ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 67 ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿದೆಯೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ 20 ರ ಸಂಜೆ 5 ಗಂಟೆಗೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯದಲ್ಲಿ ಇದುವರೆಗೂ ಒಟ್ಟು 1,462 ಪ್ರಕರಣಗಳು ದಾಖಲಾಗಿದ್ದು, 556 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ರಾಜ್ಯದಲ್ಲಿ ಸದ್ಯ ಸಕ್ರಿಯವಾಗಿರುವ 864 ಪ್ರಕರಣಗಳಲ್ಲಿ 849 ಮಂದಿ ಸಾಧಾರಾಣ ಕರೋನಾ ಸೋಂಕಿತರ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 15 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ಇಂದು ಮತ್ತೊಬ್ಬ ಕರೋನಾ ಸೋಂಕಿತ ರೋಗಿಯು ಮರಣ ಹೊಂದಿದ್ದು, ಕರೋನಾ ಸೋಂಕಿನಿಂದಾಗಿ ಮರಣ ಹೊಂದಿದವರ ಸಂಖ್ಯೆ 41 ಕ್ಕೇರಿದೆ.

ಮಂಗಳೂರಿನ ಬಂದರಿನಲ್ಲಿ 49 ಮಂದಿ ಹಾಗೂ ದುಬೈಯಿಂದ ಬೆಂಗಳೂರಿಗೆ ಬಂದ 94 ಮಂದಿಯನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೊಳಪಡಿಸಿದ್ದು, ಇದುವರೆಗೂ 1,43,492 ಮಂದಿಯನ್ನು ಬಂದರು ಮತ್ತು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೊಳಪಡಿಸಲಾಗಿದೆ.
ಕಳೆದ 24 ಗಂಟೆಗಲಲ್ಲಿ ಹಾಸನದಲ್ಲಿ ಬರೋಬ್ಬರಿ 21 ಪ್ರಕರಣಗಳು ಕಂಡುಬಂದಿದ್ದು, ಬೀದರಲ್ಲಿ 10, ಮಂಡ್ಯದಲ್ಲಿ 8, ಕಲಬುರಗಿಯಲ್ಲಿ 7, ಉಡುಪಿಯಲ್ಲಿ 6 ಪ್ರಕರಣಗಳು ಕಂಡುಬಂದಿದೆ. ಬೆಂಗಳೂರು ನಗರ, ತುಮಕೂರು ಹಾಗೂ ರಾಯಚೂರಿನಲ್ಲಿ ತಲಾ 4 ಪ್ರಕರಣ ಪತ್ತೆಯಾಗಿದ್ದು, ದಕ್ಷಿಣ ಕನ್ನಡ, ಯಾದಗಿರಿ ಮತ್ತು ಉತ್ತರ ಕನ್ನಡದಲ್ಲಿ ತಲಾ ಒಂದೊಂದು ಪ್ರಕರನ ಕಂಡು ಬಂದಿದೆ.