ಶಿರಸಿ: ದಕ್ಷಿಣ ಭಾರತದ ಅತಿದೊಡ್ಡ ಹಾಗೂ ಸುಪ್ರಸಿದ್ಧ ಜಾತ್ರೆಗಳಲ್ಲೊಂದಾದ ಐತಿಹಾಸಿಕ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಭಕ್ತ ಸಾಗರದ ನಡುವೆ ದೇವಿ ರಥಾರೂಢಳಾಗಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ.

ನಿನ್ನೆ ರಾತ್ರಿ ದೇವಿಯ ಕಲ್ಯಾಣೋತ್ಸವವು ಭಕ್ತಿಭಾವದಿಂದ ನೆರವೇರಿತು. ಇಂದು ಬೆಳಿಗ್ಗೆ 8.30ರ ಶುಭಲಗ್ನದಲ್ಲಿ ರಥಾರೋಹಣ ಕಾರ್ಯಕ್ರಮ ನಡೆಯಿತು. ಸರ್ವಾಲಂಕೃತಳಾಗಿ ರಥದ ಮೇಲೆ ಆಸೀನಳಾದ ದೇವಿಯ ದರ್ಶನಕ್ಕಾಗಿ ಸಾವಿರಾರು ಭಕ್ತರು ಸಾಗರದ ಅಲೆಯಂತೆ ಹರಿದು ಬರುತ್ತಿದ್ದಾರೆ.

ರಥಾರೋಹಣದ ಬಳಿಕ ದೇವಿಯ ಮೆರವಣಿಗೆ ನಗರ ಪ್ರಮುಖ ಬೀದಿಗಳಲ್ಲಿ ಸಾಗಿದ್ದು, ಬಳಿಕ ಜಾತ್ರಾ ಗದ್ದುಗೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ದೃಶ್ಯವನ್ನು ನೋಡಲು ಅಪಾರ ಜನಸ್ತೋಮ ಸೇರಿತ್ತು. ರಥೋತ್ಸವದ ವೇಳೆ ಭಕ್ತರು ಬಾಳೆಹಣ್ಣು, ಕೋಳಿ, ಅರಳು ಸೇರಿದಂತೆ ವಿವಿಧ ವಸ್ತುಗಳನ್ನು ಸಮರ್ಪಿಸಿ ಹರಕೆ ತೀರಿಸಿದರು. ಈ ವೇಳೆ ದೇವಿಯ ಜೈಕಾರದ ಘೋಷಣೆಗಳು ಶಿರಸಿಯಲ್ಲಿ ಮೊಳಗಿದವು.

ಫೆಬ್ರವರಿ 24ರಿಂದ ಮಾರ್ಚ್ 4ರವರೆಗೆ ಒಂಬತ್ತು ದಿನಗಳ ಕಾಲ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ನಡೆಯಲಿದೆ. ಕರ್ನಾಟಕದ ವಿವಿಧ ಭಾಗಗಳ ಜೊತೆಗೆ ನೆರೆಯ ರಾಜ್ಯಗಳಿಂದಲೂ ಭಕ್ತರು ಆಗಮಿಸಲಿದ್ದಾರೆ. ಈ ಬಾರಿ ದೇವಾಲಯದ ಆಡಳಿತ ಮಂಡಳಿ ಹಾಗೂ ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ಭದ್ರತೆ ಹಾಗೂ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.







