ತಂದೆ ಮಗನ ಜೋಡಿ ಕೊಲೆ ಮಾಡಿ ದೇಶಾದ್ಯಂತ ಸುದ್ದಿಯಾಗಿದ್ದ ತಮಿಳುನಾಡಿನ ಪೊಲೀಸ್ ದೌರ್ಜನ್ಯದ ಪಟ್ಟಿಗೆ ಇನ್ನೊಂದು ಪ್ರಕರಣ ಸೇರಿಕೊಂಡಿದೆ. ದೃಷ್ಟಿ ದೋಷವುಳ್ಳ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ತಮಿಳುನಾಡಿನ ಪುದುಕೋಟ್ಟೈ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕವರಪಟ್ಟಿ ಗ್ರಾಮದ 29 ವರ್ಷದ ಶಂಕರ್ ಎಂಬ ವ್ಯಕ್ತಿ ಪುದುಕೊಟ್ಟೈ ಜಿಲ್ಲೆಯ ಶಾಲೆಯೊಂದರ ಬಳಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ದೂರು ನೀಡಿದ್ದಕ್ಕಾಗಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮಾರ್ಚ್ 17 ರಂದು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಆರೋಪಿ ಪೊಲೀಸರನ್ನು ಅಮಾನತು ಮಾಡಿದ ಕೆಲವು ದಿನಗಳ ನಂತರ, ಪೊಲೀಸರು ನಡೆಸಿದ್ದ ದೌರ್ಜನ್ಯವನ್ನು ಸಂತ್ರಸ್ತ ವಿವರಿಸುತ್ತಿರುವ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕರ್ ಅವರು ಹಾಸಿಗೆ ಮೇಲೆ ಮಲಗಿಕೊಂಡೇ ತಮಗಾದ ದೌರ್ಜನ್ಯವನ್ನು ವಿವರಿಸಿದ್ದಾರೆ. ದೃಷ್ಟಿ ದೋಷ ಇರುವ ಶಂಕರ್, ಪುದುಕೊಟ್ಟೈ ಜಿಲ್ಲೆಯ ವಿರಾಲಿಮೈಲ್ ಶಾಲೆ ಸಮೀಪ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದಾಗಿ ಪೊಲೀಸ್ ಕಂಟ್ರೋಲ್ ರೂಮ್(100)ಗೆ ಕರೆ ಮಾಡಿ ದೂರು ನೀಡಿದ್ದರು. ಈ ದೂರನ್ನು ವಿರಾಲಿಮಲೈ ಠಾಣೆಗೆ ವರ್ಗಾಯಿಸಲಾಗಿತ್ತು.
ವಿರಾಲಿಮಲೈ ಠಾಣೆಯ ಮಹಿಳಾ ಸಿಬ್ಬಂದಿಯೊಬ್ಬರು ತನಗೆ ಕರೆ ಮಾಡಿ ಮೊದಲಿಗೆ ವಿವರಗಳನ್ನು ಕೇಳಿದ್ದಾರೆ. ಬಳಿಕ ನಿನಗೆ ಇದೆಲ್ಲಾ ಯಾಕೆ? ಬೇಕಾದರೆ ನೀನೂ ಮದ್ಯ ಮಾರಾಟ ಎಂದು ಜೋರು ಮಾಡಿರುವುದಾಗಿ ಶಂಕರ್ ತಿಳಿಸಿದ್ದಾರೆ.

ಬಳಿಕ ತನ್ನನ್ನು ವಿರಾಲಿಮಲೈ ಠಾಣೆಗೆ ತನ್ನನ್ನು ಕರೆದೊಯ್ದು ಮೂರು ಗಂಟೆಗಳ ಕಾಲ ಥಳಿಸಿದ್ದಾರೆ. ಯಾವುದರಿಂದ ಥಳಿಸಲಾಯಿತು ಅನ್ನುವುದು ಗೊತ್ತಿಲ್ಲ. ಬಹುಷ ಮರದ ದಿಮ್ಮಿನಿಂದ ನನ್ನ ಮೇಲೆ ಹಲ್ಲೆ ಮಾಡಿರಬಹುದು. ಶಬ್ಧದ ಆಧಾರದಲ್ಲಿ ಹೇಳುವುದಾದರೆ, ನನ್ನ ಮೇಲೆ ಹಲ್ಲೆ ನಡೆಸಿದ ನಾಲ್ವರಲ್ಲಿ ಒಬ್ಬರು ಮಹಿಳೆಯೂ ಇದ್ದರೂ ಎಂದು ಶಂಕರ್ ಆರೋಪಿಸಿದ್ದಾರೆ.
ಶಂಕರ್ ಅವರು ಮೊದಲು ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಮಾತನಾಡಿದ್ದಾರೆ, ಅವರು ತಮ್ಮ ದೂರನ್ನು ನಿರ್ಲಕ್ಷಿಸಿದರು ಮತ್ತು “ತನಗೆ ಮಾಡಲು ಬೇರೆ ಕೆಲಸವಿಲ್ಲವೇ” ಎಂದು ಅವರು ಪ್ರಶ್ನಿಸಿದ್ದಾರೆ. ಶಂಕರ್ ಅವರು ಆಕೆಯೊಂದಿಗೆ ತರ್ಕಿಸಲು ಪ್ರಯತ್ನಿಸಿ, ಬಳಿಕ ಅದನ್ನು ಕೈಬಿಟ್ಟರು ಎಂದು ಶಂಕರ್ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಇತರ ಮಕ್ಕಳನ್ನು ಒತ್ತಾಯಿಸಲಾಗುತ್ತಿದೆ ಎಂದು ಶಾಲಾ ಮಕ್ಕಳು ತನಗೆ ತಿಳಿಸಿದ್ದಾರೆ, ಅದರ ಆಧಾರದಲ್ಲಿ ಪೊಲೀಸರಿಗೆ ದೂರು ನೀಡಿದ್ದೆ ಎಂದು ಅವರು ಹೇಳಿದ್ದಾರೆ.
ಕವರಪಟ್ಟಿಯ ಶಾಲೆಯೊಂದರ ಬಳಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಮಾರ್ಚ್ 15 ರಂದು ಶಂಕರ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದು, ನಂತರ ಅದನ್ನು ವಿರಾಲಿಮಲೈ ಪೊಲೀಸ್ ಠಾಣೆ ಗಮನಕ್ಕೆ ತರಲಾಗಿದೆ ಎಂದು ವರದಿಯಾಗಿದೆ. ಶಂಕರ್ ಸರ್ಕಾರಿ ಶಾಲೆಯ ಬಳಿ ಎಲೆಕ್ಟ್ರಿಕಲ್ ಅಂಗಡಿ ನಡೆಸುತ್ತಿದ್ದ ಎನ್ನಲಾಗಿದೆ.
ವಿರಾಲಿಮಲೈ ಪೊಲೀಸರು ಕರೆ ಮಾಡಿದವರ ಸ್ಥಳವನ್ನು ಪತ್ತೆಹಚ್ಚಿ ಶಂಕರ್ನನ್ನು ಎತ್ತಿಕೊಂಡು ಬುಧವಾರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಆದರೆ, ಘಟನೆಯ ಬಗ್ಗೆ ತನಗೆ ತಿಳಿದಿಲ್ಲ ಎಂದು ಶಂಕರ್ ಹೇಳಿದ್ದರಿಂದ, ಅವರ ನಡುವೆ ವಾಗ್ವಾದ ನಡೆಯಿತು ಎಂದು ದಿ ನ್ಯೂಸ್ ಮಿನಿಟ್ (TNM) ವರದಿ ಮಾಡಿದೆ.
TNM ಪುದುಕೊಟ್ಟೈ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಪಾರ್ಥಿಬನ್ ಅವರನ್ನು ಸಂಪರ್ಕಿಸಿದಾಗ, ಈ ವಿಷಯವು ಇಲಾಖಾ ಮಟ್ಟದ ತನಿಖೆಯಲ್ಲಿದೆ ಎಂದು ಹೇಳಿದ್ದಾರೆ. ವಿರಾಲಿಮಲೈ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ವಿಚಾರಣೆ ನಡೆಸುತ್ತಿದ್ದಾರೆ. ಏತನ್ಮಧ್ಯೆ, ಮೂವರನ್ನು ಅಮಾನತುಗೊಳಿಸಲಾಗಿದೆ ಎಂದು ತಿರುಚ್ಚಿ ಡಿಐಜಿ ಶರವಣ ಸುಂದರ್ ಹೇಳಿದ್ದಾರೆ.