ಇತ್ತೀಚೆಗೆ ಮುಕ್ತಾಯಗೊಂಡ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಆದ ಹೀನಾಯ ಸೋಲು, ಸೋಲಿನ ಬಳಿಕ ‘ಪಕ್ಷದ ಸೋಲನ್ನೇ ಕಾಯುತ್ತಾ ಕುಳಿತಿದ್ದರೆನೋ ಎನ್ನುವಂತೆ’ ಜಿ-23 ನಾಯಕರು (G-23 Leaders) ನಡೆಸಿದ ಭಿನ್ನಮತೀಯ ಚಟುವಟಿಕೆಗಳು ಕಾಂಗ್ರೆಸ್ ಹೈಕಮಾಂಡ್ (Congress High Command) ನಾಯಕರ ಅದರಲ್ಲೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರ ಮನೋಸ್ಥೃರ್ಯ ಪಾತಾಳಕ್ಕೆ ಕುಸಿಯುವಂತೆ ಮಾಡಬೇಕಿತ್ತು. ಆದರೆ ಪರಿಸ್ಥಿತಿ ವ್ಯತಿರಿಕ್ತವಾಗಿದೆ, ಸೋನಿಯಾ ಗಾಂಧಿ ಅವರು ಈಗ ಮೊದಲಿಗಿಂತ ಹೆಚ್ಚು ಸಕ್ರೀಯರಾಗಿದ್ದಾರೆ.
ಹಂಗಾಮಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರನ್ನು ‘ಪಕ್ಷಕ್ಕೆ ಸಕ್ರೀಯ ಅಧ್ಯಕ್ಷರು ಬೇಕು’ ಎಂದು ಹೇಳುವ ಮೂಲಕ ಜಿ-23 ನಾಯಕರು ಮೂದಲಿಸಿದರು. ಇದನ್ನು ಆರೋಗ್ಯಕರವಾಗಿಯೇ ಸ್ವೀಕರಿಸಿದ ಸೋನಿಯಾ ಗಾಂಧಿ ಅವರು ಪಕ್ಷದ ನೀತಿ ನಿರೂಪಣೆಗಳನ್ನು ನಿರ್ಧರಿಸುವ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ‘ತಾನು ಪೂರ್ಣ ಪ್ರಮಾಣದ ಅಧ್ಯಕ್ಷೆ, ಯಾರೇ ಬೇಕಾದರೂ ಬಂದು ಸಮಸ್ಯೆ ಹೇಳಿಕೊಳ್ಳಬಹುದು’ ಎಂದು ಹೇಳಿದ್ದರು. ಇದೀಗ ಮತ್ತೆ ಜಿ-23 ನಾಯಕರು ತಗಾದೆ ತೆಗೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಸೋನಿಯಾ ಗಾಂಧಿ ಅವರು ಜಿ-23 ಮುಖಂಡರ ಗುಂಪಿನ ನಾಯಕ ಎಂದೇ ಹೇಳಲಾಗುತ್ತಿರುವ ಗುಲಾಮ್ ನಭಿ ಆಜಾದ್ ಅವರನ್ನೇ ಕರೆದು ಮಾತನಾಡಿದ್ದಾರೆ. ಇದು ಸೋನಿಯಾ ಗಾಂಧಿ ಅವರ ದೊಡ್ಡತನಕ್ಕೆ ದ್ಯೋತಕ.
ಇದಲ್ಲದೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷವನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ಮೊದಲಿಗಿಂತಲೂ ಹೆಚ್ಚು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಬಿಜೆಪಿ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಹಿಡಿದ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರಗಳನ್ನು ಹೆಚ್ಚು ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ನೀತಿವರೆಗೆ ಹಲವು ವಿಷಯಗಳನ್ನು ಸಂಸತ್ ಅಧಿವೇಶನದಲ್ಲಿ ಚರ್ಚೆಯ ಮುನ್ನಲೆಗೆ ತಂದಿದ್ದಾರೆ.
1998ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಮತ್ತು 2004 ಹಾಗೂ 2009ರಲ್ಲಿ ಯೂಪಿಎ ಮೈತ್ರಿಕೂಟವನ್ನು ಗೆಲುವಿನತ್ತ ಮುನ್ನಡೆಸಿದಾಗ ಇದ್ದ ಹಾಗೆ ಸೋನಿಯಾ ಗಾಂಧಿ ಅವರು ಕಳೆದ ಎರಡು ವರ್ಷಗಳಲ್ಲಿ ಸಕ್ರೀಯವಾಗಿರಲಿಲ್ಲ. ತಾವು ಲೋಕಸಭೆಯನ್ನು ಪ್ರತಿನಿಧಿಸುವ ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲೂ ಅವರು ಕೇವಲ ಒಂದು ವರ್ಚುವಲ್ ರ್ಯಾಲಿ ಉದ್ದೇಶಿಸಿ ಮಾತನಾಡಿದರು. ಅವರು ನಿಷ್ಕ್ರಿಯವಾಗಿರಲು ಕೊರೋನಾ ಪರಿಸ್ಥಿತಿ ಮತ್ತು ವೈಯಕ್ತಿಕವಾಗಿ ಅನಾರೋಗ್ಯ ಪ್ರಮುಖ ಕಾರಣಗಳಾಗಿದ್ದವು. ಆದರೀಗ ಮತ್ತೆ ಮೊದಲಿನ ಲಯಕ್ಕೆ ಮರಳಿದ್ದಾರೆ.
ಮಾಚ್ 10ಕ್ಕೆ ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿತ್ತು. ಸೋನಿಯಾ ಗಾಂಧಿ ಅವರು ಮೂರೇ ದಿನಗಳ ಅಂತರದಲ್ಲಿ ಅಂದರೆ ಮಾರ್ಚ್ 13ಕ್ಕೆ ಸೋಲಿನ ಬಗ್ಗೆ ಮರಣೋತ್ತರ ಪರೀಕ್ಷೆ ನಡೆಸಲು ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸಭೆ ಕರೆದರು. ಇದಾದ ವಾರದಲ್ಲಿ ಐದು ರಾಜ್ಯಗಳ ಪಕ್ಷದ ಅಧ್ಯಕ್ಷರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದರು. ಅಷ್ಟೇಯಲ್ಲ ಹೊಸ ಅಧ್ಯಕ್ಷರನ್ನೂ ನೇಮಿಸಿದ್ದಾರೆ. ಜೊತೆಗೆ ಇದೇ ವರ್ಷದ ಕೊನೆಯಲ್ಲಿ ನಡೆಯುವ ಗುಜರಾತ್ ವಿಧಾನಸಭಾ ಚುನಾವಣೆಗೆ ಅಣಿಯಾಗಲು ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಿದ್ದಾರೆ. ಅದರಲ್ಲಿ ಚಿಕ್ಕಮಗಳೂರು ಮೂಲದ ಬಿ.ಎಂ. ಸಂದೀಪ್ ಕೂಡ ಇದ್ದಾರೆ. ಸಂದೀಪ್ ಹಿಂದೆ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿಯಾಗಿ ಪರಿಣಾಮಕಾರಿಯಾದ ಕೆಲಸ ಮಾಡಿದ್ದರು. ಇಂತಹವರನ್ನು ಗುರುತಿಸಿ ಅವಕಾಶ ನೀಡಿರುವುದು ಸೋನಿಯಾ ಗಾಂಧಿ ಅವರ ದೂರದೃಷ್ಟಿಗೆ ಹಿಡಿದ ಕನ್ನಡಿ.

ಜಿ-23 ಗುಂಪಿನ ಒಬ್ಬ ಸದಸ್ಯ, ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ‘ಸಾಮೂಹಿಕ ನಾಯಕತ್ವ’ದ ಬಗ್ಗೆ ಮಾತನಾಡಿದ್ದರು. ಗಾಂಧಿ ಕುಟುಂಬ ಸ್ವಯಂಪ್ರೇರಿತವಾಗಿ ದೂರ ಸರಿಯಬೇಕು ಎಂದು ಹೇಳಿದ್ದರು. ಪರೋಕ್ಷವಾಗಿ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡಿದ್ದರು. ಇದ್ಯಾವುದಕ್ಕೂ ತಲೆ ಕಡೆಸಿಕೊಳ್ಳದ ಸೋನಿಯಾ ಗಾಂಧಿ ಅವರು ಮರುದಿನವೇ ಗುಲಾಮ್ ನಭಿ ಆಜಾದ್ ಅವರನ್ನು ಕರೆದು ಮಾತನಾಡುವ ಸೌಜನ್ಯ ತೋರಿದರು.
ಮಾರ್ಚ್ 13ರಂದು ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸಭೆಯು ಸೋನಿಯಾ ಗಾಂಧಿ ಅವತ ನಾಯಕತ್ವವನ್ನು ಸರ್ವಾನುಮತದಿಂದ ಪುನರುಚ್ಚರಿಸಿದೆ. ರಾಜಕೀಯ ಸವಾಲುಗಳನ್ನು ತೆಗೆದುಕೊಳ್ಳಲು ಅಗತ್ಯವಾದ ಮತ್ತು ಸಮಗ್ರವಾದ ಸಾಂಸ್ಥಿಕ ಬದಲಾವಣೆಗಳನ್ನು ಮಾಡಬೇಕು ಎಂದಷ್ಟೇ ಹೇಳಿದೆ. ಅಂದರೆ ಕೂಡಲೇ ಪಕ್ಷದ ಸಾಂಸ್ಥಿಕ ಚುನಾವಣೆ ಆಗಬೇಕು. ಆದಷ್ಟು ಬೇಗ ನೂತನ ಅಧ್ಯಕ್ಷರ ನೇಮಕ ಆಗಬೇಕು ಅಂತಾ. ರಾಹುಲ್ ಗಾಂಧಿ ಅವರೇ ಮುಂದಿನ ಕಾಂಗ್ರೆಸ್ ಅಧ್ಯಕ್ಷರು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯವೇ ಆಗಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಕುಟುಂಬದ ಅನಿವಾರ್ಯತೆಯೂ ಅರ್ಥವಾಗುತ್ತದೆ ಮತ್ತು ಸೋನಿಯಾ ಗಾಂಧಿ ಅವರ ಬಗೆಗೆ ಹೊಂದಿರುವ ವಿಶ್ವಾಸವೂ ಗೊತ್ತಾಗುತ್ತದೆ.
ತಮ್ಮ ಕುಟುಂಬದ ಅಗತ್ಯ ಇಲ್ಲ ಎನ್ನುವುದಾದರೆ ತಾವು ಮತ್ತು ತಮ್ಮ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಪಕ್ಷದ ನಾಯಕತ್ವದಿಂದ ಹಿಂದೆ ಸರಿಯಲು ಸಿದ್ಧರಿರುವುದಾಗಿ ಸೋನಿಯಾ ಗಾಂಧಿ ಅವರು ಕಾರ್ಯಕಾರಣಿ ಸಮಿತಿ ಸದಸ್ಯರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. 75 ವರ್ಷದ ಸೋನಿಯಾ ಗಾಂಧಿ ಅವರ ಹೊಸ ಹುರುಪು, ಆರೋಗ್ಯಕಾರಿ ಆಲೋಚನೆಗಳು, ವೈರಿಗಳನ್ನೂ ಕರೆದು ಮಾತನಾಡುವ ದೊಡ್ಡತನಗಳೆಲ್ಲವೂ ಸದ್ಯ ಹಲವು ಸಂಕಟ್ಟದಲ್ಲಿ ಸಿಲುಕಿರುವ ಕಾಂಗ್ರೆಸ್ ಪಕ್ಷಕ್ಕೆ ಮರಳುಗಾಡಿನಲ್ಲಿ ನೀರು ಸಿಕ್ಕಂತಾಗಿದೆ.
1998ರಲ್ಲಿ ಸೋನಿಯಾ ಗಾಂಧಿ ಅವರು ಪಕ್ಷದ ನೊಗಕ್ಕೆ ಹೆಗಲು ಕೊಟ್ಟಾಗಲೂ ಪರಿಸ್ಥಿತಿ ಹೀಗೆ ಇತ್ತು. ಹಲವು ಸಮಸ್ಯೆಗಳ ನಡುವೆ ಗೆಲುವು ಸಾಧಿಸಿದರು. 2004 ಮತ್ತು 2009ರಲ್ಲಿ ಯುಪಿಎ ಮೈತ್ರಿ ಕೂಟಕ್ಕೆ ಗೆಲುವು ತಂದುಕೊಟ್ಟರು. ಪ್ರಧಾನ ಮಂತ್ರಿ ಹುದ್ದೆಯನ್ನು ನಿರಾಕರಿಸಿ ದೇಶ ಕಂಡ ಶ್ರೇಷ್ಠ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಹುದ್ದೆಗೆ ತಂದು ಕೂರಿಸುವ ಮೂಲಕ ಇಡೀ ಜಗತ್ತೇ ಆರ್ಥಿಕ ಹಿಂಜರಿತಕ್ಕೆ ಸಿಲುಕಿದ್ದಾಗಲೂ ದೇಶದ ಆರ್ಥಿಕತೆ ಸುಸ್ಥಿರವಾಗಿರುವಂತೆ ನೋಡಿಕೊಂಡರು. ರಾಜಕೀಯ ಅನಿರ್ಧಿಷ್ಟತೆಯನ್ನೂ ಹೋಗಲಾಡಿಸಿ ಹಲವು ಪಕ್ಷಗಳ ಜೊತೆ ಸೇರಿಕೊಂಡು 10 ವರ್ಷಗಳ ಸರ್ಕಾರ ನೀಡಿದರು. ಹಾಗಾಗಿಯೇ ಸೋನಿಯಾ ಗಾಂಧಿ ಅವರು ಸಕ್ರೀಯವಾಗಿರುವುದು ಹಲವು ರೀತಿಯಲ್ಲಿ ಮಹತ್ವ ಪಡೆದುಕೊಂಡಿದೆ. ರಾಷ್ಟ್ರ ರಾಜಕಾರಣದಲ್ಲಿ ಕುತೂಹಲವೂ ಮೂಡಿದೆ.