ಅನ್ವಯ್ ಮಧುಕರ್ ನಾಯ್ಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ಅರ್ನಾಬ್ ಗೋಸ್ವಾಮಿ ಅವರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಎಚ್ಚರಿಕೆ ನೀಡಿದ ಘಟನೆ ನಡೆದಿದೆ. ಆಲಿಬಾಗ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಎದುರು ಅರ್ನಾಬ್ ಅವರನ್ನು ವಿಚಾರಣೆಗೆ ಕರೆತಂದಾಗ ನ್ಯಾಯಾಲಯದ ಘನತೆಯನ್ನು ಕಾಪಾಡಿ, ನೀವು ಒಬ್ಬ ಆರೋಪಿ, ಆರೋಪಿಯಂತೆ ವರ್ತಿಸಿ. ವಿಚಾರಣಾ ಪ್ರಕ್ರಿಯೆಗೆ ಅಡ್ಡಿಪಡಿಸಿಬೇಡಿ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಅರ್ನಾಬ್ ಬಂಧನದ ನಂತರ ಬುಧವಾರದಂದು ಮ್ಯಾಜಿಸ್ಟ್ರೇಟ್ ಸುನೈನಾ ಪಿಂಗಳೆ ಅವರ ಮುಂದೆ ಅರ್ನಾಬ್ ಅವರನ್ನು ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಗೋಸ್ವಾಮಿ ಅವರು ನ್ಯಾಯಾಧೀಶರು ಕುಳಿತುಕೊಳ್ಳುವ ವೇದಿಕೆಯನ್ನು ಹತ್ತಲು ಪ್ರಯತ್ನಿಸಿದರು, ಎಂದು ಅನ್ವಯ್ ನಾಯ್ಕ್ ಕುಟುಂಬದ ಪರ ವಕೀಲ ವಿಲಾಸ್ ನಾಯ್ಕ್ ಅವರು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಂತರ ಅರ್ನಾಬ್ ಪರ ವಕೀಲರು ವಾದ ಮಂಡಿಸುವಾಗಲೂ ಅನಾಬ್ ಅವರು ಕಿರುಚಾಡಲು ಆರಂಭಿಸಿದರು. ವೈದ್ಯಾಧಿಕಾರಿಯನ್ನು ಪ್ರಶ್ನಿಸುವ ಸಂದರ್ಭದಲ್ಲಿಯೂ ಅರ್ನಾಬ್ ಅವರ ಅರಚಾಟ ಮುಂದುವರಿದಿತ್ತು. ಈ ಸಂದರ್ಭದಲ್ಲಿ ನ್ಯಾಯಾಧೀಶರು, ಅವರನ್ನು ಸಭ್ಯವಾಗಿ ವರ್ತಿಸುವಂತೆ ಎಚ್ಚರಿಕೆ ನೀಡಿದ್ದಾರೆ, ಎಂದು ವಿಲಾಸ್ ನಾಯ್ಕ್ ಹೇಳಿದ್ದಾರೆ.
ಕೋರ್ಟ್ ಕಲಾಪದ ಧ್ವನಿ ಮುದ್ರಣವನ್ನು ಮಾಡಲು ಯತ್ನಿಸಿದ ಕಾರಣಕ್ಕೆ ಅರ್ನಾಬ್ ಅವರ ಪತ್ನಿ ಸಮ್ಯಬ್ರತಾ ಅವರನ್ನು ಕೂಡಾ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಕೋರ್ಟ್ನಲ್ಲಿ ಹಾಜರಿದ್ದ ಬಿಜೆಪಿ ಶಾಸಕ ರಾಹುಲ್ ನರ್ವೇಕರ್ ಅವರನ್ನು ಹೊರಗೆ ಹೋಗಲು ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಇಷ್ಟಕ್ಕೇ ನಿಲ್ಲಲಿಲ್ಲ ಅರ್ನಾಬ್ ತಂಟೆ. ನ್ಯಾಯಾಧೀಶರು ಆದೇಶವನ್ನು ಓದುತ್ತಿದ್ದಂತೆಯೇ ತಂಪುಪಾನೀಯವನ್ನು ಕುಡಿಯಲು ಆರಂಭಿಸಿದ ಅರ್ನಾಬ್ರನ್ನು ಪೊಲೀಸ್ ಸಿಬ್ಬಂದಿಯೊಬ್ಬರು ಕೋರ್ಟ್ನಿಂದ ಹೊರಗೆ ಕರೆದುಕೊಂಡು ಬಂದರು.