ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ದೇಶದ ಜನರು ಭಾವಿಸಿದ್ದಾರೆ. ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಣೆ ಮಾಡುವ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದ ಜೊತೆಗೆ ಸಂವಿಧಾನದ ರಕ್ಷಣೆಗೆ ಮಾಧ್ಯಮ ಕೂಡ ಕೆಲಸ ಮಾಡುತ್ತದೆ.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬಂದಾಗ ಜನರ ಅಭಿಪ್ರಾಯ ರೂಪಿಸಲು ಮಾಧ್ಯಮದ ಬಹುದೊಡ್ಡ ಕೆಲಸ ಮಾಡುತ್ತದೆ. ಜನಾಭಿಪ್ರಾಯ ಸಂಗ್ರಹ ಮಾಡಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಕಣ್ತೆರೆಸುವ ಕೆಲಸ ಮಾಡುತ್ತದೆ ಎನ್ನುವುದು ಮಾಧ್ಯಮಗಳ ಮೇಲಿದ್ದ ನಂಬಿಕೆ.
ಆದರೆ ಇತ್ತೀಚಿನ ದಿನಗಳಲ್ಲಿ ಮಾಧ್ಯಮ ರಂಗ ಪ್ರಜಾಪ್ರಭುತ್ವದ ಕಾವಲು ನಾಯಿ ರೀತಿಯಲ್ಲಿ ಕೆಲಸ ಮಾಡ್ತಿದ್ಯಾ..? ಅಥವಾ ಯಾರೋ ಒಬ್ಬರಿಗೆ ಅನುಕೂಲ ಮಾಡಿಕೊಡುವ ಕೆಲಸ ಮಾಡ್ತಿದ್ಯಾ..? ಅನ್ನೋ ಅನುಮಾನ ಸಾರ್ವಜನಿಕರನ್ನೇ ಕಾಡುವುದಕ್ಕೆ ಶುರು ಮಾಡಿದೆ.
ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ವಿವಾದಾತ್ಮಕ ಹೇಳಿಕೆ..!
ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಭಾಷಣ ಮಾಡುತ್ತ ಬಿಜೆಪಿಯವರು ರಕ್ಕಸರು ಎಂದು ಉಲ್ಲೇಖ ಮಾಡಿದ್ದಾರೆ. ಈ ಮಾತನ್ನು ಎಲ್ಲಾ ಮಾಧ್ಯಮಗಳು ವಿವಾದಿತ ಹೇಳಿಕೆ ನೀಡಿದ್ದಾರೆ ಎಂದು ವರದಿ ಮಾಡಿವೆ.
ಹೌದು ಒಂದು ರಾಜಕೀಯ ಪಕ್ಷ ಹಾಗು ರಾಜಕೀಯ ಪಕ್ಷಗಳ ಕಾರ್ಯಕರ್ತರ ಬಗ್ಗೆ ಸುರ್ಜೇವಾಲ ನೀಡಿರುವ ಹೇಳಿಕೆ ವಿವಾದಿತವೇ ಸರಿ. ಮಾಧ್ಯಮಗಳು ವರದಿ ಮಾಡಿರುವುದೂ ಕೂಡ ಸರಿಯಾಗಿದೆ. ಆದರೆ ಇದೇ ರೀತಿ ಬಿಜೆಪಿ ನಾಯಕರು ಕಾಂಗ್ರೆಸ್ ಬಗ್ಗೆ ಟೀಕೆ ಮಾಡಿದಾಗ ಮಾಧ್ಯಮಗಳು ಮೌನಕ್ಕೆ ಶರಣಾಗುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಜನರನ್ನು ಕಾಡುವುದಕ್ಕೆ ಶುರು ಮಾಡಿದೆ. ಕಾಂಗ್ರೆಸ್ ನಾಯಕರ ಹೇಳಿಕೆಗಳು ಮಾತ್ರ ವಿವಾದಿತ ಆಗುವುದು ಹೇಗೆ..? ಎನ್ನುವ ಪ್ರಶ್ನೆಗೆ ಮಾಧ್ಯಮಗಳ ಮೌನವೇ ಉತ್ತರ ಸರಿನಾ..? ಗೊತ್ತಿಲ್ಲ.
ಸಂಸತ್ನಲ್ಲಿ ವಿಪಕ್ಷಗಳ ಬಗ್ಗೆ ಹೇಳಿದ ಮಾತು ವಿವಾದಿತ ಅಲ್ಲವೇ..?
ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರು. ವಿರೋಧ ಪಕ್ಷಗಳ ಆರೋಪದ ಬಳಿಕ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಇಂಡಿಯಾ ಒಕ್ಕೂಟವನ್ನು ಘಮಾಂಡಿ ಎಂದು ಸಂಬೋಧಿಸಿದ್ದರು. ಘಮಾಂಡಿ ಒಕ್ಕೂಟ ಎಂದರೆ ದುರಹಂಕಾರಿಗಳ ಒಕ್ಕೂಟ ಎಂದು ಹಿಯಾಳಿಸಿದ್ದರು.
ರಾಜಕೀಯ ಪಕ್ಷಗಳ ಒಕ್ಕೂಟವನ್ನು ಓರ್ವ ಪ್ರಧಾನಿ ಅವರು ಸಂಸತ್ನಲ್ಲಿ ಟೀಕಿಸಿದ್ದು ವಿವಾದಿತ ಯಾಕೆ ಆಗುವುದಿಲ್ಲ..? ಬಿಜೆಪಿಗೆ ಎದುರಾಳಿಗಳಾಗಿ ಒಕ್ಕೂಟ ರಚನೆ ಆಗಿರಬಹುದು. ಮುಂದಿನ ಲೋಕಸಭಾ ಚುನಾವಣೆ ಬಿಜೆಪಿಗೆ ಅಂದುಕೊಂಡಷ್ಟು ಸುಲಭ ಆಗಿಲ್ಲದೆ ಇರಬಹುದು. ಆದರೆ ಇಂಡಿಯಾ ದುರಹಂಕಾರಿಗಳ ಕೂಟ ಎಂದು ಹೇಳುವುದನ್ನು ಮಾಧ್ಯಮಗಳು ಸಾಮಾನ್ಯ ಸುದ್ದಿ ಎಂಬಂತೆ ವರದಿ ಮಾಡುತ್ತವೆ. ಇದು ಸರೀನಾ..? ಮಾಧ್ಯಮಗಳೇ ಉತ್ತರಿಸಬೇಕಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಆಗುತ್ತಿದೆ ಮಾಧ್ಯಮ ರಂಗ..!
ಪ್ರಜಾಪ್ರಭುತ್ವದಲ್ಲಿ ಮೂರು ಅಂಗಗಳಾದ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಯಾವುದೇ ಒಂದು ಅಂಗ ಮತ್ತೊಂದು ಅಂಗದ ಕೆಲಸ ಕಾರ್ಯಗಳಲ್ಲಿ ಮೂಗು ತೂರಿಸುವಂತಿಲ್ಲ. ಪರಸ್ಪರ ಸಹಕಾರದಿಂದ ಕೆಲಸ ಮಾಡಿಕೊಂಡು ಕಾನೂನು ಪಾಲಿಸಬೇಕಿದೆ.
![ಮಾಧ್ಯಮ](https://pratidhvani.com/wp-content/uploads/2023/08/medae-1024x755.jpg)
ಈ ಸುದ್ದಿ ಓದಿದ್ದೀರಾ? ಹಿಮಾಚಲ ಪ್ರದೇಶ | ಮೇಘಸ್ಫೋಟದಿಂದ ಮನೆಗಳ ಕುಸಿತ ; 7 ಮಂದಿ ಸಾವು
ಯಾವುದೇ ಒಂದು ಅಂಗ ಮತ್ತೊಂದು ಅಂಗದ ಮೇಲೆ ದಬ್ಬಾಳಿಕೆ ಮಾಡುವಂತಿಲ್ಲ. ಒಂದು ವೇಳೆ ಈ ಮೂರು ಅಂಗಗಳ ನಡುವೆ ಏರುಪೇರು ಕಂಡಾಗ ಮಾಧ್ಯಮ ತಿದ್ದುವ ಕೆಲಸ ಮಾಡಬೇಕಿದೆ. ಶಾಸಕಾಂಗ ಕಾರ್ಯಾಂಗದ ಮೇಲೆ ದಬ್ಬಾಳಿಕೆ ಮಾಡಿದಾಗ, ಶಾಸಕಾಂಗದಲ್ಲಿ ಆಡಳಿತಕ್ಕಾಗಿ ಪರಸ್ಪರ ಬಿರುಕು ಕಾಣಿಸಿದಾಗ ಮಾಧ್ಯಮಗಳು ಎಚ್ಚರಿಸುವ ಕೆಲಸ ಮಾಡಬೇಕು. ಯಾವುದೇ ಒಂದು ಅಂಗದ ಪರವಾಗಿ ಕೆಲಸ ಮಾಡಿದರೆ ಜನಾಭಿಪ್ರಾಯ ವಿರುದ್ಧ ದಿಕ್ಕಿನ ಆಕರ್ಷಣೆ ಪಡೆಯುವ ಸಾಧ್ಯತೆ ಇರುತ್ತದೆ.
ಅದೇ ರೀತಿ ಒಂದು ಪಕ್ಷದ ಅಡಿಯಾಳಿನ ರೀತಿಯಲ್ಲಿ ಮಾಧ್ಯಮಗಳು ಕೆಲಸ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾರಕ ಅನ್ನೋ ಮಾತುಗಳು ಕೇಲಿ ಬರುತ್ತಿದೆ. ಕಾಲ ಉರುಳಿದಂತೆ ಮಧ್ಯಮಗಳು ತಮ್ಮ ಜವಾಬ್ದಾರಿ ಅರಿತು ದೇಶ ಕಟ್ಟುವ ಕಾರ್ಯಕ್ಕೆ ಕೈ ಜೋಡಿಸಬೇಕಿದೆ. ಇಲ್ಲದಿದ್ರೆ ಪ್ರಜಾಪ್ರಭುತ್ವದ ಕಾವಲು ನಾಯಿ ಬದುಕಿದ್ದೂ ಸತ್ತಂತೆ ಎನ್ನುವಂತಾಗುತ್ತದೆ.