“ದೇಶದ ಪ್ರತಿಷ್ಠಿತ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (JNU) ಹಾಸ್ಟೆಲ್ ಹಾಗೂ ಮೆಸ್ ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟಿಸುತ್ತಿದ್ದ ಎಡಪಕ್ಷ ಬೆಂಬಲಿತ ವಿದ್ಯಾರ್ಥಿಗಳ ಮೇಲೆ ಕಳೆದ ಭಾನುವಾರ ಮಾರಣಾಂತಿಕ ಹಲ್ಲೆ ನಡೆಸಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಅಂಗ ಸಂಸ್ಥೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP)” ಎಂದು ಸಂಘಟನೆಯ ಅಕ್ಷತ್ ಅವಸ್ಥಿ ಎಂಬ ವಿದ್ಯಾರ್ಥಿ ರಾಷ್ಟ್ರೀಯ ಸುದ್ದಿವಾಹಿನಿ ನಡೆಸಿರುವ ಕುಟುಕು ಕಾರ್ಯಾಚರಣೆಯಲ್ಲಿ ಒಪ್ಪಿಕೊಳ್ಳುವ ಮೂಲಕ ಸ್ಫೋಟಕ ಮಾಹಿತಿ ಹೊರಗೆಡವಿದ್ದು, ಬಿಜೆಪಿ ರಾಷ್ಟ್ರದ ಮುಂದೆ ನಗ್ನಗೊಳ್ಳುವಂತೆ ಮಾಡಿದ್ದಾನೆ. ಎಡಪಕ್ಷದ ವಿದ್ಯಾರ್ಥಿಗಳ ಮೇಲಿನ ದಾಳಿಯ ನೇತೃತ್ವವನ್ನು ಅಕ್ಷತ್ ತಾನೇ ವಹಿಸಿದ್ದಾಗಿ ಹೇಳಿಕೊಂಡಿದ್ದು, ದಾಳಿಗೆ ಸಂಘ ಬೆಂಬಲ ವ್ಯಕ್ತಪಡಿಸಿತ್ತು ಎಂದು ಹೇಳಿರುವುದರಿಂದ ಬಿಜೆಪಿ-ABVP ಸಾರ್ವಜನಿಕವಾಗಿ ತಲೆತಗ್ಗಿಸುವಂತಾಗಿದೆ. ಆದರೆ, ಎಂದಿನಿಂತೆ ಆರೋಪಗಳನ್ನು ನಿರಾಕರಿಸಿರುವ ಬಿಜೆಪಿಯು ಬಂಡ ಸಮರ್ಥನೆಗೆ ಇಳಿದಿರುವುದು ಸಾಮಾನ್ಯರ ಮನಸಿನಲ್ಲಿ ಬಿಜೆಪಿಯ ವಿರುದ್ಧ ಅಸಹನೆ ಹೆಚ್ಚಾಗುವಂತೆ ಮಾಡಿದೆ ಎಂದು ಪಕ್ಷದ ಹಿರಿಯ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.
ABVP ಸಂಘಟನಾ ಕಾರ್ಯದರ್ಶಿ RSS ನಿಂದ ನೇಮಿಸಲ್ಪಟ್ಟಿರುವುದರಿಂದ ಸಹಜವಾಗಿ ಭಾನುವಾರ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಮೇಲೆ ನಡೆದ ಮಾರಣಾಂತಿಕ ದಾಳಿಗೆ ಸಂಘದ ಬೆಂಬಲ ಇತ್ತು ಎಂಬುದು ದಿಟವಾಗಿದೆ. ದಾಳಿಗೆ ಹೊರಗಿನ ಗೂಂಡಾಗಳನ್ನು ಕರೆತಂದಿದ್ದು, ಅದರ ಸಂಪೂರ್ಣ ಜವಾಬ್ದಾರಿಯನ್ನು ತಾನೇ ವಹಿಸಿದ್ದಾಗಿ ಹೆಮ್ಮೆಯಿಂದ ಅಕ್ಷತ್ ಹೊರಗೆಡವಿದ್ದಾನೆ. ಘಟನೆಯಲ್ಲಿ ಒಟ್ಟಾರೆ 34 ಮಂದಿ ಹಿಂಸೆಗೆ ಒಳಗಾಗಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
'It's an ABVP room': #JNU student on how assailants spared his room in the hostel.#JNUTapes
Watch full show with @RahulKanwal here:
Part 1: https://t.co/gUYH4oShcn
Part 2: https://t.co/HdQtbM003K
Part 3: https://t.co/1yjw4tEVTA pic.twitter.com/d34QkZmITW— India Today (@IndiaToday) January 10, 2020
JNU ವಿದ್ಯಾರ್ಥಿಯಾದ ಅಕ್ಷತ್ ಹೊರಗಿಡವಿರುವ ವಿಚಾರಗಳು ಬಿಜೆಪಿ, ಆರ್ ಎಸ್ ಎಸ್, ದೆಹಲಿ ಪೊಲೀಸ್ ಹಾಗೂ JNU ಕುಲಪತಿ ಜಗದೀಶ್ ಕುಮಾರ್ ಕಟ್ಟಲು ಯತ್ನಿಸುತ್ತಿರುವ ಸುಳ್ಳಿನ ಕತೆಗಳನ್ನು ಬಯಲು ಮಾಡಿದ್ದು, ವಿದ್ಯಾರ್ಥಿಗಳ ಮೇಲೆ ಲಾಠಿ, ಕಲ್ಲು, ಇಟ್ಟಿಗೆ ದಾಳಿ ನಡೆಯುವುದನ್ನು ತಡೆಯಲು ಅಸಮರ್ಥವಾದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಮುಂದೆ ನಗ್ನವಾಗಿ ನಿಂತಿದೆ. ವಿಭಿನ್ನ ವಾದಗಳನ್ನು ಹರಿಯಬಿಡುವ ಮೂಲಕ ಜನರನ್ನು ಗೊಂದಲದಲ್ಲಿ ಸಿಲುಕಿಸುವ, ವಿಷಯಾಂತರ ಮಾಡಲು ಯತ್ನಿಸುತ್ತಿರುವ ಬಿಜೆಪಿಯು ತೀವ್ರಗೊಳ್ಳುತ್ತಿರುವ ವಿದ್ಯಾರ್ಥಿ ಹೋರಾಟದ ಕಿಚ್ಚನ್ನು ಆರಿಸುವ ಬದಲಿಗೆ ಹೆಚ್ಚಿಸುವ ಕಾಯಕದಲ್ಲಿ ನಿರತವಾಗಿದೆ. “ಅರಾಜಕತೆ” ಇಷ್ಪಪಡುವ ಮೋದಿ ಸರ್ಕಾರವು ಒಡೆದು ಹಾಳುವ, ತುಳಿದು ಬೆಳೆಯುವ ತನ್ನ ತಂತ್ರದ ಪರಿಣಾಮದ ಬಗ್ಗೆ ಮುಂದಿನ ದಿನಗಳಲ್ಲಿ ಪಾಠ ಕಲಿಯಬಹುದು.
ವಿದ್ಯಾರ್ಥಿಗಳ ಮೇಲಿನ ಅಟ್ಟಹಾಸದ ಕುರಿತು ಮಾಧ್ಯಮಗಳು ದಾಳಿಕೋರರ ಚಹರೆ, ಸಂಘಟನಾ ದಾಳಿ ಹಾಗೂ ಕೃತ್ಯಕ್ಕೂ ಮುನ್ನ ಸಂಭಾಷಣೆ ನಡೆಸಿರುವ ವಾಟ್ಸಾಪ್ ದಾಖಲೆ ಸೇರಿದಂತೆ ಹಲವು ಸಾಕ್ಷ್ಯ ಮುಂದಿಟ್ಟು ಐದು ದಿನಗಳಾದರೂ ದೆಹಲಿ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಯಾರೊಬ್ಬರನ್ನೂ ಬಂಧಿಸದಿರುವುದು ತನಿಖಾ ಸಂಸ್ಥೆಯ ನಂಬಿಕೆಗೆ ಅನರ್ಹ ಎನ್ನುವ ಸಾರ್ವಜನಿಕ ಅಭಿಪ್ರಾಯ ಬಲಗೊಳ್ಳುವಂತೆ ಮಾಡಿದ್ದಾರೆ.
“ದಾಳಿಯ ಮೂಲಕ ಎಡಪಕ್ಷ ಬೆಂಬಲಿತ ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸುವುದು. ಕಾಶ್ಮೀರಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಉದ್ದೇಶವಿತ್ತು” ಎನ್ನುವ ಮೂಲಕ ಆರೋಪಿಯು ಸದ್ಯ ಚಾಲ್ತಿಯಲ್ಲಿರುವ ವಿಚಾರಧಾರೆಯನ್ನು ಪ್ರತಿಪಾದಿಸಿದ್ದು, ಅದಕ್ಕೆ ದಾಳಿಯ ದಾರಿ ತುಳಿದಿದ್ದಾನೆ. ಇದಕ್ಕೆ ಅಧಿಕಾರದಲ್ಲಿರುವ ಬಿಜೆಪಿಯ ಬೆಂಬಲವಿದೆ ಎಂಬುದು ಅದರ ಸ್ಪಂದನೆಯಿಂದ ರುಜುವಾತಾಗಿದೆ.
#JNUHiddenTruth | Listen in: ABVP Delhi State Jt Secretary ‘explains’ the video of alleged ABVP violence in JNU. | @thenewshour AGENDA with Padmaja Joshi. pic.twitter.com/eiYgZIn531
— TIMES NOW (@TimesNow) January 6, 2020
ABVP ಬಿಜೆಪಿಯ ಪ್ರಮುಖ ಚುನಾವಣಾ ಯಂತ್ರವಾಗಿದ್ದು, ಮೋದಿ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ಅದರ ಸದಸ್ಯರ ವಿರುದ್ದ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಬಹುದೇ? ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಚಿಂತಕರನ್ನು ತುಕಡೇ ತುಕಡೇ ಗ್ಯಾಂಗ್, ನಗರ ನಕ್ಸಲ್ ಎಂದು ಸಾರ್ವಜನಿಕವಾಗಿ ಜರಿಯುವ ಮೋದಿ ಹಾಗೂ ದೆಹಲಿ ಪೊಲೀಸರ ಮೇಲೆ ನೇರ ಅಧಿಕಾರ ಹೊಂದಿರುವ ಗೃಹ ಸಚಿವ ಅಮಿತ್ ಶಾರಿಂದ ನ್ಯಾಯ ದಾನದ ಕಲ್ಪನೆ ಇಟ್ಟುಕೊಳ್ಳಲು ಸಾಧ್ಯವೇ?
ವಿಶ್ವವಿದ್ಯಾಲಯದ ಕುಲಪತಿ ಹಾಗೂ ದೆಹಲಿ ಪೊಲೀಸರು ಘಟನೆಗೆ ಎಡಪಕ್ಷ ಬೆಂಬಲಿತ ವಿದ್ಯಾರ್ಥಿಗಳೇ ಕಾರಣ ಎನ್ನುವ ನಕಲಿ ಸಂಕಥನ ಕಟ್ಟುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಕುಲಪತಿ ಜಗದೀಶ್ ಕುಮಾರ್, ಜನವರಿ ಒಂದು ಮತ್ತು ನಾಲ್ಕರಂದು ಎಡಪಕ್ಷಗಳ ವಿದ್ಯಾರ್ಥಿಗಳು ತಂತ್ರಜ್ಞಾನ ಹಾಗೂ ಸರ್ವರ್ ಕೊಠಡಿಯಲ್ಲಿ ದಾಂಧಲೆ ಸೃಸ್ಟಿಸಿದ್ದರು ಎಂದು ವಾದಿಸಿದ್ದಾರೆ. ಇದಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಎಡಪಕ್ಷ ಬೆಂಬಲಿತ ವಿದ್ಯಾರ್ಥಿ ಸಂಘಟನೆಯ ಮುಖ್ಯಸ್ಥೆ ಐಷಿ ಘೋಷ್ ಹಾಗೂ ಇತರರ ಮೇಲೆ ಎರಡು ಪ್ರಕರಣ ದಾಖಲಿಸಿದ್ದಾರೆ. ಶುಕ್ರವಾರದ ಸುದ್ದಿಗೋಷ್ಠಿಯಲ್ಲಿ ದೆಹಲಿ ಪೊಲೀಸರು ಏಳು ಆರೋಪಿಗಳನ್ನು ಗುರುತಿಸಿದ್ದು, ಈ ಪೈಕಿ ಐವರು ಎಡಪಕ್ಷ ಬೆಂಬಲಿತ ವಿದ್ಯಾರ್ಥಿಗಳು ಎಂದು ಹೇಳಿದ್ದಾರೆ. ಇದು ಸಂಕಥನವನ್ನು ಎಡ ವಿದ್ಯಾರ್ಥಿಗಳ ಸುತ್ತ ಕಟ್ಟಿ, ದಾಳಿಗೆ ಒಳಗಾದ ಅವರುಗಳನ್ನೇ ಅಪರಾಧಿಗಳನ್ನಾಗಿಸುವ ಸ್ಪಷ್ಟ ತಂತ್ರವಾಗಿದೆ ಎಂಬ ಆತಂಕ ವ್ಯಕ್ತವಾಗಿದೆ. JNU ಘಟನೆಗೆ ದೇಶದ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಬೆಂಬಲ ವ್ಯಕ್ತಪಡಿಸಿ ಪ್ರತಿಭಟಿಸಿದರೂ ಸರ್ಕಾರದಿಂದ ಯಾರೊಬ್ಬರೂ ಗಾಯಗೊಂಡವರನ್ನು ಭೇಟಿ ಮಾಡುವ ಪ್ರಯತ್ನ ಮಾಡಿಲ್ಲ. ಬದಲಾಗಿ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಹಾಗೂ ಇತರರನ್ನು ದೇಶದ್ರೋಹಿಗಳು ಎಂದು ಜರಿಯುವ ತುಚ್ಛ ಸಂಪ್ರದಾಯವನ್ನು ಬಿಜೆಪಿ ನಾಯಕರು ಹಾಗೂ ಬೆಂಬಲಿಗರು ಆರಂಭಿಸಿದ್ದಾರೆ.

ಇನ್ನೊಂದೆಡೆ ದೇಶದ ಮುಂದೆ ಸಂಪೂರ್ಣವಾಗಿ ಬೆತ್ತಲಾಗಿರುವ ABVPಯು ಅಕ್ಷತ್ ಗೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂಬ ಸುಳ್ಳಿನ ಕತೆ ಆರಂಭಿಸಿದೆ. ಆದರೆ, ಅಕ್ಷತ್ ಚಲನ-ವಲನ ಗಮನಿಸಿದರೆ ಆತ ABVP ಕಾರ್ಯಕರ್ತ ಎಂಬುದು ಸ್ಪಷ್ಟವಾಗುತ್ತದೆ.
ಇತ್ತೀಚೆಗೆ ABVP ದೆಹಲಿ ಜಂಟಿ ಕಾರ್ಯದರ್ಶಿ ಅನಿಮಾ ಸೋನ್ಕರ್, ಸುದ್ದಿ ವಾಹಿನಿ ಚರ್ಚಾ ಕಾರ್ಯಕ್ರಮದಲ್ಲಿ “ಜೆಎನ್ಯು ವಿದ್ಯಾರ್ಥಿಗಳ ಮೇಲಿನ ಮುಸುಕುದಾರಿ ದಾಳಿಕೋರರು ಎಬಿವಿಪಿಯವರು. ಸ್ವರಕ್ಷಣೆಗಾಗಿ ದೊಣ್ಣೆ ಹಾಗೂ ಆ್ಯಸಿಡ್ ಜೊತೆಗೆ ಕೊಂಡೊಯ್ದಿದ್ದರು” ಎಂದು ಹೇಳುವ ಮೂಲಕ ದೇಶವೇ ನಿಬ್ಬರಗಾಗುವಂತೆ ಮಾಡಿದ್ದರು ಎಂಬುದನ್ನು ನೆನೆಯಬಹುದು.
ಜೆಎನ್ಯು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಪೊಲೀಸರ ಸಹಕಾರದಿಂದ ದಾಂದಲೆ ನಡೆಸಲಾಗಿತ್ತು. ಘಟನೆಯ ಮಾಹಿತಿ ಪೊಲೀಸರಿಗೆ ಇತ್ತು ಎಂದು ಅಕ್ಷತ್ ಹೇಳಿರುವುದು ಹಾಗೂ ದೆಹಲಿ ಪೊಲೀಸರು ಅಂದು ನಡೆದುಕೊಂಡಿರುವುದು ಹಾಗೂ ಅನಂತರ ಬಯಲಾದ ದಾಖಲೆಗಳಿಂದ ದಿಗ್ಭ್ರಮೆಗೊಂಡ ಬಿಜೆಪಿಯು ವಿರೋಧಿಗಳ ವಿರುದ್ಧ ಮತ್ತದೇ ರಾಷ್ಟ್ರದ್ರೋಹಿ, ಸುಳ್ಳು ಸುದ್ದಿಗಳ ಪ್ರಸಾರ ಆರಂಭಿಸಿದೆ. ಜನರಿಂದ ಆಯ್ಕೆಯಾದ ಸರ್ಕಾರವೊಂದು ಇಷ್ಟು ಲಜ್ಜಗೇಡಿ ಹಾಗೂ ಪಕ್ಷಪಾತಿಯಾಗಿ ವರ್ತಿಸಲು ಸಾಧ್ಯ ಎಂಬುದನ್ನು ಸಾಬೀತುಪಡಿಸಿದೆ. ಸಂವಿಧಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ಪ್ರಮಾಣ ಮಾಡಿರುವ ದೆಹಲಿ ಪೊಲೀಸರು ಮೋದಿ-ಶಾ ಒಡೆತಕ್ಕೆ ಸಿಲುಕಿ ಸಂಸ್ಥೆಯ ಘನತೆಯನ್ನು ಮಣ್ಣುಪಾಲು ಮಾಡಲು ಪಣತೊಟ್ಟಂತಿದೆ. ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸದ್ದಡಗಿಸಿ ಕಾಲಾನಂತರದಲ್ಲಿ ಅದರ ಬಾಗಿಲು ಬಂದ್ ಮಾಡಲು ಸರ್ವ ಪ್ರಯತ್ನ ನಡೆಸುತ್ತಿರುವ ಸಂಘ-ಪರಿವಾರ ಹಾಗೂ ಬಿಜೆಪಿಯು ದೇಶದ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಕನಸನ್ನು ಭಗ್ನಗೊಳಿಸಲು ತುದಿಗಾಲಲ್ಲಿ ನಿಂತಿದೆ. ಇದೆಲ್ಲದರ ನಡುವೆ ಆಡಳಿತ ಪಕ್ಷದ ಪಾತಕ ಕೃತ್ಯವನ್ನು ಹಿಮ್ಮೆಟ್ಟಿಸಲು ರಸ್ತೆಗಳಿದಿರುವ ವಿದ್ಯಾರ್ಥಿಗಳ ನಡೆ ಪ್ರೇರಣಾದಾಯಕವಾಗಿದೆ. ಇದು ದೇಶದ ಜನತೆ ಯುವ ನಾಯಕತ್ವದಲ್ಲಿ ಇತಿಹಾಸ ಬರೆಯುತ್ತಿರುವ ಕಾಲ.