ಶ್ರೀಮಂತರು ಏನೇ ಮಾಡಿದರೂ ನಡೆದು ಹೋಗುತ್ತದೆ ಎನ್ನುವುದು ಸಮಾಜದಲ್ಲಿ ರೂಢಿಯಲ್ಲಿರುವ ಮಾತು. ಆದರೆ ಅದೇ ಕೆಲಸವನ್ನು ಬಡವರು ಮಾಡಿದಾಗ ಮಾತ್ರ ಸಮಾಜ ಅವರನ್ನು ಮುಕ್ಕಿ ತಿನ್ನುವ ಹಾಗೆ ನೋಡುತ್ತದೆ. ಇದು ಈ ಸಮಾಜದ ದುಸ್ಥಿತಿ. ಇವತ್ತು ಆಗಿದ್ದು ಇದೇ ರೀತಿಯ ಘಟನೆ. ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದೂ ಇಂದು ವೇದಾವತಿ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪರಶುರಾಮಪುರ ಬಳಿಯ ವೇದಾವತಿ ಬ್ಯಾರೇಜ್ಗೆ ವಾಣಿ ವಿಲಾಸ ಸಾಗರ ಜಲಾಶಯದಿಂದ 0.25 TMC ನೀರು ಹರಿಸಲಾಗಿದ್ದು, ಉಸ್ತುವಾರಿ ಸಚಿವರು ರಾಜಕೀಯ ಲಾಭಕ್ಕಾಗಿ ಬಾಗಿನ ಅರ್ಪಣೆ ಕಾರ್ಯಕ್ರಮ ಆಯೋಜಿಸಿದ್ದು. ಸಚಿವರಿಗೆ ಚಿತ್ರದುರ್ಗ ಸಂಸದ ಎ. ನಾರಾಯಣ ಸ್ವಾಮಿ, ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ಸೇರಿದಂತೆ ಹಲವರು ಸಾಥ್ ಕೊಟ್ಟಿದ್ದರು. ವಿಷಯ ಇದಲ್ಲ, ರಾಜ್ಯದಲ್ಲಿ ಕರೋನಾ ಸೋಂಕು ಅಬ್ಬರಿಸುತ್ತಿದ್ದರೂ ಆರೋಗ್ಯ ಮಂತ್ರಿ ನೂರಾರು ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ಮಾಡುವ ಮೂಲಕ ಸೇಬಿನ ಹಣ್ಣಿನ ಹಾರ ಹಾಕಿಸಿಕೊಂಡು ದರ್ಬಾರ್ ನಡೆಸಿದರು.
ಕರೋನಾ ಜಾತಿ, ಧರ್ಮ ನೋಡಿಕೊಂಡು ಬರೋದಿಲ್ಲ, ಸಾಮಾಜಿಕ ಅಂತರ ಅಷ್ಟೇ ಮದ್ದು. ಕಡ್ಡಾಯ ಮಾಸ್ಕ್ ಹಾಕಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ದೇಶದ ಜನರಿಗೆ ತಿಳಿಸಿದ್ದಾರೆ. ಆದರೆ, ರಾಜ್ಯದ ಆರೋಗ್ಯ ಸಚಿವರಾದ ಬಿ. ಶ್ರೀರಾಮುಲುಗೆ ಅವರಿಗೆ ಪ್ರಧಾನಿ ಮಾತು ಕಿವಿಗೆ ಬಿದ್ದಂತೆ ಕಾಣಿಸಲಿಲ್ಲ. ಬಾಗಿನ ಅರ್ಪಣೆಗೂ ಮೊದಲು ಪರುಶುರಾಂಪುರದಲ್ಲಿ ಎತ್ತಿನ ಗಾಡಿಯಲ್ಲಿ ಸಚಿವ ಶ್ರೀರಾಮುಲು ಅವರನ್ನು ಮೆರವಣಿಗೆ ಮಾಡಲಾಯ್ತು. ಜೈಕಾರಗಳನ್ನು ಕೂಗುತ್ತಾ ಕಾರ್ಯಕರ್ತರು. ಸಚಿವರಿಗೆ ಬೃಹತ್ ಸೇಬಿನ ಹಾರದ ಹಾಕಿ ಸ್ವಾಗತ ಮಾಡಿದರು. ಮೆರವಣಿಗೆ ಉದ್ದಕ್ಕೂ ಸಚಿವರ ಮೇಲೆ ಹೂ ಮಳೆ ಸುರಿಸಿದರು. ಸಾಮಾಜಿಕ ಅಂತರವೂ ಇರಲಿಲ್ಲ. ಮುಖದ ಮೇಲೆ ಮಾಸ್ಕ್ ಕಾಣಿಸಲೂ ಇಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಮಾಸ್ಕ್ ಧರಿಸಿದ್ದರೂ ಕಿರುಚಾಟ ಅರುಚಾಟದಲ್ಲಿ ಮಾಸ್ಕ್ ಮಾಯವಾಗಿತ್ತು. ಇದು ನಮ್ಮ ರಾಜ್ಯದ ಆರೋಗ್ಯವನ್ನು ಕಾಪಾಡ ಬೇಕಾದ ಆರೋಗ್ಯ ಸಚಿವರು ನಡೆದುಕೊಂಡ ರೀತಿ.

ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದ್ದೇಕೆ..?
ಕರೋನಾ ಸಂಕಷ್ಟ ಕಾಲದಲ್ಲಿ ಇಡೀ ದೇಶ ಅಷ್ಟೇ ವಿಶ್ವವೇ ನಲುಗಿ ನರಳಾಡುತ್ತಿದೆ. ಈ ಸಮಯದಲ್ಲಿ ಒಂದು ಸಣ್ಣದಾಗಿ ಮದುವೆ ಕಾರ್ಯಕ್ರಮ ಮಾಡಬೇಕಿದ್ದರೂ ಅನುಮತಿ ಕಡ್ಡಾಯ. ಅದರಲ್ಲೂ 50ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. 50 ಜನ ಕೂಡ ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ ಪಾಲಿಸಬೇಕು ಎಂಬುದು ನಿಯಮ. ಇಲ್ಲದಿದ್ದರೆ ಅಧಿಕಾರಿಗಳು The Epidemic Diseases (Amendment) Ordinance – 2020 ಅಡಿ ಕ್ರಮ ಕೈಗೊಳ್ಳುವುದು ನಿಶ್ಚಿತ. ಏಪ್ರಿಲ್ ಮಧ್ಯದಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಹೊಸ ಕಾನೂನು ಕಠಿಣವಾಗಿದ್ದು, ಸಾಂಕ್ರಾಮಿಕ ರೋಗ ಹರಡುವುದು ಹಾಗೂ ಹರಡುವಿಕೆಗೆ ಸಹಕಾರ ನೀಡುವುದು, ಆರೋಗ್ಯ ಸಿಬ್ಬಂದಿಗಳ ಮೇಲೆ ದೌರ್ಜನ್ಯ ತಡೆಯಲು ರೂಪಿಸಲಾಗಿದೆ.
ಪರಿಸ್ಥಿತಿ ಹೀಗಿರುವಾಗ ಆರೋಗ್ಯ ಸಚಿವ ಶ್ರೀರಾಮುಲು ಅವರು ಅಂದಾಜು 500 ಜನರನ್ನು ಸೇರಿಸಿ ಒಂದು ಕಾರ್ಯಕ್ರಮ ಮಾಡುತ್ತಾರೆ ಎಂದರೆ ಏನರ್ಥ..? ಕಾನೂನು ಅರಿವು ಇಲ್ಲ ಎಂದುಕೊಳ್ಳೋಣ..! ಆದರೆ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದ್ದು ಯಾಕೆ..? ಇದೇ ರೀತಿ ಬೇರೊಬ್ಬರು ಮಾಡಿದ್ದರೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿರಲಿಲ್ಲವೇ..? ಜಿಲ್ಲಾ ಪೊಲೀಸ್ ಅಧಿಕಾರಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುತ್ತಿರಲಿಲ್ಲವೇ..? ಎನ್ನುವ ಪ್ರಶ್ನೆಗೆ ಚಿತ್ರದುರ್ಗ ಜಿಲ್ಲಾಧಿಕಾರಿ ಉತ್ತರಿಸಬೇಕಿದೆ. ಪ್ರತಿಧ್ವನಿ ಜೊತೆ ಮಾತನಾಡಿರುವ ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರೀಯಾ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ.
ಬುದ್ಧಿ ಹೇಳುವ ಮಿನಿಸ್ಟರ್ ಹೀಗೇಕೆ ಮಾಡಿದರು?
ಪಾದರಾಯನಪುರ ಕಾರ್ಪೊರೇಟರ್ ಒಬ್ಬರಿಗೆ ಕರೋನಾ ಸೋಂಕು ಹರಡಿದ್ದು, ಸೋಂಕಿತ ಕಾರ್ಪೊರೇಟರ್ ಆಸ್ಪತ್ರೆಗೆ ಹೋಗುವಾಗ ಆತನ ಬೆಂಬಲಿಗರು ಜಮಾಯಿಸಿದ್ದರು, ಆಸ್ಪತ್ರೆಗೆ ತೆರಳದೆ ಮನೆಗೆ ಹೋಗಿದ್ದರು ಎಂದು ಬಿಬಿಎಂಪಿ ಅಧಿಕಾರಿಗಳು ದೂರು ದಾಖಲು ಮಾಡಿದ್ದಾರೆ. ಸೋಂಕಿತ ಕಾರ್ಪೋರೇಟರ್ ಅವಾಂತರ ವಿಚಾರದ ಬಗ್ಗೆ ಮಾತನಾಡಿದ್ದ ಇದೇ ಆರೋಗ್ಯ ಸಚಿವ ಶ್ರೀರಾಮುಲು, ಕಾರ್ಪೊರೇಟರ್ ನಡವಳಿಕೆಯನ್ನು ಸರ್ಕಾರ ಸಹಿಸಲ್ಲ, ಕಾರ್ಪೊರೇಟರ್ಗೆ ಕರೋನಾ ಬಂದ ಮೇಲೆ ಅವರು ಸಹಕರಿಸಬೇಕು. ಕೂಡಲೇ ಆಸ್ಪತ್ರೆ ಅಡ್ಮಿಟ್ ಆಗಬೇಕು. ಈ ರೀತಿ ತಪ್ಪಿಸಿಕೊಳ್ಳೋದು ಸರಿಯಲ್ಲ. ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
ಶ್ರೀರಾಮುಲು ಹೇಳಿದ ಮಾತಿನಲ್ಲಿ ಒಂದಕ್ಷರೂ ಸುಳ್ಳಲ್ಲ. ಇದೇ ರೀತಿ ಪಾದರಾಯನಪುರ ಗಲಾಟೆ ವಿಚಾರದಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ಗೂ ಬುದ್ಧಿವಾದ ಹೇಳಿದ್ದ ಸಚಿವರು, ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ನಡೆದುಕೊಂಡು ಕರೋನಾ ತೊಲಗಿಸಬೇಕು ಎಂದಿದ್ದರು. ಆದರೆ, ಇಂದು ಚಿತ್ರದುರ್ಗದಲ್ಲಿ ಹೇಳುವುದು ನೀತಿ, ತಿನ್ನುವುದು ಬದನೇಕಾಯಿ ಎನ್ನುವುದನ್ನು ಸಮಾಜದ ಎದುರು ಜಗಜ್ಜಾಹೀರು ಮಾಡಿದರು.
ಮಾಧ್ಯಮಗಳಲ್ಲಿ ದೊಡ್ಡದಾಗಿ ಸುದ್ದಿಯಾಗ್ತಿದ್ದ ಹಾಗೆ ಆರೋಗ್ಯ ಸಚಿವ ಶ್ರೀರಾಮುಲು ಚಿತ್ರದುರ್ಗ ಖಾಲಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಭೆ ಮಾಡಲು ಅವಕಾಶ ಇಲ್ಲ. ಇಂದಿನ ಮೂರು ಕಾರ್ಯಕ್ರಮಕ್ಕೆ ಹೋಗುವುದನ್ನು ರದ್ದು ಮಾಡಿ ಬೆಂಗಳೂರು ತೆರಳುತ್ತಿದ್ದೇನೆ. ದಯವಿಟ್ಟು ಜನರಲ್ಲಿ ವಿನಂತಿ ಮಾಡುತ್ತೇನೆ ಕರೋನಾದಿಂದ ಪಾರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಗಳ ಮಾತನ್ನು ಕೇಳಿ. ಎಲ್ಲರೂ ಮಾಸ್ಕ್ ಅಥವಾ ಟವಲ್ ಧರಿಸಿ. ಮನೆಯಲ್ಲಿ ಹೋಗಿ ಸೋಪ್ ಅಥವಾ ಸ್ಯಾನಿಟೈಸರ್ನಿಂದ ಕೈ ಸ್ವಚ್ಛ ಮಾಡಿಕೊಳ್ಳಿ. ರಾಜ್ಯದಲ್ಲಿ ಎಲ್ಲರೂ ಸೇರಿ ಕರೋನಾ ನಿಯಂತ್ರಿಸಲು ಪ್ರಯತ್ನ ಮಾಡೋಣ ಎಂದಿದ್ದಾರೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಚಕಾರ ಎತ್ತಿಲ್ಲ.
ಚಿಕಿತ್ಸೆ ಇಲ್ಲದೆ ಇರುವ ಕರೋನಾ ವೈರಾಣು, ಭಾರತ ದೇಶದಲ್ಲಿ 2 ಲಕ್ಷ ಗಡಿ ದಾಟಿ ಮುಂದೆ ಹೊರಟಿದೆ. ಸ್ವತಃ ರಾಜ್ಯದ ಜನರಿಗೆ ಬುದ್ಧಿ ಹೇಳಬೇಕಿದ್ದ ಆರೋಗ್ಯ ಸಚಿವರೇ ಕುರುಡರ ರೀತಿ ವರ್ತಿಸಿರೋದು ನಿಜಕ್ಕೂ ಅಚ್ಚರಿ ಹುಟ್ಟಿಸುವಂತದ್ದು. ಇವರಿಗೆ ತಿಳಿ ಹೇಳುವವರು ಯಾರು ಎಂದು ಕಾದು ನೋಡಬೇಕಷ್ಟೇ!






