• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ರಾಜಧಾನಿ ದೆಹಲಿ ‘ಗ್ಯಾಸ್ ಛೇಂಬರ್’ ಆದದ್ದು ಹೇಗೆ?

by
November 4, 2019
in ದೇಶ
0
ರಾಜಧಾನಿ ದೆಹಲಿ ‘ಗ್ಯಾಸ್ ಛೇಂಬರ್’ ಆದದ್ದು ಹೇಗೆ?
Share on WhatsAppShare on FacebookShare on Telegram

ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳ ವಾಯುಮಾಲಿನ್ಯ ಹೇಳತೀರದಷ್ಟು ಬಿಗಡಾಯಿಸಿದೆ. ಮಾಲಿನ್ಯದ ತುರ್ತುಪರಿಸ್ಥಿತಿ ಎಂಬ ಘೋಷಣೆಯ ಸ್ಥಿತಿಯನ್ನೂ ಮೀರಿ ಬಹಳ ಮುಂದೆ ಹೋಗಿದೆ. ಹಲವೆಡೆಗಳಲ್ಲಿ ಗಾಳಿಯ ಗುಣಮಟ್ಟದ ಸೂಚ್ಯಂಕ 999ನ್ನು ಮುಟ್ಟಿತ್ತು. ಈ ಸೂಚ್ಯಂಕ 200ರ ಒಳಗಿದ್ದರೆ ಅದನ್ನು ಸುರಕ್ಷಿತ ಎನ್ನಲಾಗುತ್ತದೆ.

ADVERTISEMENT

ವಾರದ ಹಿಂದೆ ದೀಪಾವಳಿಯ ಮರುದಿನವೇ ದೆಹಲಿಯನ್ನು ‘ಗ್ಯಾಸ್ ಛೇಂಬರ್’ ಎಂದು ಬಣ್ಣಿಸಿ ದೆಹಲಿಯ ಕೆಲ ಪತ್ರಿಕೆಗಳು ಉತ್ಪ್ರೇಕ್ಷೆ ಮಾಡಿ ವರದಿ ಮಾಡಿದ್ದವು. ಆದರೆ ‘ಗ್ಯಾಸ್ ಛೇಂಬರ್’ ಗೆ ಸಮೀಪದ ಅನುಭವ ಇದೀಗ ಆಗತೊಡಗಿದೆ. ಇಡೀ ದೆಹಲಿ ದಟ್ಟ ಹೊಗೆಯ ಮಂದ ಪರದೆಯ ಹಿಂದೆ ಅಡಗಿಕೊಂಡಂತೆ ಮಂಕಾಗಿ ಹೋಗಿದೆ. ನಿಚ್ಚಳ ನೋಟ ಇಲ್ಲದ ಕಾರಣ ಭಾನುವಾರ ಬೆಳಗಿನಿಂದ ರಾತ್ರಿಯವರೆಗೆ 37 ವಿಮಾನಗಳ ಹಾರಾಟ ರದ್ದಾಗಿತ್ತು. 550ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವಿಳಂಬ ಸಂಭವಿಸಿತ್ತು. ಮನೆ ಬಿಟ್ಟು ಹೊರಬರಲು ಜನ ಹೆದರತೊಡಗಿದ್ದಾರೆ. ಹಾಗೆಂದು ಮನೆಯ ಒಳಗೆ ಒಳ್ಳೆಯ ಗಾಳಿ ಇದೆಯೆಂದು ಅರ್ಥವಲ್ಲ. ಹಣ ಉಳ್ಳವರು ಮನೆಯೊಳಗಿನ ಗಾಳಿಯನ್ನು ಸೋಸಿ ಸ್ವಚ್ಛ ಮಾಡುವ ಯಂತ್ರಗಳನ್ನು ಮುಗಿ ಬಿದ್ದು ಖರೀದಿಸತೊಡಗಿದ್ದಾರೆ. ಮಕ್ಕಳು ಮತ್ತು ವಯಸ್ಸಾದವರು ಈ ಮಾಲಿನ್ಯದ ನೇರ ಬಲಿಪಶುಗಳು. ಶಾಲೆಗಳಿಗೆ ವಾರದೊಪ್ಪತ್ತು ರಜೆ ನೀಡಲಾಗಿದೆ. ಉಸಿರಾಟದ ತೊಂದರೆ, ಕಣ್ಣುರಿ ಮುಂತಾದ ತೊಂದರೆಗಳಿಂದ ಬಳಲುತ್ತಿರುವವರಿಂದ ಆಸ್ಪತ್ರೆಗಳು ತುಂಬಿ ಹೋಗುತ್ತಿವೆ.

ಈ ನಡುವೆ ಕೇಂದ್ರ ಸರ್ಕಾರ ಮತ್ತು ದೆಹಲಿ ರಾಜ್ಯ ಸರ್ಕಾರಗಳು ಈ ದುಸ್ಥಿತಿಗೆ ಪರಸ್ಪರರ ದೂಷಣೆಯಲ್ಲಿ ತೊಡಗಿವೆ. ಕೇಂದ್ರ ಸಚಿವ ಜಾವಡೇಕರ್ ಅವರು ಮಾಲಿನ್ಯದಿಂದ ತಪ್ಪಿಸಿಕೊಳ್ಳಲು ಮನೆಯೊಳಗೆ ಉಳಿದು ಶಾಸ್ತ್ರೀಯ ಸಂಗೀತ ಆಲಿಸಬೇಕು ಮತ್ತು ಗಜ್ಜರಿಯನ್ನು (ಕ್ಯಾರೆಟ್) ಸೇವಿಸಬೇಕೆಂದು ಸಲಹೆ ಮಾಡಿದ್ದಾರೆ. ಮಾಲಿನ್ಯ ತಗ್ಗಿಸಲು ಇಂದ್ರದೇವನನ್ನು ಒಲಿಸಿ ಮಳೆ ಕರೆಯಿಸಬೇಕು. ಇದಕ್ಕಾಗಿ ಯಜ್ಞ ಯಾಗಾದಿಗಳನ್ನು ಮಾಡಬೇಕೆಂದು ಉತ್ತರಪ್ರದೇಶದ ಸಚಿವ ಮಹಾಶಯ ಸುನಿಲ್ ಭರಾಲ ಸಲಹೆ ನೀಡಿದ್ದಾರೆ.

ಮಾಲಿನ್ಯವನ್ನು ತಗ್ಗಿಸಲು ದೆಹಲಿಯ ಆಮ್ ಆದ್ಮಿ ಪಾರ್ಟಿ ಸರ್ಕಾರ ತನ್ನ ಕೈಲಾದ ಪ್ರಯತ್ನಗಳನ್ನು ಮಾಡುತ್ತಿದೆ. ದೀಪಾವಳಿ ಪಟಾಕಿ ಸುಡುವುದರಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ದೆಹಲಿಯ ಕನಾಟ್ ಪ್ಲೇಸ್ ನಲ್ಲಿ ಮೂರು ದಿನಗಳ ಕಾಲ ಝಗಮಗಿಸುವ ಲೇಸರ್ ಶೋ ಏರ್ಪಡಿಸಿತು. ವಾಹನಗಳು ಉಗುಳುವ ಹೊಗೆಯ ಮಾಲಿನ್ಯ ತಗ್ಗಿಸಲು ‘ಸರಿ- ಬೆಸ’ ನಿರ್ಬಂಧಗಳನ್ನು ಜಾರಿಗೆ ತಂದಿದೆ. ಸರಿ ಸಂಖ್ಯೆಯ ನೋಂದಣಿ ಸಂಖ್ಯೆಯುಳ್ಳ ವಾಹನಗಳು ಒಂದು ದಿನ ಓಡಿದರೆ, ಬೆಸ ಸಂಖ್ಯೆಯ ನೋಂದಣಿ ಸಂಖ್ಯೆಯ ವಾಹನಗಳು ಮತ್ತೊಂದು ದಿನ ಸಂಚರಿಸಲಿವೆ. ರಸ್ತೆಯಲ್ಲಿ ಚಲಿಸುವ ವಾಹನಗಳ ಸಂಖ್ಯೆಯನ್ನು ತಗ್ಗಿಸಲು ಈ ಹಿಂದೆಯೂ ಆಪ್ ಸರ್ಕಾರ ಈ ನಿರ್ಬಂಧಗಳನ್ನು ಜಾರಿಗೊಳಿಸಿತ್ತು. ನೀರು ಸಿಂಪಡಿಸುವ ಕ್ರಮ ಜಾರಿಯಲ್ಲಿದ್ದರೂ ಅದರಿಂದ ಹೆಚ್ಚಿನ ಪ್ರಯೋಜನವೇನೂ ಆಗದು. ದೆಹಲಿಯ ಶಾಲಾ ಮಕ್ಕಳಿಗೆ ಐದು ಲಕ್ಷ ‘ಎನ್-95 ಮಾಸ್ಕ್’ ಗಳನ್ನು ವಿತರಿಸತೊಡಗಿದೆ.

ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶದ ವಾಯುಮಾಲಿನ್ಯಕ್ಕೆ ಪಂಜಾಬ್- ಹರಿಯಾಣದಲ್ಲಿ ಭತ್ತದ ಕೂಳೆಯನ್ನು ಸುಡುವುದು ಮುಖ್ಯ ಕಾರಣ.. ಶೇ.44ರಷ್ಟು ಮಾಲಿನ್ಯ ಈ ಪಂಜಾಬಿನಲ್ಲಿ ಕೂಳೆ ಸುಡುವಿಕೆಯಿಂದ ಮತ್ತು ಶೇ.17ರಷ್ಟು ಮಾಲಿನ್ಯ ಹರಿಯಾಣದಲ್ಲಿ ಕೂಳೆ ಸುಡುವಿಕೆಯಿಂದಲೇ ಉಂಟಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ. ಉಳಿದ ಮಾಲಿನ್ಯ ಭಾರೀ ಪ್ರಮಾಣದಲ್ಲಿ ಜರುಗುವ ಕಟ್ಟಡ ನಿರ್ಮಾಣ, ಮತ್ತು ಕಟ್ಟಡಗಳನ್ನು ಒಡೆದು ಕೆಡವುವ ಚಟುವಟಿಕೆ, ಬಯಲುಗಳಲ್ಲೇ ಕಸದ ಹೇರುವಿಕೆ, ಮಣ್ಣಿನ ರಸ್ತೆಗಳು, ರಸ್ತೆ ಧೂಳು, ಕಸದ ಸುಡುವಿಕೆ ಹಾಗೂ ತೀವ್ರ ಮೋಟಾರು ವಾಹನ ಸಂಚಾರ ದಟ್ಟಣೆಯಿಂದ ಉಂಟಾಗುತ್ತದೆ. ಪಂಜಾಬ್- ಹರಿಯಾಣದಲ್ಲಿ ಭತ್ತದ ಹುಲ್ಲು ಸುಡುವಿಕೆ ದೀಪಾವಳಿಯ ಹೊಸ್ತಿಲಲ್ಲಿ ನಡೆಯುತ್ತದೆ. ದೀಪಾವಳಿಯಲ್ಲಿ ಮತ್ತು ದೀಪಾವಳಿ ಮುಗಿದ ತಕ್ಷಣವೇ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ವಾಸಿಸುವ ಬಿಹಾರಿ ವಲಸಿಗರು ಆಚರಿಸುವ ನಾಲ್ಕು ದಿನಗಳ ಅವಧಿಯ ಛಟ್ ಪೂಜೆಯಲ್ಲೂ (ಸೂರ್ಯನ ಅರಾಧನೆ) ಪಟಾಕಿಗಳನ್ನು ಸುಡಲಾಗುತ್ತದೆ.

ದೆಹಲಿಯಲ್ಲಿ ಸಂಗ್ರಹಿಸಲಾಗುವ ಟನ್ನುಗಟ್ಟಲೆ ಎಲೆಕ್ಟ್ರಾನಿಕ್ ಕಸವನ್ನು ಘಾಜಿಯಾಬಾದ್ ನ ಲೋಣಿಯ ಕೈಗಾರಿಕೆ ಪ್ರದೇಶದಲ್ಲಿ ಆ್ಯಸಿಡ್ ತುಂಬಿದ ಡ್ರಮ್ಮುಗಳಲ್ಲಿ ಮುಳುಗಿಸಿ ತೆಗೆದು ಗುಂಡಿ ತೋಡಿದ ಭಟ್ಟಿಗಳಲ್ಲಿ ಸುಡಲಾಗುತ್ತದೆ. ಆನಂತರ ಉಳಿಯುವ ಲೋಹವನ್ನು ಮಾರಾಟ ಮಾಡಲಾಗುತ್ತದೆ. ರಾತ್ರಿಯ ವೇಳೆ ನಡೆಯುವ ಈ ಅಕ್ರಮ ದಂಧೆ ವಾಯು ಮಾಲಿನ್ಯಕ್ಕೆ ತನ್ನದೇ ಕೊಡುಗೆ ನೀಡುತ್ತಿದೆ. ಇದೇ ಅವಧಿಯಲ್ಲಿ ಗಾಳಿಯ ಚಲನೆ ಮಂದವಾಗುತ್ತದೆ. ಹೀಗಾಗಿ ಎಲ್ಲ ಮಾಲಿನ್ಯವೂ ಗಾಳಿಯನ್ನು ಸೇರಿ ದಟ್ಟೈಸಿ ತೂಗುತ್ತದೆ. ಚೆದರಿಸುವ ಮಾರುತಗಳು ಬೀಸದಿರುವ ಕಾರಣ ಅಪಾಯಕಾರಿ ಅನಿಲಗಳು, ರಾಸಾಯನಿಕಗಳು ತಿಂಗಳುಗಟ್ಟಲೆ ಗಾಳಿಯಲ್ಲಿ ತೂಗುತ್ತವೆ.

ಕಟಾವಿನ ನಂತರ ಹೊಲ ಗದ್ದೆಗಳಲ್ಲಿ ಉಳಿಯುವ ಭತ್ತದ ಹುಲ್ಲನ್ನು ರೈತರು ನಿವಾರಿಸಿಕೊಳ್ಳುವ ಏಕೈಕ ಅಗ್ಗದ ಉಪಾಯ ಅವುಗಳಿಗೆ ಬೆಂಕಿ ಇಡುವುದು.

ಪಂಜಾಬಿನ 29 ಲಕ್ಷ ಹೆಕ್ಟೇರುಗಳಲ್ಲಿ ಭತ್ತ ಬೆಳೆಯಲಾಗುತ್ತದೆ. ಕಟಾವಿನ ನಂತರ 2.2 ಕೋಟಿ ಟನ್ನುಗಳಷ್ಟು ಬೃಹತ್ ಪ್ರಮಾಣದ ಹುಲ್ಲು ಉಳಿಯುತ್ತದೆ. ನೆರೆಯ ಹರಿಯಾಣದಲ್ಲಿ ಭತ್ತ ಬೆಳೆಯಲಾಗುವ ಪ್ರದೇಶದ ವಿಸ್ತೀರ್ಣ 13 ಲಕ್ಷ ಹೆಕ್ಟೇರುಗಳು.

ಈ ಹುಲ್ಲಿಗೆ ಬೆಂಕಿ ಇಡದಂತೆ ನಿರ್ವಹಿಸಲು ಯಂತ್ರಗಳ ಖರೀದಿಗೆಂದು ರೈತರಿಗೆ ಸಬ್ಸಿಡಿ ನೀಡುತ್ತಿರುವುದಾಗಿ ಎರಡೂ ರಾಜ್ಯಗಳ ಸರ್ಕಾರಗಳು ಹೇಳಿವೆ. ಹುಲ್ಲನ್ನು ಕಟಾವು ಮಾಡುವ ಜೊತೆ ಜೊತೆಗೆ ಗೋಧಿಯನ್ನು ಬಿತ್ತುವ ಹ್ಯಾಪಿ ಸೀಡರ್ ಉಪಕರಣಗಳನ್ನೂ ಈ ಯಂತ್ರಗಳು ಹೊಂದಿರುತ್ತವೆ. ಆದರೆ ಬಿತ್ತುವ ಉಪಕರಣಗಳನ್ನು ಎಲ್ಲ ಸಾಧಾರಣ ಟ್ರ್ಯಾಕ್ಟರುಗಳೂ ಹೊರಲು ಬರುವುದಿಲ್ಲ. ಅದಕ್ಕೆ ಹೆಚ್ಚು ಎತ್ತರದ ಉದ್ದ ಟ್ರ್ಯಾಕ್ಟರೇ ಆಗಬೇಕು. ಈ ಯಂತ್ರಗಳ ಬೆಲೆ ತಲಾ 55 ಸಾವಿರ ರುಪಾಯಿಗಳಿಂದ 2.7 ಲಕ್ಷ ರುಪಾಯಿಗಳು. ಅದೂ ಸಬ್ಸಿಡಿಯನ್ನು ಕಳೆದ ನಂತರ. ಸಣ್ಣಪುಟ್ಟ ರೈತರ ಪಾಲಿಗಂತೂ ಈ ಯಂತ್ರಗಳು ಗಗನ ಕುಸುಮವೇ ಸರಿ. ಡೀಸೆಲ್ ಖರ್ಚು ಸೇರಿದಂತೆ ಈ ಯಂತ್ರಗಳ ಬಳಕೆಯ ವೆಚ್ಚ ಎಕರೆಗೆ 2,500 ರಿಂದ 3000 ರುಪಾಯಿಗಳು. ದಿನಕ್ಕೆ ಸತತ ಒಂಬತ್ತು ತಾಸು ಈ ಯಂತ್ರ ಬಳಕೆಯಾದರೂ ಏಳು ಎಕರೆ ಪ್ರದೇಶದ ಹುಲ್ಲನ್ನು ಮಾತ್ರವೇ ನಿರ್ವಹಿಸಬಲ್ಲದು.

ರೈತರು ಗುಂಪು ರಚಿಸಿಕೊಂಡು ಯಂತ್ರ ಖರೀದಿಸುವುದೂ ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ಯಾಕೆಂದರೆ ಮುಂದಿನ ಬಿತ್ತನೆಯ ಒಳಗಾಗಿ ಭತ್ತದ ಹುಲ್ಲನ್ನು ಯಂತ್ರಗಳ ನೆರವಿನಿಂದ ನಿರ್ವಹಿಸುವುದು ಸಾಧ್ಯವೇ ಇಲ್ಲ. ಭತ್ತದ ಕಟಾವು ಮತ್ತು ಅಲ್ಪಾವಧಿ ತಳಿಗಳ ಗೋಧಿ ಬಿತ್ತನೆಯ ನಡುವಿನ ಅಂತರ ಕೇವಲ 10 ದಿನಗಳು. ದೀರ್ಘಾವಧಿ ತಳಿಗಳ ಬಿತ್ತನೆಗೆ ಒಂದು ತಿಂಗಳ ತನಕ ಕಾಲಾವಕಾಶ ಇರುತ್ತದೆ. ಸಾಮಾನ್ಯವಾಗಿ ಅಕ್ಟೋಬರ್ ಅಂತ್ಯದ ವೇಳೆಗೆ ಗೋಧಿಯ ಬಿತ್ತನೆ ಆರಂಭ ಆಗುತ್ತದೆ. ಬಿತ್ತನೆ ತಡವಾದರೆ ಇಳುವರಿ ತಗ್ಗುತ್ತದೆ.

ಈ ಯಂತ್ರಗಳನ್ನು ಹೊಂದಿರುವ ಸಹಕಾರಿ ಸಂಘಗಳು ಉಂಟು. ಆದರೆ ದೊಡ್ಡ ರೈತರಿಗೆ ದೊರೆಯುವ ಈ ಯಂತ್ರಗಳು ಸಣ್ಣ ಹಿಡುವಳಿದಾರರಿಗೆ ಎಟುಕುವುದೇ ಇಲ್ಲ. ಎಷ್ಟು ಕಾದರೂ ಅವರ ಸರದಿ ಬರುವುದೇ ಇಲ್ಲ.

ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆ (ಕ್ವಿಂಟಲ್ ಭತ್ತಕ್ಕೆ 1,835 ರುಪಾಯಿ) ರೈತರಿಗೆ ಸಿಗುತ್ತಲೇ ಇಲ್ಲ. ಅದಕ್ಕಿಂತ ಕಡಿಮೆ ದರಗಳಿಗೆ ತಮ್ಮ ಉತ್ಪನ್ನವನ್ನು ಮಾರಾಟ ಮಾಡುವುದು ಅವರಿಗೆ ಅನಿವಾರ್ಯವಾಗಿ ಹೋಗಿದೆ. ಉತ್ಪಾದನೆಯಲ್ಲೇ ನಷ್ಟ ಅನುಭವಿಸುತ್ತಿದ್ದಾರೆ. ದಲ್ಲಾಳಿಗಳು ಮತ್ತು ಮಧ್ಯಸ್ಥರು ಒಂದಲ್ಲ ಒಂದು ಸಬೂಬು ಹೇಳಿ ಉತ್ಪನ್ನದಲ್ಲಿ ದೋಷ ಕಂಡು ಹಿಡಿಯುತ್ತಾರೆ. ಹೀಗಾಗಿ ರೈತರಿಗೆ ದೊರೆಯುವುದು ಕ್ವಿಂಟಲ್ ಗೆ 1,300ರಿಂದ 1400ರ ದರ ಮಾತ್ರ. ಕ್ವಿಂಟಲ್ ಗೆ ಸುಮಾರು 400 ರುಪಾಯಿಯಷ್ಟು ನಷ್ಟ ಉಂಟಾಗುತ್ತಿರುವಾಗ ಯಂತ್ರಕ್ಕೆಂದು ವೆಚ್ಚ ಮಾಡಲು ನಮ್ಮಲ್ಲಿ ಹಣವಾದರೂ ಎಲ್ಲಿಂದ ಬರುತ್ತದೆ ಎಂಬುದು ರೈತರ ಅಳಲು.

ಕಟಾವಿಗೆ ಬರಲು 155ರಿಂದ 160 ದಿನಗಳು ಹಿಡಿಯುವ ದೀರ್ಘಾವಧಿ ಭತ್ತದ ತಳಿಗಳ ಬದಲು 120ರಿಂದ 130 ದಿನಗಳಲ್ಲಿ ಕೈಗೆ ಬರುವ ಅಲ್ಪಾವಧಿ ತಳಿಗಳ ಬಿತ್ತನೆಯೇ ಈ ಕೂಳೆ ಸುಡುವ ಸಮಸ್ಯೆಗೆ ಪರಿಹಾರ ಎಂದು ಹರಿಯಾಣದ ಕೆಲ ಅಧಿಕಾರಿಗಳು ಹೇಳುತ್ತಾರೆ. ಅಲ್ಪಾವಧಿ ತಳಿಗಳ ಬಿತ್ತನೆಯಿಂದ ಭತ್ತದ ಕಟಾವಿನ ನಂತರ ಗೋಧಿ ಬಿತ್ತನೆಗೆ ಒಂದು ತಿಂಗಳ ಕಾಲಾವಕಾಶ ಸಿಗುತ್ತದೆ. ಹೀಗಾಗಿ ಬಹುತೇಕ ಎಲ್ಲ ರೈತರಿಗೂ ಸರದಿಯ ಮೇಲೆ ಯಂತ್ರ ಪೂರೈಕೆ ಸಾಧ್ಯ ಎಂಬುದು ಅವರ ಆಶಾವಾದ.

ಚೀನಾದ ರಾಜಧಾನಿ ಬೀಜಿಂಗ್ ಎದುರಿಸುತ್ತಿದ್ದ ಇಂತಹುದೇ ಬಗೆಯ ಮಾಲಿನ್ಯವನ್ನು 2013ರಿಂದ 2017ರ ನಡುವೆ ಶೇ.35ರಷ್ಟು ತಗ್ಗಿಸಲಾಯಿತು. ರಾಜಕೀಯ ಇಚ್ಛಾಶಕ್ತಿ ಇದ್ದಿದ್ದರೆ ದೆಹಲಿ ಮತ್ತು ಸುತ್ತಮುತ್ತಲ ನಗರಗಳ ಈ ಮಾಲಿನ್ಯವನ್ನು ಕೂಡ ವರ್ಷಗಳಷ್ಟು ಹಿಂದೆಯೇ ತಹಬಂದಿಗೆ ತರಬಹುದಿತ್ತು.

Tags: Arvind KejriwalDelhi Air PollutionDelhi GovernmentGas ChamberHappy SeederHaryana stateNarendra ModiPunjab Stateಅರವಿಂದ್ ಕೇಜ್ರಿವಾಲ್ಗ್ಯಾಸ್ ಛೇಂಬರ್ದೆಹಲಿ ವಾಯುಮಾಲಿನ್ಯದೆಹಲಿ ಸರ್ಕಾರನರೇಂದ್ರ ಮೋದಿಪಂಜಾಬ್ ರಾಜ್ಯಹರಿಯಾಣಹ್ಯಾಪಿ ಸೀಡರ್
Previous Post

ಅಪ್ಪ-ಮಗನ ಭಿನ್ನಾಭಿಪ್ರಾಯದಲ್ಲಿ ಜೆಡಿಎಸ್ ಶಾಸಕರು ಬಡವಾದರು!

Next Post

ವಿಲೀನದ ಹೆಸರಲ್ಲಿ ಬ್ಯಾಂಕಿಂಗ್ ಸೇವೆಯನ್ನು ಕುಗ್ಗಿಸುತ್ತಿರುವ ಕೇಂದ್ರ ಸರ್ಕಾರ

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

May 20, 2026
“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

May 19, 2026
Next Post
ವಿಲೀನದ ಹೆಸರಲ್ಲಿ ಬ್ಯಾಂಕಿಂಗ್ ಸೇವೆಯನ್ನು ಕುಗ್ಗಿಸುತ್ತಿರುವ ಕೇಂದ್ರ ಸರ್ಕಾರ

ವಿಲೀನದ ಹೆಸರಲ್ಲಿ ಬ್ಯಾಂಕಿಂಗ್ ಸೇವೆಯನ್ನು ಕುಗ್ಗಿಸುತ್ತಿರುವ ಕೇಂದ್ರ ಸರ್ಕಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada