ಹುಲಿ ಉಗರು ಇರುವ ಪೆಂಡೆಂಟ್ ಹಾಕಿದ್ದಾರೆ ಅನ್ನೋ ಕಾರಣಕ್ಕೆ ವರ್ತೂರು ಸಂತೋಷ್ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, ನ್ಯಾಯಾಧೀಶರ ಎದುರು ಹಾಜರು ಮಾಡಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಬಿಗ್ಬಾಸ್ ಮನೆಗೆ ನಾನೊಬ್ಬ ರೈತ ಎನ್ನುತ್ತಲೇ ಕಿಲೋ ತೂಗುವ ಚಿನ್ನದ ಸರ ಸೇರಿದಂತೆ ಆಭರಣಗಳನ್ನು ಹೊತ್ತು ಮನೆಯೊಳಕ್ಕೆ ಹೋಗಿದ್ದ ಸಂತೋಷ್, ಹೇಳಿಕೊಳ್ಳುವ ಮನರಂಜನೆ ನೀಡದಿದ್ದರೂ ಬಿಗ್ಬಾಸ್ ಮನೆಯಲ್ಲಿ ಸೇಫ್ ಆಗಿದ್ದರು. ಆದರೆ ಬಿಗ್ಬಾಸ್ ಆರಂಭ ಆಗಿ 15 ದಿನಗಳ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು ಯಾಕೆ..? ಬಿಗ್ಬಾಸ್ ಆರಂಭದ ವೇದಿಕೆಯಲ್ಲೇ ಆ ಲಾಕೆಟ್ ಇರುವ ಸರ ಧರಿಸಿದ್ದರಲ್ಲ ಅನ್ನೋ ಅನುಮಾನ ಸಾಕಷ್ಟು ಜನರನ್ನು ಕಾಡುತ್ತಿದೆ. ಆ ಅನುಮಾನಕ್ಕೆ ಉತ್ತರ ಇಲ್ಲಿದೆ ನೋಡಿ.
ನಟರೂ ಸೇರಿದಂತೆ ಸಾಕಷ್ಟು ಜನರು ಈ ರೀತಿಯ ಸರ ಧರಿಸಿದ್ದಾರೆ..!
ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಸೇರಿದಂತೆ ಸಾಕಷ್ಟು ಮಂದಿ ಈ ರೀತಿಯ ಹುಲಿ ಉಗುರಿನ ಆಕಾರದ ಪೆಂಡೆಂಟ್ ಇರುವ ಚಿನ್ನದ ಸರ ಧರಿಸಿರುತ್ತಾರೆ. ಆದರೆ ಅದನ್ನೆಲ್ಲಾ ಹುಲಿಯ ಉಗುರು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ದರ್ಶನ್ ಫೋಟೋ ಕೂಡ ಎಲ್ಲಾ ಕಡೆ ವೈರಲ್ ಆಗಿದ್ದು, ಅದರಲ್ಲಿ ಇರುವುದು ಹುಲಿ ಉಗುರು ಎಂದು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅದರು ಪ್ಲಾಸ್ಟಿಕ್ ಅಥವಾ ಗ್ಲಾಸ್ನ ಆಕಾರವೂ ಆಗರಬಹುದು. ಇನ್ನು ವರ್ತೂರು ಸಂತೋಷ್ ಮನೆಯ ಒಳಕ್ಕೆ ಹೋಗುವಾಗಲೂ ಇದರ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಆದರೆ ಬಿಗ್ಬಾಸ್ ಮನೆಯಲ್ಲೇ ಹುಲಿ ಉಗುರು ಹಾಕಿಕೊಂಡಿರುವ ಬಗ್ಗೆ ವರ್ತೂರು ಸಂತೋಷ್ ಹೇಳಿಕೊಂಡಿದ್ದು ಅರೆಸ್ಟ್ ಆಗುವುದಕ್ಕೆ ಕಾರಣ ಎನ್ನಲಾಗಿದೆ. 24 ಗಂಟೆ ಪ್ರಸಾರ ಆಗುವಾಗ ಹುಲಿ ಉಗುರಿನ ಬಗ್ಗೆ ಮಾತನಾಡಿದ್ದನ್ನೇ ರೆಕಾರ್ಡ್ ಮಾಡಿಕೊಂಡು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬಂಧಿಸಿ, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಈ ವಿಚಾರದಲ್ಲಿ ಜಾಮೀನು ಸಿಗಲಿಲ್ಲ ಯಾಕೆ..?
ಈ ರೀತಿಯ ಅನುಮಾನವೂ ಜನರನ್ನು ಕಾಡುತ್ತಿದೆ. ದೊಡ್ಡ ದೊಡ್ಡವರಿಗೆ ಜೈಲು ಶಿಕ್ಷೆ ಆದರೂ ಕೂಡಲೇ ಬೇಲ್ ಪಡೆದುಕೊಳ್ತಾರೆ. ಸ್ಟೇಷನ್ ಬೇಲ್ ಕೂಡ ಪಡೆದುಕೊಳ್ತಾರೆ. ಆದರೆ ಈ ಕೇಸ್ನಲ್ಲಿ ಯಾಕೆ ಬೇಲ್ ಸಿಗಲಿಲ್ಲ ಅನ್ನೋದು ಹಲವರ ಅನುಮಾನ. ಆದರೆ ಯಾವುದೇ ಕೇಸ್ನಲ್ಲಿ 3 ವರ್ಷಕ್ಕಿಂತ ಕಡಿಮೆ ಶಿಕ್ಷೆ ಆಗುವ ಸಾಧ್ಯತೆ ಇದ್ದರೆ, ಕೂಡಲೇ ಬೇಲ್ ಸಿಗುತ್ತದೆ. ಆದರೆ ಯಾವುದೇ ಕೇಸ್ನಲ್ಲಿ 3 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಆಗುವ ಸಂಭವ ಇದ್ದಾರೆ ಕೂಡಲೇ ಬೇಲ್ ಸಿಗುವುದಿಲ್ಲ. ಈ ಕೇಸ್ನಲ್ಲೂ 3 ರಿಂದ 7 ವರ್ಷ ಜೈಲು ಶಿಕ್ಷೆ ಆಗುವ ಸಂಭವ ಇರುವ ಕಾರಣಕ್ಕೆ ವರ್ತೂರು ಸಂತೋಷ್ಗೆ ಬೇಲ್ ಸಿಕ್ಕಿಲ್ಲ. ಈಗಾಗಲೇ ಸಂತೋಷ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದು, ಬುಧವಾರ ವಿಚಾರಣೆಗೆ ಬರಲಿದೆ. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಿ ವಕೀಲರಿಗೆ ಸೂಚಿಸಿದ್ದಾರೆ. ಹುಲಿಯ ಉಗುರು ಅನ್ನೋದು ಖಚಿತ ಮಾಡಿಕೊಳ್ಳಲು FSL ಗೆ ಕಳುಹಿಸಲಾಗಿದೆ.
ಒಂದು ವಾರದ ಹಿಂದೆಯೇ ಬಂಧಿಸಲು ಸಕಲ ತಯಾರಿ..!
ಬಿಗ್ಬಾಸ್ ಆರಂಭದಲ್ಲೇ ಹುಲಿ ಉಗುರಿನ ಬಗ್ಗೆ ಸಂತೋಷ್ ಬಿಗ್ಬಾಸ್ ಮನೆಯಲ್ಲಿ ಹೇಳಿಕೊಂಡಿದ್ರಿಂದ ಒಂದು ವಾರದ ಹಿಂದೆಯೇ ವರ್ತೂರು ಸಂತೋಷ್ ಮೇಲೆ ದೂರು ದಾಖಲಾಗಿತ್ತು. ಬೆಂಗಳೂರು DCF ರವೀಂದ್ರ ನೇತೃತ್ವದಲ್ಲಿ ಸರ್ಚ್ ವಾರೆಂಟ್ ಪಡೆದುಕೊಂಡು DCF ರವೀಂದ್ರ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಸರ್ಚ್ ವಾರೆಂಟ್ ಕಂಡು ಶಾಕ್ ಆದ ಬಿಗ್ಬಾಸ್ ಆಡಳಿತ ಮಂಡಳಿ, ಕಾರ್ಯಕ್ರಮಕ್ಕೆ ತೊಂದರೆ ಆಗುವ ಕಾರಣಕ್ಕೆ ವರ್ತೂರು ಸಂತೋಷ್ನನ್ನು ಹೊರಕ್ಕೆ ಕಳುಹಿಸುವ ನಿರ್ಧಾರ ಮಾಡಿದ್ದರು. ಪೆಂಡೆಂಟ್ ಹುಲಿ ಉಗುರಿನದ್ದೇ ಎಂಬುದನ್ನು ಖಾತರಿ ಮಾಡಿಕೊಂಡ ಬಳಿಕ ಬಂಧಿಸಿ ಕರೆತರುವ ನಿರ್ಧಾರ ಮಾಡಿದ್ದರು. ಚಿನ್ನದ ಸರಕ್ಕೆ ಹಾಕಿದ್ದ ಪೆಂಡೆಂಟ್ ಹುಲಿ ಉಗುರಿನದ್ದೇ ಎಂದು ಸಂತೋಷ್ ಒಪ್ಪಿಕೊಂಡಿದ್ದಾರೆ. 3 ವರ್ಷಗಳ ಹಿಂದೆ ಹೊಸೂರಿನಲ್ಲಿ ಖರೀದಿ ಮಾಡಿದ್ದೆ ಎಂದು ಖಚಿತವಾಗಿ ಹೇಳಿದ ಬಳಿಕ ಬಂಧನ ಮಾಡಲಾಗಿದೆ.
ಹುಲಿ ಉಗುರು ಧರಿಸಿದ್ದು ಸಂತೋಷ್ ಅಪರಾಧ ಅಲ್ವಾ..?
ಹುಲಿ ಉಗುರು ಧರಿಸಿದ್ದು ಖಚಿತ, ಸಂಶಯ ಇಲ್ಲ. ವನ್ಯಜೀವಿಯ ಯಾವುದೇ ಭಾಗವನ್ನು ಮಾನವ ಧರಿಸುವಂತಿಲ್ಲ. 1972 ಕಾಯ್ದೆ ಪ್ರಕಾರ ಇದು ಅಪರಾಧ. 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ. ಆದರೆ ಈ ಉಗುರನ್ನು ಕೊಂಡುಕೊಂಡಿದ್ದೇನೆ ಎಂದಿದ್ದಾರೆ. ಯಾರು ಅನ್ನೋದು ಗೊತ್ತಿಲ್ಲ ಎಂದಿದ್ದಾರೆ. ಆದರೂ ಕಾನೂನು ಬಾಹಿರ ವಸ್ತುವನ್ನು ಖರೀದಿ ಮಾಡಿ ಮನೆಯಲ್ಲಿ ಇಟ್ಟುಕೊಳ್ಳುವುದು ಅಪರಾಧವೇ ಸರಿ. ಖರೀದಿ ಮಾಡಿದ್ದೇನೆ, ಇದಕ್ಕೂ ನನಗೂ ಸಂಬಂಧವಿಲ್ಲ ಎನ್ನುವುದಕ್ಕೆ ಸಾಧ್ಯವೇ ಇಲ್ಲ. ನಿಷೇಧಿತ ವಸ್ತುವನ್ನು ಖರೀದಿ ಮಾಡಿದ್ದರೂ ಸರಿ, ಅದನ್ನು ಮಾರಾಟ ಮಾಡಿದ್ದರೂ ಸರಿ ಅಪರಾಧವೇ..! ಇನ್ನು ಸಂತೋಷ್ ಧರಿಸಿದ ಲಾಕೆಟ್ ತಯಾರು ಮಾಡಿದವರು ಯಾರು..? ಲಾಕೆಟ್ ಮಾಡಿದವರಿಗೆ ಹುಲಿ ಉಗುರು ಸಿಕ್ಕಿದ್ದು ಹೇಗೆ..? ಅನ್ನೋ ಬಗ್ಗೆಯೂ ತನಿಖೆ ನಡೆಯಲಿದೆ. ಜಾಮೀನು ಸಿಗಬಹುದು, ಆದರೆ ಹುಲಿಯ ಉಗುರು ಅನ್ನೋ ರಿಪೋರ್ಟ್ FSL ನಿಂದ ಬಂದರೆ ಖಂಡಿತವಾಗಿಯೂ ಶಿಕ್ಷೆ ಆಗಲಿದೆ.
-ಕೃಷ್ಣಮಣಿ