ದೇಶದ ಜನರಿಗೆ ಇತ್ತೀಚಿನ ದಿನಗಲ್ಲಿ ಭಾರೀ ಗೊಂದಲ ಮೂಡಿಸಿರುವ ಪ್ರಶ್ನೆ ಎಂದರೆ ಯಾವುದೂ ದೇಶದ್ರೋಹ? ಎಂಬುದು. ಪುಲ್ವಾಮಾ ದಾಳಿ ಬಗ್ಗೆ ಅಥವಾ ಬಾಲಾಕೋಟ್ ಏರ್ಸ್ಟ್ರೈಕ್ ಬಗ್ಗೆ ಸರ್ಕಾರದ ನಿಲುವನ್ನು ವಿರೋಧಿಸಿದರೆ ದೇಶದ್ರೋಹ. ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದರೆ ದೇಶದ್ರೋಹ. ಹಿಂದುತ್ವದ ಹುಳುಕುಗಳ ಬಗ್ಗೆ ಮಾತನಾಡಿದರೆ ದೇಶದ್ರೋಹ ಎನ್ನುವ ಹಂತಕ್ಕೆ ನಮ್ಮ ದೇಶದ ಹಲವು ಜನರ ಮನಸ್ಥಿತಿ ಬದಲಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಉಘೇ ಎನ್ನುತ್ತಾ, ಯಾವುದನ್ನೂ ವಿರೋಧ ಮಾಡದೆ ಬೆಂಬಲಿಸಿ ಹಿಂಬಾಲಿಸಿ ಸಾಗಿದರೆ ಏನು ಮಾಡಿದರೂ ದೇಶದ್ರೋಹ ಅಲ್ಲವಾ..? ಎನ್ನುವ ಮಟ್ಟಕ್ಕೆ ನಮ್ಮ ಭಾರತ ಬದಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಪ್ರಭಾಕರ್ ಭಟ್ ಒಡೆತನದ ಶ್ರೀರಾಮ ವಿದ್ಯಾಮಂದಿರದಲ್ಲಿ ಒಂದು ಕಾರ್ಯಕ್ರಮ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡುವ ಅಣಕು ಪ್ರದರ್ಶನ ನಡೆಸಲಾಗುತ್ತದೆ. ಈ ಘಟನೆಯನ್ನು ಸಂಪೂರ್ಣವಾಗಿ ಆ ಶಾಲೆಯ ಬಾಲಕರೇ ನಿರ್ವಹಣೆ ಮಾಡ್ತಾರೆ. ಅದರ ಬಗ್ಗೆ ಸರ್ಕಾರವಾಗಲಿ, ಸ್ಥಳೀಯ ಪೊಲೀಸರಾಗಲಿ ಯಾವುದೇ ಚಕಾರ ಎತ್ತುವುದಿಲ್ಲ. ಆದರೆ ಬೀದರ್ನ ಶಾಹೀನ್ಶಾಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಒಂದು ನಾಟಕ ಪ್ರದರ್ಶನ ಮಾಡಲಾಗುತ್ತದೆ. ಅದರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡಲು ಮುಂದಾಗಿ, ನನ್ನ ಬಳಿ ದಾಖಲೆಗಳನ್ನು ಕೇಳಿದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎನ್ನುವ ಅರ್ಥ ಬರುವ ಹಾಗೆ ನಾಟಕ ನಿರೂಪಣೆ ಮಾಡಲಾಗುತ್ತದೆ. ಈ ಶಾಲೆ ವಿರುದ್ಧ ಶಿಕ್ಷಕರ ವಿರುದ್ಧ, ನಟನೆ ಮಾಡಿದ್ದಮುಸ್ಲಿಂ ಬಾಲಕಿ ತಾಯಿಯ ವಿರುದ್ಧವೂ ದೇಶದ್ರೋಹದ ಪ್ರಕರಣ ದಾಖಲಾಗುತ್ತದೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡಲು ಮುಂದಾದರೆ ಇಡೀ ಕರ್ನಾಟಕ ಹೊತ್ತಿ ಉರಿಯಲಿದೆ ಎಂದು ಕಾಂಗ್ರೆಸ್ಶಾಸಕ ಯು.ಟಿ ಖಾದರ್ಮಂಗಳೂರಿನಲ್ಲಿ ಭಾಷಣ ಮಾಡ್ತಾರೆ. ಅದನ್ನು ದೇಶದ್ರೋಹದ ಹೇಳಿಕೆ ಎಂದು ಪರಿಗಣಿಸಿ ದೂರು ದಾಖಲಾಗುತ್ತದೆ. ವಿಧಾನಸಭೆಯಲ್ಲೂ ಬಿಜೆಪಿ ಶಾಸಕರು ಯುಟಿ ಖಾದರ್ವಿರುದ್ಧ ಮುಗಿಬೀಳುತ್ತಾರೆ. ಆದರೆ ಬಳ್ಳಾರಿ ಬಿಜೆಪಿ ಶಾಸಕ ಸೋಮಶೇಖರ್ರೆಡ್ಡಿ, ಪೌರತ್ವ ತಿದ್ದುಪಡಿ ವಿರೋಧಿಗಳು ದೇಶದ್ರೋಹಿಗಳು ಎಂದು ಟೀಕಿಸುತ್ತಾ, ನೀವು ಇರೋದು ಕೇವಲ 20 ಪರ್ಸೆಂಟ್, ನಾವು ಇರೋದು 80 ಪರ್ಸೆಂಟ್, ಯೋಚನೆ ಮಾಡಿ ಹಿಂದುಗಳು ಖಡ್ಗ ಹಿಡಿದುಕೊಂಡು ಬಂದರೆ ನಿಮಗೇ ಕಷ್ಟವಾಗುತ್ತದೆ ಎಂದು ಬೆದರಿಸುವ ಹೇಳಿಕೆ ನೀಡ್ತಾರೆ. ಇದು ನಮ್ಮ ದೇಶ ಎಂಬುದನ್ನು ಮರೆಯಬೇಡಿ.ನೀವು ನಮ್ಮ ದೇಶದಲ್ಲಿ ಇರಬೇಕಾದರೆ ನಮ್ಮ ನಮ್ಮ ಪದ್ಧತಿ ಪ್ರಕಾರ ಇರಬೇಕು. ನಮ್ಮ ಸಮಾಧಾನವನ್ನು ಪರೀಕ್ಷೆ ಮಾಡಿದರೆ ಅದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡುತ್ತಾರೆ. ಈ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ.
ಮಹಾತ್ಮ ಗಾಂಧಿಯನ್ನು ಅಹಿಂಸವಾದಿ ಎನ್ನುತ್ತದೆ ಇಡೀ ದೇಶ. ಬ್ರಿಟೀಷರನ್ನು ದೇಶದಿಂದ ಓಡಿಸಿ ಸ್ವತಂತ್ರ್ಯ ತಂದುಕೊಡುವಲ್ಲಿ ಮಂದಗಾಮಿ ನಾಯಕರುಗಳ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಪ್ರಮುಖ ಪಾತ್ರ ವಹಿಸಿದ್ದಾರೆ ಉಗ್ರಗಾಮಿ ನಾಯಕರುಗಳು. ಹೋರಾಟದ ದಿಕ್ಕು ಬೇರೆ ಬೇಋಏಐಆಗಿತ್ತು. ಆದರೆ ಇಬ್ಬರ ನಿಲುವು ಒಂದೇ. ಅದು ಬ್ರಿಟೀಷರನ್ನು ಭಾರತದಿಂದ ತೊಲಗುವಂತೆ ಮಾಡುವುದು. ಆದರೆ ಬಿಜೆಪಿ ಸಂಸದ ಮಾಜಿ ಕೇಂದ್ರ ಸಚಿವ ಅನಂತ ಕುಮಾರ್ಹೆಗಡೆ ಹೇಳ್ತಾರೆ, ಗಾಂಧಿ ಬ್ರಿಟೀಷರ ಜೊತೆ ಹೊಂದಾಣಿಕೆ ಹೋರಾಟ ನಡೆಸಿದ್ರು. ನೀವು ಹೊಡೆದಂತೆ ಮಾಡಿ ನಾನು ಅತ್ತಂತೆ ಮಾಡುತ್ತೇನೆ ಎನ್ನುವಂತಿತ್ತು ಅವರ ಹೋರಾಟ. ಇವರಿಗೆ ಮಹಾತ್ಮ ಎಂಬ ಪಟ್ಟ ಕೊಟ್ಟಿರುವುದು ನಮ್ಮ ದುರ್ದೈವ ಎಂದು ಹೇಳುತ್ತಾರೆ. ಅದೇ ರೀತಿ ಶ್ರೀರಾಮ ಸೇನೆಯ ಆಂದೋಲನಾ ಸ್ವಾಮೀಜಿ ಗಾಂಧೀಜಿಯನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ.
ಭಾರತವನ್ನು ನಾವು ಹಿಂದೂ ರಾಷ್ಟ್ರವಾಗಿ ನಿರ್ಮಾಣ ಮಾಡಲು ಛತ್ರಪತಿ ಶಿವಾಜಿ ಮಹಾರಾಜ್, ಸುಭಾಷ್
ಚಂದ್ರ ಬೋಸ್, ಚಂದ್ರಶೇಖರ ಆಜಾದ್, ಕಿತ್ತೂರು ರಾಣಿ ಚೆನ್ನಮ್ಮ ಆದರ್ಶವಾಗಿ ಇರಬೇಕು. ಮಹಾತ್ಮ ಗಾಂಧಿಯಲ್ಲ ಎಂದಿರುವ ಅವರು, ಒಂದು ಕಪಾಳಕ್ಕೆ ಹೊಡೆದರೆ, ಇನ್ನೊಂದು ಕಪಾಳಕೊಡುವ ಗಾಂಧಿ ತತ್ವ ನಮಗೆ ಬೇಕಾಗಿಲ್ಲ. ಈ ದೇಶವನ್ನು ಒಡೆದು ಪಾಕಿಸ್ತಾನವನ್ನು ನಿರ್ಮಾಣ ಮಾಡಿದವರು ರಾಷ್ಟ್ರಪಿತರಾದದ್ದು ದುರಾದೃಷ್ಟಕರ. ದ್ವೇಷವನ್ನು ಹಚ್ಚಿದವರು, ಹಾಳು ಮಾಡಿದವರು ಮಹಾತ್ಮರಾದರು ಎಂದು ಮಹಾತ್ಮ ಗಾಂಧಿಯನ್ನು ನೇರವಾಗಿ ಟೀಕಿಸುತ್ತಾರೆ. ಇವರ ವಿರುದ್ಧವೂ ಯಾವುದೇ ಸರ್ಕಾರ ಚಕಾರ ಎತ್ತುವುದಿಲ್ಲ. ಟಿಪ್ಪು ಸುಲ್ತಾನನ ಬಗ್ಗೆ ಯಾರಾದರೂ ಒಂದೆರಡು ಒಳ್ಳೆಯ ಮಾತುಗಳನ್ನು ಹೇಳಿದರೆ, ಆತನ ಧೈರ್ಯ ಪರಾಕ್ರಮಗಳ ಬಗ್ಗೆ ಮಾತನಾಡಿದರೆ ಅದು ದೇಶದ್ರೋಹ ಆಗುತ್ತದೆ. 1947ರ ಸ್ವತಂತ್ರ್ಯ ಭಾರತಕ್ಕೂ ಮೊದಲು ಭಾರತ ಎನ್ನುವ ದೇಶವೇ ಇರಲಿಲ್ಲ. ಸಣ್ಣಪುಟ್ಟ ರಾಜ್ಯಗಳ ಆಡಳಿತವಿತ್ತು. ಅಲ್ಲಿನ ರಾಜರುಗಳು ತಮ್ಮ ರಾಜ್ಯವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಯುದ್ದ ಮಾಡಿದ್ದಾರೆ ಅಷ್ಟೆ. ಹಿಂದೂ ಎಂಭ ಧರ್ಮವೂ ಇರಲಿಲ್ಲ, ಅದೊಂದು ಆಚರಣೆ ಆಗಿ ಮಾತ್ರ ಇತ್ತು ಎನ್ನುವ ಕನಿಷ್ಟ ಜ್ಞಾನವೂ ಇಲ್ಲದಂತಾಗಿದೆ. ಆಗಿದ್ದರೆ ದೇಶದ್ರೋಹ ಎಂದರೆ ಏನು ಎನ್ನುವ ಪ್ರಶ್ನೆ ಎದುರಾಗುತ್ತದೆ.
ಯಾವುದನ್ನು ದೇಶದ್ರೋಹ ಎಂದು ಕರೆಯುತ್ತಾರೆ..?
ಭಾರತ ಒಂದು ಒಕ್ಕೂಟ ವ್ಯವಸ್ಥೆಯಡಿ ಒಂದಾಗಿರುವ ಸಣ್ಣಪುಟ್ಟ ರಾಜ್ಯಗಳ ಸಮೂಹ. ಈ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವುದು. ದೇಶದ ಸಾರ್ವಭೌಮತೆಗೆ ಅಡ್ಡಿಯಾಗುವಂತೆ ಹೇಳಿಕೆ ಕೊಡುವುದು. ಸಾರ್ವಜನಿಕರ ಶಾಂತಿ ಕದಡುವುದು ದೇಶದ್ರೋಹ ಮಾಡಿದಂತಾಗುತ್ತದೆ. ಸುಪ್ರೀಂಕೋರ್ಟ್ಕೂಡ ದೇಶದ್ರೋಹದ ಬಗ್ಗೆ ವ್ಯಾಖ್ಯಾನ ಮಾಡಿದ್ದು, ಯಾವುದೇ ವ್ಯಕ್ತಿಯ ಭಾಷಣ ಅಥವಾ ಬರವಣಿಗೆ ಹಿಂಸೆಗೆ ಪ್ರಚೋದನೆ ನೀಡುವಂತಿದ್ದರೆ ಹಾಗೂ ಕಾನೂನು ಸುವ್ಯವಸ್ಥೆಗೆ ಹದಗೆಡಿಸುವಂತಿದ್ದರೆ ಮಾತ್ರ ದೇಶದ್ರೋಹ ಆಗುತ್ತದೆ ಎಂದಿದೆ. 1857ರಲ್ಲಿ ಬ್ರಿಟೀಷರು ಜಾರಿಗೆ ತಂದಿದ್ದ ಈಸ್ಟ್ಇಂಡಿಯಾ ಆಡಳಿತ ಅಂತ್ಯವಾಗಿ ಸರ್ಕಾರದ ಆಳ್ವಿಕೆ ಜಾರಿಯಾಗಿತ್ತು. ಆ ಬಳಿಕ ಬ್ರಿಟೀಷ್ಸರ್ಕಾರದ ನಿಲುವುಗಳನ್ನು ವಿರೋಧಿಸುವ ಸಂಪ್ರದಾಯ ಅಲ್ಲಲ್ಲಿ ಕಾಣಿಸುತ್ತಿತ್ತು. ಈ ವೇಳೆ ಬ್ರಿಟೀಷ್ಸರ್ಕಾರ ಪತ್ರಿಕಾ ಸ್ವಾತಂತ್ರ ಹತ್ತಿಕ್ಕಲು ಹಾಗು ಸ್ವಾತಂತ್ರ್ಯ ಹೋರಾಟಗಾರರ ಬಾಯಿ ಮುಚ್ಚಿಸಲು 1860ರಲ್ಲಿ ಜಾರಿಗೆ ತಂದ ಕಾನೂನು ಐಪಿಸಿ ಸೆಕ್ಷನ್124 (ಎ). ಕಾನೂನು ಎಲ್ಲರಿಗೂ ಒಂದೆ. ಆದರೆ ಇತ್ತೀಚಿನ ದಿನಗಳಲ್ಲಿ ಒಂದೇ ಕಾನೂನು ತನಗೆ ಬೇಕಾದವರಿಗೆ ಒಂದು ರೀತಿ, ವಿರೋಧಿಗಳಿಗೆ ಒಂದು ರೀತಿ ಬಳಕೆಯಾಗುತ್ತಿರುವುದು ನಮ್ಮ ದೇಶದ ವಿಪರ್ಯಾಸ.