ವಿಧಾನಮಂಡಲದ ಅಧಿವೇಶನಕ್ಕೆ ಲೋಕಸಭೆಯ ಸ್ಪೀಕರ್ ಕರೆಯಿಸುವ ರಾಜ್ಯ ಸರ್ಕಾರದ ತೀರ್ಮಾನ ಸಂಸದೀಯ ಪ್ರಜಾಸತ್ತೆಯ ಮೌಲ್ಯಗಳಿಗೆ ವಿರುದ್ಧವಾದದ್ದು ಎಂದು ಕರವೇ ಅಧ್ಯಕ್ಷರಾದ ಟಿ.ಎ.ನಾರಾಯಣಗೌಡ ಟ್ವೀಟ್ ಮಾಡುವ ಮೂಲಕ ಆಕ್ರೋಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ವಿಧಾನಮಂಡಳದ ಅಧಿವೇಶನಕ್ಕೆ ಲೋಕಸಭೆಯ ಸ್ಪೀಕರ್ ಕರೆಯಿಸುವ ರಾಜ್ಯ ಸರ್ಕಾರದ ತೀರ್ಮಾನ ಸಂಸದೀಯ ಪ್ರಜಾಸತ್ತೆಯ ಮೌಲ್ಯಗಳಿಗೆ ವಿರುದ್ಧವಾದದ್ದು. ಈ ರೀತಿಯ ಉದಾಹರಣೆ ಕರ್ನಾಟಕದ ಇತಿಹಾಸದಲ್ಲಿ ನಡೆದಿರಲಿಲ್ಲ. ಈ ನಡೆಯ ಮೂಲಕ ಕೆಟ್ಟ ಪರಂಪರೆಯೊಂದನ್ನು ಆರಂಭಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಮಂಡಳದ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವ ಅವಕಾಶ ಇರುವುದು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮಾತ್ರ. ಲೋಕಸಭೆ ಸ್ಪೀಕರ್ ಕರೆಯಿಸುವ ಮೂಲಕ ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ಇದು ಪ್ರಜಾತಂತ್ರ ವ್ಯವಸ್ಥೆಯ ಅಣಕ ಎಂದು ಹೇಳಿದ್ದಾರೆ.
ಲೋಕಸಭೆ ಮತ್ತು ವಿಧಾನಸಭೆ ಎರಡೂ ಕೂಡ ಜನಪ್ರತಿನಿಧಿಗಳ ಸಭೆ. ಒಂದು ಹೆಚ್ಚು, ಒಂದು ಕಡಿಮೆಯಲ್ಲ. ಎರಡೂ ಕೂಡ ಭಾರತ ಸಂವಿಧಾನದ ಪ್ರಕಾರವೇ ನಡೆಯುತ್ತವೆ. ವಿಧಾನಮಂಡಳದಲ್ಲಿ ಲೋಕಸಭೆ ಸ್ಪೀಕರ್ ಕರೆಯಿಸುವ ಔಚಿತ್ಯವಾದರೂ ಏನು? ಈ ಸಂಪ್ರದಾಯ ಹುಟ್ಟುಹಾಕುವ ಅಗತ್ಯವಾದರೂ ಏನಿತ್ತು? ಎಂದು ಪ್ರಶ್ನಿಸಿದ್ದಾರೆ.

ಒಕ್ಕೂಟ ಸರ್ಕಾರ ಭಾರತ ಗಣರಾಜ್ಯದ ಒಕ್ಕೂಟ ತತ್ತ್ವಗಳನ್ನು ಒಂದೊಂದಾಗಿ ಮುರಿಯುತ್ತ ಬರುತ್ತಿದೆ. ಎಲ್ಲ ವಿಷಯದಲ್ಲೂ ಏಕತ್ವವನ್ನು ಹೇರುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತ ಬರುತ್ತಿದೆ. ಕರ್ನಾಟಕ ಸರ್ಕಾರವೂ ಈ ಖೆಡ್ಡಾಗೆ ಬಿದ್ದು ತನ್ನತನವನ್ನು ಕಳೆದುಕೊಳ್ಳಬಾರದಿತ್ತು ಎಂದಿದ್ದಾರೆ.
ಕರ್ನಾಟಕ ವಿಧಾನಸಭೆ, ವಿಧಾನಪರಿಷತ್ ಸಭಾಧ್ಯಕ್ಷರು ಕೂಡಲೇ ನಾಳಿನ ಜಂಟಿ ಅಧಿವೇಶವನ್ನು ರದ್ದುಗೊಳಿಸಬೇಕು. ಲೋಕಸಭೆ ಸ್ಪೀಕರ್ ಜತೆ ಬೇರೆ ಸ್ಥಳದಲ್ಲಿ ಕಾರ್ಯಕ್ರಮ ನಡೆಸಿಕೊಳ್ಳಲಿ. ಕರ್ನಾಟಕ ವಿಧಾನಮಂಡಳದ ಪಾವಿತ್ರ್ಯತೆಯನ್ನು ಹಾಳುಗೆಡಹುವುದು ಬೇಡ ಎಂದು ಹೇಳಿದ್ದಾರೆ.