
ಕೇಂದ್ರ ಸರ್ಕಾರ ಇತ್ತೀಚಿಗೆ ಮಂಡಿಸಿದ ಬಜೆಟ್ನಲ್ಲಿ ಆಂಧ್ರ ಪ್ರದೇಶ ಹಾಗು ಬಿಹಾರಕ್ಕೆ ಬಿಟ್ಟರೆ ದೇಶದ ಯಾವುದೇ ರಾಜ್ಯಗಳಿಗೂ ಯಾವುದೇ ಯೋಜನೆ ಕೊಟ್ಟಿಲ್ಲ ಎಂದು ವಿರೋಧ ಪಕ್ಷಗಳು ಕಿಡಿಕಾರುತ್ತಿದೆ. ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟದವರು ಬೀದಿಗಿಳಿದು ಪ್ರತಿಭಟನೆಯನ್ನೂ ಮಾಡಿದರು. ಮೂರ್ನಾಲ್ಕು ದಿನದಿಂದ ಸಂಸತ್ ಕಲಾಪದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದರು. ನಿನ್ನೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಜೆಟ್ ಮೇಲಿನ ಭಾಷಣದ ವೇಳೆ ಮಹಾ ಭಾರತದ ಚಕ್ರವ್ಯೂಹದ ಕಥೆ ಹೇಳಿ ಕೇಂದ್ರ ಸರ್ಕಾರದ ಮೇಲೆ ಮಾತಿನ ಸಮರ ನಡೆಸಿದ್ದಾರೆ.
ಕೇಂದ್ರ ಸರ್ಕಾರದ ಮೇಲೆ ಭಯ ಮತ್ತು ಹಿಂಸೆ ಅಸ್ತ್ರ ಪ್ರಯೋಗ ಮಾಡಿದ ರಾಹುಲ್ ಗಾಂಧಿ, ಸಾವಿರಾರು ವರ್ಷಗಳ ಹಿಂದೆ ಹರಿಯಾಣದಲ್ಲಿ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಅಭಿಮನ್ಯು ಚಕ್ರವ್ಯೂಹ ಭೇದಿಸಿ ಒಳ ಹೋದಾಗ 6 ಜನರು ಸೇರಿ ಕೊಂದರು. ಚಕ್ರವ್ಯೂಹಕ್ಕೆ ಮತ್ತೊಂದು ಹೆಸರಿದೆ. ಪದ್ಮವ್ಯೂಹ. ಕಮಲ ಹೂವಿನಂತೆ ವ್ಯೂಹ ರಚನೆ ಮಾಡಿ ಕೊಂದರು. ಈ ಶತಮಾನದಲ್ಲಿ ಮತ್ತೊಂದು ಚಕ್ರವ್ಯೂಹವಿದೆ. ಅಭಿಮನ್ಯುಗೆ ಆದಂತೆ ಇಡೀ ದೇಶಕ್ಕೆ ಮಾಡ್ತಿದ್ದಾರೆ. ಅಭಿಮನ್ಯು ಕೊಂದವರು ದ್ರೋಣಚಾರ್ಯ, ಕರ್ಣ, ಕೃಪಾಚಾರ್ಯ, ತೃತವರ್ಮ, ಅಶ್ವತ್ಥಾಮ, ಶಕುನಿ ಆದರೆ 21ನೇ ಶತಮಾನದ ಚಕ್ರವ್ಯೂಹದಲ್ಲಿ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ, ಅದಾನಿ ಎಂದು ನೇರವಾಗಿ ಹೆಸರುಗಳನ್ನು ಉಲ್ಲೇಖಿಸಿಯೇ ಚಾಟಿ ಬೀಸಿದ್ದಾರೆ

ಬಜೆಟ್ನಲ್ಲಿ ಜಾತಿ, ಹಲ್ವಾ ಹೆಸರಲ್ಲಿ ಮಾತಿನ ಬ್ರಹ್ಮಾಸ್ತ್ರ ಬೀಸಿದ್ದಾರೆ ರಾಹುಲ್ ಗಾಂಧಿ. 20 ಅಧಿಕಾರಿಗಳಿಂದ ಭಾರತದ ಬಜೆಟ್ ರೆಡಿ ಆಗಿದೆ. ಹಿಂದೂಸ್ತಾನಕ್ಕೆ ಕೇವಲ 20 ಜನ ಹಲ್ವಾ ತಿನ್ನಿಸಿದ್ದಾರೆ. ಆ ತಂಡದಲ್ಲಿ ಒಬ್ಬರು ಅಲ್ಪಸಂಖ್ಯಾತರು, ಒಬ್ಬರು ಒಬಿಸಿ
ಸಮುದಾಯಕ್ಕೆ ಸೇರಿದವರು ಇದ್ದರು. ಆದರೆ ಅವರನ್ನ ಫೋಟೋಗೂ ಸೇರಿಸಿಕೊಳ್ಳಲಿಲ್ಲ. ಫೋಟೋದಿಂದಲೂ ಅವರನ್ನು ಹೊರಗೆ ಹಾಕಿದ್ದಾರೆ ಎಂದು ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಈ ವೇಳೆ ಹಣಕಾಸು ಸಚಿವೆ ನಿರ್ಮಲಆ ಸೀತಾರಾಮನ್ ತಲೆ ಚಚ್ಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಭಾಷಣ ಕಂದು ಆಶ್ಚರ್ಯ ಚಕಿತರಾಗಿ, ಮಂದಸ್ಮಿತರಾಗಿದ್ದಾರೆ.

ದೇಶದ ರೈತರಿಗಾಗಿ Minimum Support Price ಜಾರಿಗೆ ಆಗ್ರಹಿಸಿರುವ ರಾಹುಲ್ ಗಾಂಧಿ, ನರೇಂದ್ರ ಮೋದಿ ಸರ್ಕಾರದಲ್ಲಿ 3 ಕಪ್ಪು ಕಾನೂನುಗಳು ಇವೆ. ಭೂಸ್ವಾಧೀನ ಮಸೂದೆಯಿಂದ ನರಕ, ಬೆಳೆಗಳಿಗೆ ಕಡಿಮೆ ಬೆಲೆ ಕೊಟ್ಟು ರೈತರಿಗೆ ಸಂಕಷ್ಟ, ಪರಿಹಾರ ನೀಡದೇ ಪದೇ ಪದೇ ಕಿರುಕುಳ ನೀಡುವುದು ಎಂದು ದಾಳಿ ಮಾಡಿದ್ದಾರೆ. ಇದೇ ಕಾರಣಕ್ಕೆ ರೈತರು ಕನಿಷ್ಟ ಬೆಂಬಲ ಬೆಲೆ (MSP) ಕಾನೂನು ಖಾತ್ರಿ ಕೇಳುತ್ತಿದ್ದಾರೆ. ಹೋರಾಟಕ್ಕೆ ಬಂದ ರೈತರನ್ನು ಕೇಂದ್ರ ಸರ್ಕಾರ ದೆಹಲಿ ಗಡಿಯಲ್ಲಿ ನಿಲ್ಲಿಸಿದೆ. ರೈತರ ಜೊತೆ ಮಾತನಾಡೋಕು ನೀವು ಸಿದ್ಧರಿಲ್ಲ ಎಂದು ಅನ್ನದಾತರ ಸಂಕಷ್ಟದ ಬಗ್ಗೆಯೂ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಅಗ್ನಿವೀರ್ ಹೆಸರಲ್ಲೂ ರಾಹುಲ್ ಗಾಂಧಿ ಪಾಶು ಪಥಾಸ್ತ್ರ ಪ್ರಯೋಗ ಮಾಡಿದ್ದಾರೆ. ನರೇಂದ್ರ ಮೋದಿ ಸರ್ಕಾರ ಸೈನಿಕರನ್ನೂ ಸಂಕಷ್ಟಕ್ಕೆ ಸಿಲುಕಿಸಿದೆ. ಅಗ್ನಿವೀರರನ್ನೂ ಜಟಿಲದಲ್ಲಿ ಸಿಲುಕಿಸಿದೆ. ಪಿಂಚಣಿಗೆ ಬಜೆಟ್ನಲ್ಲಿ 1 ರೂಪಾಯಿಯನ್ನೂ ಕೊಟ್ಟಿಲ್ಲ. ನಿಮ್ಮನ್ನು ನೀವು ದೇಶಪ್ರೇಮಿ ಅಂತೀರಾ..! ಆದರೂ ಅಗ್ನಿವೀರರಿಗೆ ಸಹಾಯ ಮಾಡಿಲ್ಲ ಎಂದು ಛೇಡಿಸಿದ್ದಾರೆ. ಇನ್ನು ಮಧ್ಯಮವರ್ಗದ ಜನರಿಗೆ ಬಜೆಟ್ನಲ್ಲಿ ಏನೂ ಕೊಟ್ಟಿಲ್ಲ, ಕೋವಿಡ್ ಟೈಂನಲ್ಲಿ ಪ್ರಧಾನಿ ಜಾಗಟೆ ಬಾರಿಸಿ ಅಂದ್ರು, ಮಧ್ಯಮ ವರ್ಗದ ಜನ ಪಾಪ ತಟ್ಟೆ, ಗಂಟೆ, ಜಾಗಟೆ ಬಾರಿಸಿದ್ರು. ಆಮೇಲೆ ಮೊಬೈಲ್ ಲೈಟ್ ಹಾಕಿ ಅಂದಾಗ್ಲೂ ಹಾಕಿದ್ರು. ಈ ಬಜೆಟ್ನಲ್ಲಿ ಮಧ್ಯಮ ವರ್ಗದ ಮೇಲೆ ದಾಳಿ ಮಾಡಿದ್ದೀರಿ. ಬಂಡವಾಳ, ಸೂಚ್ಯಾಂಕ ಹೆಸರಲ್ಲಿ ಬೆನ್ನಿಗೆ ಚುಚ್ಚಿದ್ದೀರಿ. ತೆರಿಗೆ ಹೆಚ್ಚಿಸಿ ಮಧ್ಯಮ ವರ್ಗದ ಜನರ ಎದೆಗೆ ಚುಚ್ಚಿದ್ದೀರಿ ಎಂದು ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದು ಎರಡನೇ ಅಧಿವೇಶ ಆಗಿದ್ದು, ಮೊದಲ ಅಧಿವೇಶನದಲ್ಲೂ ರಾಹುಲ್ ಗಾಂಧಿ ಅಬ್ಬರಿಸಿದ್ದರು. ಇದೀಗ ಬಜೆಟ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ವಾಕ್ಸಮರ ಮೆರೆಯುತ್ತಿದ್ದಾರೆ. ಹಣಕಾಸು ಸಚಿವರು ಯುವಕರಿಗೆ ಏನ್ ಕೊಟ್ರು ಎಂದು ಪ್ರಶ್ನಿಸಿರುವ ರಾಹುಲ್ ಗಾಂಧಿ, ಬಜೆಟ್ನಲ್ಲಿ ಇಂಟರ್ನ್ಶಿಪ್ ಬಗ್ಗೆ ಹೇಳಿದ್ದಾರೆ. ತಮಾಷೆ ಅಂದ್ರೆ ಶೇಕಡ 99 ಯುವಕರಿಗೆ ಸಂಬಂಧನೇ ಇಲ್ಲ. ಅಂದ್ರೆ ಯುವಕರಿಗೆ ಮೊದಲು ಕಾಲು ಮುರಿತಾರೆ. ಆಮೇಲೆ ಇವ್ರೇ ಬ್ಯಾಂಡೇಜನ್ನೂ ಹಾಕ್ತಿದ್ದಾರೆ. ನಿರುದ್ಯೋಗ ಅನ್ನೋ ಚಕ್ರವ್ಯೂಹದಲ್ಲಿ ಸಿಲುಕಿಸಿದ್ದೀರಿ. ಪ್ರಶ್ನೆ ಪತ್ರಿಕೆ ಲೀಕ್ ಚಕ್ರವ್ಯೂಹದಲ್ಲೂ ಸಿಲುಕಿಸಿದ್ದೀರಿ ಎಂದು ಮಾತಿನ ಚಾಟಿ ಬೀಸಿದ್ದಾರೆ.
ಕೃಷ್ಣಮಣಿ