ಬೆಳಗಾವಿ : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ಬಾರಿ ಬೆಳಗಾವಿ ರಾಜಕಾರಣ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ಲಕ್ಷ್ಮಣ ಸವದಿ ರಾಜಕೀಯ ಜೀವನವನ್ನು ಅಂತ್ಯಗೊಳಿಸೋಕೆ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ ಎನ್ನಲಾಗಿದ್ದು ಆತನ ರಾಜಕೀಯ ಜೀವನ ಕೊನೆಗಾಣಿಸೋದೇ ನನ್ನ ಗುರಿ ಎಂದು ಶಪಥ ಮಾಡಿದ್ದಾರೆ ಎನ್ನಲಾಗಿದೆ .
ಈಗಾಗಲೇ ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದೆ, ಇದರ ಜೊತೆಯಲ್ಲಿ ಲಕ್ಷ್ಮಣ ಸವದಿಯ ಮತ್ತೊಂದು ಪ್ರಮುಖ ಸ್ಥಾನವನ್ನು ಕಸಿಯೋದು ರಮೇಶ್ ಜಾರಕಿಹೊಳಿ ಪ್ಲಾನ್ ಆಗಿದೆ. ಮತ್ತೆ ಪಿಎಲ್ಡಿ ಬ್ಯಾಂಕ್ ರಾಜಕೀಯಕ್ಕೆ ಕೈ ಹಾಕಿದ್ದು ಸವದಿಯನ್ನು ಅಥಣಿಯಲ್ಲಿ ಸೋಲಿಸಿ ಶಾಶ್ವತವಾಗಿ ಮನೆ ಕಳಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಸವಾಲೆಸೆದಿದ್ದಾರೆ.
ಈಗಾಗಲೇ ಬಿಜೆಪಿ ಸ್ಥಳೀಯ ಮುಖಂಡರ ಜೊತೆ ಸಭೆ ಕರೆದಿರುವ ರಮೇಶ್ ಜಾರಕಿಹೊಳಿ, ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಲು ಲಕ್ಷ್ಮಣ ಸವದಿಯೇ ಕಾರಣ. ಸವದಿಯನ್ನು ಚುನಾವಣೆಯಿಂದ ಸೋಲಿಸಿ ಇದಾದ ಬಳಿಕ ಡಿಸಿಸಿ ಬ್ಯಾಂಕ್ನ ಆಡಳಿತ ಮಂಡಳಿ ಮತ್ತು ಅಥಣಿಯ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಸಮಿತಿಯಿಂದಲೂ ಸವದಿಯನ್ನು ಕಿತ್ತು ಹಾಕಿಸುತ್ತೇನೆಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎನ್ನಲಾಗಿದೆ.