ಮೈಸೂರು: ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ನಮ್ಮ ಹುಷಾರಿನಲ್ಲಿ ನಾವು ಇರಬೇಕು, ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು.
ಸಿನಿಮಾ ಮಂದಿರಗಳಲ್ಲಿ ಮಾಸ್ಕ್ ಕಡ್ಡಾಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದರಿಂದ ಅಭಿಮಾನಿಗಳಿಗೆ ಕಷ್ಟವಾಗುತ್ತದೆ. ಆದರೆ ಎಷ್ಟರ ಮಟ್ಟಿಗೆ ಕೋವಿಡ್ ಇದೆ ಅನ್ನೋದು ಗೊತ್ತಿಲ್ಲ. ಇದು ಎಫೆಕ್ಟ್ ಆಗುತ್ತೇ ಅನಿಸಲ್ಲ ಮೊದಲ ಕೋವಿಡ್ ರೀತಿ ಎಫೆಕ್ಟ್ ಆಗಲ್ಲ. ಆದರೆ ಎಲ್ಲರೂ ಕೇರ್ ಫುಲ್ ಆಗಿರೋದು ಒಳ್ಳೆಯದು ಎಂದರು.
ಅಲ್ಲದೇ ಜನರಿಗೆ ಅವರದೇ ಆದ ಸ್ವಾತಂತ್ರ್ಯವಿದೆ, ಎಲ್ಲರೂ ಜನರ ಸ್ವಾತಂತ್ರ್ಯವನ್ನು ಗೌರವಿಸಬೇಕು. ಸ್ವಾತಂತ್ರ್ಯವಿರುವ ದೇಶದಲ್ಲಿದ್ದು ಸ್ವಾತಂತ್ರ್ಯ ಇಲ್ಲ ಅಂದರೆ ಹೇಗೆ? ಎಲ್ಲದಕ್ಕೂ ಕಡಿವಾಣ ಹಾಕೋದು ಸರಿ ಅಲ್ಲ. ನಮ್ಮ ಹುಷಾರಲ್ಲಿ ನಾವು ಇರಬೇಕು, ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಈ ರೀತಿ ಬರ್ತಾನೆ ಇರುತ್ತದೆ ಏನೇ ಬಂದರೂ ಎದುರಿಸಬೇಕು ಎಂದು ತಿಳಿಸಿದರು.
ಚಿತ್ರಮಂದಿರಕ್ಕೆ ಭೇಟಿ:
ವೇದಾ ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೆ ನಟ ಶಿವರಾಜ್ ಕುಮಾರ್ ಹಾಗೂ ಚಿತ್ರ ತಂಡದ ಸದಸ್ಯರು ಮೈಸೂರಿಗೆ ಭೇಟಿ ನೀಡಿದ್ದರು. ನಗರದ ಉಡ್ಲ್ಯಾಂಡ್ ಚಿತ್ರಮಂದಿರಕ್ಕೆ ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್, ಚಿತ್ರದ ನಿರ್ದೇಶಕ ಎ ಹರ್ಷ ಸೇರಿದಂತೆ ಹಲವರು ಆಗಮಿಸಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಗಮಿಸುತ್ತಿರುವ ವಿಷಯ ತಿಳಿದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಅಭಿಮಾನಿಗಳು ಪಟಾಕಿ ಸಿಡಿಸಿ, ಹೂವಿನ ಸುರಿಮಳೆಗೈದು ಅದ್ದೂರಿ ಸ್ವಾಗತ ಕೋರಿದರು.






