ಕರೋನಾ ಸೋಂಕಿನ ಹಿನ್ನೆಲೆಯಲ್ಲಿ ಕುಸಿದ ಆರ್ಥಿಕತೆಗೆ ಚೇತರಿಕೆ ನೀಡಲು 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜನ್ನು ಪ್ರೈಮ್ ಟೈಮ್ ನಲ್ಲಿ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ತೆರೆಮರೆಯಲ್ಲಿ ಏನು ಮಾಡಿದ್ದಾರೆ ಗೊತ್ತಾ??
ಈ ದೇಶದ ಲಕ್ಷಾಂತರ ಹಿರಿಯ ಜೀವಗಳ ಮಾಸಿಕ ಆದಾಯಕ್ಕೆ ಕತ್ತರಿ ಹಾಕಿದ್ದಾರೆ. ಮೋದಿ ಸರ್ಕಾರ ಈ ಸಂಕಷ್ಟ ಕಾಲದಲ್ಲಿ ಹಿರಿಯ ಜೀವಗಳಿಗೆ ನೆರವಾಗುವ ಬದಲು ಕಂಟಕವಾಗಿ ಪರಿಣಮಿಸಿದೆ.

ಮೋದಿ ಸರ್ಕಾರದ ಈ ಕಠಿಣ ನಿರ್ಧಾರದಿಂದ ಹಿರಿಯ ಜೀವಗಳ ಮಾಸಿಕ ಆದಾಯದಲ್ಲಿ ಸರಿಸುಮಾರು ಶೇ. 7.5 ರಿಂದ 10ರಷ್ಟು ಕೊರತೆ ಆಗುತ್ತಿದೆ. ದಿನದಿಂದ ದಿನಕ್ಕೆ ನಿತ್ಯೋಪಯೋಗಿ ಸರಕುಗಳು, ಔಷಧ ಮತ್ತಿತರ ಸೇವೆಗಳು ದುಬಾರಿಯಾಗುತ್ತಿವೆ. ಇಂತಹ ಹೊತ್ತಿನಲ್ಲಿ ಸರ್ಕಾರ ಅದಾಯ ಹೆಚ್ಚಳ ಮಾಡಬೇಕಿತ್ತು. ಆದರೆ ಹಿರಿಯ ಜೀವಗಳ ಆದಾಯವನ್ನು ಮೋದಿ ಸರ್ಕಾರ ಕಡಿತ ಮಾಡಿದೆ.
ಅಷ್ಟಕ್ಕೂ ಆಗಿರುವುದೇನು? ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಮೂರು ವರ್ಷಗಳ ಹಿಂದೆ ‘ಪ್ರಧಾನ ಮಂತ್ರಿ ವಯೋ ವಂದನ ಯೋಜನೆ’ಯನ್ನು (PMVVY) ಜಾರಿಗೆ ತಂದಿತ್ತು. ಈ ಯೋಜನೆಯ ಉದ್ದೇಶವು 60 ವರ್ಷ ಮೀರಿದ ಹಿರಿಯ ನಾಗರಿಕರಿಗೆ ಸುಸ್ಥಿರ ಮಾಸಿಕ ಆದಾಯವನ್ನು ನೀಡುವುದಾಗಿತ್ತು.
ಈ ಯೋಜನೆ ಪ್ರಕಾರ ಹಿರಿಯ ನಾಗರಿಕರು ಗರಿಷ್ಠ 15 ಲಕ್ಷ ರೂಪಾಯಿಗಳನ್ನು ಠೇವಣಿ ಇಡಬೇಕು. ಠೇವಣಿ ಇಟ್ಟ ಹಿರಿಯ ನಾಗರಿಕರಿಗೆ ಶೇ.8ರ ದರದಲ್ಲಿ ಮುಂದಿನ ಹತ್ತು ವರ್ಷಗಳ ವರೆಗೆ ಬಡ್ಡಿಯನ್ನು ನೀಡುವುದು ಸರ್ಕಾರದ ವಾಗ್ದಾನವಾಗಿತ್ತು.
ಬ್ಯಾಂಕುಗಳು ಠೇವಣಿಗಳ ಮೇಲಿನ ಬಡ್ಡಿ ದರವನ್ನು ಏರಿಳಿಸುವ ಕಾರಣದಿಂದ ಮಾಸಿಕ ಆದಾಯದಲ್ಲಿ ಏರಿಳಿತ ಆಗಿ ಹಿರಿಯ ನಾಗರಿಕರಿಗೆ ಅನನುಕೂಲವಾಗುತ್ತಿತ್ತು. ಈ ಕಾರಣಕ್ಕಾಗಿ ನಿವೃತ್ತಿ ಹೊಂದಿದ ಹತ್ತಾರು ಲಕ್ಷ ಹಿರಿಯ ನಾಗರಿಕರು PMVVY ಯೋಜನೆಯಲ್ಲಿ ಠೇವಣಿ ಇಟ್ಟರು. ಕೇಂದ್ರ ಸರ್ಕಾರವೇ ಮುಂದಿನ ಹತ್ತು ವರ್ಷಗಳ ಕಾಲ ಶೇ.8ರಷ್ಟು ಬಡ್ಡಿ ದರವನ್ನು ನಿಗದಿ ಮಾಡಿದ್ದರಿಂದ ನಂಬಿಕೊಂಡರು. ಬೇರೆಡೆ ಇಟ್ಟಿದ್ದ ಠೇವಣಿಗಳನ್ನು ಹಿಂಪಡೆದು PMVVY ಯೋಜನೆಯಲ್ಲಿ ತೊಡಗಿಸಿದರು. ಭಾರತೀಯ ವಿಮಾ ನಿಗಮದ (ಎಲ್ಐಸಿ) ಮೂಲಕ ಠೇವಣಿ ಮೇಲಿನ ಬಡ್ಡಿ ಮೊತ್ತವನ್ನು ಠೇವಣಿದಾರರ ಬ್ಯಾಂಕ್ ಖಾತೆಗೆ ಮಾಸಿಕ ವರ್ಗಾಯಿಸಲಾಗುತ್ತಿದೆ.
ಕರೋನಾ ಸೋಂಕಿನಿಂದ ಲಾಕ್ ಡೌನ್ ಘೋಷಣೆ ಮಾಡಿದ ಪರಿಣಾಮ ಕುಸಿದ ಆರ್ಥಿಕತೆಗೆ ಚೇತರಿಕೆ ನೀಡಲು 20 ಲಕ್ಷ ಕೋಟಿ ಪ್ಯಾಕೇಜ್ ನೀಡಿರುವ ಮೋದಿ ಸರ್ಕಾರ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಅನುದಾನ ಕಡಿತ ಮಾಡುತ್ತಿದೆ.
ಈಗ 2020-21ನೇ ಸಾಲಿನ PMVVY ಯೋಜನೆಯ ಠೇವಣಿ ಮೇಲಿನ ಬಡ್ಡಿಯನ್ನು ಕಡಿತ ಮಾಡಿದೆ.
ಶೇ.8ರಷ್ಟಿದ್ದ ಬಡ್ಡಿಯನ್ನು ಶೇ.7.4ಕ್ಕೆ ತಗ್ಗಿಸಿದೆ. ಮೇಲ್ನೋಟಕ್ಕೆ ಇದು ಶೇ.0.6ರಷ್ಟು ಮಾತ್ರ ಬಡ್ಡಿ ಕಡಿತ ಎನಿಸುತ್ತದೆ. ಆದರೆ ಈ ಬಡ್ಡಿ ಆದಾಯ ನಂಬಿರುವ ಹಿರಿಯ ಜೀವಗಳಿಗೆ ಆಗುವ ಅನ್ಯಾಯ ಬಹು ದೊಡ್ಡದು.
ಶೇ.8 ರಷ್ಟು ಬಡ್ಡಿ ಇದ್ದಾಗ 15 ಲಕ್ಷ ಠೇವಣಿ ಇಟ್ಟವರಿಗೆ ಮಾಸಿಕ 10,000 ರುಪಾಯಿ ಬಡ್ಡಿ ಬರುತ್ತಿತ್ತು. ವರ್ಷಕ್ಕೆ ಒಟ್ಟು ಬಡ್ಡಿ ಆದಾಯವು 1,20,000 ರುಪಾಯಿಗಳಾಷ್ಟುತ್ತಿತ್ತು.
2020 ಏಪ್ರಿಲ್ ತಿಂಗಳಿಂದ ಅನ್ವಯವಾಗುವಂತೆ ಬಡ್ಡಿ ದರವನ್ನು ಶೇ.7.4ಕ್ಕೆ ತಗ್ಗಿಸಲಾಗಿದೆ. ಮಾಸಿಕ 10,000 ಬಡ್ಡಿ ಆದಾಯ ಗಳಿಸುತ್ತಿದ್ದ ಹಿರಿಯ ನಾಗರಿಕರಿಗೆ ಈಗ ಬರುವ ಆದಾಯ 9,250 ರುಪಾಯಿ. ವಾರ್ಷಿಕ ಆದಾಯ 1,11,000 ರುಪಾಯಿ ಮಾತ್ರ.
ಅಂದರೆ ಏಕಾಏಕಿ ಶೇ.7.50ರಷ್ಟು ಆದಾಯವನ್ನು ಕಡಿತ ಮಾಡಿದಂತಾಗಿದೆ.
ಮುಂದಿನ ಹತ್ತು ವರ್ಷಗಳಲ್ಲಿ ಹಿರಿಯ ಜೀವಗಳು 90,000 ರೂಪಾಯಿಗಳನ್ನು ಕಳೆದುಕೊಳ್ಳಲಿವೆ.
ಮುಖ್ಯ ಪ್ರಶ್ನೆ ಏನೆಂದರೆ:
-ಪ್ಯಾಕೇಜ್ ಘೋಷಣೆ ಮಾಡಿ, ಸಂಪನ್ಮೂಲ ಸಂಗ್ರಹಿಸಿ. ಆದರೆ ಹಿರಿಯ ಜೀವಗಳು ನಂಬಿ ಬದುಕುವ ಬಡ್ಡಿ ಆದಾಯಕ್ಕೂ ಕನ್ನ ಹಾಕುವುದು ಸರಿಯೇ?
-ಹಿರಿಯ ನಾಗರಿಕರನ್ನು ಸರ್ಕಾರ ನಡೆಸಿಕೊಳ್ಳುವ ರೀತಿಯೇ ಇದು?
-ಯೋಜನೆ ಘೋಷಣೆ ಮಾಡಿದಾಗ ವಾಗ್ದಾನ ನೀಡಿದಂತೆ ಶೇ.8ರ ಬಡ್ಡಿ ದರವನ್ನು ಕಾಯ್ದುಕೊಳ್ಳುವುದು ಕೇಂದ್ರ ಸರ್ಕಾರದ ನೈತಿಕ ಜವಾಬ್ದಾರಿ ಅಲ್ಲವೇ?
-ಪ್ಯಾಕೇಜ್ ಹೆಸರಿನಲ್ಲಿ 20 ಲಕ್ಷ ಕೋಟಿ ರುಪಾಯಿ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುವ ವ ಸರ್ಕಾರಕ್ಕೆ 5-6 ಸಾವಿರ ಕೋಟಿ ರುಪಾಯಿ ಹೊರೆ ಆಗಿಬಿಡುತ್ತಿತ್ತೇ??
-ಕೊರೊನಾ ಸೋಂಕು ಹಿರಿಯ ನಾಗರಿಕರಿಗೆ ತ್ವರಿತವಾಗಿ ತಗಲುವ ಅಪಾಯ ಇರುವುದರಿಂದ ಈ ಹಿರಿಯ ಜೀವಗಳು ಸುರಕ್ಷತಾ ಕ್ರಮಗಳಿಗಾಗಿ ಹೆಚ್ಚಿನ ವೆಚ್ಚ ಭರಿಸಬೇಕಾಗುತ್ತದೆ. ಅಂತಹ ಸಮಯದಲ್ಲಿ ಅವರ ಆದಾಯಕ್ಕೆ ಕತ್ತರಿ ಹಾಕುವುದು ಸರಿಯೇ?
-ಆಗಿರುವ ತಪ್ಪು ತಿದ್ದಿಕೊಂಡು ನಾಗರಿಕರಿಗೆ ಆಗಿರುವ ಅಗಿರುವ ಅನ್ಯಾಯ ಸರಿಪಡಿಸುವ ಸೌಜನ್ಯವನ್ನು ನರೇಂದ್ರ ಮೋದಿ ಸರ್ಕಾರ ತೋರುವುದೇ?!






