ದೇಶದ 15 ರಾಜ್ಯಗಳ 57 ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಬಿಜೆಪಿ, ಕಾಂಗ್ರೆಸ್ ನಿಂದ ಹಿಡಿದು ಪ್ರಾದೇಶಿಕ ಪಕ್ಷಗಳು ಸಾಧ್ಯವಾದಷ್ಟು ಹೆಚ್ಚು ಸೀಟು ಗಿಟ್ಟಿಸಿಕೊಳ್ಳಲು ಪ್ರಯತ್ನ ಮಾಡುತ್ತಿವೆ. ಆದರೆ ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಹೆಚ್ಚು ಗೊಂದಲ ಕಂಡುಬರುತ್ತಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢ ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು ‘ಪ್ರತಿಧ್ವನಿ’ ಅಲ್ಲಿನ ಚಿತ್ರಣವನ್ನು ನಿಮ್ಮ ಮುಂದೆ ಇಡುತ್ತಿದೆ
ಕೇಂದ್ರ ಸಚಿವರಿಗೆ ರಾಜ್ಯಗಳು ಬದಲಾಗುವ ಸಂಭವ
ಈ ಬಾರಿ ಬಿಜೆಪಿ ಪೈಕಿ ಹಲವು ದೊಡ್ಡ ನಾಯಕರ ಅಧಿಕಾರಾವಧಿ ಕೊನೆಗೊಳ್ಳುತ್ತಿದೆ. ಅವರಲ್ಲಿ ರಾಜ್ಯಸಭೆಯ ಆಡಳಿತ ಪಕ್ಷದ ನಾಯಕ ಪಿಯೂಷ್ ಗೋಯಲ್, ಪಕ್ಷದ ಉಪನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದ್ದಾರೆ. ಪಕ್ಷವು ಎಲ್ಲಾ ಮೂವರು ಕೇಂದ್ರ ಸಚಿವರನ್ನು ಮತ್ತೆ ರಾಜ್ಯಸಭೆಗೆ ಕರೆತರಲಾಗುವುದು. ಆದರೆ ಅವರುಗಳು ಈಗ ಪ್ರತಿನಿಧಿಸುತ್ತಿರುವ ರಾಜ್ಯಗಳ ಬದಲಿಗೆ ಬೇರೆ ರಾಜ್ಯಗಳಿಂದ ಅವಕಾಶ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಛತ್ತೀಸ್ಗಢದಿಂದ ಪ್ರಿಯಾಂಕಾ ಗಾಂಧಿ
ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಎರಡು ರಾಜ್ಯಸಭಾ ಸ್ಥಾನಗಳನ್ನು ಗಿಟ್ಟಿಸಿಕೊಳ್ಳಬಹುದು. ಈ ಪೈಕಿ ಒಂದು ಸೀಟನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಗೆ ಟಿಕೆಟ್ ನೀಡಬಹುದು ಎಂದು ಹೇಳಲಾಗುತ್ತಿದೆ. ಇದಲ್ಲದೆ ಸ್ಪೀಕರ್ ಡಾ. ಚರಂದಾಸ್ ಮಹಂತ್ ರಾಜ್ಯಸಭೆಗೆ ಹೋಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಮಾಜಿ ಸಂಸದ ಪಿ.ಆರ್. ಕುಂಟೆ ತಮ್ಮ ಹಕ್ಕೊತ್ತಾಯ ಮಂಡಿಸಿದ್ದಾರೆ. ಕಾಂಗ್ರೆಸ್ ಉನ್ನತ ನಾಯಕರಿಗೆ ಪತ್ರ ಬರೆದಿರುವ ಅವರು ಜಾತಿ ಆಧಾರದಲ್ಲಿ ರಾಜ್ಯಸಭೆಗೆ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಮುಕುಲ್ ವಾಸ್ನಿಕ್ ಹೆಸರೂ ಸ್ಪರ್ಧಿಗಳ ಮುಂಚೂಣಿಯಲ್ಲಿದೆ. ವಿಧಾನಸಭೆಯಲ್ಲಿ ಬಿಜೆಪಿ ಕೇವಲ 14 ಸದಸ್ಯರನ್ನು ಹೊಂದಿದ್ದು, ಒಂದು ಸ್ಥಾನ ಗೆಲ್ಲಲು 31 ಶಾಸಕರ ಬೆಂಬಲ ಬೇಕಿರುವುದರಿಂದ ಬಿಜೆಪಿ ಈಗಾಗಲೇ ಈ ಚುನಾವಣಾ ರೇಸ್ನಿಂದ ಹೊರಬಂದಿದೆ.
ಮಧ್ಯಪ್ರದೇಶದಿಂದ ಪಿಯೂಷ್ ಗೋಯಲ್
ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಖಾತೆಗೆ ಎರಡು ಹಾಗೂ ಕಾಂಗ್ರೆಸ್ ಖಾತೆಗೆ ಒಂದು ಸ್ಥಾನ ಸಿಗುವ ಸಾಧ್ಯತೆ ಇದೆ. ಬಿಜೆಪಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಈ ಬಾರಿ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಕಳುಹಿಸಬಹುದು. ಒಂದು ಸೀಟನ್ನು ಒಬಿಸಿ ಸಮುದಾಯಕ್ಕೆ ನೀಡಬಹುದು ಎಂದು ಹೇಳಲಾಗುತ್ತಿದೆ. ಹಿಂದುತ್ವದ ಫೈರ್ಬ್ರಾಂಡ್ ನಾಯಕ ಜೈಭಾನ್ ಸಿಂಗ್ ಪವಯ್ಯ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ, ಪರಿಶಿಷ್ಟ ಜಾತಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಕವಿತಾ ಪಾಟಿದಾರ್ ಹೆಸರು ರೇಸ್ನಲ್ಲಿವೆ.
ಕಾಂಗ್ರೆಸ್ ಪಕ್ಷದಿಂದ ಹಲವು ಹಿರಿಯ ನಾಯಕರು ರಾಜ್ಯಸಭೆಗೆ ಹೋಗಲು ತಮ್ಮದೇ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದಾರೆ. ಮೂಲಗಳ ಪ್ರಕಾರ ವಿವೇಕ್ ಟಂಖಾ ಅವರನ್ನು ಮತ್ತೊಮ್ಮೆ ರಾಜ್ಯಸಭೆಗೆ ಕಳುಹಿಸಬಹುದು. ಇದಲ್ಲದೆ ನಿಮಾರ್ನ ದೊಡ್ಡ ನಾಯಕ ಮತ್ತು ಒಬಿಸಿ ಮುಖಂಡ ಅರುಣ್ ಯಾದವ್ ಹೆಸರೂ ಚರ್ಚೆಯಲ್ಲಿದೆ. ಮಾಜಿ ಪ್ರತಿಪಕ್ಷ ನಾಯಕ ಅಜಯ್ ಸಿಂಗ್ ಕೂಡ ಸ್ಪರ್ಧಿಗಳ ಪಟ್ಟಿಯಲ್ಲಿ ಸೇರಿದ್ದಾರೆ.
ರಾಜಸ್ಥಾನದಲ್ಲಿ ಭಾರೀ ಪೈಪೋಟಿ
ರಾಜಸ್ಥಾನದ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಹಗ್ಗ ಜಗ್ಗಾಟ ತೀವ್ರಗೊಂಡಿದೆ. ಸಂಖ್ಯಾಬಲದ ಪ್ರಕಾರ ನಾಲ್ಕು ಸ್ಥಾನಗಳ ಪೈಕಿ ಎರಡು ಸ್ಥಾನಗಳು ಕಾಂಗ್ರೆಸ್ಗೆ ಮತ್ತು ಒಂದು ಸ್ಥಾನ ಬಿಜೆಪಿಗೆ ಸುಲಭವಾಗಿ ಸಿಗಲಿವೆ. ನಾಲ್ಕನೇ ಸ್ಥಾನಕ್ಕಾಗಿ ಕಾಂಗ್ರೆಸ್ ಹೋರಾಟ ನಡೆಸಬೇಕಿದೆ. ಅಭ್ಯರ್ಥಿ ಗೆಲುವಿಗೆ ಕನಿಷ್ಠ 41 ಮತಗಳ ಅಗತ್ಯವಿದೆ. ಕಾಂಗ್ರೆಸ್ 3ನೇ ಸ್ಥಾನ ಗೆಲ್ಲಬೇಕಾದರೆ 123 ಮತಗಳನ್ನು ಕ್ರೋಢಿಕರಿಸಬೇಕಾಗುತ್ತದೆ. ಆದರೆ ಕಾಂಗ್ರೆಸ್ ಬಳಿ ಇರುವುದು 108 ಶಾಸಕರು ಮಾತ್ರ. ಉಳಿದ 13 ಮಂದಿ ಸ್ವತಂತ್ರರು, 2 ಬಿಟಿಪಿ, 2 ಸಿಪಿಐ(ಎಂ) ಮತ್ತು 1 ಲೋಕದಳ ಶಾಸಕರು. ಲೋಕದಳದ ಏಕೈಕ ಶಾಸಕರು ಸರ್ಕಾರದಲ್ಲಿದ್ದರೂ ಪಕ್ಷೇತರರು, ಬಿಟಿಪಿ, ಸಿಪಿಐ(ಎಂ) ಶಾಸಕರನ್ನು ಸೆಳೆಯುವುದು ಅಗತ್ಯವಾಗಿದೆ. ಬಿಜೆಪಿ 71 ಶಾಸಕರನ್ನು ಹೊಂದಿದೆ. ಪ್ರತಿಯೊಂದಕ್ಕೂ 41-41 ಮತಗಳ ಪ್ರಕಾರ ಒಟ್ಟು 82 ಮತಗಳು ಬೇಕಾಗುತ್ತವೆ. ಬಿಜೆಪಿ ತನ್ನ ಎರಡನೇ ಅಭ್ಯರ್ಥಿ ಗೆಲ್ಲಲು 11 ಮತಗಳ ಅಗತ್ಯವಿದೆ.
ಕಾಂಗ್ರೆಸ್ನ ಸಂಭಾವ್ಯ ಹೆಸರುಗಳ ಪೈಕಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್ ಅವರ ಹೆಸರೂ ಚರ್ಚೆಯಲ್ಲಿದೆ. ಇದಲ್ಲದೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಅಜಯ್ ಮಾಕನ್, ಭನ್ವರ್ ಜಿತೇಂದ್ರ ಸಿಂಗ್, ಹರೀಶ್ ಚೌಧರಿ, ಡಾ. ರಘು ಶರ್ಮಾ ಮತ್ತು ಧರ್ಮೇಂದ್ರ ರಾಥೋಡ್ ಹೆಸರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿವೆ. ಬಿಜೆಪಿ ಪೈಕಿ ಹಿರಿಯ ನಾಯಕ ಓಂ ಮಾಥೂರ್ ಮತ್ತೊಮ್ಮೆ ಅವಕಾಶ ಪಡೆಯಬಹುದು. ಅಥವಾ ಮಾಜಿ ಸಚಿವ ಘನಶ್ಯಾಮ್ ತಿವಾರಿ ಅವರನ್ನೂ ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಮಾಡಬಹುದು. ಈ ಎರಡು ಹೆಸರುಗಳಲ್ಲದೆ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಅರುಣ್ ಚತುರ್ವೇದಿ, ಭಜನ್ಲಾಲ್ ಶರ್ಮಾ ಮತ್ತು ಮಹೇಂದ್ರ ಸಿಂಗ್ ಜಾತವ್ ಹೆಸರುಗಳೂ ಸುದ್ದಿಯಲ್ಲಿವೆ.