ಕೊಪ್ಪಳ: ಸಾರಾಯಿ ಎಂದು ಭಾವಿಸಿ ಸ್ಪಿರಿಟ್ ಸೇವಿಸಿ ಯುವಕರು ಮೃತಪಟ್ಟ ಘಟನೆ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಕೂಕನಪಳ್ಳಿ ಗ್ರಾಮದ ರಮೇಶ ಹೊಸಳ್ಳಿ ಮತ್ತು ಅಮರಯ್ಯ ಹಿರೇಮಠ ಎಂದು ಗುರುತಿಸಲಾಗಿದೆ.

ಫೆಬ್ರವರಿ 4ರಂದು ಕೂಕನಪಳ್ಳಿ ಗ್ರಾಮದ ಜಮೀನೊಂದರಲ್ಲಿ ಸ್ನೇಹಿತರು ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಮಾರುತಿ ಮತ್ತು ಶರಣಪ್ಪ ಗುರಿಕಾರ ಎನ್ನುವವರು ಸಾರಾಯಿ ಎಂದು ಹೇಳಿ ಸ್ಪಿರಿಟ್ ನೀಡಿದ್ದಾರೆ ಎನ್ನಲಾಗಿದೆ.

ಇದು ಸ್ಪಿರಿಟ್ ಎಂದು ತಿಳಿಯದೇ ರಮೇಶ ಹೊಸಳ್ಳಿ, ಶರಣಪ್ಪ ಹಂಚಿನಾಳ ಮತ್ತು ಅಮರಯ್ಯ ಹಿರೇಮಠ ಅದನ್ನು ಸೇವಿಸಿದ್ದಾರೆ. ಸ್ಪಿರಿಟ್ ಸೇವಿಸಿದ ತಕ್ಷಣ ನಾಲ್ವರು ಅಸ್ವಸ್ಥಗೊಂಡಿದ್ದು, ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.

ಚಿಕಿತ್ಸೆ ಫಲಿಸದೇ ರಮೇಶ ಹೊಸಳ್ಳಿ ನಿನ್ನೆ ಮೃತಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅಮರಯ್ಯ ಹಿರೇಮಠ ಅವರನ್ನು ಹುಬ್ಬಳ್ಳಿಗೆ ರವಾನಿಸಲಾಗಿತ್ತಾದರೂ, ಇಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಸಂಬಂಧ ಮೃತ ರಮೇಶ ಅವರ ತಂದೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






