ಇಂದು ವಿಶ್ವದ ಅತ್ಯಂತ ದೊಡ್ಡ ಹಾಲು ಉತ್ಪಾದಕ ದೇಶವಾಗಿ ಭಾರತ ಗುರುತಿಸಿಕೊಂಡಿದ್ದು ದೇಶಾದ್ಯಂತ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆಯು ಲಕ್ಷಾಂತರ ಜನರಿಗೆ ಅನ್ನ ನೀಡುತ್ತಿದೆ. ಇಂದು ಜೀವನ ಸಾಗಿಸಲು ನೂರಾರು ಮಾರ್ಗೋಪಾಯಗಳಿದ್ದರೂ ಮೊದಲಿನಿಂದಲೂ ಮಾಡಿಕೊಂಡು ಬಂದಿರುವ ಹೈನುಗಾರಿಕೆಯ ಮೂಲಕ ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಐಮ್ಮದ್ ಅವರದ್ದು ನಿಜಕ್ಕೂ ಸಾರ್ಥಕ ಬದುಕು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇವರು ಓದಿದು ಮೂರನೆ ಕ್ಲಾಸಿನವರೆಗಾದರೂ ಮನೆಯಲ್ಲಿನ ಬಡತನದಿಂದಾಗಿ 17 ನೇ ವಯಸ್ಸಿಗೆ ಮನೆ ಬಿಟ್ಟು ಹೊರಟರು. 26 ನೇ ವಯಸ್ಸಿಗೆ ಮದುವೆಯಾದ ಇವರು ಉದರ ನಿಮಿತ್ತ ಅಮ್ಮತಿ, ಕಾನೂರು, ಕೇರಳದ ವಯನಾಡ್ ನಲ್ಲಿ ಅಲೆದಾಡಿ ಸಣ್ಣ ಪುಟ್ಟ ಕೆಲಸ ಮಾಡಿದರೂ ಕೊನೆಗೆ ನೆಲೆ ಕಂಡು ಕೊಂಡದ್ದು ಮಾತ್ರ ಹೈನುಗಾರಿಕೆಯಲ್ಲಿ. ವೀರಾಜಪೇಟೆ ಸಮಿಪ ಬೇಟ್ಟೋಳಿ ಗುಂಡಿಗೇರೆಯ ಮೈದುನ್ ಕುಂಞ ಹಾಗೂ ಅಮೀನ ದಂಪತಿಯ ಒಟ್ಟು 11 (5 ಗಂಡು 6 ಹೆಣ್ಣು) ಮಕ್ಕಳಲ್ಲಿ ಕೂನೆಯವರಾಗಿ 1946 ರಲ್ಲಿ ಜನಿಸಿದ ಐಮ್ಮದ್, ತಮ್ಮ 12 ವಯಸ್ಸಿಗೆ ತಾಯಿಯನ್ನು ,15 ವಯಸ್ಸಿಗೆ ತಂದೆಯನ್ನು ಕಳೆದುಕೊಂಡು ಒಡಹುಟ್ಟಿದ ಅಣ್ಣ, ಅತ್ತಿಗೆಯಿದ್ದರು ಅನಾಥರಾಗಿ 17 ವಯಸ್ಸಿಗೆ ಹುಟ್ಟೂರು ತೊರೆದು ಅಲೆಮಾರಿಯಾದರು.
ಊರೂರು ಸುತ್ತಿ 1972 ರಲ್ಲಿ ಪೆರಂಬಾಡಿಯ ನಬೀಸ ಅವರನ್ನು ಮದುವೆಯಾಗಿ ವೀರಾಜಪೇಟೆ ಪಟ್ಟಣ ಸೆೇರಿದರು. ಮೊದಲಿಗೆ ಬಾಡಿಗೆ ಮನೆಯಲ್ಲಿ ವಾಸಿಸುತಿದ್ದು ವೀರಾಜಪೇಟೆಯ ಸುಭಾಷ್ ನಗರದಲ್ಲಿ 1986ರಲ್ಲಿ ಕೇವಲ ₹5000/- ರೂಪಾಯಿಗೆ 10 ಸೆಂಟು ಜಾಗ ಖರೀದಿಸಿ ಸಣ್ಣದೊಂದು ಮನೆ ನಿರ್ಮಿಸಿದರು. ಇಂದು ಅದರ ಸುತ್ತ ಮುತ್ತ ಇನ್ನು ಇಪ್ಪತು ಸೆಂಟು ಜಾಗ ಖರೀದಿಸಿ ಕೊಟ್ಟಿಗೆ ನಿರ್ಮಿಸಿ 22 ವಿವಿಧ ತಳಿಯ ಹಸು ಸಾಕುತ್ತಿದ್ದಾರೆ.
ಹೈನುಗಾರಿಕೆ ಇವರಿಗೆ ಹೊಸದೇನಲ್ಲ. ಇವರು ಹುಟ್ಟಿದಾಗಲೇ ಮನೆಯಲ್ಲಿ ಹಸುಗಳನ್ನು ಸಾಕಲಾಗುತಿತ್ತು. ’ನನ್ನ ತಾಯಿ ತೀರಿಕೊಂಡಾಗ ಮನೆಯಲ್ಲಿ 13 ಹಾಲು ಕರೆಯುವ ಹಸುಗಳು ಇದ್ದವು. ಮನೆ ಬಿಟ್ಟು ಬಂದ ಮೇಲೆ ಮಾಡುವುದೇನು ಎಂದು ಯೋಚಿಸುವಾಗ ಕೈಹಿಡಿದದ್ದು ಹೈನುಗಾರಿಕೆ. ಹಸು ಸಾಕುವುದರಿಂದ ದರಿದ್ರ ಬರುವುದಿಲ್ಲಾ ಮತ್ತು ಪಟಣಿ(ಉಪವಾಸ) ಬೀಳುವುದಿಲ್ಲಾ ಎಂದು ಮುಗುಳ್ನಗುತ್ತಾರೆ. ಮೊದಲಿಗೆ ಗಂಡ ಹೆಂಡತಿ ಇಬ್ಬರಿಗೆ ಐದೈದು ಸಾವಿರ ಪೂಜಾರಿ ಲೋನ್ ನಿಂದ ಒಂದು ಹಸು ಖರೀದಿಸಿ ಬಂಡ ದೈರ್ಯದೂಂದಿಗೆ ಆರಂಭಿಸಿದ ವಹಿವಾಟು ಇಂದು 22 ದನ –ಕರುಗಳಿಗೆ ಏರಿದೆ.

ನನ್ನ ದಿನಚರಿ ಬೆಳಿಗೆ 4.50 ಶುರು ಆಗುತ್ತದೆ. ಪಶು ಆಹಾರ, ಗಂಜಿ ತಯಾರಿಸುವುದು ಸಗಣಿ ತೆಗೆಯುವುದು, ಹಸಿ ಹುಲ್ಲು ಕತ್ತರಿಸಿ ತರುವುದು, ಹಸುಗಳನ್ನು ತೊಳೆಯುವುದು, ಮೇಯಿಸುವುದು ಹೀಗೆ ಸಾಗುತ್ತದೆ. ವೀರಾಜಪೇಟೆಯ ಪಶು ವೈದ್ಯಾಧಿಕಾರಿ ಡಾ.ಶಾಂತೆಸರ ಅವರ ಸಲಹೆಯಂತೆ ಹಸುಗಳ ದೇಹ ನಿರ್ವಹಣೆಗೆ ಖನಿಜ ಮಿಶ್ರಣ ಆಹಾರ ಎರಡು ಹೂತ್ತು ಕನಿಷ್ಟ ನೂರು ಗ್ರಾಂ ಕೂಡುವುದರಿಂದ ಹಾಲಿನ ಗುಣಮಟ್ಟ ಕಾಯ್ದುಕೊಳ್ಳಲು ಸಾದ್ಯ ಎಂದರು.
ಹಾಲು ಹಿಂಡಲು ಓರ್ವ ಕಾರ್ಮಿಕ ಬರುತ್ತಾನೆ. ಯಂತ್ರದಿಂದ ಹಾಲು ಹಿಂಡುವುದಕಿಂತ ಕೈಯಲ್ಲೆ ಸುಲಭ ಮತ್ತು ಫಲದಾಯಕ. ಇಂದು 22 ರಾಸುಗಳಿದ್ದು 8 ಹಸುಗಳಿಂದ ನಿತ್ಯ 50 ಲೀಟರ್ ಹಾಲು ಸಿಗುತ್ತದೆ. ದೇಸಿ ತಳಿಗಳ ಹಾಲಿಗೆ ಹೆಚ್ಚು ಬೆಲೆ ಇದ್ದು ನಾನು, ಲೀಟರಿಗೆ 40 ರುಪಾಯಿಯಂತೆ ಪೇಟೆಯ ಸುತ್ತ ಮುತ್ತ ಹಾಲು ಮಾರುತ್ತೇನೆ. ಉಳಿಕೆ ಹಾಲನ್ನು ಮೊಸರು ಮಾಡಿ ತುಪ್ಪ- ಬೆಣ್ಣೆ ಕಾಯಿಸಿ ಕೆಜಿಗೆ 600 ರುಪಾಯಿಯಂತೆ ಮಾರಾಟ ಮಾಡುತ್ತೇನೆ. ವಾರ್ಷಿಕ ಎರಡು ಲಕ್ಷ ರೂಪಾಯಿಯ ಸಗಣಿ ಮಾರುತ್ತೇನೆ.
ನಾನು ಜಮ್ಮ ಕೊಡವ ಮಾಪಿಳ್ಳೆ ಆಗಿದ್ದರೂ ಹಸುಗಳಿಗೆ ಅಮ್ಮಣಿ, ಲಕ್ಷೀ, ಕುಳ್ಳಿ, ಪಾರು, ಗೌರಿ, ಮೋಟಚಿ ಎಂದು ಹೆಸರಿಟ್ಟಿರುವೆ. ಮೂಕ ಪ್ರಾಣಿಗಳಿಗೆ ಇರುವ ಪ್ರೀತಿ ನನ್ನ ಒಡಹುಟಿದವರಿಗೆ ಇರಲಿಲ್ಲಾ ಎಂದು ದುಖಃ ಸಹಿಸಿಕೂಳುತ್ತಾರೆ. ಇಂದು ನೆಮ್ಮದಿಯಿಂದ ಇರಲು ಎಲ್ಲವು ಇದೆ. ಕಾರು ಒಡಿಸಲು ಬರುವುದಿಲ್ಲಾ. ಡೈವರ್ ಇದ್ದಾನೆ. ಸ್ಕೂಟರ್ ಓಡಿಸುತೇನೆ. ನನಗೆ ಎರಡು ಗಂಡು ಮಕ್ಕಳು. ಇಬ್ಬರಿಗು ಮದುವೆಯಾಗಿದೆ. ಒಬ್ಬ ಕೇರಳದಲ್ಲಿ ಫಿಲಂ ಸಂಸ್ಥೆಯಲ್ಲಿ ಮತ್ತೂಬ ವೀರಾಜಪೇಟೆಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದಾನೆ ಎಂದು ತಮ್ಮ ಸಾಹಸಮಾಯ ಉದ್ಯಮ ಹಾಗು ಸಂಸಾರವನ್ನು ಪರಿಚಯಿಸುತ್ತಾರೆ.

ವೀರಾಜಪೇಟೆ ವ್ಯಾಪ್ತಿಯಲ್ಲಿ ಹಾಲಿನ ಸಹಕಾರ ಸಂಘಗಳಿಲ್ಲದೆ ಸಾಕಷ್ಟು ತೊಂದರೆ ಇದೆ. ಹಲವಾರು ರೈತರು ಹಾಲು ಮಾರಾಟ ಮಾಡಲು ಸಾದ್ಯವಾಗದೆ ಹೈನುಗಾರಿಕೆಯಿಂದ ದೂರ ಉಳಿದಿದ್ದಾರೆ. ನಮ್ಮ ಪೂರ್ವಜರು ಗೋವು ಸಾಕಾಣಿಕೆಗಾಗಿ ಜಿಲ್ಲೆಯಲ್ಲಿ 38 ಸಾವಿರ ಎಕರೆ ಗೋಮಾಳ ಮೀಸಲಿರಿಸಿದ್ದರು.
ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ಹೈನುಗಾರಿಕೆ ಉದ್ಯಮ ಚೇತರಿಕೆಯಾಗಿದೆ. ಬ್ಯಾಂಕುಗಳು ರೂ.2.75 ಕೋಟಿ ಸಾಲ ಸೌಲಭ್ಯ ನೀಡಿದೆ. ಓರ್ವ ಕೃಷಿಕನಿಗೆ ಎರಡು ಹಸು ಕೊಳ್ಳಲು ರೂ.1.50 ಲಕ್ಷ ಸಾಲ ನೀಡುವುದರೊಂದಿಗೆ ಶೇ.25 ಸಬ್ಸಿಡಿ ಸೌಲಭ್ಯ ಇದೆ. 10 ರಾಸು ಸಾಕುವ ಮತ್ತು ಕೊಟ್ಟಿಗೆ ನಿರ್ಮಾಣಕ್ಕೆ ರೂ.7 ಲಕ್ಷ ಸಾಲ ಸಿಗುತ್ತದೆ. ಕೊಡಗು ಜಿಲ್ಲೆಯಲ್ಲಿ ಪ್ರತಿನಿತ್ಯ 6 ಸಾವಿರ ಲೀಟರ್ ಹಾಲು ಮತ್ತು ಹಾಲಿನ ಉತ್ಪನ್ನ ಮಾರಾಟವಾಗುತ್ತಿದೆ. ಕರ್ನಾಟಕ ರಾಜ್ಯದ ಹಳ್ಳಿಗಳಲ್ಲಿ ಇಂದು ಕೆ. ಎಂ .ಎಫ್ ನಡೆಸುವ 22 ಸಾವಿರ ಡೈರಿ ವ್ಯವಸ್ಥೆಯಿದೆ. 16,522 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತವೆ. ವಿಶೇಷವೆಂದರೆ 4494 ಸೊಸೈಟಿಗಳನ್ನು ಮಹಿಳೆಯರೇ ನಡೆಸುತ್ತಿದಾರೆ.

ರಾಜ್ಯವು 80 ಲಕ್ಷ ಲೀಟರ್ ನೊಂದಿಗೆ ದೇಶದಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಭಾರತದ ಎರಡನೇ ಪ್ರಧಾನಿ ಮಂತ್ರಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಕ್ಷೀರ ಉತ್ಪಾದನೆಗೆ ಉತ್ತೇಜನ ನೀಡಿ ನ್ಯಾಷನಲ್ ಡೈರಿ ಡೆವಲಪ್ ಮೆಂಟ್ ಬೋರ್ಡ್ ಸ್ಥಾಪಿಸಿ ಕ್ಷೀರ ಬ್ರಹ್ಮ ವರ್ಗೀಸ್ ಕುರಿಯನ್ ರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ಭಾರತದಲ್ಲಿ ಕ್ಷೀರ ಕ್ರಾಂತಿ ಆಯಿತು.
ಸಂಶೋಧನೆಯಂತೆ ಆರೋಗ್ಯ ಕಾಪಾಡಲು ಆಗತ್ಯವಿರುವ ‘ಎ2’ ಎನ್ನುವ ಅಂಶ ಕೇವಲ ದೇಸಿ ಹಸು ಹಾಗೂ ಎಮ್ಮೆಯ ಹಾಲಿನಲ್ಲಿ ಸಿಗುತ್ತದೆ. ಹೈನುಗಾರಿಕೆ ಇಂದು ಉದ್ಯಮವಾಗಿ ಬೆಳೆದು ರೈತರ ಪಾಲಿನ ಕಾಮಧೇನುವಾಗಿದೆ.
ಒಂದು ಅಂದಾಜಿನಂತೆ ದೇಶದಲ್ಲಿ ಎರಡು ಕೋಟಿ ಜನರು ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಹೈನು ಉದ್ಯಮದಿಂದ ಬದುಕು ಸಾಗಿಸುತಿದ್ದಾರೆ.
.