ಮುಡಾ ಹಗರಣ ಆರೋಪದಿಂದ ಸಿಎಂ ಸಿದ್ದರಾಮಯ್ಯ ಮುಕ್ತರಾಗಲಿ ಎಂದು ಸಿದ್ದರಾಮಯ್ಯ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಮೈಸೂರಿನಲ್ಲಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದು, ಸಿಎಂ ಕುಟುಂಬಕ್ಕೆ ಎದುರಾಗಿರುವ ಸಂಕಷ್ಟ ದೂರವಾಗಲಿ ಎಂದು ಹರಕೆ ಹೊತ್ತು ಹೋಮ ಹವನ, ಬೆಣ್ಣೆ ಅಲಂಕಾರ, ಸತ್ಯನಾರಾಯಣ ಪೂಜೆ ಮಾಡಿಸಿದ್ದಾರೆ. ಮಾಜಿ ಪಾಲಿಕೆ ಸದಸ್ಯ ಲೋಕೇಶ್ ನೇತೃತ್ವದಲ್ಲಿ ಸಿಎಂ ಭಾವಚಿತ್ರ ಹಿಡಿದು ಪೂಜೆ ಸಲ್ಲಿಸಲಾಗಿದೆ.
ಮುಡಾ ಹಗರಣದಲ್ಲಿ ಮರೀಗೌಡ ತಲೆದಂಡ ಆಯ್ತು, ಇಬ್ಬರು ಅಧಿಕಾರಿಗಳ ತಲೆದಂಡ ಯಾವಾಗ..? ಎಂದು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್ ಶ್ರೀವತ್ಸ ಪ್ರಶ್ನಿಸಿದ್ದಾರೆ. ಮುಡಾ ಆಯುಕ್ತರಾಗಿದ್ದ ನಟೇಶ್, ದಿನೇಶ್ ರಕ್ಷಣೆ ಮಾಡಲಾಗಿದೆ. ಕೂಡಲೇ ಸರ್ಕಾರ ಇಬ್ಬರನ್ನ ವಜಾ ಮಾಡಲೇಬೇಕು. ಮುಡಾ ಹಗರಣ ಸಮಗ್ರ ತನಿಖೆಗಾಗಿ ಸಿಎಂಗೆ ಮನವಿ ಸಲ್ಲಿಸಿದ್ದೇವೆ. ಪ್ರಕರಣ ಮುಗಿಯುವ ತನಕ ಸಬ್ ರಿಜಿಸ್ಟ್ರರ್ನಲ್ಲಿ ಆಸ್ತಿ ಪರಭಾರೆ ನಿಲ್ಲಿಸಿ. ಮುಡಾದ 890 ಸೈಟ್ಗಳನ್ನ ವಾಪಸ್ ಪಡೆಯಿರಿ ಎಂದು ಆಗ್ರಹಿಸಿದ್ದಾರೆ. 50-50 ಹಗರಣದ ಎಲ್ಲಾ ಸೈಟ್ ವಾಪಸ್ ಪಡೆಯಿರಿ ಅಂತ ಒತ್ತಾಯ ಮಾಡಿದ್ದಾರೆ.
ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರಿಗೌಡ ರಾಜೀನಾಮೆ ನೀಡಿದ ವಿಚಾರಕ್ಕೆ ಸಿ ಟಿ ರವಿ ತಿರುಗೇಟು ನೀಡಿದ್ದು, ಮರಿಗೌಡಗೆ ಇರುವ ನೈತಿಕ ಪ್ರಜ್ಞೆ ಸಿಎಂ ಸಿದ್ದರಾಮಯ್ಯ ಅವರಿಗಿಲ್ಲ ಅನ್ನೋದು ದುರಂತ. ಮುಡಾ ಅಧ್ಯಕ್ಷರಾಗಿದ್ದ ಮರಿಗೌಡಗೆ ರಾಜೀನಾಮೆ ಕೊಡಬೇಕು ಅಂತ ಅನಿಸಿದೆ. ಆದರೆ ಸಿದ್ದರಾಮಯ್ಯ ಅವರಿಗೆ ಇನ್ನೂ ರಾಜೀನಾಮೆ ಕೊಡಬೇಕು ಅಂತಾ ಅನಿಸದೆ ಇರುವುದು ದೌರ್ಭಾಗ್ಯ ಎಂದಿದ್ದಾರೆ.