ಪ್ರತಿಧ್ವನಿ ವಿಶೇಷ ವರದಿ :
ಬೆಂಗಳೂರು : ಮನುಷ್ಯನ ಅಂಗಕ್ಕೆ ವೈಕಲ್ಯ ಇರಬಹುದು ಆದರೆ ಕನಸುಗಳಿಗೆ ಅಲ್ಲಾ ಎಂಬುವುದಕ್ಕೆ ಇದೀಗ ದೇಶಾದ್ಯಂತ ಭಾರತೀಯರ ಗಮನ ಸೆಳೆದಿರುವ ದಿವ್ಯಾಂಗ ಬಾಲಕಿಯೇ ಸಾಕ್ಷಿಯಾಗಿದ್ದಾಳೆ.

ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯ ರಾಮನಗರದ ಭೋರೆ ಬ್ಲಾಕ್ನ ಹುಸಾಪುರ ಗ್ರಾಮದ 15 ವರ್ಷದ ಸೋನಿ ಕುಮಾರಿಯ ಧೈರ್ಯ ಸರ್ಕಾರ ಮತ್ತು ಸಮಾಜದ ಗಮನ ಸೆಳೆದಿದೆ. ಎರಡೂ ಕಾಲುಗಳಲ್ಲಿ ಅಂಗವೈಕಲ್ಯವಿದ್ದರೂ, ಅವಳು ಪ್ರತಿದಿನ ಎರಡು ಕಿಲೋಮೀಟರ್ಗಳಷ್ಟು ಶಾಲೆಗೆ ನಡೆದುಕೊಂಡು, ಕುಂಟುತ್ತ ಸಾಗುತ್ತಾಳೆ ಎನ್ನುವುದು ನಿಜಕ್ಕೂ ಅವಳ ಶೈಕ್ಷಣಿಕ ತುಡಿತವನ್ನು ಎತ್ತಿ ತೋರಿಸುತ್ತದೆ.
ತಂದೆ ಇಲ್ಲದ ಈ 15 ವರ್ಷದ ಬಾಲಕಿಯು ತಾಯಿಯ ಆಸರೆಯಲ್ಲಿ ಬೆಳೆಯುತ್ತಿದ್ದಾಲೆ. ಕೂಲಿ ಕೆಲಸ ಮಾಡಿ ಮಗಳನ್ನು ಸಾಕಿ ಸಲಹುತ್ತಿರುವ ಬಡ ಜೀವದ ಬದುಕಿನಲ್ಲಿ ಈ ರೀತಿಯ ಅಗ್ನಿ ಪರೀಕ್ಷೆ ಎದುರಾದರೂ, ಇಂದಿಗೂ ಎದೆಗುಂದದೆ ಮಗಳ ಶಿಕ್ಷಣಕ್ಕಾಗಿ ತಾಯಿ ಶ್ರಮಿಸುತ್ತಿದ್ದಾಳೆ.
ನಿತೀಶ್ ಕುರುಡು ಆಡಳಿತಕ್ಕೆ ಸಾಕ್ಷಿಯಾದ ವೀಡಿಯೋ..
ಇನ್ನೂ ಸರ್ಕಾರದಿಂದ ವೀಲ್ಚೇರ್ಗಾಗಿ ಪಡೆಯುವುದಕ್ಕಾಗಿ ಬಾಲಕಿ ಸೋನಿ ಕುಮಾರಿ ಅರ್ಜಿ ಸಲ್ಲಿಸಿದ್ದಳು, ಆದರೆ ಅದನ್ನು ತಿರಸ್ಕರಿಸಲಾಗಿದೆ ಎಂದು ನೀವು ಯಾರಾದರೂ ಅವರ ಸಹಾಯಕ್ಕೆ ಬರುವಿರಾ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪ್ರಮುಖವಾಗಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಎನ್ಡಿಎ ಸರ್ಕಾರವೇ ಇರುವ ಬಿಹಾರದಲ್ಲಿ ಈ ಬಾಲಕಿಯ ಸಂಕಷ್ಟ ಪರಿಹಾರವಾಗದಿರುವುದು ನಿಜಕ್ಕೂ ದುರಂತದ ಸನ್ನಿವೇಶವಾಗಿದೆ. ಅರ್ಜಿ ಹಾಕಿದರೂ ಅದನ್ನು ತಿರಸ್ಕರಿಸಲಾಗಿರುವ ವಿಚಾರವೂ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಸುದೀರ್ಘ ಕಾಲದಿಂದ ಬಿಹಾರವನ್ನು ಆಳುತ್ತಿರುವ ನಿತೀಶ್ ಕುಮಾರ್ ಸರ್ಕಾರದ ಕುರುಡು ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ಬಾಲಕಿ ಸೋನಿ ಕುಮಾರಿ ಶಾಲೆಗೆ ಹೋಗಿ ಬರಲು ಪರದಾಡುವ ಪರಿಸ್ಥಿತಿಯ, ಆ ಹೋರಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ, ದೇಶಾದ್ಯಂತ ಜನರು ಅವಳ ಧೈರ್ಯವನ್ನು ಶ್ಲಾಘಿಸುತ್ತಿದ್ದಾರೆ. ಬಡತನ ಮತ್ತು ದೈಹಿಕ ಅಂಗವೈಕಲ್ಯದ ಹೊರತಾಗಿಯೂ, ಶಿಕ್ಷಣದ ಮೇಲಿನ ಅವಳ ಉತ್ಸಾಹವು ಜನರ ಮನ ಮುಟ್ಟಿದೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದಂತೆಯೇ ಸೋನಿ ಕುಮಾರಿಯ ನೆರವಿಗೆ ಒಬ್ಬೊಬ್ಬರಾಗಿ ಮುಂದೆ ಬರುತ್ತಿದ್ದಾರೆ.

ಸೋನಿ ಕುಮಾರಿಯ ಕಷ್ಟದ ಕಥೆ ವೈರಲ್ ಆದ ಬಳಿಕ ಅಲಿನಗರ ಕ್ಷೇತ್ರದ ಬಿಜೆಪಿ ಶಾಸಕಿ ಮತ್ತು ಖ್ಯಾತ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಕೂಡ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಅವರು ವೈರಲ್ ಆದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಕ್ಷಣವೇ ಈ ಬಾಲಕಿಯ ವಿಳಾಸ ಹಾಗೂ ಸಂಪರ್ಕ ಸಂಖ್ಯೆಯನ್ನು ಒದಗಿಸುವಂತೆ ಗೋಪಾಲ್ ಗಂಜ್ ಜಿಲ್ಲಾಧಿಕಾರಿಗೆ ಸೂಚಿಸಿದ್ದರು.

ನಂತರ ಗೋಪಾಲ್ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪವನ್ ಕುಮಾರ್ ಸಿನ್ಹಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಬಾಲಕಿಗೆ ವೀಲ್ ಚೇರ್ ಒದಗಿಸುವಂತೆ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ತ್ರಿಚಕ್ರ ವಾಹನವನ್ನು ಒದಗಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಈ ವಿಷಯವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ತ್ವರಿತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸಿನ್ಹಾ ತಿಳಿಸಿದ್ದಾರೆ.
ಇದನ್ನೂ ಓದಿ : ಊಟದ ಜೊತೆ ಹಸಿ ಈರುಳ್ಳಿ ತಿನ್ನುವವರ ಗಮನಕ್ಕೆ: ಇಂತವರು ತಿನ್ನಬಾರದು
ಬಡತನ ಕಷ್ಟಗಳ ನಡುವೆಯೂ ಬತ್ತದ ಓದಿನ ಹಸಿವು..
ರಾಮನಗರದ ಹುಸೇಪುರ್ ಗ್ರಾಮದ ನಿವಾಸಿ ಸೋನಿ ಕುಮಾರಿ ತುಂಬಾ ಬಡ ಕುಟುಂಬದಿಂದ ಬಂದ ಬಾಲಕಿಯಾಗಿದ್ದಾಳೆ. ತಂದೆ ನಂದಕಿಸೋರ್ ರಾಮ್ ಅವರು ಸೋನಿ ಬಾಲ್ಯದಲ್ಲಿದ್ದಾಗಲೇ ಅಸುನೀಗುತ್ತಾರೆ. ಆರ್ಥಿಕ, ಕಿತ್ತು ತಿನ್ನುವ ಬಡತನ, ಆರ್ಥಿಕ ಸಂಕಷ್ಟದ ಕಾರಣಕ್ಕೆ ಶಿಕ್ಷಣವನ್ನು ತಡವಾಗಿ ಶಾಲೆಗೆ ಸೇರುವಂತಾಗಿದೆ. 15 ನೇ ವಯಸ್ಸಿನಲ್ಲಿ ಅವಳು ಈಗ ಒಂದನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಕುಟುಂಬಕ್ಕೆ ಯಾರೊಬ್ಬರೂ ಆಸರೆಯಿಲ್ಲದ ಕಾರಣಕ್ಕೆ, ಅವಳು ಶಾಲೆಗೆ ಹೋಗಿ ಬರಲು ಪ್ರತಿದಿನ ಎರಡು ಕಿಲೋಮೀಟರ್ ಕುಂಟುತ್ತಾ ಸಾಗುತ್ತಿರುವುದನ್ನು ಗಮನಿಸಿದಾಗ ಶಿಕ್ಷಣಕ್ಕೆ ಯಾವುದರೆ ಹಂಗಿಲ್ಲ ಎಂಬುವುದು ಸಾಬೀತಾಗುತ್ತದೆ.

ವೈದ್ಯೆಯಾಗಿ ಬಡವರ ಸೇವೆ ಮಾಡುವ ತುಡಿತ..
ಇನ್ನೂ ಇಷ್ಟೊಂದು ಕಠಿಣ ಪರಿಸ್ಥಿತಿಯಲ್ಲಿಯೂ ತನ್ನ ವಿದ್ಯಾಭ್ಯಾಸವನ್ನು ನಿಲ್ಲಿಸದೇ ಇಂದಿಗೂ ಅದೇ ಉತ್ಸಾಹದಿಂದ ಶಾಲೆಗೆ ಹೋಗುತ್ತಿದ್ದಾಳೆ. ಜೀವನದ ಹಲವು ಸವಾಲುಗಳನ್ನು ಮೀರಿಯೂ ಸೋನಿ ಕುಮಾರಿಯು, ಸಾಧನೆಯ ಹಸಿವಿರುವವರಿಗೆ ಯಾವುದರ ಅಡಚಣೆಯಾಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾಳೆ.
ಬದುಕಿನ ಕಠಿಣ ಪರಿಸ್ಥಿತಿಗಳ ನಡುವೆಯೂ, ಸೋನಿ ಕುಮಾರಿಯ ಚೈತನ್ಯವು ಅಚಲವಾಗಿದೆ. ಓದನ್ನು ಮುಂದುವರೆಸಿ ಬಡವರು ಮತ್ತು ನಿರ್ಗತಿಕರ ಸೇವೆ ಮಾಡಲು ಅವಳು ವೈದ್ಯೆಯಾಗುವ ಕನಸು ಕಂಡಿದ್ದಾಳೆ. ತಾನು ಒಬ್ಬ ಅಂಗವೈಕಲ್ಯೆ ಎಂಬುವುದನ್ನು ಮರೆತು ಇತರರಂತೆ ಸೋನಿ ಕುಮಾರಿಯು ಸಮಾಜದ ಒಳಿತಿಗಾಗಿ ಹಾಗೂ ಆರೋಗ್ಯ ಕ್ಷೇತ್ರಕ್ಕಾಗಿ ತನ್ನ ಸೇವೆಯನ್ನು ಸಮರ್ಪಿಸುವ ಮನೋಭಾವ ತಾಳಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.






