಬಳಿಕ ರಚನೆಯಾದ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದಲ್ಲಿ ಜೋತಿರಾಧಿತ್ಯ ಸಿಂಧಿಯಾ ಬೆಂಬಲಿಗರಿಗೆ ಸಚಿವಗಿರಿಯೂ ಸಿಕ್ಕಿತು. ಜೋತಿರಾಧಿತ್ಯ ಸಿಂಧಿಯಾ ಅವರನ್ನು ರಾಜ್ಯಸಭೆಗೆ ಆಯ್ಕೆಯನ್ನೂ ಮಾಡಲಾಯ್ತು. ಇದೀಗ ಬಿಜೆಪಿ ನಾಯಕರ ಕಣ್ಣು ರಾಜಸ್ಥಾನದ ಕಡೆಗೆ ನೆಟ್ಟಿದೆ.
ಮಧ್ಯಪ್ರದೇಶದಲ್ಲಿ ಭಾನುವಾರ ಮತ್ತೋರ್ವ ಕಾಂಗ್ರೆಸ್ ಶಾಸಕ ಪ್ರದ್ಯುಮ್ನ ಸಿಂಗ್ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಈ ಶಾಕ್ ನಡುವೆ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಪಟ್ಟ ಸಿಗದೆ ಅಸಮಾಧಾನ ಹೊಂದಿದ್ದ ಸಚಿನ್ ಪೈಲಟ್ ಕೂಡ ಬೆಂಬಲಿಗ ಶಾಸಕರ ಜೊತೆ ದೆಹಲಿಯಾತ್ರೆ ಮಾಡಿದ್ದು ಕಾಂಗ್ರೆಸ್ನಲ್ಲಿ ತಳಮಳಕ್ಕೆ ಕಾರಣವಾಗಿತ್ತು. ಅಷ್ಟು ಮಾತ್ರವಲ್ಲದೆ, ಸಚಿನ್ ಪೈಲಟ್ ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ರಾಜ್ಯಸಭಾ ಸದಸ್ಯನಾಗಿರುವ ಜೋತಿರಾಧಿತ್ಯ ಸಿಂಧಿಯಾ ಅವರನ್ನು ಭೇಟಿ ,ಮಾಡಿ ಚರ್ಚೆ ನಡೆಸಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ರಾಹುಲ್ ಗಾಂಧಿ ಕೂಡ ಸಚಿನ್ ಪೈಲಟ್ ಜೊತೆಗೆ ಫೋನ್ ಮೂಲಕ ಸಂಭಾಷಣೆ ನಡೆಸಿದ್ದಾರೆ ಎನ್ನಲಾಗಿದೆ. ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗಬೇಡಿ, ನಿಮ್ಮ ಬೇಡಿಕೆಯನ್ನು ಈಡೇರಿಸೋಣ ಎನ್ನುವ ಭರವಸೆ ನೀಡಿದ್ದಾರೆ ಎನ್ನಲಾಗ್ತಿದೆ. ಆದರೆ ಸಚಿನ್ ಪೈಲಟ್ ಮಾತ್ರ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಭಾನುವಾರ ರಾತ್ರಿ 9 ಗಂಟೆಗೆ ಕರೆದಿದ್ದ ಶಾಸಕರ ಸಭೆಗೆ ಹೋಗದಿರಲು ನಿರ್ಧಾರ ಮಾಡಿದರು. ಸಚಿನ್ ಪೈಲಟ್ ಜೊತೆಗೆ 22 ಶಾಸಕರು ಕೂಡ ಭಾಗಿಯಾಗುವುದು ಅನುಮಾನ ಎನ್ನುವ ಕಾರಣಕ್ಕೆ ಸಭೆಯನ್ನೇ ಮುಂದೂಡಿಕೆ ಮಾಡಲಾಗಿದೆ. ಸೋಮವಾರ ಬೆಳಗ್ಗೆ 10.30ಕ್ಕೆ ಸಭೆ ನಿಗದಿಯಾಗಿದೆ.
ಕಾಂಗ್ರೆಸ್ಗೆ ಸಮಾಧಾನ ಮಾಡುವ ವಿಶ್ವಾಸ..!
ರಾಜಸ್ಥಾನದಲ್ಲಿ ಜಯಭೇರಿ ಬಾರಿಸಿದಾಗಲೇ ಸಚಿನ್ ಪೈಲಟ್ ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿಯಾಗಿದ್ದರು. ಆದರೆ ಅವರನ್ನು ಉಪಮುಖ್ಯಮಂತ್ರಿ ಮಾಡಿ ಹಿರಿಯ ನಾಯಕ ಅಶೋಕ್ದ ಗೆಹ್ಲೋಟ್ಗೆ ಮುಖ್ಯಮಂತ್ರಿ ಪಟ್ಟ ಕೊಡಲಾಗಿತ್ತು. ಅಂದಿನಿಂದಲೂ ಮುಖ್ಯಮಂತ್ರಿ ಜೊತೆಗೆ ಅಂತರ ಕಾಯ್ದುಕೊಳ್ತಿದ್ದ ಸಚಿನ್ ಪೈಲಟ್, ಇದೀಗ ಪಕ್ಷದಿಂದ ಒಂದು ಕಾಲನ್ನು ಹೊರಗಿಟ್ಟಿದ್ದಾರೆ ಎನ್ನಲಾಗ್ತಿದೆ. ಕಾಂಗ್ರೆಸ್ನ ಕಾರ್ಯದರ್ಶಿ ಹಾಗೂ ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಮಾತನಾಡಿ, ಕಾಂಗ್ರೆಸ್ನ ಎಲ್ಲಾ ಶಾಸಕರು ನಮ್ಮ ಸಂಪರ್ಕದಲ್ಲೇ ಇದ್ದು, ರಾಜಸ್ಥಾನ ಸರ್ಕಾರ ತನ್ನ ಅವಧಿಯನ್ನು ಪೂರೈಸಲಿದೆ ಎಂದಿದ್ದಾರೆ.
ನಾವು ಕಾಂಗ್ರೆಸ್ ಕಟ್ಟಾಳುಗಳು..!
ದೆಹಲಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಕಾಂಗ್ರೆಸ್ ಶಾಸಕರು, ನಾವು ಕಾಂಗ್ರೆಸ್ ಪಕ್ಷದ ಕಟ್ಟಾಳುಗಳು, ಕಾಂಗ್ರೆಸ್ ಪಕ್ಷದ ಸೈನಿಕರು ಇದ್ದಂತೆ ಎಂದಿದ್ದಾರೆ. ಜೊತೆಗೆ ನಾವು ಸ್ವಂತ ಕೆಲಸದ ಮೇಲೆ ದೆಹಲಿಗೆ ಬಂದಿರುವುದಾಗಿ ತಿಳಿಸಿದ್ದಾರೆ. ಬಿಜೆಪಿ ನಾಯಕರು ಕೂಡ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದು, ಎಷ್ಟು ಜನರು ಸಚಿನ್ ಪೈಲಟ್ ಜೊತೆಗೆ ಬರುತ್ತಾರೆ ಎನ್ನುವುದನ್ನು ಖಚಿತ ಮಾಡಿಕೊಂಡ ಬಳಿಕ ದಾಳ ಉರುಳಿಸುವ ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ.
ಜ್ಯೋತಿರಾಧಿತ್ಯ ಸಿಂಧಿಯಾ ಪ್ರಮುಖ ಸೂತ್ರಧಾರಿ..!
ಈಗಾಗಲೇ 30ಕ್ಕೆ ಹೆಚ್ಚು ಶಾಸಕರು ತನ್ನ ಜೊತೆಗಿದ್ದಾರೆ ಎಂದು ಸಚಿನ್ ಪೈಲಟ್ ಹೇಳಿಕೊಂಡಿದ್ದಾರೆ. ಈಗಾಗಲೇ ಜೋತಿರಾಧಿತ್ಯ ಸಿಂಧಿಯಾ ಜೊತೆಗೆ ಚರ್ಚೆ ನಡೆಸಿರುವ ಸಚಿನ್ ಪೈಲಟ್ ಬಿಜೆಪಿ ಸೇರ್ಪಡೆಯಾಗುವುದು ಖಚಿತವಾಗಿದೆ. ಕರ್ನಾಟಕ, ಮಧ್ಯಪ್ರದೇಶ ಸೇರಿದಂರೆ ವೇದಿಕೆ ಸಂಪೂರ್ಣವಾಗಿ ಸಜ್ಜಾಗುವ ತನಕ ಶಾಸಕರು ಗುಟ್ಟು ಬಿಟ್ಟುಕೊಡುವುದಿಲ್ಲ ಎನ್ನುವುದು ಗೊತ್ತಿರುವ ಸಂಘತಿ. ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೇ ಸೋದರಳಿಯ ಆಗಿರುವ ಜ್ಯೋತಿರಾಧಿತ್ಯ ಸಿಂಧಿಯಾ ಸ್ವತಃ ಮುಂದೆ ನಿಂತು ಆಪೇಷನ್ ಕಮಲ ಮಾಡುತ್ತಿದ್ದಾರೆ ಎನ್ನಲಾಗ್ತಿದ್ದು, ಕಾಂಗ್ರೆಸ್ ಅಪ್ಪ ಹಾಕಿದ ಆಲದ ಮರ ಎನ್ನುವಂತೆ ಹಿರಿಯ ನಾಯಕರಿಗೆ ಪಟ್ಟಕಟ್ಟಿ ಹೊಳೆಯುವ ಎರಡು ಚಿನ್ನದ ಖಡ್ಗಗಳನ್ನೇ ಬಿಜೆಪಿಗೆ ಬಿಟ್ಟುಕೊಟ್ಟಂತಾಗಿದೆ.