ಬೆಳಗಾವಿ : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿದೆ. ಮತದಾರರನ್ನು ಸೆಳೆದುಕೊಳ್ಳಲು ಪ್ರತಿಯೊಂದು ಪಕ್ಷಗಳು ಬೃಹತ್ ಸಮಾವೇಶಗಳನ್ನು ನಡೆಸುತ್ತಿವೆ. ತಮ್ಮ ಪಕ್ಷದ ಸಾಧನೆಗಳನ್ನು ಹೇಳುತ್ತಾ ವಿಪಕ್ಷಗಳನ್ನು ಜರಿಯುವ ಕಾರ್ಯ ರಾಜ್ಯದಲ್ಲಿ ಜೋರಾಗಿಯೇ ನಡೆಯುತ್ತಿದೆ. ಈ ಎಲ್ಲದರ ನಡುವೆ ಸಿದ್ದರಾಮಯ್ಯ ಜನರಿಗೆ ಹಣ ಕೊಟ್ಟು ಕರೆಯಿಸಬೇಕು ಎಂದು ಹೇಳುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಭಾರೀ ಸದ್ದು ಮಾಡ್ತಿದೆ.
ಬುಧವಾರದಂದು ಕಾಂಗ್ರೆಸ್ ಪಕ್ಷವು ಬೆಳಗಾವಿಯ ಪಂತಬಾಳೆಕುಂದ್ರಿಯಲ್ಲಿ ಪ್ರಜಾಧ್ವನಿ ಯಾತ್ರೆಯನ್ನು ನಡೆಸಿತ್ತು. ಈ ಸಮಾವೇಶದಲ್ಲಿ ಭಾಗಿಯಾಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ , ಕೆಪಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಸ್ನಲ್ಲಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಪ್ರತಿಯೊಬ್ಬರಿಗೂ 500 ರೂಪಾಯಿ ಕೊಟ್ಟು ಕರೆಯಿಸಬೇಕು ಎಂದು ಹೇಳಿದ್ದು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಾಂಗ್ರೆಸ್ಗೆ ಈ ಗತಿ ಬಂತಾ ಅಂತಾ ಜರಿಯುತ್ತಿದ್ದಾರೆ.
ಚುನಾವಣೆ ಪ್ರಚಾರಕ್ಕೆ ಬರುವವರಿಗೆ 500 ರೂಪಾಯಿ ಕೊಟ್ಟು ಕರೆಸಬೇಕು. ಸಮಾವೇಶಕ್ಕೆ ಜನ ಬರಬೇಕು. ಇದಕ್ಕೆ ಪ್ರತಿಯೊಬ್ಬರಿಗೂ 500 ರೂಪಾಯಿ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಒಂದು ಸಾವಿರ ಜನ ಇರುತ್ತೆ ಅಂತಾ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆ ಇರೋದ್ರಿಂದ ಅವರು ಜನರನ್ನು ಸೇರಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಆದರೆ ಸಿದ್ದರಾಮಯ್ಯ ತಮ್ಮ ಪಕ್ಷದ ಸಮಾವೇಶವನ್ನೇ ಉದ್ದೇಶಿಸಿ ಈ ಮಾತುಗಳನ್ನು ಹೇಳಿದ್ದಾರೆಯೋ ಅಥವಾ ವಿಪಕ್ಷಗಳ ಬಗ್ಗೆ ಮಾತನಾಡಿದ್ದಾರೋ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ.