
ಬೆಂಗಳೂರು: ಕಳೆದ ರಾಜ್ಯಸಭೆ ಚುನಾವಣಾ ವೇಳೆ ವಿಧಾನಸೌಧದಲ್ಲೇ ಪಾಕ್ ಪರ ಘೋಷಣೆ ಕೂಗಿದ್ದ ಪ್ರಕರಣ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಪ್ರಕರಣ ನಡೆದು 9 ತಿಂಗಳು ಕಳೆದರೂ ಇನ್ನೂ ಪೋಲೀಸರು ಚಾರ್ಜ್ಶೀಟ್ ಸಲ್ಲಿಸದಿರುವುದು ಅನುಮಾನ ಮೂಡಿಸಿದೆ. ಬಿಜೆಪಿ ಶಾಸಕ ಸಿ ಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯವಾಗಿ ನಿಂದಿಸಿದ ಪ್ರಕರಣದಲ್ಲಿ ರಾಜ್ಯ ಸರ್ಕಾರ ಕೈಗೊಂಡ ಕ್ಷಿಪ್ರ ಕ್ರಮಗಳ ಹಿನ್ನೆಲೆಯಲ್ಲಿ ಈ ಪ್ರಕರಣ ಮುನ್ನೆಲೆಗೆ ಬಂದಿದೆ.
ಕಾಂಗ್ರೆಸ್ ಸದಸ್ಯ ನಾಸಿರ್ ಹುಸೇನ್ ಅವರು ಗೆದ್ದ ಖುಷಿಯಲ್ಲಿ ಸಂಭ್ರಮಾಚರಣೆ ಮಾಡುವಾಗ ವಿಧಾನ ಸೌಧದಲ್ಲೇ ಅವರ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಮೊದಲಿಗೆ ಸರ್ಕಾರವೇ ಇಂತಹ ಘಟನೆ ನಡೆದಿಲ್ಲ ಎಂದು ಕ್ಲೀನ್ ಚಿಟ್ ನೀಡಿ ಬಿಜೆಪಿ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದೆ ಎಂದು ಆರೋಪವನ್ನು ತಳ್ಳಿಹಾಕಿತ್ತು.
ನಂತರ ಪ್ರತಿಪಕ್ಷಗಳ ಒತ್ತಾಯಕ್ಕೆ ಧ್ವನಿಯನ್ನು ಎಫ್ಎಸ್ಎಲ್ ತನಿಖೆಗೆ ನೀಡಲಾಗಿತ್ತು ಅಲ್ಲಿ ಘೋಷಣೆ ಕೂಗಿದ್ದು ನಿಜ ಎಂದು ಸಾಬೀತಾಗಿತ್ತು. ನಂತರ ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧನ ಮಾಡಿ ಜೈಲಿಗೆ ಕಳುಹಿಸಲಾಗಿತ್ತು. ನಂತರದ ದಿನಗಳಲ್ಲಿ ಮೂವರು ಆರೋಪಿಗಳು ಜಾಮೀನು ಪಡೆದು ಹೊರಗೆ ಬಂದಿದ್ದರು.
ಪೊಲೀಸರು ಈವರೆಗೂ ದೋಷಾರೋಪ ಪಟ್ಟಿಯನ್ನು ಸಲ್ಲಿಸಿಲ್ಲ ಅಷ್ಟೇ ಅಲ್ಲದೇ ಇಲ್ಲಿಯವರೆಗೆ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ. ಪೋಲೀಸರ ತನಿಖೆಯ ನಿಧಾನಗತಿ ಮತ್ತು ನಿರ್ಲಕ್ಷ್ಯ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.







