ಇದು ಸ್ಟ್ಯಾಂಡ್ ಅಪ್ ಕಾಮಿಡಿ ಯುಗ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವೈಫ್ಯಲ್ಯ, ಬಲಪಂಥೀಯರ ಮೂಲಭೂತವಾದ, ಪ್ರಚಲಿತ ವಿವಾದಗಳು, ಜಾತಿ ಪದ್ಧತಿ, ನೈತಿಕ ಪೋಲಿಸ್ ಗಿರಿ, ಕ್ರಿಮಿನಲ್ ಗೋ ರಕ್ಷಕರ ಅಟ್ಟಹಾಸದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಲು ಈ ಸ್ಟ್ಯಾಂಡ್ ಅಪ್ ಕಾಮಿಡಿ ಶೋಗಳೇ ಕಾರಣ ಎನ್ನಬಹುದು. ಆರ್ಎಸ್ಎಸ್, ವಿಎಚ್ಪಿ, ಶ್ರೀರಾಮ ಸೇನೆ ಮತ್ತಲವು ಸೋ ಕಾಲ್ಡ್ ಹಿಂದೂಪರ ಸಂಘಟನೆಗಳು ಅಮಾಯಕರನ್ನು ಹೇಗೆ ಬಳಸಿಕೊಳ್ಳುತ್ತಿವೆ ಎನ್ನುವುದರ ಕುರಿತು ಜನಸಾಮಾನ್ಯರಿಗೆ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಸೇರಿದಂತೆ ಹಲವರು ತಮ್ಮ ಜನಪ್ರಿಯ ಹಾಸ್ಯದ ಮೂಲಕವೇ ಅರ್ಥ ಮಾಡಿಸುವಲ್ಲಿ ಸಫಲರಾಗಿದ್ದಾರೆ. ಸರ್ಕಾರ ಯಾರಪ್ಪನ ಮನೆಯ ಸ್ವತ್ತೂ ಅಲ್ಲ. ನಾವು ಸರ್ಕಾರವನ್ನು ಎಷ್ಟು ಬೇಕಾದ್ರೂ ಪ್ರಶ್ನಿಸಬಹುದು ಎಂದು ಜನರಲ್ಲಿ ಧೈರ್ಯ ತುಂಬುತ್ತಿದ್ದಾರೆ. ಇಂತವರನ್ನು ಈಗ ಬಿಜೆಪಿ ಟಾರ್ಗೆಟ್ ಮಾಡುತ್ತಿದೆ.
ಹೌದು, ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಬೆನ್ನಲ್ಲೀಗ ಮುನಾವರ್ ಫಾರೂಕಿ ಅವರನ್ನು ಬಿಜೆಪಿಯವರು ಟಾರ್ಗೆಟ್ ಮಾಡಿದ್ದಾರೆ. ಆದ್ದರಿಂದಲೇ ಮುನಾವರ್ ಫಾರೂಕಿ ವಿರುದ್ಧ ಹಿಂದೂ ದೇವತೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಅವಹೇಳನಕಾರಿ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಜೈಲಿಗೆ ಕಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಗುಜರಾತ್ ಮೂಲದ ಮುನಾವರ್ ಫಾರೂಕಿ ಮಧ್ಯಪ್ರದೇಶದ ಇಂದೋರ್ನಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿ ಶೋ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಫಾರೂಕಿ, ಗೋಧ್ರಾ ಪ್ರಕರಣದ ವಿಚಾರದಲ್ಲಿ ಗೃಹ ಸಚಿವ ಅಮಿತ್ ಶಾರ ಪಾತ್ರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆದರೀಗ, ಈ ವಿಚಾರದ ಜತೆಗೆ ಹಿಂದೂ ದೇವತೆಗಳು, ದೇವರುಗಳ ಬಗ್ಗೆ ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಿ ಮುನಾವರ್ ಫಾರೂಕಿ ವಿರುದ್ಧ ಬಿಜೆಪಿ ಶಾಸಕನ ಪುತ್ರ ಏಕಲವ್ಯ ಸಿಂಗ್ ಗೌರ್ ದೂರು ನೀಡಿದ್ದರು. ಇವರ ವಿರುದ್ಧ ಐಪಿಸಿ ಸೆಕ್ಷನ್ 295-ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ), 298, 269 , 188 ಮತ್ತು 34 ಈ ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಗೌರ್ ದೂರಿನ ಅನ್ವಯ ಕ್ರಮ ಕೈಗೊಂಡಿರುವ ಪೊಲೀಸರು ಮುನಾವರ್ ಫಾರೂಕಿ ಸೇರಿದಂತೆ 5 ಮಂದಿಯನ್ನು ಬಂಧಿಸಿದ್ದಾರೆ. ಮುನಾವರ್ ಫಾರೂಕಿ, ಎಡ್ವಿನ್ ಆಂಟೋನಿ, ಪ್ರಖರ್ ವ್ಯಾಸ್, ಪ್ರಿಯಂ ವ್ಯಾಸ್, ನಳಿನ್ ಯಾದವ್ ಅವರು ಬಂಧಿತರು.
ಬಿಜೆಪಿಯನ್ನು ಬೈಯ್ಯುವ ಹಂತದಲ್ಲಿ ಗೋಮಾತೆಯ ಚಾರಿತ್ರ್ಯ ವಧೆ ಮಾಡಲಾಗಿದೆ. ಸುಖಾಸುಮ್ಮನೇ ಶ್ರೀರಾಮನನ್ನು ಎಳೆದು ತರಲಾಗಿದೆ. ಎಲ್ಲಾ ಹಿಂದೂ ದೇವತೆಗಳ ಸಾದ್ಯಂತ ಅವಹೇಳನವಾಗಿದೆ. ಇದನ್ನು ಜನ ಹಾಸ್ಯ ಎಂದು ಸ್ವೀಕರಿಸಿ ನಕ್ಕು ಹಗುರಾವಾಗಿ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ಶಾಸಕನ ಪುತ್ರ ಏಕಲವ್ಯ ಸಿಂಗ್ ಗೌರ್ ನೀಡಿದ ದೂರಿನಲ್ಲಿ ಆರೋಪಿಸಿದ್ದರು.
Also Read: ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕುನಾಲ್ ಕಮ್ರಾ ಬೆಂಬಲಕ್ಕೆ ನಿಂತ ಕಣ್ಣನ್ ಗೋಪಿನಾಥನ್
ಈಗ ಪ್ರಕರಣದ ವಿಚಾರಣೆ ನಡೆಸಿದ ಇಂದೋರ್ ನಗರದ ಇನ್ಸ್ಪೆಕ್ಟರ್ ಕಮಲೇಶ್ ಶರ್ಮಾ, ಹಿಂದೂ ದೇವತೆಗಳನ್ನು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಅವಮಾನಿಸಿದ್ದಾರೆ ಎಂದು ಹೇಳುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಗೌರ್ ಆರೋಪಗಳಿಗೆ ತೆರೆ ಎಳೆದಿದ್ದಾರೆ. ಫಾರೂಕಿ ತನ್ನ ಸ್ವಂತ ವಿಷಯಗಳ ಬಗ್ಗೆ ಹೇಳಿದ್ದಾರೆಯೇ ವಿನಃ ಹಿಂದೂ ಧರ್ಮದ ಭಾವನೆಗಳನ್ನು ಅವಹೇಳನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ ಮುನಾವರ್ ಫಾರೂಕಿ ಬಂಧನಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುನಾಲ್ ಕಮ್ರಾ ಸೇರಿದಂತೆ ಫಾರೂಕಿ ಬೆನ್ನಿಗೆ ನಿಲ್ಲುವುದಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಅದಾಗ್ಯೂ, ಮುನಾವರ್ ಫಾರೂಕಿಗೆ ಮಧ್ಯಪ್ರದೇಶದ ಇಂದೋರ್ನ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಯತೀಂದ್ರ ಕುಮಾರ್ ಗುರು ಅವರು ಮುನವಾರ್ ಫಾರೂಕಿ ಮತ್ತು ನಳಿನ್ ಯಾದವ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.