ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಬೆಂಗಳೂರು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ ಎಂದು ಹೇಳಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
Also Read: ಬೆಂಗಳೂರು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರಬಿಂದು: ತೇಜಸ್ವಿ ಸೂರ್ಯ
“ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಹೆಸರುವಾಸಿಯಾದ ಜಾಗತಿಕ ನಗರವಾದ ಬೆಂಗಳೂರನ್ನು ಭಯೋತ್ಪಾದನೆಯ ಕೇಂದ್ರಬಿಂದುವಾಗಿ ಕರೆದಿರುವುದು ಅತ್ಯಂತ ಖಂಡನೀಯ.ಈಗಾಗಲೇ ಜಿಡಿಪಿ ಬೆಳವಣಿಗೆ ಕುಸಿದಿದೆ ಮತ್ತು ಅಂತಹ ಹೇಳಿಕೆಗಳೊಂದಿಗೆ, ಯಾವ ಹೂಡಿಕೆದಾರರು ಬೆಂಗಳೂರು ಮತ್ತು ಕರ್ನಾಟಕಕ್ಕೆ ಹೂಡಿಕೆ ಹೂಡಲು ಬರುತ್ತಾರೆ?ʼ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಕೂಡಾ ತೇಜಸ್ವಿ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದು, ”ನಮ್ಮ ನಗರ ಅವರಿಗೆ ಎಲ್ಲವನ್ನೂ ನೀಡಿದೆ, ಆದರೆ ಅವರು ತಮ್ಮ ಅಜೆಂಡಾಕ್ಕಾಗಿ ನಮ್ಮ ನಗರದ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. 1.2 ಕೋಟಿ ಜನರನ್ನು ತಪ್ಪಿತಸ್ಥರನ್ನಾಗಿ ಚಿತ್ರಿಸಿದ್ದಾರೆ. ಇಂತಹ ಅವಿವೇಕ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ”. ನನ್ನ ನಗರ ಸುಂದರ, ಕಾಸ್ಮೋಪಾಲಿಟನ್, ವೈವಿಧ್ಯಮಯ, ಐಟಿ/ಬಿಟಿ ಕೇಂದ್ರ, ಸುರಕ್ಷತೆ, ಶಾಂತಿಯುತ ಸಿಲಿಕಾನ್ ಸಿಟಿಯಾಗಿದೆ. ನನ್ನ ಈ ನಗರಕ್ಕೆ ಕಳಂಕ ತರಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಶಾಸಕಿ ಕಿಡಿಕಾರಿದ್ದಾರೆ.
ಬೆಂಗಳೂರನ್ನು ಭಯೋತ್ಪಾದನೆಯ ಕೇಂದ್ರಬಿಂದು ಎಂದು ಕರೆಯಲು ತೇಜಸ್ವಿ ಸೂರ್ಯ ನಿಮಗೆ ಎಷ್ಟು ಧೈರ್ಯ?! ಇದು ಸಂಪೂರ್ಣವಾಗಿ ಪ್ರಜ್ಞಾಶೂನ್ಯವಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಅವರು ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಅವರು ರಾಜೀನಾಮೆ ನೀಡಬೇಕು. ಇದು ಕರ್ನಾಟಕಕ್ಕೆ ದೊಡ್ಡ ಅವಮಾನ. ಶೇಮ್ ಆನ್ ಯು ಎಂದು ಸುರಭಿ ಎಂಬವರು ಟ್ವೀಟ್ ಮಾಡಿದ್ದಾರೆ.
ಇನ್ನು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕೂಡಾ ತೇಜಸ್ವಿ ಹೇಳಿಕೆಯನ್ನು ಖಂಡಿಸಿದ್ದು, ಭಯೋತ್ಪಾದನಾ ಕೇಂದ್ರ ಎಂಬ ಅರ್ಹತೆ ಹೊಂದಲು ಇರುವ ಮಾನದಂಡಗಳೇನು ಎಂದು ಪ್ರಶ್ನಿಸಿದ್ದಾರೆ.
ತೇಜಸ್ವಿ ಹೇಳಿಕೆ ಪ್ರಕಟವಾದ ನಂತರ ತೇಜಸ್ವಿ ಕ್ಷಮೆ ಕೇಳಬೇಕೆಂದು ಸಾಮಾಜಿಕ ಜಾಲತಾಣ ಬಳಕೆದಾರರು #ApologiseTejasvi ಎಂದು ಟ್ರೆಂಡ್ ಶುರು ಮಾಡಿದ್ದಾರೆ.