ವಿಶ್ವದಲ್ಲೇ ಅತ್ಯಂತ ದೊಡ್ಡ ಗಣರಾಜ್ಯ ಮತ್ತು ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಭಾರತ ಸಂವಿಧಾನ ವಿಶ್ವದಲ್ಲೇ ಅತ್ಯಂತ ದೊಡ್ಡ ಸಂವಿಧಾನವೂ ಹೌದು..! ವಿವಿಧತೆಯಲ್ಲಿ ಏಕೆತೆಯನ್ನು ಸಾರಿದ ಏಕೈಕ ರಾಷ್ಟ್ರವೂ ಭಾರತವೇ. ಇನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಲಿಪ್ತ ನೀತಿಯನ್ನು ಅನುಸರಿಸುವ ಮೂಲಕ ವಿದೇಶಾಂಗ ನೀತಿಯಲ್ಲಿ ತೃತೀಯ ರಾಷ್ಟ್ರಗಳ ಪರಿಕಲ್ಪನೆಯನ್ನು ಮುಂದಿಟ್ಟು ತಟಸ್ಥವಾಗಿ ಉಳಿದ ಮೊದಲ ದೇಶವೂ ಭಾರತವೇ. ಹೀಗೆ ಜಗತ್ತಿನ ರಾಜಕೀಯ ವಲಯಕ್ಕೆ ಹತ್ತಾರು ಕೊಡುಗೆ ನೀಡಿದ ಭಾರತದ ಮತ್ತೊಂದು ಕೊಡುಗೆಯೇ ಪಂಚಾಯತ್ ರಾಜ್ ವ್ಯವಸ್ಥೆ.
ಅಧಿಕಾರ ಕೇಂದ್ರೀಕರಣದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಇದು ದೇಶದ ಸಾರ್ವಭೌಮತೆಗೆ ದಕ್ಕೆ ತರುತ್ತದೆ. ಹೀಗಾಗಿ ಅಧಿಕಾರವನ್ನು ಚದುರಿಸಬೇಕು. ಅಧಿಕಾರದ ವಿಕೇಂದ್ರೀಕರಣವಾದರೆ ಮಾತ್ರ ಭೌಗೋಳಿಕವಾಗಿ ವಿಭಿನ್ನವಾಗಿರುವ ಭಾರತದಂತಹ ದೇಶದಲ್ಲಿ ಅತ್ಯುತ್ತಮ ಆಡಳಿತ ನೀಡಲು ಸಾಧ್ಯ ಎಂಬ ಮಹತ್ವಾಕಾಂಕ್ಷೆಯೊಂದಿಗೆ ರಚಿಸಲಾದ ವ್ಯವಸ್ಥೆಯೇ ಪಂಚಾಯತ್ ರಾಜ್ ವ್ಯವಸ್ಥೆ.
ದೆಹಲಿಯಿಂದ ನಮ್ಮ ಹಳ್ಳಿಯವರೆಗೆ ಅಭಿವೃದ್ಧಿ ಎಂಬುದು ಏಕ ವಾಹಕವಾಗಿ ಹರಿಯಲು, ಪ್ರತಿ ಹಳ್ಳಿಗಳಿಗೂ ಮೂಲಭೂತ ಸೌಕರ್ಯಗಳು ತಲುಪಲು ಪಂಚಾಯತ್ ರಾಜ್ ವ್ಯವಸ್ಥೆಯ ಕೊಡುಗೆ ಅಪಾರ. ಅಸಲಿಗೆ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಾದ ನಂತರವೇ ಭಾರತದ ಅನೇಕ ಹಳ್ಳಿಗಳಿಗೆ ವಿದ್ಯುತ್, ಕುಡಿಯುವ ನೀರು ಸೇರಿದಂತೆ ಪ್ರಮುಖ ಮೂಲಭೂತ ಸೌಕರ್ಯಗಳು ಲಭ್ಯವಾಗಿತ್ತು ಎಂಬುದು ಉಲ್ಲೇಖಾರ್ಹ.
ಇದೇ ಕಾರಣಕ್ಕೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಭಾರತ ರಾಜಕೀಯ ವ್ಯವಸ್ಥೆಯ ಒಂದು ಮೈಲು ಗಲ್ಲು ಎಂದು ಗುರುತಿಸಲಾಗುತ್ತದೆ. 1993 ಏಪ್ರಿಲ್ 24 ರಂದು ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಅಸಲಿಗೆ ಈ ವ್ಯವಸ್ಥೆಯಿಂದ ಭಾರತದ ಅಭಿವೃದ್ಧಿ ವೇಗ ಹೇಗೆ ಹೆಚ್ಚಾಯಿತು? ಇದರ ಉದ್ದೇಶವೇನು? ಈ ವ್ಯವಸ್ಥೆ ಹಿಂದಿನ ಪರಿಶ್ರಮ ಎಂತಾದ್ದು? ಪಂಚಾಯತ್ ಕಾರ್ಯ ವಿಧಾನ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
![](https://pratidhvani.in/wp-content/uploads/2021/02/TPFI-39-20210215-133507.jpg)
ಪಂಚಾಯತ್ ರಾಜ್ ವ್ಯವಸ್ಥೆ:
ಪ್ರಜಾಪ್ರಭುತ್ವವನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ಹಳ್ಳಿಗರನ್ನು ರಾಜಕೀಯವಾಗಿ ಮೇಲೆತ್ತಿ ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅಭಿವೃದ್ಧಿಯ ಪಥಕ್ಕೆ ತರಲು 1952-53 ರಲ್ಲೇ ಮೊದಲ ಬಾರಿಗೆ ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತು ಚಿಂತನೆ ನಡೆಸಲಾಗಿತ್ತು. ಈ ಮೂಲಕ ಆಡಳಿತ ವಿಕೇಂದ್ರೀಕರಣಕ್ಕೆ ಅಂಕಿತ ಹಾಕಲಾಗಿತ್ತು. ಆದರೆ, ಕಾರಣಾಂತರಗಳಿಂದ ಈ ಪ್ರಯತ್ನ ಯಶಸ್ವಿಯಾಗಿರಲಿಲ್ಲ.
1985 ರಲ್ಲಿ ಜಿ.ವಿ.ಕೆ ರಾವ್, 1986 ರಲ್ಲಿ ಡಾ|ಎಲ್.ಎಂ. ಸಿಂಘ್ವಿ ಮತ್ತು ದಿ ಜಿ.ವಿ.ಕೆ. ಏ. ರಾವ್ ಸಮಿತಿಗಳು ಪಂಚಾಯತ್ ರಾಜ್ಯ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸಲು ಶಿಫಾರಸು ಮಾಡಿದವು. ಸಿಂಘ್ವಿ ಸಮಿತಿಯು ಪಂಚಾಯತ್ ರಾಜ್ ವ್ಯವಸ್ಥೆಗೆ ಸಾಂವಿಧಾನಿಕವಾಗಿ ರಕ್ಷಣೆ ಕೊಡಲು ಶಿಫಾರಸು ಮಾಡಿತು. ಅಲ್ಲದೆ, ಸಂವಿಧಾನದಲ್ಲಿ ಹೊಸ ಅಧ್ಯಾಯವನ್ನು ನಿಯಮವನ್ನು ರೂಪಿಸಲು ತಿದ್ದುಪಡಿ ಮಾಡಬೇಕು. ಅಧಿಕಾರ ಮತ್ತು ಕ್ರಿಯೆಗಳನ್ನು ರೂಪಿಸಬೇಕು. ಚುನಾವಣಾ ಆಯೋಗದ ಮೂಲಕ ಸಮಿತಿ ರಚಿಸಲು ನ್ಯಾಯಯುತ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿತು.
ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ರಾಜೀವ್ ಗಾಂಧಿ ಈ ದೇಶದ ಪ್ರಧಾನ ಮಂತ್ರಿಯಾದರು. 15 ಮೇ, 1989 ಸಂಸತ್ತಿನಲ್ಲಿ ಸರ್ಕಾರದ ವತಿಯಿಂದ 64 ನೇ ತಿದ್ದುಪಡಿ ಮಸೂದೆ ತರಲಾಯಿತು. ಆದರೆ ಅಗತ್ಯವಾದ ಬೆಂಬಲ ಪಡೆಯುವಲ್ಲಿ ರಾಜೀವ್ ಗಾಂಧಿ ಸರ್ಕಾರ ವಿಫಲವಾಗಿತ್ತು. ಆದರೆ, ರಾಜೀವ್ ಗಾಂಧಿ ಅಕಾಲಿಕ ಮರಣದ ನಂತರ ಪ್ರಧಾನಿ ಗದ್ದುಗೆಗೆ ಏರಿದ ಪಿ.ವಿ. ನರಸಿಂಹರಾವ್ ಪಂಚಾಯತ್ ರಾಜ್ ಕಾಯ್ದೆಯಲ್ಲಿ ಸಣ್ಣ ಪುಟ್ಟ ಬದಲಾವಣೆಯನ್ನು ತಂದು 73 ನೇ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿ, 1992 ರಲ್ಲಿ ಈ ಕಾಯ್ದೆಗೆ ಸಂಸತ್ತಿನ ಒಪ್ಪಿಗೆ ಪಡೆದರು. ಕೊನೆಗೂ ಈ ಮಹತ್ವದ ಕಾಯ್ದೆ 24 ಏಪ್ರಿಲ್ 1993 ರಂದು ಜಾರಿಗೆ ಬಂದಿತ್ತು.
ಗ್ರಾಮ ಪಂಚಾಯತ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಗ್ರಾಮ ಪಂಚಾಯಿತಿಯು ಪಂಚಾಯತ್ ರಾಜ್ಯದ ಮೊದನೆಯ ಹಂತ. ಗ್ರಾಮಪಂಚಾಯಿತಿಯು ಬಹುತೇಕವಾಗಿ ದೇಶದ ಎಲ್ಲಾ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ದೇಶದಲ್ಲಿ ಒಟ್ಟು 2,19,699 ಪಂಚಾಯಿತಿಗಳಿವೆ. 5,61,135 ಹಳ್ಳಿಗಳಲ್ಲಿ 43 ಕೋಟಿ ಜನರಿಗೆ ಈ ಗ್ರಾಮ ಪಂಚಾಯತ್ ಸೇವೆ ನೀಡುತ್ತಿದೆ.
ಗ್ರಾಮ ಪಂಚಾಯಿತಿಯನ್ನು ಒಂದು ಹಳ್ಳಿ ಅಥವಾ ಸಣ್ಣ ಹಳ್ಳಿಗಳು ಕೂಡಿ ಒಟ್ಟು 930 ಕ್ಕೂ ಅಧಿಕ ಜನರ ಇರುವ ಒಂದು ಗ್ರಾಮದಲ್ಲಿ ಈ ಪಂಚಾಯಿತಿ ಕಾರ್ಯನಿರ್ವಹಿಸುತ್ತದೆ. ಗ್ರಾಮ ಪಂಚಾಯಿತಿಯಲ್ಲಿ 5 ರಿಂದ 15 ರ ವರೆಗೆ ಸದಸ್ಯರಿರುತ್ತಾರೆ. ಸದಸ್ಯರು ಹಳ್ಳಿಗಳಲ್ಲಿ ಪ್ರೌಢ ಮತದಾನ ಪದ್ದತಿಯ ಮೂಲಕ 4 ವರ್ಷ ಗಳಿಗೊಮ್ಮೆ ಚುನಾಯಿಸಲ್ಪಡುತ್ತಾರೆ. ಈ ಸದಸ್ಯರು ತಮ್ಮೊಳಗೊಬ್ಬನನ್ನು ಅಧ್ಯಕ್ಷನೆಂದು ಆರಿಸುತ್ತಾರೆ. ಆತ ಪಂಚಾಯಿತಿಯ ಮುಖ್ಯಸ್ಥನಾಗಿ ಕೆಲಸ ನಿರ್ವಹಿಸುತ್ತಾನೆ.
ಅಲ್ಲದೆ, ಪ್ರತಿಯೊಂದು ಗ್ರಾಮ ಪಂಚಯಿತಿಗೆ ಒಬ್ಬ ಕಾರ್ಯದರ್ಶಿಯನ್ನು ನೇಮಕ ಮಾಡಲಾಗುತ್ತದೆ. ಆತ ಗ್ರಾಮ ಪಂಚಾಯಿತಿಯ ದಿನ ನಿತ್ಯದ ಕೆಲಸಗಳನ್ನು ಪಂಚಾಯಿತಿಯ ಆದೇಶದ ಮೇರೆಗೆ ಮುಂದುವರೆಸುತ್ತಾನೆ. ಪಂಚಾಯಿತಿಯ ಅಧ್ಯಕ್ಷನ ಆ ದಿನದ ಲೆಕ್ಕ ಪತ್ರಗಳನ್ನು ಸರಿಯಾಗಿ ಕಾಯ್ದುಕೊಂಡು ಹೋಗುವುದು ಕಾಯದರ್ಶಿಯ ಹೊಣೆಯಾಗಿರುತ್ತದೆ.
ಗ್ರಾಮ ಪಂಚಾಯತ್ ಕೆಲಸವೇನು?
1. ಪ್ರಾಥಮಿಕ ಶಾಲೆಯ ನಿರ್ಮಾಣ ಮತ್ತು ಮಕ್ಕಳು ಉಚಿತವಾಗಿ ಪ್ರಾಥಮಿಕ ಶಿಕ್ಷಣ ಪಡೆಯುವಂತೆ ನೋಡಿಕೊಳ್ಳುವುದು.
2. ಹಳ್ಳಿಗಳಲ್ಲಿ ಗ್ರಂಥಾಲಯ ಮತ್ತು ವಾಚನಾಲಯದ ವ್ಯವಸ್ಥೆ ಮಾಡುವುದು.
3. ಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಜನರಿಗೆ ವೈದ್ಯಕೀಯ ನೆರವು ನೀಡುವುದು. ಒಬ್ಬರಿಂದ ಒಬ್ಬರಿಗೆ ಹರಡುವ ಮಾರಕ ಅಂಟು ರೋಗಿಗಳ ನಿವಾರಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು.
4. ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಾಣ ಮಾಡುವುದು
5. ಬೀದಿ ದೀಪದ ಪೂರೈಕೆ,
6. ಕೆರೆ, ಭಾವಿಗಳ ನಿರ್ಮಾಣ ಮತ್ತು ನೀರಿನ ಸರಬರಾಜು. ಸಣ್ಣ ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುವುದು.
7. ಸಾರ್ವಜನಿಕ ತೋಟ, ಆಟದ ಮೈದಾನಗಳನ್ನು ನಿರ್ಮಿಸುವುದು.
8. ಶಿಶುಗಳ ಕಲ್ಯಾಣ ಮತ್ತು ಹಳ್ಳಿ ಜನರ ಮಾನಸಿಕ ಅಭಿವೃದ್ಧಿಯನ್ನು ಸಾಧಿಸುವುದು.
9. ರೈತರಿಗೆ ಬೀಜ, ಗೊಬ್ಬರ ವಿತರಣೆ ಮಾಡುವುದು.
10. ಪಂಚ ವಾರ್ಷಿಕ ಯೋಜನೆಯ ಅನ್ವಯ ತಾಲ್ಲೂಕಿನಲ್ಲಿ ಉದ್ದಿಮೆಗಳ ಹಾಗೂ ಭೂ-ವ್ಯವಸಾಯದ ಅಭಿವೃದ್ಧಿಯನ್ನು ಸಾದಿಸುವುದು ಇವು ಗ್ರಾಮ ಪಂಚಾಯತ್ ಪ್ರಮುಖ ಹೊಣೆಯಾಗಿದೆ.
ಗ್ರಾಮ ಕೇಂದ್ರಿತ ಆರ್ಥಿಕತೆ ಎಂಬ ಪರಿಕಲ್ಪನೆ ಮಹಾತ್ಮಾ ಗಾಂಧಿ ಅವರ ಅಭಿವೃದ್ಧಿ ಮಾದರಿಯಾಗಿತ್ತು. ಹೀಗೆ ಗಾಂಧಿಯ ಅಭಿವೃದ್ಧಿ ಮಾದರಿಯನ್ನು ಮುಂದಿಟ್ಟ ರಚಿಸಲ್ಪಟ್ಟ ವ್ಯವಸ್ಥೆಯೇ ಪಂಚಾಯತ್ ರಾಜ್.
ಈ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತ್ ತಳಮಟ್ಟದ ಆಡಳಿತ ವ್ಯವಸ್ಥೆಯಾಗಿದ್ದರೆ, ತದ ನಂತರ ಜಿಲ್ಲಾ ಪಂಚಾಯತ್, ನಗರ ಪಾಲಿಕೆ, ಮಹಾನಗರ ಪಾಲಿಕೆ ಎಂದು ಅಧಿಕಾರ ವಿಕೇಂದ್ರೀಕರಣವಾಗುತ್ತಲೇ ಸಾಗುತ್ತದೆ. ಆದರೆ, ಈ ಎಲ್ಲಾ ವ್ಯವಸ್ಥೆಯ ಏಕೈಕ ಗುರಿ ಅಭಿವೃದ್ಧಿಯೊಂದೇ ಎಂಬುದು ಉಲ್ಲೇಖಾರ್ಹ.