ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ 9 ತಿಂಗಳ ಪುತ್ರಿ ಮೇಲೆ ಅತ್ಯಾಚಾರದ ಬೆದರಿಕೆ ಒಡ್ಡಿರುವುದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಇಂತಹ ಧ್ವೇಷಪೂರಿತ ಕಮೆಂಟ್ಗಳ ಕಡಿವಾಣದ ಕುರಿತು ಮತ್ತೆ ಚರ್ಚೆಗೆ ಬಂದಿದೆ.
ಟಿ-20 ವಿಶ್ವಕಪ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಭಾರತ ತಂಡದ ಕುರಿತು ಹಲವು ಸೃಜನಾತ್ಮಕ ಟೀಕೆಗಳಿಗಿಂತ ಇಂತಹ ನಿಂದನಾತ್ಮಕ ಟೀಕೆಗಳು ಹೆಚ್ಚು ಸದ್ದು ಮಾಡುತ್ತಿವೆ. ಇದು ಆಗಬೇಕಾದುದು ಕೂಡಾ. ಈ ಬಾರಿಯ ವಿಶ್ವ ಕಪ್ ಸರಣಿಯಲ್ಲಿ ಭಾರತ ತಂಡದ ಪ್ರದರ್ಶನಕ್ಕೆ ಧರ್ಮಾಧರಿತ ನಿಂದನೆಗಳು, ಸ್ತ್ರೀವಿರೋಧಿ ಮನಸ್ಥಿತಿಯ ಅನಾವರಣಗೊಳ್ಳುತ್ತಿದೆ. ಪಾಕಿಸ್ತಾನದೊಂದಿಗಿನ ಸೋಲಿಗೆ ವಿಕೃತ ಜನಾಂಗೀಯವಾದಿಗಳು ಭಾರತದ ಹಿರಿಯ ಬೌಲರ್ ಮಹಮ್ಮದ್ ಶಮಿ ವಿರುದ್ಧ ಧ್ವೇಷದ ಪ್ರತಿಕ್ರಿಯೆಗಳು ಬಂದಿದ್ದವು. ಶಮಿಯನ್ನು ಪಾಕಿಸ್ತಾನಿಯೆಂದು ಹೇಳಿ ಅವಮಾನಿಸಲಾಗಿತ್ತು. ಈ ರೀತಿಯ ಪ್ರತಿಕ್ರಿಯೆಗಳಿಗೆ ಶಮಿ ಅವರ ಧರ್ಮವೇ ಕಾರಣವಾಗಿರುವುದು ವಿಪರ್ಯಾಸ.
ಶಮಿ ವಿರುದ್ಧದ ನಿಂದನೆಯನ್ನು ಖಂಡಿಸಿದ್ದ ನಾಯಕ ವಿರಾಟ್ ಕೊಹ್ಲಿ “ಬೆನ್ನು ಮೂಳೆ ಇಲ್ಲದವರಷ್ಟೇ ಧರ್ಮಾಧರಿತವಾಗಿ ಕ್ರಿಕೆಟ್ಟಿಗರನ್ನು ನೋಡುತ್ತಾರೆ ಹಾಗೂ ಧರ್ಮದ ಕಾರಣಕ್ಕೆ ಟೀಕೆ ಮಾಡುತ್ತಾರೆ, ಇದು ಅಮಾನವೀಯ” ಎಂದಿದ್ದರು.
ವಿಕೃತ ಟ್ರಾಲ್ಗಳ ವಿರುದ್ಧ ಕೊಹ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿದ್ದಂತೆಯೇ ಟ್ವಿಟರಿನಲ್ಲಿ ಮತ್ತೆ ವಿರಾಟ್ ವಿರುದ್ಧವೇ ಟ್ರೋಲ್ ವಿಕೃತರು ಟೊಂಕ ಕಟ್ಟಿ ನಿಂತಿದ್ದಾರೆ. ಇವರ ವಿಕೃತಿ ಅತಿರೇಕಕ್ಕೆ ಹೋಗಿದ್ದು, ವಿರಾಟ್ ಕೊಹ್ಲಿಯ 9 ತಿಂಗಳ ಮಗಳ ಮೇಲೆಯೇ ಅತ್ಯಾಚಾರ ಬೆದರಿಕೆ ಒಡ್ಡಿದ್ದಾರೆ. ಒಂದು ಕ್ರೀಡೆಯ ಮೇಲಿನ ಅಭಿಮಾನ ಇಷ್ಟು ಕೀಳುಮಟ್ಟಕ್ಕೆ ಹೋಗುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪಂದ್ಯಾಟಗಳಿಗಾಗಿ ಹಾಗೂ ಕ್ರಿಕೆಟಿಗರ ವಿರುದ್ಧ ಈ ರೀತಿಯ ವಿಕೃತಿ ಮೆರೆಯುವುದು ಇದೇ ಮೊದಲೇನಲ್ಲ. 2020 ರ ಐಪಿಎಲ್ ಪಂದ್ಯಾಟದಲ್ಲಿ ಧೋನಿ ಅವರ ಕಳಪೆ ಪ್ರದರ್ಶನಕ್ಕಾಗಿ ಅವರ 5 ವರ್ಷದ ಮಗಳ ಮೇಲೆ ಅತ್ಯಾಚಾರ ಬೆದರಿಕೆಯನ್ನು ಒಬ್ಬ ಹಾಕಿದ್ದ. ಈ ಪ್ರಕರಣ ಕೂಡಾ ಆ ಸಮಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು.
ಕ್ರಿಕೆಟಿಗರ ಕಳಪೆ ಪ್ರದರ್ಶನಕ್ಕಾಗಿ ಅವರ ಪತ್ನಿ, ಮಗಳು ಹಾಗೂ ಕುಟುಂಬಸ್ಥರ ವಿರುದ್ಧ ಅಸಹ್ಯ ಭಾಷೆಯಲ್ಲಿ ನಿಂದಿಸುವುದು, ಅತ್ಯಾಚಾರದ ಬೆದರಿಕೆ ಒಡ್ಡುವುದರ ಹಿಂದೆ ಸ್ತ್ರೀ ವಿರೋಧಿ ಧೋರಣೆ ಇರುವುದು ನಿಚ್ಚಳವಾಗಿದೆ. ಅಷ್ಟಕ್ಕೂ ಆಟಗಾರರ ಕಳಪೆ ಆಟಕ್ಕೂ ಅವರ ಕುಟುಂಬದ ಮಹಿಳೆಯರಿಗೂ ಏನು ಸಂಬಂಧ? ಆನಂದವನ್ನು ಹಂಚಬೇಕಿದ್ದ ಪಂದ್ಯಗಳು ಧ್ವೇಷದ, ಅಸಹ್ಯದ ಪರಮಾವಧಿಗೆ ತಲುಪಿಸುತ್ತಿರುವುದರ ಬಗ್ಗೆ ನಿಜವಾಗಿಯೂ ಗಂಭೀರವಾಗಿ ಚಿಂತಿಸಬೇಕಾದ ತುರ್ತಿದೆ.
ಸದ್ಯ, ವಿರಾಟ್ ಕೊಹ್ಲಿ ಪುತ್ರಿಯ ಮೇಲೆ ಅತ್ಯಾಚಾರದ ಬೆದರಿಕೆಯನ್ನು ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ. ಆದರೆ, ಸೈಬರ್ ಲೋಕದಲ್ಲಿ ಬಹುತೇಖ 50 % ಮಹಿಳೆಯರು ಇಂತಹ ಬೆದರಿಕೆಗಳಿಂದ, ಲೈಂಗಿಕ ಕಿರುಕುಳಗಳಿಂದ ಸಂತ್ರಸ್ತರಾಗುತ್ತಿದ್ದಾರೆ ಎಂದು ವರದಿಯೊಂದು ಹೇಳುತ್ತಿದೆ.
ಪ್ರತಿ ನಾಲ್ವರಲ್ಲಿ ಒಬ್ಬ ಬಾಲಕಿ ಸಾಮಾಜಿಕ ಜಾಲತಾಣಗಳಲ್ಲಿನ ನಿಂದನೆಯು ದೈಹಿಕವಾಗಿ ಅಸುರಕ್ಷಿತ ಭಾವನೆಯನ್ನು ಉಂಟುಮಾಡಿದೆ ಎಂದು ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮವು ಅಪರಾಧಿಗಳು ಮತ್ತು ದುರುಪಯೋಗ ಮಾಡುವವರಿಗೆ ಅನಾಮಧೇಯವಾಗಿ ಕಾರ್ಯನಿರ್ವಹಿಸಲು ಮತ್ತು ಅಂತಹ ಅಸ್ಪಷ್ಟ ಬೆದರಿಕೆಗಳನ್ನು ನೀಡಲು ಅನುಮತಿಸುತ್ತಿರುವುದನ್ನು ವ್ಯವಸ್ಥೆಯ ವೈಫಲ್ಯ ಎಂದು ಕರೆಯಬೇಕೆ, ಬೇಜವಾಬ್ದಾರಿ ಎಂದು ಕರೆಯಬೇಕೆ?
ಮಹಿಳೆಯರಿಗೆ ಸುರಕ್ಷಿತ ಭಾವವನ್ನು ಒದಗಿಸುವುದು ಇಂತಹ ಪ್ಲಾಟ್ಫಾರ್ಮ್ಗಳ ಹಾಗೂ ಸರ್ಕಾರ ಭಾದ್ಯತೆ. ಭಾರತದ ಇಬ್ಬರು ಪ್ರಭಾವಿ ಕ್ರೀಡಾಪಟುಗಳ ಹೆಣ್ಣುಮಕ್ಕಳಿಗೆ ಈ ರೀತಿಯ ಅತ್ಯಾಚಾರದ ಬೆದರಿಕೆಗಳು ಸಲೀಸಾಗಿ ಹಾಕಬಹುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ಇತರ ಮಹಿಳೆಯರು ಮತ್ತು ಅವರ ಮಕ್ಕಳ ಅವಸ್ಥೆ ಹೇಗಿರಬಹುದು ಎಂದು ಯೋಚಿಸಬೇಕಿದೆ.