
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ರದ್ಧತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಕಾಯ್ದಿರಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿ ಎಂಐ ಅರುಣ್ ಏಕಸದಸ್ಯ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್, ಹೊಸದಾಗಿ ಪ್ರಕರಣವನ್ನು ಪರಿಗಣಿಸಲು ಹೈಕೋರ್ಟ್ ಸೂಚಿಸಿತ್ತು. ತನಿಖೆಯ ಎಲ್ಲಾ ಅಂಶಗಳನ್ನೂ ಪರಿಶೀಲಿಸಿ ಕಾಗ್ನಿಜೆನ್ಸ್ ಪಡೆಯಬೇಕಿತ್ತು. ಸಂತ್ರಸ್ತೆಯ ಹೇಳಿಕೆ ಬಿಟ್ಟು ಉಳಿದ ಸಾಕ್ಷ್ಯಗಳನ್ನು ಕೋರ್ಟ್ ಪರಿಗಣಿಸಿಲ್ಲ. ಯಡಿಯೂರಪ್ಪ ಮನೆಯಲ್ಲಿದ್ದ ಸಾಕ್ಷಿಗಳ ಹೇಳಿಕೆಗಳನ್ನು ಪರಿಗಣಿಸಿಲ್ಲ. ಆಡಿಯೋ ರೆಕಾರ್ಡಿಂಗ್ ಅನ್ನೂ ನ್ಯಾಯಾಲಯ ಪರಿಗಣಿಸಿಲ್ಲ. ಹೊಸದಾಗಿ ಕಾಗ್ನಿಜೆನ್ಸ್ ಪಡೆದಿರುವ ಆದೇಶ ಸರಿಯಿಲ್ಲವೆಂದು ವಾದ ಮಂಡಿಸಿದ್ದರು.

ಇದಕ್ಕೆ ರಾಜ್ಯ ಸರ್ಕಾರದ ಪರ ಎಸ್ಪಿಪಿ ಪ್ರೊ.ರವಿವರ್ಮ ಕುಮಾರ್ ವಾದ ಮಂಡನೆ ಮಾಡಿ, ಕೊಠಡಿಯಲ್ಲಿ ಲಾಕ್ ಮಾಡಿಕೊಂಡಿದ್ದರಿಂದ ಸಂತ್ರಸ್ತೆ ಹೇಳಿಕೆಯೇ ಮುಖ್ಯ. ಯಡಿಯೂರಪ್ಪ ಸೂಚನೆ ಮೇರೆಗೆ ಮೊಬೈಲ್ನಲ್ಲಿದ್ದ ವಿಡಿಯೋ ಡಿಲೀಟ್ ಮಾಡಲಾಗಿದೆ. ಮೊಬೈಲ್ ರೆಕಾರ್ಡಿಂಗ್ನಲ್ಲಿರುವುದು ಯಡಿಯೂರಪ್ಪ ಧ್ವನಿ ಎಂಬ ಬಗ್ಗೆ ಎಫ್ಎಸ್ಎಲ್ ವರದಿಯಿದೆ. ಫಿರ್ಯಾದಿ ಮಹಿಳೆಗೆ ಬ್ಯಾಗ್ನಲ್ಲಿ 2 ಲಕ್ಷ ರೂಪಾಯಿ ಹಣ ನೀಡಲಾಗಿದೆ. ನಡೆದ ಘಟನೆಯನ್ನು ಬಾಲಕಿಯೇ ವಿವರಿಸಿದ್ದಾಳೆ ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಇದು ರದ್ದುಪಡಿಸಬೇಕಾದ ಪ್ರಕರಣವೆಂದು ಮನವರಿಕೆಯಾಗಿಲ್ಲ. ಆದರೆ ಕಾಗ್ನಿಜೆನ್ಸ್ ಪಡೆದ ವಿಧಾನದ ಬಗ್ಗೆ ಪ್ರಶ್ನೆಗಳಿವೆ ಎಂದು ಹೇಳಿದ್ದು, ಆದೇಶ ಕಾಯ್ದಿರಿಸಿದೆ.
ಏನಿದು ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್
ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಮನೆಗೆ ಬಂದಿದ್ದ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ 2024 ರ ಮಾರ್ಚ್ನಲ್ಲಿ ಕೇಳಿಬಂದಿತ್ತು. ಸಂತ್ರಸ್ತೆಯ ತಾಯಿ ಈ ಆರೋಪ ಮಾಡಿದ್ದರು. ಬಳಿಕ ಯಡಿಯೂರಪ್ಪ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ಗಂಭೀರತೆ ಪರಿಗಣಿಸಿ ಸರ್ಕಾರವು ಸಿಐಡಿಗೆ ಕೇಸ್ ನೀಡಿತ್ತು.
ಸಿಐಡಿ ಅಧಿಕಾರಿಗಳು ಆರೋಪಿ ಯಡಿಯೂರಪ್ಪಗೆ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಅದರಂತೆ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು.

ಆದರೆ ಪ್ರಕರಣವನ್ನು ರದ್ದು ಮಾಡಬೇಕು ಮತ್ತು ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಯಡಿಯೂರಪ್ಪ ಹೈಕೋರ್ಟ್ಗೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಸದ್ಯ ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು ಈಗಾಗಲೇ ಸಿಕ್ಕಿದೆ. ಪ್ರಕರಣದ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯೂ ಇದೀಗ ಮುಕ್ತಾಯಗೊಂಡಿದ್ದು, ಆದೇಶ ಪ್ರಕಟವಾಗಬೇಕಿದೆ