Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಬಿಜೆಪಿ-ಶಿವಸೇನೆಯ ಜಗಳದಲ್ಲಿ ಉಣ್ಣುವವರು ಜಾಣರಲ್ಲ!

ಬಿಜೆಪಿ-ಶಿವಸೇನೆಯ ಜಗಳದಲ್ಲಿ ಉಣ್ಣುವವರು ಜಾಣರಲ್ಲ!
ಬಿಜೆಪಿ-ಶಿವಸೇನೆಯ ಜಗಳದಲ್ಲಿ ಉಣ್ಣುವವರು ಜಾಣರಲ್ಲ!

November 15, 2019
Share on FacebookShare on Twitter

ಅಕ್ಟೋಬರ್ 24ರಂದು ಹೊರಬಿದ್ದಿದ್ದ ವಿಧಾನಸಭಾ ಚುನಾವಣೆ ಫಲಿತಾಂಶಗಳಲ್ಲಿ ಮಹಾರಾಷ್ಟ್ರದ ಮತದಾರರು ಬಿಜೆಪಿ-ಶಿವಸೇನೆಯ ಚುನಾವಣಾ ಪೂರ್ವ ಮೈತ್ರಿಗೆ ನಿಚ್ಚಳ ಬಹುಮತ ನೀಡಿದ್ದರು.

ಹೆಚ್ಚು ಓದಿದ ಸ್ಟೋರಿಗಳು

ಬಿರುಗಾಳಿಯಾಗಿರುವ ರಾಹುಲ್ ಗಾಂಧಿ ಸುನಾಮಿ ಆಗುಬಲ್ಲರೆ?

ಯಾರಾದರೂ ಒಳಗೆ ಬಂದರೆ ಅಟ್ಟಾಡಿಸಿ ಹೊಡಿರಿ, ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ’ : ಸಚಿವ ಮುನಿರತ್ನ ವಿವಾದಾತ್ಮಕ ಹೇಳಿಕೆ

ನಂದಿನಿ ಮೊಸರು ಪ್ಯಾಕೆಟ್‌ ಮೇಲೆ ‘ದಹಿ’ ಮುದ್ರಣ ಆದೇಶ ಹಿಂಪಡೆದ FSSAI.. ಕನ್ನಡಿಗರು ಟೀಕೆ ಬೆನ್ನಲ್ಲೇ ನಿರ್ಧಾರ..!

ಆದರೆ ಬಿಜೆಪಿ-ಶಿವಸೇನೆ ಮೈತ್ರಿಯಲ್ಲಿ ಚುನಾವಣೆಗೆ ಮುನ್ನವೇ ಬಿರುಕುಗಳಿದ್ದವು. 130-140 ಸ್ಥಾನಗಳನ್ನು ನಿರೀಕ್ಷಿಸಿದ್ದ ಬಿಜೆಪಿ 105ರ ಹೊಸ್ತಿಲಲ್ಲೇ ದಣಿದು ನಿಂತಿತು. ಬಿಜೆಪಿಯಿಂದ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದ ಶಿವಸೇನೆ ಇದೇ ತಕ್ಕ ಸಮಯವೆಂದು ಭಾವಿಸಿ ಎರಗಿತು. ಪ್ರತೀಕಾರಕ್ಕೆ ಮುಂದಾಯಿತು. ಬಾಲ ನಾಯಿಯನ್ನು ಅಲ್ಲಾಡಿಸಲು ಹೊರಟಿತು. 56 ಸೀಟು ಗೆದ್ದ ತಾನು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ 105 ಸೀಟು ಗೆದ್ದ ಬಿಜೆಪಿಯನ್ನು ಜಬರಿಸಿತು. ಬಿಜೆಪಿ ಸೊಪ್ಪು ಹಾಕಲಿಲ್ಲ.

ಪ್ರತಿಷ್ಠೆ- ಪ್ರತೀಕಾರದಲ್ಲಿ ಕುರುಡಾದ ಎರಡೂ ಪಕ್ಷಗಳು ತಮಗೆ ಸಿಕ್ಕಿದ್ದ ನಿಚ್ಚಳ ಜನಾದೇಶವನ್ನು ಸದ್ಯಕ್ಕಾದರೂ ವ್ಯರ್ಥಗೊಳಿಸಿವೆ. ಇಬ್ಬರ ಜಗಳದ ಲಾಭವನ್ನು ಪ್ರತಿಪಕ್ಷಗಳು ಪಡೆಯುವ ವಾಸನೆ ಹೊಡೆಯುತ್ತಿದ್ದಂತೆ ಮೋದಿ-ಅಮಿತ್ ಶಾ ಜೋಡಿ ತಡವಿಲ್ಲದೆ ರಾಷ್ಟ್ರಪತಿ ಆಡಳಿತ ಹೇರಿದೆ. ರಾಜಕೀಯ ನಾಟಕಗಳಿಗೆ ಇತ್ತೀಚಿನ ವರ್ಷಗಳಲ್ಲಿ ಹೆಸರಾಗಿ ಹೋಗಿರುವ ಕರ್ನಾಟಕದ ನೆರೆಯ ರಾಜ್ಯದಲ್ಲಿ ಕೂಡ ಮಹಾನಾಟಕವೊಂದು ಅನಾವರಣಗೊಂಡಿದೆ.

ಈ ನಾಟಕ ಇನ್ನಷ್ಟು ಅಂಕಗಳನ್ನು ಕಂಡು ಕುಸಿಯುವುದೋ ಅಥವಾ ಅದಕ್ಕೆ ಮುನ್ನವೇ ಹೊಸದಾಗಿ ಪುನಃ ಚುನಾವಣೆಗಳಿಗೆ ದಾರಿ ಮಾಡಿಕೊಡುವುದೋ ಎಂಬುದನ್ನು ಮುಂಬರುವ ದಿನಗಳು ತಿಳಿಸಲಿವೆ.

ಕಾಂಗ್ರೆಸ್- ಎನ್.ಸಿ.ಪಿ. ಕೂಡ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ಬಹುಮತದಿಂದ ಭಾರೀ ದೂರವಿರುವ ಕಾಂಗ್ರೆಸ್-ಎನ್.ಸಿ.ಪಿ. ಪ್ರತಿಪಕ್ಷಗಳ ಕೆಲಸ ಮಾಡುವಂತೆ ಜನರು ಆದೇಶಿಸಿರುವುದಾಗಿ ಎನ್.ಸಿ.ಪಿ. ತಲೆಯಾಳು ಶರದ್ ಪವಾರ್ ಹೇಳಿದ್ದುಂಟು. ಆದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ಸರಕಾರ ರಚಿಸುವ ಕುರಿತು ಸೇನೆ-ಎನ್.ಸಿ.ಪಿ. ಹಾಗೂ ಕಾಂಗ್ರೆಸ್ ನಡುವೆ ಮಾತುಕತೆಗಳು ಜರುಗಿವೆ.

ಸೇನೆ-ಎನ್.ಸಿ.ಪಿ.-ಕಾಂಗ್ರೆಸ್ ಸರ್ಕಾರ ರಚಿಸುವುದು ಜನಾದೇಶದ ಸ್ಪಷ್ಟ ಉಲ್ಲಂಘನೆ. ಕಟ್ಟರ್ ವಾದದಲ್ಲಿ ಬಿಜೆಪಿಯೊಂದಿಗೆ ಪೈಪೋಟಿ ನಡೆಸುವಂತಹ ಶಿವಸೇನೆಯೊಂದಿಗೆ ಕಾಂಗ್ರೆಸ್ ಕೈ ಕಲೆಸುವುದು ಸೈದ್ಧಾಂತಿಕವಾಗಿ ಅಸಮರ್ಥನೀಯ. ಪರಮ ಅವಕಾಶವಾದವೇ ಸರಿ. ಜನಾದೇಶದ ಈ ನಿರ್ಲಜ್ಜ ಉಲ್ಲಂಘನೆಯನ್ನು ಮತದಾರರನ್ನು ಕೆರಳಿಸಿದರೆ ಆಶ್ಚರ್ಯವಿಲ್ಲ. ಹೊಸದಾಗಿ ಚುನಾವಣೆಗಳು ನಡೆದಾಗ ಇದರ ಲಾಭವನ್ನು ಬಿಜೆಪಿ ಬಡ್ಡಿ ಸಹಿತ ಪಡೆಯಬಹುದಾದ ಎಲ್ಲ ಸಾಧ್ಯತೆಗಳೂ ಇವೆ.

ಸದಾ ದೂರುವ ಪತ್ನಿಯ ಕುರಿತು ರೋಸಿ ಹೋಗುವ ಪತಿ ಕಡೆಗೊಮ್ಮೆ ಸಹನೆ ಕಳೆದುಕೊಂಡು ಆಕೆಗೆ ಹೇಳುತ್ತಾನೆ- ‘ನನ್ನನ್ನು ನಾನೇ ಕೊಂದುಕೊಂಡರೂ ಪರವಾಗಿಲ್ಲ, ನಿನ್ನನ್ನು ವಿಧವೆಯಾಗಿಸದೆ ಬಿಡುವುದಿಲ್ಲ’. ಸುಲಭಕ್ಕೆ ಒಪ್ಪದೆ ವಾದಿಸುತ್ತಲೇ ಇರುವ ವಾದಪ್ರಿಯ ಮರಾಠೀ ಮಾಣೂಸರ ಒಂದು ವರ್ಗ ಮತ್ತು ಶಿವಸೇನೆಯ ಹಾಲಿ ಪರಿಸ್ಥಿತಿಯಿದು ಎನ್ನುತ್ತಾರೆ ಬಹುಮುಖ್ಯ ಮರಾಠೀ ದೈನಿಕಗಳಲ್ಲಿ ಒಂದೆನಿಸಿದ ‘ಲೋಕಸತ್ತಾ’ದ ಸಂಪಾದಕ ಗಿರೀಶ್ ಕುಬೇರ್.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ತನ್ನ ಹಿರಿಯ ಪಾಲುದಾರ ಬಿಜೆಪಿಯ ಅವಕಾಶವನ್ನು ಶಿವಸೇನೆ ಸದ್ಯಕ್ಕೆ ಕಸಿದುಕೊಂಡಿರಬಹುದು. ಆದರೆ ಪ್ರತಿಯಾಗಿ ತನ್ನ ಅಸ್ತಿತ್ವವನ್ನು ತಾನಾಗಿಯೇ ಸವಾಲಿಗೆ ಒಡ್ಡಿದೆ. 1980 ಮತ್ತು 1990ರ ದಶಕಗಳಲ್ಲಿ ಕಾಂಗ್ರೆಸ್ ವಿರೋಧಿ ಭಾವನೆಯು ಇತರೆ ಥರಾವರಿ ಪಕ್ಷಗಳನ್ನು ಒಟ್ಟುಗೂಡಿಸಿತ್ತು. ಇದೀಗ ಬಿಜೆಪಿ ವಿರೋಧಿ ಭಾವನೆ ಇದೇ ಕೆಲಸ ಮಾಡತೊಡಗಿದೆ. ಇತಿಹಾಸ ಮರುಕಳಿಸತೊಡಗಿದೆ ಎಂದು ಅವರು ಗುರುತಿಸಿದ್ದಾರೆ.

ಶಿವಸೇನೆ ಮತ್ತು ಬಿಜೆಪಿ ಮೂರು ದಶಕಗಳ ಕಾಲ ಪರಸ್ಪರ ನಿಷ್ಠೆ ತೋರಿದವು. ದಣಿದ ಈ ಸಂಬಂಧದ ಬಿರುಕುಗಳು ಕಾಣಿಸಿಕೊಂಡದ್ದು ಇತ್ತೀಚೆಗೆ. ಈ ದಣಿವು ಮತ್ತು ಬಿರುಕಿನ ವಾಸ್ತವವನ್ನು ಗುರುತಿಸಲು ನಿರಾಕರಿಸಿದ ಬಿಜೆಪಿ ಎಲ್ಲವೂ ಸರಿ ಇದೆ ಎಂದು ತಿಪ್ಪೆ ಸಾರಿಸಿತು. ಅಧಿಕಾರದಲ್ಲಿ ಹೆಚ್ಚು ಪಾಲುದಾರಿಕೆಯ ಸೇನೆಯ ಬೇಡಿಕೆಯನ್ನು ನಿರ್ಲಕ್ಷಿಸುತ್ತಲೇ ಬಂದಿತು. ಚುನಾವಣಾ ಫಲಿತಾಂಶಗಳು ಶಕ್ತಿಗುಂದಿದ ಬಿಜೆಪಿಯನ್ನು ಪ್ರತಿಫಲಿಸಿದ್ದವು. ಅಲ್ಲಿಯವರೆಗೆ ಹತಾಶ ಸ್ಥಿತಿ ತಲುಪಿದ್ದ ಸೇನೆ ತನ್ನನ್ನು ಮೂಲೆಗೊತ್ತಿದ್ದ ಬಿಜೆಪಿಯ ವಿರುದ್ಧ ತಿರುಗಿಬಿದ್ದಿತು. ತನಗಿಂತ ಬಹುತೇಕ ದುಪ್ಪಟ್ಟು ಸದಸ್ಯಬಲ ಹೊಂದಿದ್ದ ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನು ತನಗೆ ಬಿಟ್ಟುಕೊಡುವಂತೆ ಸೇನೆ ಹಠ ಹಿಡಿಯಿತು. ಒಪ್ಪದ ಬಿಜೆಪಿ ತಾನು ಸರ್ಕಾರ ರಚಿಸುವುದಿಲ್ಲವೆಂದು ಹಿಂದೆ ಸರಿಯಿತು. ತನ್ನ ಸೈದ್ಧಾಂತಿಕ ವಿರೋಧಿ ಕಾಂಗ್ರೆಸ್ ಮತ್ತು ಎನ್.ಸಿ.ಪಿ. ಬೆಂಬಲವನ್ನು ನೆಚ್ಚಿರುವ ಸೇನೆ ಇದೀಗ ಕತ್ತಿಯಂಚಿನ ಮೇಲೆ ಹೆಜ್ಜೆ ಇರಿಸಬೇಕಾಗಿ ಬಂದಿದೆ. ಮಾತುಕತೆಗಳು ಜರುಗಿದ್ದರೂ, ಈ ಎರಡು ಪಕ್ಷಗಳು ಸೇನೆಯನ್ನು ಬೆಂಬಲಿಸುವುದು ಇನ್ನೂ ನಿಶ್ಚಿತವಿಲ್ಲ.

ಈ ನಡುವೆ ಸೈದ್ಧಾಂತಿಕವಾಗಿ ಅನುಗಾಲದ ಮಿತ್ರಪಕ್ಷ ಶಿವಸೇನೆಯನ್ನು ಪರೋಕ್ಷ ಅವಹೇಳನಗಳಿಗೆ ಗುರಿ ಮಾಡಿ, ಅವಗಣಿಸಿ, ಕೆರಳಿಸಿ ಶತ್ರುವನ್ನಾಗಿ ಮಾಡಿಕೊಂಡ ತನ್ನ ತಪ್ಪನ್ನು ಬಿಜೆಪಿ ಇಂದಲ್ಲ ನಾಳೆ ಅರಿತುಕೊಳ್ಳಲೇ ಬೇಕಿದೆ. ಶತ್ರುಗಳು ಮತ್ತು ಮಿತ್ರರು ಏಕಕಾಲಕ್ಕೆ ತನ್ನನ್ನು ವಿರೋಧಿಸತೊಡಗಿರುವುದು ಯಾಕಾಗಿ ಎಂಬ ಕುರಿತು ಎಷ್ಟು ಶೀಘ್ರವಾಗಿ ಆತ್ಮಾವಲೋಕನ ಮಾಡಿಕೊಂಡರೆ ಅಷ್ಟು ತನಗೇ ಒಳ್ಳೆಯದು.

ಲೋಕಸಭಾ ಚುನಾವಣೆಗಳಲ್ಲಿ ಘನ ಗೆಲುವಿನ ಪ್ರಭಾವಳಿಯ ಹೊಳಪು ಆರೇ ತಿಂಗಳಲ್ಲಿ ಮಾಸುವಂತಾಗಿದೆ. ತಾನು ಅಜೇಯ ಎಂಬುದಾಗಿ ಬೀಗುತ್ತಿದ್ದ ಬಿಜೆಪಿಯ ತಲೆ ಮೇಲೆ ಮೊಟಕಿದಂತಾಗಿದೆ.

ಕಟ್ಟರ್ ವಾದಿ ಹಿಂದುತ್ವದ ಕಾರ್ಯಸೂಚಿಯ ಶಿವಸೇನೆಯ ಜೊತೆಗೆ ಕೈ ಕಲೆಸುವ ಕುರಿತು ಆರಂಭಿಕ ಹಿಂಜರಿಕೆಯಿಂದ ಕಾಂಗ್ರೆಸ್ ಹೊರಬಂದಂತೆ ತೋರುತ್ತಿದೆ. ದೇಶದ ಎರಡನೆಯ ಅತಿದೊಡ್ಡ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸುವ ಈ ಅವಕಾಶವನ್ನು ಬಳಸಿಕೊಳ್ಳಬೇಕೆಂಬ ಶರದ್ ಪವಾರ್ ಒತ್ತಾಸೆ ಮತ್ತು ಮಹಾರಾಷ್ಟ್ರದಲ್ಲಿ ಚುನಾಯಿತರಾಗಿ ಬಂದಿರುವ ತನ್ನ ಶಾಸಕರು ಹೊಸ ಮೈತ್ರಿ ಸರ್ಕಾರ ಕುರಿತು ಒಲವು ಹೊಂದಿರುವುದೂ ಹಿಂಜರಿಕೆ ತೊರೆಯಲು ಕಾರಣವಾಗಿದ್ದೀತು.

ಸೈದ್ಧಾಂತಿಕವಾಗಿ ಮತ್ತು ರಾಜಕೀಯವಾಗಿ ತನ್ನ ಅತ್ಯಂತ ಹಳೆಯ ಮಿತ್ರಪಕ್ಷವಾದ ಶಿವಸೇನೆ ದೂರ ಸರಿದಿರುವ ಬೆಳವಣಿಗೆ ಸದ್ಯದ ಸ್ಥಿತಿಯಲ್ಲಿ ಬಿಜೆಪಿಗೆ ಒದಗಿರುವ ಧಕ್ಕೆಯೇ ಸರಿ. ಮೊದಲ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಪದವಿಯನ್ನು ತನಗೆ ಬಿಟ್ಟುಕೊಡಬೇಕು ಮತ್ತು ಖಾತೆಗಳನ್ನು ಸಮ ಸಮವಾಗಿ ಹಂಚಿಕೊಳ್ಳಬೇಕು ಎಂಬ ಶಿವಸೇನೆಯ ಬೇಡಿಕೆಯನ್ನು ಬಿಜೆಪಿ ಒಪ್ಪದಿದ್ದುದೇ ಉಭಯ ಪಕ್ಷಗಳ ವಿಚ್ಛೇದನಕ್ಕೆ ದಾರಿ ಮಾಡಿದೆ. ಮೇಲ್ನೋಟಕ್ಕೆ ಅಧಿಕಾರ ಹಂಚಿಕೆಯ ತಕರಾರಿನಂತೆ ತೋರಿ ಬಂದರೂ, ಆಳದಲ್ಲಿ ಬಿಜೆಪಿ ತನ್ನನ್ನು ಅವಹೇಳನ ಮಾಡಿ ನಡೆಸಿಕೊಂಡಿರುವ ವೈಖರಿ ಕುರಿತು ಶಿವಸೇನೆಯ ಅಸಮಾಧಾನವಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಮಹಾರಾಷ್ಟ್ರದಲ್ಲಿ ಇತ್ತೀಚಿನವರೆಗೆ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಫಡಣವೀಸ್ ಅವರ ‘ದುರಹಂಕಾರ’ ಮುರಿಯಲೇಬೇಕೆಂಬ ಶಿವಸೇನೆಯ ಸಂಕಲ್ಪವಿದೆ.

ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಮಹಾರಾಷ್ಟ್ರ ವಿಧಾನಸಭೆಯ ಒಟ್ಟು 288 ಸ್ಥಾನಗಳ ಪೈಕಿ 105, ಬಿಜೆಪಿಯ ಪಾಲಾಗಿವೆ. ಶಿವಸೇನೆಗೆ 56, ಎನ್.ಸಿ.ಪಿ.ಗೆ 54, ಕಾಂಗ್ರೆಸ್ ಗೆ 44 ದಕ್ಕಿವೆ. ಸರ್ಕಾರ ರಚಿಸಲು ಸರಳಬಹುಮತಕ್ಕೆ ಬೇಕಿರುವ ಸದಸ್ಯಬಲ 145. ಸೇನೆ-ಎನ್.ಸಿ.ಪಿ.-ಕಾಂಗ್ರೆಸ್ ಒಟ್ಟಾದರೆ ಅವುಗಳ ಸದಸ್ಯ ಬಲ 154.

ಸೇನೆ ಸರ್ಕಾರ ರಚಿಸಿದರೂ ಅದು ಬಹಳ ದಿನ ಬದುಕುವುದಿಲ್ಲ. ಮತ್ತೆ ಚುನಾವಣೆ ನಡೆದರೆ ತನಗೆ ನಿಚ್ಚಳ ಬಹುಮತ ಖಚಿತ ಎಂಬುದಾಗಿ ಬಿಜೆಪಿ ಹೊರಗೆ ಬಡಾಯಿ ಕೊಚ್ಚಿಕೊಂಡರೂ ಒಳಗೊಳಗೆ ನಿರಾಶೆ ಕಾಡಿ ಎದೆಗುಂದಿರುವುದು ಹೌದು. ಶಿವಸೇನೆಯ ಜೊತೆ ಚುನಾವಣಾ ಪೂರ್ವಮೈತ್ರಿ ಮಾಡಿಕೊಂಡು ಸ್ಪರ್ಧಿಸಿ ಗೆದ್ದಿದ್ದ ರಾಜ್ಯ ಕೈ ಬಿಟ್ಟಿರುವುದು ನಂಬಲಾಗದ ಆಘಾತವಾಗಿ ಪರಿಣಮಿಸಿದೆ.

ಝಾರ್ಖಂಡ್ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿದೆ. ಮುಂದಿನ ವರ್ಷದ ಆರಂಭದ ತಿಂಗಳುಗಳಲ್ಲೇ ದೆಹಲಿ ಮತ್ತು ಕಡೆಯ ತಿಂಗಳುಗಳಲ್ಲಿ ಬಿಹಾರ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಹರಿಯಾಣವನ್ನು ಸುಲಭವಾಗಿ ಗೆಲ್ಲುತ್ತೇನೆನ್ನುವ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಿತು. ಜನನಾಯಕ ಜನತಾ ಪಾರ್ಟಿಯ ಊರುಗೋಲಿನಿಂದ ಸರ್ಕಾರ ರಚಿಸಬೇಕಾಯಿತು. ಮಹಾರಾಷ್ಟ್ರದಲ್ಲಿ ಶಿವಸೇನೆಯ ಜೊತೆ ಮೈತ್ರಿ ಮಾಡಿಕೊಂಡಿದ್ದರೂ, ಅದರ ಹಂಗಿಲ್ಲದೆ ತನಗೇ ಬಹುಮತ ಲಭಿಸುವುದು ಖಚಿತ ಎಂಬುದಾಗಿ ಹೊಂದಿದ್ದ ಅತಿಯಾದ ಆತ್ಮವಿಶ್ವಾಸಕ್ಕೆ ಹೊಡೆತ ಬಿತ್ತು. ಈ ಗಾಯದೆ ಮೇಲೆ ಎಳೆದ ಬರೆ ಎಂಬಂತೆ ಶಿವಸೇನೆ ದೂರ ಸರಿಯಿತು. ಈ ಅನಿರೀಕ್ಷಿತ ಹಿನ್ನಡೆಯು ಝಾರ್ಖಂಡ್, ದೆಹಲಿ ಹಾಗೂ ಬಿಹಾರ ಚುನಾವಣೆಗಳಲ್ಲಿ ತನ್ನ ಅವಕಾಶಗಳ ಮೇಲೆ ಅಡ್ಡ ಪರಿಣಾಮ ಬೀರುವ ಅಳುಕು ಬಿಜೆಪಿಯಲ್ಲಿ ಮೊಳಕೆಯೊಡೆದಿದೆ. ತಗ್ಗಿಬಗ್ಗಿ ನಡೆದುಕೊಳ್ಳುತ್ತಿದ್ದ ಮಿತ್ರಪಕ್ಷಗಳು ಎದೆ ಸೆಟೆಸಬಹುದು, ಪ್ರತಿಪಕ್ಷಗಳ ನೈತಿಕ ಸ್ಥೈರ್ಯ ಪುನಃ ಹೆಚ್ಚಬಹುದು ಎಂದು ಶಂಕಿಸಿದೆ.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

GANDHINAGAR | ಯಾರ ಕೊರಳಿಗೆ ಗಾಂಧಿನಗರ ಕ್ಷೇತ್ರದ ವಿಜಯಮಾಲೆ..!? #PRATIDHVANI
ಇದೀಗ

GANDHINAGAR | ಯಾರ ಕೊರಳಿಗೆ ಗಾಂಧಿನಗರ ಕ್ಷೇತ್ರದ ವಿಜಯಮಾಲೆ..!? #PRATIDHVANI

by ಪ್ರತಿಧ್ವನಿ
March 29, 2023
ಬಿಜೆಪಿ ಮೀಸಲಾತಿ ನೀಡಿದ್ದನ್ನು ನೋಡಿ ಕಾಂಗ್ರೆಸ್​ಗೆ ಹೊಟ್ಟೆಯುರಿ : ಗೋವಿಂದ ಕಾರಜೋಳ ವ್ಯಂಗ್ಯ
ಕರ್ನಾಟಕ

ಬಿಜೆಪಿ ಮೀಸಲಾತಿ ನೀಡಿದ್ದನ್ನು ನೋಡಿ ಕಾಂಗ್ರೆಸ್​ಗೆ ಹೊಟ್ಟೆಯುರಿ : ಗೋವಿಂದ ಕಾರಜೋಳ ವ್ಯಂಗ್ಯ

by ಮಂಜುನಾಥ ಬಿ
March 27, 2023
ನಂದಿನಿ ಕನ್ನಡಿಗರ ಆಸ್ತಿ, ಕನ್ನಡಿಗರ ಅಸ್ಮಿತೆ ಹಾಗೂ ಕನ್ನಡಿಗರ ಜೀವನಾಡಿ : ಹೆಚ್.ಡಿ.ಕುಮಾರಸ್ವಾಮಿ
Top Story

ನಂದಿನಿ ಕನ್ನಡಿಗರ ಆಸ್ತಿ, ಕನ್ನಡಿಗರ ಅಸ್ಮಿತೆ ಹಾಗೂ ಕನ್ನಡಿಗರ ಜೀವನಾಡಿ : ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
March 30, 2023
MANDYA : ಮಂಡ್ಯ ಜಿಲ್ಲೆ ಚುನಾವಣ ಕಣ |BJP | JDS | CONGRESS | SUMALATHA | ELECTION 2023
ಇದೀಗ

MANDYA : ಮಂಡ್ಯ ಜಿಲ್ಲೆ ಚುನಾವಣ ಕಣ |BJP | JDS | CONGRESS | SUMALATHA | ELECTION 2023

by ಪ್ರತಿಧ್ವನಿ
March 29, 2023
ಚುನಾವಣೆ ಘೋಷಣೆ : ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ..!
Top Story

ಚುನಾವಣೆ ಘೋಷಣೆ : ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ..!

by ಪ್ರತಿಧ್ವನಿ
April 1, 2023
Next Post
ಉಪ ಚುನಾವಣಾ ಕಣ ರಂಗೇರುತ್ತಿರುವಾಗ ಬಣ್ಣಕಳೆದುಕೊಳ್ಳುತ್ತಿರುವ ಕಾಂಗ್ರೆಸ್

ಉಪ ಚುನಾವಣಾ ಕಣ ರಂಗೇರುತ್ತಿರುವಾಗ ಬಣ್ಣಕಳೆದುಕೊಳ್ಳುತ್ತಿರುವ ಕಾಂಗ್ರೆಸ್

ಭಾರತದ ಅಧಿಕಾರಸ್ಥರಿಗೆ ಫೇಕ್ ನ್ಯೂಸ್ ತಾಣಗಳ ಸಾಥ್!

ಭಾರತದ ಅಧಿಕಾರಸ್ಥರಿಗೆ ಫೇಕ್ ನ್ಯೂಸ್ ತಾಣಗಳ ಸಾಥ್!

ದಿಕ್ಕಿಲ್ಲದ ಭಗವತಿ

ದಿಕ್ಕಿಲ್ಲದ ಭಗವತಿ, ಸಮುದ್ರ ತಳ ಸೇರಿದ ತ್ರಿದೇವ್, ಸಾಲದಲ್ಲಿ ಬಿದ್ದ ಕಂಪೆನಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist