ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನ ಪ್ರವೇಶ ವಿಚಾರವು ಲಿಂಗ ತಾರತಮ್ಯದ ಪ್ರಶ್ನೆಯಲ್ಲ, ಬದಲಾಗಿ ಧಾರ್ಮಿಕ ನಂಬಿಕೆ ಮತ್ತು ಸಂಪ್ರದಾಯಕ್ಕೆ ಸಂಬಂಧಿಸಿದ್ದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೊರ್ಟ್ ಮುಂದೆ ಸ್ಪಷ್ಟಪಡಿಸಿದೆ.2018ರಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಿದ ತೀರ್ಪಿನ ವಿರುದ್ಧ ಸಲ್ಲಿಸಲಾದ ಪರಿಶೀಲನಾ ಅರ್ಜಿಗಳ ವಿಚಾರಣೆಗೆ ಮುನ್ನ ಕೇಂದ್ರವು ತನ್ನ ನಿಲುವು ಮಂಡಿಸಿದೆ.

10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವು ಅಯ್ಯಪ್ಪ ಸ್ವಾಮಿಯ ‘ನೈಷ್ಠಿಕ ಬ್ರಹ್ಮಚಾರಿ’ ಸ್ವಭಾವದಿಂದ ಉಗಮಿಸಿದ್ದು, ಅದು ಯಾವುದೇ ಕೀಳರಿಮೆ ಅಥವಾ ಅಶುದ್ಧತೆಯ ಆಧಾರಿತವಲ್ಲ ಎಂದು ಹೇಳಿದೆ.ಮಹಿಳೆಯರಿಗೆ ಪ್ರವೇಶ ನೀಡಿದರೆ ದೇವಸ್ಥಾನದ ಪೂಜಾ ಪದ್ಧತಿಯ ಸ್ವರೂಪವೇ ಬದಲಾಗುವ ಸಾಧ್ಯತೆ ಇದೆ. ಇದು ಸಂವಿಧಾನ ರಕ್ಷಿಸುವ ಧಾರ್ಮಿಕ ವೈವಿಧ್ಯತೆಗೆ ಧಕ್ಕೆಯಾಗಬಹುದು ಎಂದು ಕೇಂದ್ರ ವಾದಿಸಿದೆ. ಶತಮಾನಗಳಿಂದ ಭಕ್ತರು ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತಿರುವುದನ್ನೂ ಉಲ್ಲೇಖಿಸಿದೆ.

ಈ ವಿಷಯವು ಧಾರ್ಮಿಕ ನಂಬಿಕೆ ಹಾಗೂ ಪಂಗಡದ ಸ್ವಾಯತ್ತತೆಗೆ ಸೇರಿದುದಾಗಿ ಹೇಳಿರುವ ಕೇಂದ್ರ, ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಯನ್ನು ಮೀರುವ ವಿಚಾರ ಇದಾಗಿದೆ ಎಂದು ತಿಳಿಸಿದೆ. ಆದ್ದರಿಂದ, ಮುಟ್ಟಿನ ವಯಸ್ಸಿನ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧವನ್ನು ಮುಂದುವರಿಸಬೇಕು ಎಂದು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ.ಧಾರ್ಮಿಕ ಆಚರಣೆಗಳನ್ನು ವೈಚಾರಿಕತೆ, ಆಧುನಿಕತೆ ಅಥವಾ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ನಿರ್ಧರಿಸುವುದು ಸೂಕ್ತವಲ್ಲ ಎಂದು ಎಚ್ಚರಿಸಿರುವ ಕೇಂದ್ರ, ನ್ಯಾಯಾಲಯಗಳು ನಂಬಿಕೆ ಸಂಬಂಧಿತ ವಿಚಾರಗಳಲ್ಲಿ ತಾತ್ವಿಕ ತೀರ್ಮಾನಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಿದೆ.






