ಬೆಂಗಳೂರು: ಮಲತಂದೆಯೊಬ್ಬ 7 ವರ್ಷದ ಮಗಳ ಹತ್ಯೆ ಮಾಡಿರುವ ಘಟನೆ ಕುಂಬಳಗೊಡು ಠಾಣಾ ವ್ಯಾಪ್ತಿಯ ಕನ್ನಿಕಾ ಬಡಾವಣೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮಲತಂದೆ ದರ್ಶನ್, 7 ವರ್ಷದ ಸಿರಿ ಎನ್ನುವ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಮೊದಲ ಪತಿ ಮೃತಪಟ್ಟ ಬಳಿಕ ಕೊಲೆಯಾದ ಬಾಲಕಿ ಸಿರಿ ತಾಯಿ ದರ್ಶನನ್ನು ಎರಡನೇ ಮದುವೆಯಾಗಿದ್ದಳು. ಆದರೆ, ಇದೀಗ ದರ್ಶನ್ ಪತ್ನಿ ಜೊತೆ ಗಲಾಟೆ ಮಾಡಿ ಅದೇ ಕೋಪದಲ್ಲಿ ಬಾಲಕಿಯನ್ನು ಹತ್ಯೆ ಮಾಡಿದ್ದಾನೆ

ಕಳೆದ ಒಂದೂವರೆ ವರ್ಷದಿಂದ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯು ರಾಮಸಂದ್ರ ಕನ್ನಿಕಾನಗರದಲ್ಲಿ ವಾಸವಿದ್ದ ಶಿಲ್ಪಾ ಗಂಡನಿಂದ ದೂರಾಗಿ ತನ್ನ ಒಬ್ಬಳೆ ಮಗಳ ಜೊತೆ ತನ್ನ ತಾಯಿ ಜೊತೆ ವಾಸ ಮಾಡ್ತಿದ್ದಳು. ಇತ್ತೀಚೆಗೆ ಶಿಲ್ಪಾಳ ತಾಯಿ ಕೂಡ ಸಾವನ್ನಪ್ಪಿ ಮಗಳ ಜೊತೆ ಆಕೆ ಜೀವನ ಸಾಗಿಸ್ತಿದ್ಲು.. ಆದರೆ ಗಂಡನಿಂದ ದೂರಾಗಿದ್ದ ಶಿಲ್ಪಾಗೆ ಇನ್ಸಾಟ್ರಾಗ್ರಾಂನಲ್ಲಿ ಪರಿಚಯವಾಗಿದ್ದ ದರ್ಶನ್ ಜೊತೆ 4 ತಿಂಗಳ ಹಿಂದಷ್ಟೇ 2ನೇ ಮದುವೆಯಾಗಿತ್ತಂತೆ. ಅನೇಕಲ್ ಮೂಲದ ದರ್ಶನ್ ಆಗಾಗ ಅಷ್ಟೇ ಶಿಲ್ಪಾಳ ಈ ಮನೆಗೆ ಬಂದು ಹೋಗ್ತಿದ್ದ. ಹೀಗಿರೋವಾಗ ಗುರುವಾರ ರಾತ್ರಿ ಮನೆಗೆ ಬಂದಿದ್ದ ಮರುದಿನ ಸಂಜೆ ಸಿರಿಯನ್ನ ಕೊಲೆ ಮಾಡಿದ್ದಾನೆ.

ಗುರುವಾರ ರಾತ್ರಿ ಮನೆಗೆ ಬಂದಿದ್ದ ದರ್ಶನ್ ಜೊತೆ ಶಿಲ್ಪಾಗೆ ಸ್ವಲ್ಪ ಜಗಳ ಕೂಡ ಆಗಿತ್ತಂತೆ. ಮರುದಿನ ಎಲ್ಲವನ್ನ ಮರೆತ ಶಿಲ್ಪಾ ಟ್ಯೂಷನ್ ಕ್ಲಾಸ್ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬಂದಿದ್ಲು. ಬಾಲಕಿ ಸಿರಿ ಕೂಡ ಶಾಲೆಗೆ ಹೋಗಿ ವಾಪಸ್ ಬಂದಿದ್ಲು. ಆದ್ರೆ ಸಂಜೆ ಮನೆಯಲ್ಲಿ ಏನಾಯ್ತೋ ಏನೋ ದರ್ಶನ್ ಸಿರಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾನೆ. ಕೈಯಿಂದಲೇ ಆಕೆ ಬಡಿಯುತ್ತಿದ್ದ. ಇದನ್ನ ತಡೆಯಲು ಹೋದ ಶಿಲ್ಪಾಳನ್ನ ರೂಮಿನಲ್ಲಿ ಕೂಡ ಹಾಕಿ ಸಿರಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದ.
ಬಾಲಕಿಯನ್ನ ಕೊಲೆ ಮಾಡಿದ್ದ ದರ್ಶನ್ ರೂಮಿನ ಲಾಕ್ ತೆಗೆದು ಮೇನ್ ಡೋರ್ ಲಾಕ್ ಮಾಡಿ ತನ್ನ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾನೆ. ತಾಯಿ ಶಿಲ್ಪಾ ರೂಮಿನಿಂದ ಹೊರಬಂದಾಗ ಮಗಳ ಮೂಗಿನಲ್ಲಿ ರಕ್ತ ಸುರಿಯುತ್ತಿದ್ದು, ಆಕೆಯ ಉಸಿರೇ ನಿಂತಿತ್ತು. ತಕ್ಷಣ ಕೂಗಿಗೊಂಡಾಗ ಸ್ಥಳೀಯರು ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಸ್ಥಳಕ್ಕೆ ಬಂದ ಕುಂಬಳಗೋಡು ಪೊಲೀಸರು ಮತ್ತು ಡಿಸಿಪಿ ಅನಿತಾ ಹದ್ದಣ್ಣನವರ್ ಪರಿಶೀಲನೆ ನಡೆಸಿ ಕೊಲೆಯ ಬಗ್ಗೆ ತಾಯಿ ಶಿಲ್ಪಾಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯ ಘಟನೆ ಬಗ್ಗೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಕಡೆ ದರ್ಶನ್ ಕೊಲೆ ಮಾಡಿ ತನ್ನ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇತ್ತ ಗಂಡನಿಂದ ದೂರಾಗಿದ್ದ ಶಿಲ್ಪಾ ಇನ್ಸಾಟ್ರಾಗ್ರಾಂ ಗೆಳೆಯನ ಸಹವಾಸ ಮಾಡಿ ಮಗಳನ್ನ ಕಳೆದುಕೊಂಡಿದ್ದು, ಒಬ್ಬಂಟಿಯಾಗಿದ್ದಾಳೆ.






