ಬೆಂಗಳೂರು: ರಾಜ್ಯದಲ್ಲಿ ಪ್ರತಿಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ದರಿದ್ರವನ್ನು ಜೊತೆಗೇ ತರುತ್ತದೆ. ಯಾವುದೇ ಕಾರಣಕ್ಕೂ ರೈತರನ್ನು ಕೈ ಬಿಡಬಾರದಿತ್ತು ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪ ಮಾಡಿದ್ದಾರೆ.

ಈ ಕುರಿತು ಮಾಧ್ಯುಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ದರಿದ್ರವನ್ನು ಜೊತೆಗೇ ತರುತ್ತದೆ. ರೈತರನ್ನು ಕೈ ಬಿಡಬಾರದಿತ್ತು. ಕೇಂದ್ರ ಹಣ ಕೊಟ್ಟಿಲ್ಲ ಅಂತ ಬಿಜೆಪಿ ಸರ್ಕಾರ ಇದ್ದಾಗ ಯಾವತ್ತೂ ಹೇಳಿಲ್ಲ. ಈಗ ಕಾಂಗ್ರೆಸ್ ಕೇಂದ್ರದ ಕಡೆ ಕೈ ತೋರಿಸ್ತಿದೆ. ರಾಜ್ಯದ 193 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಅಂತ ನೀವೇ ಹೇಳಿದ್ದೀರಿ. ಕೇವಲ ಗ್ಯಾರಂಟಿಗಳನ್ನು ಮಾತ್ರ ಗಮನಿಸೋದಾ ನೀವು. ಹಣಕಾಸು ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಿ. ನಾವು ಖಾಲಿ ಆಗಿದ್ದೀವಿ ಅಂತಾ ಘೋಷಣೆ ಮಾಡಿಕೊಳ್ಳಿ ಎಂದು ಹೇಳಿದರು.
ಶಾಸಕರ ಅನುದಾನ ಎಲ್ಲವನ್ನೂ ಬೇರೆ ಕೆಲಸಗಳಿಗೆ ಬಳಸಿಕೊಳ್ಳಲಾಗ್ತಿದೆ. ಬ್ರಾಂಡ್ ಬೆಂಗಳೂರು ಅಂತಾ ಹೇಳಿಕೊಳ್ತೀರಿ. ಬ್ರಾಂಡ್ ಅಲ್ಲ ಬ್ಯಾಂಡ್ ಬೆಂಗಳೂರು ಇದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ನಗರ ಬೆಂಗಳೂರು. ಇದನ್ನು ನೀವೇನು ಹೊಸದಾಗಿ ಮಾಡಬೇಕಾಗಿಲ್ಲ. ಬೆಂಗಳೂರು ಸುತ್ತ ನೀವು ಮಾಡ್ತಾ ಇರೋ ಬ್ರಾಂಡ್ ಗೊತ್ತಿದೆ ನಮಗೆ. ಮೊದಲು ರೈತರ ಬಗ್ಗೆ ಯೋಚನೆ ಮಾಡಿ. ಇಲ್ಲಿನ ರೈತರಿಗೆ ನೀರಿಲ್ಲ. ತಮಿಳುನಾಡು ರೈತರ ಬಗ್ಗೆ ಮಾತಾಡ್ತೀರಾ. ಇಲ್ಲಿನವರಿಗೆ ಕೊಡಲು ನೀರಿಲ್ಲ. ಚುನಾವಣೆಗಾಗಿ ಯಾರನ್ನೋ ಓಲೈಕೆ ಮಾಡಬಾರದು ಎಂದು ಟೀಕಿಸಿದರು.





