ಮಾರ್ಚ್ 26 ರಂದು ಪಿಎಂ ಗರೀಬ್ ಕಲ್ಯಾಣ್ ಪ್ಯಾಕೇಜ್ ಘೋಷಿಸುವಾಗ , 2020-21ರ ಪಿಎಂ ಕಿಸಾನ್ ನ ಮೊದಲ ಕಂತನ್ನು 8.69ಕೋಟಿ ರೈತರಿಗೆ ತಕ್ಷಣವೇ ಪಾವತಿಸಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದರು.ಹಣಕಾಸು ಸಚಿವೆ ತಕ್ಷಣವೇ ನೀಡಲಾಗುತ್ತದೆ ಎಂದರೂ 1.82 ಕೋಟಿಗೂ ಅಧಿಕ ರೈತರಿಗೆ ಎಪ್ರಿಲ್-ಜುಲೈ ಅವಧಿಗೆ ಬರಬೇಕಿದ್ದ 2000 ರುಪಾಯಿಗಳು ಎರಡು ವಾರಗಳು ಕಳೆದರೂ ಖಾತೆಗೆ ಜಮಾವಣೆಗೊಂಡಿಲ್ಲ.
ಎಪ್ರಿಲ್ 9 ರ ಸಂಜೆ 2020-21ರ ಮೊದಲ ಕಂತನ್ನು 6.86ಕೋಟಿ ರೈತರಿಗೆ ಖಾತೆಗೆ ವರ್ಗಾಯಿಸಲಾಗಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಅಂಕಿಅಂಶ ಒದಗಿಸಿದೆ. ಆದರೆ ಐದರಲ್ಲಿ ಒಬ್ಬ ರೈತನಿಗೆ ಮಾತ್ರ ನಿರ್ಮಲಾ ಸೀತರಾಮನ್ ಹೇಳಿದ ಪ್ರಯೋಜನ ಸಿಗಲಿದೆ ಅಂತಾ ಹೇಳಲಾಗಿದೆ.
ಲಾಕ್ಡೌನ್ ಘೋಷಿಸಿದಾಗಿನಿಂದ ಒಟ್ಟಾರೆಯಾಗಿ 15400 ಕೋಟಿ ರುಪಾಯಿಗಳನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ, ಅದರಲ್ಲಿ 1675 ಕೋಟಿ ರುಪಾಯಿಗಳು ಕಳೆದ ವರ್ಷದ ಬಾಕಿಯಾದ ಎಂದು ಸಚಿವಾಲಯ ತಿಳಿಸಿದೆ.
ಹಣಕಾಸು ವರ್ಷದ ಪ್ರಾರಂಭದ ಹತ್ತು ದಿನಗಳೊಳಗೆ 6.86 ಕೋಟಿ ರೈತರಿಗೆ 2020-21ರ ಮೊದಲ ಕಂತನ್ನು ಪಾವತಿಸಲಾಗಿದೆ. ಅದಾಗ್ಯೂ, ಪ್ಯಾಕೇಜ್ ಘೋಷಣೆಯ ಸಂಧರ್ಭದಲ್ಲಿ ಪಿಎಂ ಕಿಸಾನ್ CEO ವಿವೇಕ್ ಅಗರ್ವಾಲ್ ಅವರು 9 ಕೋಟಿ ರೈತರಿಗೆ ಎಪ್ರಿಲ್ ಮೊದಲ ವಾರದೊಳಗೆ ಪಾವತಿ ಮಾಡಲಾಗುತ್ತದೆಂದು ಕೊಟ್ಟ ಭರವಸೆ ಇನ್ನೂ ಪೂರ್ತಿಯಾಗಿಲ್ಲ. ಪಿಎಂ ಕಿಸಾನ್ ಅಡಿಯಲ್ಲಿ ನೋಂದಾಯಿಸಲ್ಪಟ್ಟ 2.13 ಕೋಟಿ ರೈತರಿಗೆ ಇನ್ನೂ ಮೊದಲ ಕಂತು ಪಾವತಿಸಬೇಕಾಗಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆ ಘೋಷಿಸುವಾಗ 12.5 ಕೋಟಿ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದರು. NDA ಸರಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯಿಂದ 14.5ಕೋಟಿ ರೈತರು ಫಲಾನುಭವಿಗಳಾಗುವಂತೆ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಹೇಳಿತ್ತು. ಆದರೆ ರಾಜ್ಯಸರಕಾರಗಳ ನಿಷ್ಕ್ರಿಯತೆಯಿಂದ ಕೇಂದ್ರ ಸರಕಾರ ಉದ್ದೇಶಿಸಿದ್ದ ಫಲಾನುಭವಿಗಳ ಅರ್ಧದಷ್ಟು ಮಾತ್ರ ಫಲಾನುಭವಿಗಳು ಇದುವರೆಗೆ ಮೊದಲ ಕಂತು ಪಡೆದುಕೊಂಡಿದ್ದಾರೆ.

ಪಶ್ಚಿಮ ಬಂಗಾಳ ಸರಕಾರವು ಇದುವರೆಗೆ ಈ ಯೋಜನೆಯನ್ನು ತನ್ನ ರಾಜ್ಯದಲ್ಲಿ ವಿಸ್ತರಿಸಲು ತನ್ನ ವಿರೋಧ ವ್ಯಕ್ತಪಡಿಸಿದೆ. ಆದ್ದರಿಂದ ಪಶ್ಚಿಮ ಬಂಗಾಳದ 70 ಲಕ್ಷ ರೈತರಲ್ಲಿ ಯಾರೊಬ್ಬರೂ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಪ್ರಯೋಜನ ಪಡೆಯಲಿಲ್ಲ. ರಾಜ್ಯಗಳು ರೈತರನ್ನು ಈ ಯೋಜನೆಯಡಿ ನೋಂದಾಯಿಸದವರೆಗೆ ಕೇಂದ್ರವು ಈ ಯೋಜನೆಯ ಹಣವನ್ನು ವರ್ಗಾಯಿಸಲು ಸಾಧ್ಯವಿಲ್ಲ.
ನೋಂದಾವಣೆಯ ಸಂಧರ್ಭದಲ್ಲಿ ಪರಿಶೀಲನೆ ಸಮಸ್ಯೆಗಳು, ಆಧಾರ್ ಲಿಂಕ್ ಸಮಸ್ಯೆಗಳು ಮುಂತಾದವುಗಳಲ್ಲಿ ಕೇಂದ್ರ ಸರಕಾರದ ಅಸಮರ್ಥತೆಯೂ ಕಂಡುಬರುತ್ತವೆ.ಈ ಎಲ್ಲಾ ಕಾರಣದಿಂದಾಗಿ ಈ ಯೋಜನೆ ಪ್ರಾರಂಭಸಿದ ಸಮಯದಲ್ಲಿ ಕೇಂದ್ರ ಸರಕಾರ ಉದ್ದೇಶಿಸಿದಷ್ಟು ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಕಿಸಾನ್ ಯೋಜನೆ ಪ್ರಾರಂಭಿಸಿದ ಮೊದಲ ವರ್ಷದಲ್ಲಿ ಸುಮಾರು 75%ರೈತರು ಎಲ್ಲಾ ಮೂರು ಕಂತುಗಳನ್ನು ಪಡೆದುಕೊಂಡಿಲ್ಲ.
ಇದರರ್ಥ 2018-19 ಹಾಗೂ 2019-20ರಲ್ಲಿ ಈ ಯೋಜನೆಗೆ ಮೀಸಲಿಟ್ಟ 95000 ಕೋಟಿ ರುಪಾಯಿಗಳಲ್ಲಿ ಕೇವಲ 56000 ಕೋಟಿ ರುಪಾಯಿಗಳನ್ನು ಬಳಸಲಾಗಿದೆ, 39,000ಕೋಟಿ ರುಪಾಯಿಗಳನ್ನು ಬಳಸದೆ ಬಾಕಿಮಾಡಲಾಗಿದೆ.






