ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುತ್ತಿರುವ ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಮೊದಲಿನಂತೆ ಆಧಾರ್ ಕಾರ್ಡ್ ತೋರಿಸಿ ಉಚಿತ ಪ್ರಯಾಣ ಮಾಡಲು ಅವಕಾಶ ಇರುವುದಿಲ್ಲ. ಬದಲಾಗಿ ‘ಸ್ಮಾರ್ಟ್ ಕಾರ್ಡ್’ ಕಡ್ಡಾಯವಾಗಲಿದೆ.

ಶಕ್ತಿ ಯೋಜನೆ 2023ರ ಜೂನ್ 11ರಂದು ಜಾರಿಗೆ ಬಂದಿದ್ದು, ಈ ಯೋಜನೆಯಡಿ ರಾಜ್ಯದ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಆಧಾರ್ ಕಾರ್ಡ್ ತೋರಿಸಿ ಪ್ರಯಾಣಿಸುವ ವ್ಯವಸ್ಥೆಯಲ್ಲಿ ಕೆಲವು ಲೋಪಗಳು ಕಂಡುಬಂದಿವೆ. ಹೀಗಾಗಿ ನಕಲಿ ಅಥವಾ ಅನಧಿಕೃತ ಪ್ರಯಾಣ ತಡೆಯಲು ಯೋಜನೆಯಲ್ಲಿ ಪಾರದರ್ಶಕತೆ ತರಲು ಹಾಗೂ ಸಾರಿಗೆ ಸಂಸ್ಥೆಗಳ ವೆಚ್ಚ ಲೆಕ್ಕಾಚಾರ ಸುಗಮಗೊಳಿಸಲು ಸರ್ಕಾರ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರುತ್ತಿದೆ.

2026ರ ಜೂನ್ 11ಕ್ಕೆ ಯೋಜನೆಗೆ 3 ವರ್ಷಗಳು ಪೂರ್ಣಗೊಳ್ಳಲಿದೆ. ಇದೇ ವೇಳೆಗೆ ಸ್ಮಾರ್ಟ್ ಕಾರ್ಡ್ ವಿತರಣೆ ಪ್ರಾರಂಭಿಸುವ ಸಿದ್ಧತೆ ನಡೆಯುತ್ತಿದೆ. ಕಾರ್ಡ್ ತಯಾರಿ ಮತ್ತು ವಿತರಣೆಗೆ ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ 3 ತಿಂಗಳೊಳಗೆ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.

ಸ್ಮಾರ್ಟ್ ಕಾರ್ಡ್ ಹೇಗಿರುತ್ತದೆ?
ಈ ಕಾರ್ಡ್ ಆಯುಷ್ಮಾನ್ ಕಾರ್ಡ್ (Ayushman Bharat) ಕಾರ್ಡ್ ಮಾದರಿಯಲ್ಲಿ ಇರಲಿದೆ. ಫಲಾನುಭವಿಯ ಹೆಸರು, ಫೋಟೋ, ಗುರುತಿನ ಚೀಟಿ ಸಂಖ್ಯೆ, ವಿಶೇಷ ದೃಢೀಕರಣ ಸಂಖ್ಯೆ ಕಾರ್ಡ್ನಲ್ಲಿ ಇರುತ್ತದೆ. ಜೊತೆಗೆ ಮೈಕ್ರೋ ಚಿಪ್ ಅಳವಡಿಸುವ ಯೋಚನೆಯೂ ಇದೆ ಎನ್ನಲಾಗುತ್ತಿದೆ.

ಮಹಿಳೆಯರು ಬಸ್ನಲ್ಲಿ ಸ್ಮಾರ್ಟ್ ಕಾರ್ಡ್ ಅನ್ನು ನಿರ್ವಾಹಕರಿಗೆ ತೋರಿಸಬೇಕು. ನಿರ್ವಾಹಕರು ಎಲೆಕ್ಟ್ರಾನಿಕ್ ಟಿಕೆಟ್ ಮಷಿನ್ (ETM) ನಲ್ಲಿ ದೃಢೀಕರಣ ಸಂಖ್ಯೆಯನ್ನು ನಮೂದಿಸಿದ ಬಳಿಕವೇ ಶೂನ್ಯ ದರದ ಟಿಕೆಟ್ ಸಿಗುತ್ತದೆ. ಒಟ್ಟಿನಲ್ಲಿ, ಶಕ್ತಿ ಯೋಜನೆಯ ದುರುಪಯೋಗ ತಡೆಯಲು ಸರ್ಕಾರ ‘ಸ್ಮಾರ್ಟ್’ ಕ್ರಮ ಕೈಗೊಂಡಿದ್ದು, ಮಹಿಳೆಯರು ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಬೇಕಾಗಿದೆ.






