ನನಗೆ ಈಗ ಕ್ರಿಕೆಟ್ ಗೆ ಸಂಬಂಧಿಸಿದ ಕೆಲಸದ ಅವಶ್ಯಕತೆ ಇದೆ. ಪ್ರಸ್ತುತ ಬಿಸಿಸಿಐ ನೀಡುತ್ತಿರುವ ಮಾಸಿಕ ಪಿಂಚಣಿ ಒಂದೇ ಜೀವನಾಧಾರವಾಗಿದೆ ಎಂದು ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಹೇಳಿದ್ದಾರೆ.
ಸ್ಥಳೀಯ ಪತ್ರಿಕೆ ಮಿಡ್ ಡೆ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ಪರಿಸ್ಥಿತಿ ಹಂಚಿಕೊಂಡ ಕಾಂಬ್ಳಿ, ಬಿಸಿಸಿಐ ಮಾಸಿಕ ನೀಡುತ್ತಿರುವ 30 ಸಾವಿರ ಮಾತ್ರ ಈಗ ನನ್ನ ಆದಾಯದ ಮೂಲ. ಬೇರೆ ಯಾವುದೇ ಆದಾಯ ಇಲ್ಲ. ಹಾಗಾಗಿ ನಾನು ಈಗ ಕೆಲಸದ ಹುಡುಕಾಟದಲ್ಲಿ ಇದ್ದೇನೆ ಎಂದರು.
2019ರ ಟಿ-೨೦ ಮುಂಬೈ ಲೀಗ್ ನಲ್ಲಿ ಕೋಚ್ ಆಗಿ ಕಾರ್ಯ ನಿರ್ವಹಿಸಿದ ನಂತರ ನನಗೆ ಯಾವುದೇ ಕೆಲಸ ಸಿಗುತ್ತಿಲ್ಲ. ನನ್ನ ಎಲ್ಲಾ ಪರಿಸ್ಥಿತಿ ಸಚಿನ್ ತೆಂಡೂಲ್ಕರ್ ಗೆ ಗೊತ್ತು. ಆದರೆ ಅವರ ಬಳಿ ನಾನೂ ಏನೂ ಸಹಾಯ ಕೇಳುವುದಿಲ್ಲ ಎಂದು ಕಾಂಬ್ಳಿ ನುಡಿದರು.
ನೆರುಲ್ ನಲ್ಲಿ ತೆಂಡೂಲ್ಕರ್ ಮಿಡ್ಲ್ ಸೆಕ್ಸ್ ಕ್ರಿಕೆಟ್ ತಂಡದ ಸಲಹೆಗಾರರಾಗಿ ಕಾಂಬ್ಳಿ ಕಾರ್ಯ ನಿರ್ವಹಿಸಿದ್ದರು. ಈಗಲೂ ಅವರಿಗೆ ಅಲ್ಲಿ ಕೆಲಸ ಇದೆ. ಆದರೆ ನೆಹ್ರುಲ್ ತುಂಬಾ ದೂರದ ಪ್ರಯಾಣ ಎಂದು ಅವರು ಹೇಳಿದರು.
ನೆಹ್ರುಲ್ ಗೆ ಹೋಗಬೇಕು ಅಂದರೆ ನಾನು ಪ್ರತಿದಿನ ಮುಂಜಾನೆ ೫ ಗಂಟೆಗೆ ಏಳಬೇಕು. ಕ್ಯಾಬ್ ಹಿಡಿದು ಡಿವೈ ಪಾಟೀಲ್ ಕ್ರೀಡಾಂಗಣಕ್ಕೆ ತೆರಳಬೇಕು. ಆದರೆ ಅದು ತುಂಬಾ ಒತ್ತಡ ಹಾಗೂ ಕಷ್ಟದ ಕೆಲಸವಾಗಿದೆ. ನಾನೀಗ ನಿವೃತ್ತ ಕ್ರಿಕೆಟಿಗ ಆಗಿರುವುದರಿಂದ ಪಿಂಚಣಿ ಆದಾಯದಲ್ಲೇ ಬದುಕಬೇಕಾಗಿದೆ ಎಂದು ಕಾಂಬ್ಳಿ ವಿವರಿಸಿದರು.
ಮುಂಬೈ ಕ್ರಿಕೆಟ್ ಸಂಸ್ಥೆಯ ಕ್ರಿಕೆಟ್ ಅಭಿವೃದ್ಧಿ ಸಮಿತಿಯಲ್ಲಿ ಕೆಲಸ ಪಡೆಯಬಹುದು. ಆದರೆ ಅದು ಗೌರವಧನ ನೀಡಲಾಗುತ್ತದೆ. ಆ ಕೆಲಸವನ್ನಾದರೂ ಕೊಡಿ. ಏಕೆಂದರೆ ನಾನು ಕುಟುಂಬದ ಜವಾಬ್ದಾರಿ ನಿರ್ವಹಿಸಬೇಕಾಗಿದೆ ಎಂದು ಹಲವಾರು ಬಾರಿ ಮನವಿ ಮಾಡಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿದರು.