ಗುಜರಾತ್ನ ಕಂಪೆನಿಯೊಂದು ತಯಾರಿಸಿದ್ದ ವೆಂಟಿಲೇಟರ್ಗಳು ಬಳಕೆಗೆ ಯೋಗ್ಯವಲ್ಲ ಎಂಬ ಮಾಹಿತಿಯನ್ನು ಗುಜರಾತ್ನ ಆರೋಗ್ಯ ಇಲಾಖೆಯ ತಾಂತ್ರಿಕ ಸಮಿತಿ ಹೇಳಿದೆ. ಅಂಜಲಿ ಭಾರದ್ವಾಜ್ ಎಂಬುವವರು RTI ಅಡಿಯಲ್ಲಿ ಕೇಳಿದ ಮಾಹಿತಿಗೆ ಉತ್ತರಿಸಿರುವ ಸಚಿವಾಲಯ PM-CARES ನಿಧಿಯಿಂದ Jyoti CNC Automation ಎಂಬ ಕಂಪೆನಿಗೆ ರೂ. 8 ಕೋಟಿ ಮುಂಗಡ ಹಣವನ್ನು ನೀಡಲಾಗಿರುವ ವಿಚಾರವೂ ಬಯಲಾಗಿದೆ.
ಆತ್ಮ ನಿರ್ಭರ್ ಭಾರತ್ ಯೋಜನೆಯಡಿಯಲ್ಲಿ ಸ್ವದೇಶಿ ನಿರ್ಮಿತ ವೆಂಟಿಲೇಟರ್ಗಳ ಬಳಕೆಗೆ ಒತ್ತು ನೀಡಲಾಗಿತ್ತು. ಈ ನಿಟ್ಟಿನಲ್ಲಿ ಜ್ಯೋತಿ ಎಂಬ ಕಂಪೆನಿಗೂ ವೆಂಟಿಲೀಟರ್ಗಳನ್ನು ತಯಾರಿಸಲು ಅನುಮತಿ ನೀಡಲಾಗಿತ್ತು. ಮೇ ತಿಂಗಳಲ್ಲಿ ಮುಂಗಡ ಹಣವನ್ನು ಪಾವತಿಸಿದ್ದು, ಜುಲೈನಲ್ಲಿ ಆ ಕಂಪೆನಿಯನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಮಾಹಿತಿಯನ್ನು ಕೂಡಾ ಆರ್ಟಿಐ ಬಹಿರಂಗಪಡಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೇ ತಿಂಗಳಲ್ಲೇ ಜ್ಯೋತಿ ಸಿಎನ್ಸಿ ಕಂಪೆನಿ ವಿವಾದಗಳ ಆಗರವಾಗಿತ್ತು. ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಜ್ಯೋತಿ ಸಿಎನ್ಸಿ ನಿರ್ಮಿತ ವೆಂಟಿಲೇಟರ್ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು. ವೈದ್ಯಾಧಿಕಾರಿಗಳೇ ವೆಂಟಿಲೇಟರ್ನ ಗುಣಮಟ್ಟ ಸರಿ ಇಲ್ಲ ಎಂದುಪತ್ರವನ್ನು ಬರೆದರೂ, ಕೇಂದ್ರ ಸರ್ಕಾರವು ಜ್ಯೋತಿ ಸಿಎನ್ಸಿ ತಯಾರಿಸುವ ʼಧಮನ್-1ʼ ವೆಂಟಿಲೇಟರ್ಗಳನ್ನು ನೀಡುವಂತೆ ಆದೇಶ ನೀಡಿತ್ತು.
ಆರ್ಟಿಐನಲ್ಲಿ ಬಹಿರಂಗವಾಗಿರುವ ಮಾಹಿತಿಯಂತೆ ಜ್ಯೋತಿ ಸಿಎನ್ಸಿ ಮತ್ತು ಆಂಧ್ರಪ್ರದೇಶದ ಮೆಡ್ಟೆಕ್ ಝೋನ್ ಎಂಬ ಕಂಪೆನಿಗಳ ಹೆಸರು ಶಿಫಾರಸ್ಸು ಮಾಡಿರುವ ವೆಂಟಿಲೇಟರ್ ಪೂರೈಕೆದಾರರ ಪಟ್ಟಿಯಲ್ಲಿ ಇರಲಿಲ್ಲ. ಆದರೂ, ಮೇ ತಿಂಗಳಲ್ಲಿ ವೆಂಟಿಲೇಟರ್ಗಳನ್ನು ತಯಾರಿಸುವಂತೆ ಆರೋಗ್ಯ ಇಲಾಖೆಯಿಂದ ಮುಂಗಡ ಹಣವನ್ನು ಈ ಕಂಪೆನಿಗೆ ನೀಡಲಾಗಿತ್ತು.
ವೆಂಟಿಲೇಟರ್ಗಳ ಕ್ಲಿನಿಕಲ್ ಪರೀಕ್ಷೆ ನಡೆಸಿದ ನಂತರ ಮೇಡ್ ಇನ್ ಇಂಡಿಯಾ ವೆಂಟಿಲೇಟರ್ಗಳ ಸಂಖ್ಯೆಯನ್ನು 58,800 ರಿಂದ 40,000ಕ್ಕೆ ಇಳಿಸಲಾಗಿದೆ. ಈ ವೆಂಟಿಲೇಟರ್ಗಳ ಬೆಲೆ ಒಂದಕ್ಕೆ 1.6 ರಿಂದ 8.6 ಲಕ್ಷದವರೆಗೂ ಸಾಗುತ್ತದೆ. ಕ್ಲಿನಿಕಲ್ ಪರೀಕ್ಷೆಯಲ್ಲಿ ಬಳಕೆಗೆ ಯೋಗ್ಯವಲ್ಲದ ವೆಂಟಿಲೇಟರ್ಗಳನ್ನು ನೀಡಿದ ಗುಜರಾತ್ನ ಜ್ಯೋತಿ ಸಿಎನ್ಸಿ ಕಂಪೆನಿಗೆ ನೀಡಿದ 8 ಕೋಟಿ ಮುಂಗಡ ಹಣದ ಕತೆಯೇನು ಎಂಬುದು ಈಗಿರುವ ಪ್ರಶ್ನೆ.

ಈ ಕುರಿತು ರಾಜ್ಯ ಆರೋಗ್ಯ ಸಚಿವಾಲಯವೇ ಅಧಿಕೃತವಾಗಿ ಹೇಳಿಕೆ ನೀಡಿರುವಾಗ, ಇದನ್ನು ನಿರಾಕರಿಸುವ ಕಂಪೆನಿಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಪರಾಕ್ರಮ್ಸಿಂಗ್ ಜಡೇಜಾ, ಕಾದು ನೋಡಿ ಸತ್ಯ ಏನೆಂದು ನಿಮಗೆ ತಿಳಿಯುತ್ತದೆ. ನಾವಿನ್ನೂ ವೆಂಟಿಲೇಟರ್ಗಳನ್ನು ತಯಾರಿಸುವ ಹಂತದಲ್ಲೇ ಇದ್ದೇವೆ. ಕ್ಲಿನಿಕಲ್ ಪರೀಕ್ಷೆಯ ಕುರಿತು ಯಾವುದೇ ಮಾಹಿತಿ ನಮಗಿಲ್ಲ, ಎಂದು ಅಹಮದಾಬಾದ್ ಮಿರರ್ ಗೆ ಹೇಳಿಕೆ ನೀಡಿದ್ದಾರೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಗುಜರಾತ್ ಕಾಂಗ್ರೆಸ್ನ ಅಧ್ಯಕ್ಷ ಅಮಿತ್ ಚಾವ್ಡಾ, ಸರಿಯಾದ ಪರೀಕ್ಷೆ ನಡೆಸದೇ, ಪಿಎಂ ಕೇರ್ಸ್ ನಿಧಿಯಿಂದ ಹೇಗೆ ಹಣವನ್ನು ಬಿಡುಗಡೆಗೊಳಿಸದ್ದಾರೆ? ಎಂದು ಪ್ರಶ್ನಿಸಿದ್ದಾರೆ.
“ಜನರು ಪಿಎಂ ಕೇರ್ಸ್ಗೆ ದಾನ ನೀಡಿದ್ದು ಕೋವಿಡ್ ವಿರುದ್ದ ಹೋರಾಡಲು. ಬಿಜೆಪಿ ಪಕ್ಷದ ಸ್ನೇಹಿತರಿಗೆ ನೀಡಲಲ್ಲ,” ಎಂದು ಟೀಕಿಸಿದ್ದಾರೆ.
ಕೃಪೆ: ಅಹಮದಾಬಾದ್ ಮಿರರ್






