ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ(Vijayalakshmi Darshan) ಇಂದು ಏಕಾಏಕಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ್ದರು. ಮೊನ್ನೆ ಮೊನ್ನೆಯಷ್ಟೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ವಿಜಯಲಕ್ಷ್ಮಿ ಇದೀಗ ಮತ್ತೆ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿರುವುದು ಅನೇಕರ ಕುತೂಹಲಕ್ಕೆ ಕಾರಣವಾಗಿದ್ದು, ಈ ಭೇಟಿ ಹಿಂದಿನ ಅಸಲಿ ಸತ್ಯ ಏನು ಎನ್ನುವುದು ಈಗ ಹೊರಬಿದ್ದಿದೆ.

ಫ್ಯಾನ್ಸ್ ವಾರ್ ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದಂತೆ ಕಮೆಂಟ್ ಹಾಕುವ ವಿಕೃತ ಮನಸ್ಸಿನ ನೆಟ್ಟಿಗರ ವಿರುದ್ಧ ಸಿಡಿದೆದ್ದಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಳೆದ ವಾರ ಸಿಸಿಬಿಗೆ ದೂರು ನೀಡಿದ್ದರು. ಅಲ್ಲದೇ ತಮ್ಮ ಬಗ್ಗೆ ಹೀನಾಮಾನವಾಗಿ ಕಮೆಂಟ್ ಮಾಡಿದವರ ಪ್ರೊಫೈಲ್ ಸಮೇತ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು. ಈ ಮೂಲಕ ವಿಜಯಲಕ್ಷ್ಮಿ, ಕೆಟ್ಟ ಕಮೆಂಟ್ ಹಾಕುವವರಿಗೆ ಬಿಸಿ ಮುಟ್ಟಿಸಿದ್ದರು. ಅತ್ತ ಸಿಸಿಬಿ ಪೊಲೀಸರು ಕೂಡ ವಿಜಯಲಕ್ಷ್ಮಿ ದೂರು ದಾಖಲಿಸಿಕೊಂಡು ಶೀಘ್ರವೇ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು.

ದೂರು ದಾಖಲಾಗಿ ತಮ್ಮ ಬುಡಕ್ಕೆ ಬಿಸಿ ಕಾಯುತ್ತಿದ್ದಂತೆ ಥಟ್ ಅಂತ ಎಚ್ಚೆತ್ತುಕೊಂಡ ಹಲವು ಟ್ರೋಲ್ ಪೇಜ್ಗಳು, ಇನ್ಸ್ಟಾಗ್ರಾಮ್ ಪ್ರೊಫೈಲ್ಗಳು ರಾತ್ರಿ ಬೆಳಗಾಗುವುದರ ಒಳಗೆ ಬ್ಲಾಕ್ ಆಗಿ ಡಿಲಿಟ್ ಆಗಿಬಿಟ್ಟಿದ್ದವು, ಇನ್ನೂ ಕೆಲವರು ವಿಡಿಯೋ ಮಾಡುವ ಮೂಲಕ ನೇರವಾಗಿ ವಿಜಯಲಕ್ಷ್ಮಿ ಅವರಿಗೆ ಕ್ಷಮೆ ಕೇಳಿದರು. ಜೊತೆಗೆ ಕೆಲ ಟ್ರೋಲ್ ಪೇಜ್ ಅಡ್ಮಿನ್ಗಳ ಬಂಧನವಾಯ್ತು ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆದರೆ ಇದು ಸತ್ಯಕ್ಕೆ ದೂರವಾಗಿದೆ ಎನ್ನುವುದು ಇಂದಿನ ವಿಜಯಲಕ್ಷ್ಮಿ ಅವರ ಪೋಸ್ಟ್ವೊಂದರಿಂದ ಸ್ಪಷ್ಟವಾಗಿದೆ.

ಹೌದು, ಕೆಟ್ಟ ಕಮೆಂಟ್ ಹಾಕುವವರ ವಿರುದ್ಧ ಸಮರ ಸಾರಿದ್ದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಂದು ನೇರವಾಗಿ ಬೆಂಗಳೂರು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಾನು ಸಲ್ಲಿಸಿದ ದೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ನಮ್ಮ ದೇಶದಲ್ಲಿ ಕಾನೂನು ವ್ಯವಸ್ಥೆ ಎಲ್ಲರಿಗೂ ಒಂದೇ ಎಂದು ನಾನು ಯಾವಾಗಲೂ ನಂಬಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ. ಬೇರೆ ಮಹಿಳೆ ನೀಡಿದ ದೂರನ್ನು ಒಂದು ದಿನದೊಳಗೆ ಕ್ರಮ ಕೈಗೊಳ್ಳಲಾಗಿದೆ. ಇದು ನಿಜವಾಗಿಯೂ ನನಗೆ ಆಶ್ಚರ್ಯವಾಗಿದೆ. ನನ್ನ ದೂರು ಮುಖ್ಯವಲ್ಲವೇ?. ನನ್ನ ವಕೀಲರಿಂದ ನಿರಂತರ ಫಾಲೋ-ಅಪ್ಗಳ ನಂತರವೂ ಯಾವುದೇ ಕ್ರಮವಿಲ್ಲ. ಇಂದು ನಾನು ವೈಯಕ್ತಿಕವಾಗಿ ಹೋಗಿ ಅವರಿಗೆ ನೆನಪಿಸಬೇಕಾಯಿತು. ಯಾವುದೇ ಬಾಹ್ಯ ಒತ್ತಡ ಅಥವಾ ಪ್ರಭಾವ ಈ ವಿಳಂಬಕ್ಕೆ ಕಾರಣ ಆಗಿರದಿರಲಿ. ನಾನು ಇದನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ವಿಜಯಲಕ್ಷ್ಮಿ ಮಾಡಿದ್ದಾರೆ. ಈ ಮೂಲಕ ಪೊಲೀಸರು ತಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

ಈ ಪೋಸ್ಟ್ನಲ್ಲಿ ಬೇರೆ ಮಹಿಳೆ ನೀಡಿದ ದೂರನ್ನು ಒಂದು ದಿನದೊಳಗೆ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಸಾಲೊಂದು ಹೈಲೈಟ್ ಆಗಿದ್ದು, ಇದು ಸತ್ಯಕ್ಕೆ ಬಹಳ ಹತ್ತಿರ ಅನಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇತ್ತೀಚಿಗೆ ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಕೂಡ ಇದೇ ವಿಚಾರವಾಗಿ ದೂರು ದಾಖಲಿಸಿದ್ದರು. ನಟ ದರ್ಶನ್ ಪ್ರಕರಣದ ಸಂಬಂಧ ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿ ಪೋಸ್ಟ್ ಹಾಕಿದ್ದರು. ಇದರ ಬೆನ್ನಲ್ಲೇ ಕೆಲ ಕಿಡಿಗೇಡಿಗಳು ನಟಿ ರಮ್ಯಾಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಮತ್ತು ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿತ್ತು. ದೂರು ಕೂಡ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 12ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು, ಆರೋಪಿಗಳ ಕುಟುಂಬದವರ ಮನವಿ ಮೇರೆಗೆ ನಟಿ ರಮ್ಯಾ ಅವರನ್ನು ಕ್ಷಮಿಸಲು ಒಪ್ಪಿಗೆ ನೀಡಿದ್ದರು. ಅತ್ತ ರಮ್ಯಾ, ಕೆಲವರಿಗೆ ಕ್ಷಮೆ ನೀಡಿದ್ದರೆ, ಇತ್ತ ಪೊಲೀಸರು ತನಿಖೆ ಮುಂದುವರಿಸಿದ್ದರು.

ಈ ಪ್ರಕರಣದಲ್ಲಿ ಇಷ್ಟೊಂದು ಮುತುವರ್ಜಿ ವಹಿಸಿದ್ದ ಪೊಲೀಸರು ವಿಜಯಲಕ್ಷ್ಮಿ ದೂರಿನ ಬಗ್ಗೆ ಯಾಕೆ ಗಮನ ವಹಿಸಿಲ್ಲ ಎನ್ನುವುದು ಕೆಲ ದರ್ಶನ್ ಅಭಿಮಾನಿಗಳ ಪ್ರಶ್ನೆಯಾಗಿದೆ. ನಟಿ ರಮ್ಯಾ ಕಾಂಗ್ರೆಸ್ ಪಕ್ಷದವರೇ ಆದ ಕಾರಣ ರಾಜ್ಯ ಸರ್ಕಾರದ ಗೃಹ ಇಲಾಖೆ ಹಾಗೂ ಪೊಲೀಸರು ಅಷ್ಟೊಂದು ಪ್ರಾಮುಖ್ಯತೆ ನೀಡಿದರೆ..? ವಿಜಯಲಕ್ಷ್ಮಿ ಪತಿ ದರ್ಶನ್ ಜೈಲಿನಲ್ಲಿರುವ ಕಾರಣ ಆಕೆಗೆ ಮಾನಸಿಕ ಹಿಂಸೆ ನೀಡಿದರೂ ಕೂಡ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರು ಹಿಂದೇಟು ಹಾಕಿದರೇ ಎನ್ನುವ ಪ್ರಶ್ನೆಗಳು ಉದ್ಭವವಾಗಿದ್ದು, ದರ್ಶನ್ ಅಭಿಮಾನಿಗಳು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಇನ್ನಾದರೂ ಪೊಲೀಸರು ಎಚ್ಚೆತ್ತುಕೊಂಡು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೆಟ್ಟ ಕಮೆಂಟ್ ಹಾಕಿ ವಿಕೃತಿ ಮರೆದವರನ್ನು ಮಟ್ಟಹಾಕುತ್ತಾರಾ ಕಾದು ನೋಡಬೇಕಿದೆ.






